Thursday, May 28, 2009

ಆ ಬೇಸಿಗೆಯ ದಿನಗಳು....


'ಇನ್ನೊಂದು ಗುಕ್ಕು ತಿನ್ಕೊಂಡು ಹೋಗೇ..' ಅಮ್ಮ ಕೂಗ್ತಾ ಇದ್ರು. 'ಇಲ್ಲಮ್ಮ, ಆಗ್ಲೇ ಲೇಟಾಗಿದೆ' ನಾನಂದೆ. 'ಸರಿ ನೀರಾದ್ರೂ ಕುಡಿ' ಅಮ್ಮ ಬಾಗಿಲಿನ ಹತ್ರ ತಂದಿದ್ದ ನೀರನ್ನ ಅಲ್ಲೇ ಅರ್ಜೆಂಟಲ್ಲಿ ಕುಡೀತಾ ಮೈಮೇಲೆ ಒಂದು ಸ್ವಲ್ಪ ಚೆಲ್ಕೊಂಡು, 'ಇನ್ನಾ ನೀರು ಕುಡಿಯೋಕೆ ಬರೋಲ್ಲ' ಅಂತ ಬೈಸ್ಕೊಂಡು, 'ಸರಿ ಬರ್ತೀನಮ್ಮ' ಅಂತ ಹೇಳಿ ಹೊರಟೆ. ಹೆಚ್ಚು ಕಡಿಮೆ ದಿನಾ ಇದೇ ಗೋಳು. ಬೆಳಿಗ್ಗೆ 6.50 ಕ್ಕೆ ಬಸ್. 4.30 ಗೇ ಎದ್ರೂ ಸಮಯ ಸಾಕಾಗಲ್ಲ.

ನಾನು ಹಚ್ಚು ಕಮ್ಮಿ ಓಡ್ಕೊಂಡೇ ಬರ್ತಾ ಇದ್ದೆ, ದಾರಿಯಲ್ಲಿ ಮಕ್ಕಳು ಜೂಟಾಟ ಆಡ್ತಾ ಇದ್ರು. ಇದೇನು ಇಷ್ಟು ಬೆಳಿಗ್ಗೆ ಎದ್ದು ಬಿಟ್ಟಿದಾವೆ ಅಂದುಕೊಳ್ತಾ ಇದ್ದೆ, ಅಷ್ಟರಲ್ಲಿ ಒಬ್ಳು ಬಂದು ನನ್ನ ಸುತ್ತೋಕೆ, ಅವಳ್ನ ಹಿಡಿಯೋಕೆ ಇನ್ನೊಬ್ಬ. ಮಧ್ಯದಲ್ಲಿ ನಾನು ಎಡ್ಬಿಡಂಗಿ. ಮೇಲಿಂದ ಅವ್ರಮ್ಮ ಕೂಗ್ಕೊಳ್ತಾ ಇದ್ರು, 'ಅವ್ರು ಆಫೀಸಿಗೆ ಹೋಗ್ತಾ ಇದಾರೆ ದಾರಿ ಬಿಡ್ರೋ'. ಅದು ಆ ಮಕ್ಕಳಿಗೆ ಕೇಳಿಸ್ತೋ ಇಲ್ವೋ ಗೊತ್ತಿಲ್ಲ, 'ಹಿಡಿಯೋ ನೋಡೋಣ ಧಡಿಯ' ಅಂತ ಇವ್ಳು, 'ಎಲ್ಲೋಗ್ತೀಯ ಸಿಗ್ತೀಯ' ಅಂತ ಇವ್ನು ಅಟ್ಟಿಸ್ಕೊಂಡು ಹೋದ. ಒಂದು ನಿಮಿಷ ಅಲ್ಲೇ ಕಳೆದು ಹೋಗಿದ್ರೂ, ಬಸ್ ನೆನಪಾಗಿ ಮತ್ತೆ ಒಡೋಕೆ ಶುರು ಮಾಡ್ದೆ. ಬಸ್ ಸಿಗ್ತು.

ಬಸ್ಸಿನಲ್ಲಿ ಕುಳಿತ ಮೇಲೆ, ದಾರಿಯ ಆ ಘಟನೆ, ನನ್ನನ್ನ ಆ ಬೇಸಿಗೆಯ ರಜಾದಿನಗಳ ನೆನಪಿನಂಗಳಕ್ಕೆ ಕರೆದೊಯ್ತು. ಆಹಾ! ಏನು ದಿನಗಳವು..

ಇನ್ನೂ ಪರೀಕ್ಷೆಗಳು ಪ್ರಾರಂಭವಾಗುವ ಮೊದಲೇ, ತಾತನ ಕಾಗದ ಬಂದಿರುತ್ತಿತ್ತು ಮಗಳಿಗೆ (ನಮ್ಮಮ್ಮನಿಗೆ). ಪರೀಕ್ಷೆ ಮುಗಿದ ಕೂಡಲೇ ಬರುವಂತೆ ಆಹ್ವಾನ. ಪ್ರೀತಿಪೂರ್ವಕ ಆಗ್ರಹ. ನನ್ನ ಪರೀಕ್ಷೆ ಮುಗಿದ ಮಧ್ಯಾಹ್ನವೇ ಪ್ರಯಾಣ. ಇದುವರೆಗೂ ಪರೀಕ್ಷೆಯ ಫಲಿತಾಂಶವನ್ನು ನಾನೇ ಖುದ್ದು ನೋಡಿದ ಅನುಭವವಿಲ್ಲ. ಪ್ರತಿವರ್ಷ ತಂದೆಯವರೇ ಏಪ್ರಿಲ್ 10 ರಂದು ಫಲಿತಾಂಶ ನೋಡಿ ಬಂದು ಕಾಗದ ಬರೆಯುತ್ತಿದ್ದರು. (ಹೌದು, ಅದೇ ನೀಲಿ ಬಣ್ಣದ 'ಇಂಗ್ಲೆಂಡ್' ಲೆಟರ್ ಆಗಿದ್ದ 'Inland' letter. ಪತ್ರದ ಸೊಗಡನ್ನು ವಿವರಿಸಲು ಇನ್ನೊಂದು ಬ್ಲಾಗ್ ಬೇಕು!) ಕಳುಹಿಸಲು ತಂದೆಯವರಿಗೆ ಸಂಕಟ. ಅವರಿಗೆಲ್ಲಿಂದ ಬರಬೇಕು 2 ತಿಂಗಳು ರಜ. ಅಡುಗೆ ಮಾಡಲು ಬರುತ್ತಿತ್ತಾದ್ದರಿಂದ, ಸ್ವಯಮ್ಪಾಕದ ಬಗ್ಗೆ ಚಿಂತೆಯಿರಲಿಲ್ಲವಾದರೂ, ಮಕ್ಕಳನ್ನು ಬಿಟ್ಟಿರಬೇಕಲ್ಲಾ ಅಂತ. ಹೊರಡುವ ಮುಂಚೆ Do's & Dont's ಗಳ ದೊಡ್ಡ ಭಾಷಣ. ಅಮ್ಮನಿಗೆ (ಹೌದು ಅಮ್ಮನಿಗೇ!) ಮಕ್ಕಳನ್ನು ನೋಡಿಕೊಳ್ಳುವ ಬಗೆ, 'ಎಲ್ಲೆಲ್ಲೋ ನೀರು ಕುಡಿಯಲು ಬಿಡಬೇಡ, ಅಲ್ಲಿ ಇಲ್ಲಿ ಹಾಳು ಮೂಳು ತಿನ್ನೋಕೆ ಬಿಡಬೇಡ'.. ಇತ್ಯಾದಿ. ಅಮ್ಮ ಕೇಳೊತನಕ ಕೇಳಿಸಿಕೊಂಡು, 'ನನಗೂ ಗೊತ್ತು' ಅಂತ ಸ್ವಲ್ಪ ದನಿಯೇರಿಸಿ ಹೇಳ್ತಾ ಇದ್ರು!

ಹಳ್ಳಿಯಲ್ಲಿ ಬಸ್ ಸ್ಟ್ಯಾಂಡ್ ಹತ್ರಾನೇ ಮನೆ. ತಾತ ರೂಮಿನ ಹೊರಗೆ ಕಟ್ಟೆ ಮೇಲೆ ಕುತ್ಕೊಂಡು ಕಾಯ್ತಾ ಇರ್ತಿದ್ರು. ಬಸ್ಸಿನಿಂದ ಇಳಿದ ತಕ್ಷಣ ಅಲ್ಲಿಗೇ ಓಟ. ತಾತನ ಕಣ್ಣಿನ ಹೊಳಪು, ಮೊಮ್ಮಗಳಿಗಾಗೋ, ಮಗಳಿಗಾಗೋ ಇನ್ನೂ ಪ್ರಶ್ನೆ! ಬಾಗಿಲ್ಲಲ್ಲಿ ಕೈಕಾಲು ತೊಳೆದುಕೊಂದು ಒಳಗೆ ಹೋದ ಮೇಲೆ ಉಭಯಕುಶಲೋಪರಿ. ನಾನು ಸೀದಾ ಅಲ್ಲಿಂದ ದನದ ಕೊಟ್ಟಿಗೆಗೆ ಹೋಗ್ತಾ ಇದ್ದೆ. ನಮ್ಮ ಕೆಂಪಿ, ಕೆಂಚಿ, ಗಂಗಿ... ಮತ್ತವರ ಮಕ್ಕಳನ್ನು ಮಾತನಾಡಿಸಿಕೊಂಡು ಬರುವಷ್ಟರಲ್ಲಿ ಅವ್ವ (ನಾವು ಅಜ್ಜಿಯನ್ನು ಹೀಗೇ ಕರೆಯೋದು) ಹಾಲು, ಮಂಡಕ್ಕಿ ರೆಡಿ ಮಾಡಿರೋರು. ಅಪ್ಪ ನಮ್ಮನ್ನು ಬಿಟ್ಟು ಅವತ್ತು ರಾತ್ರಿನೇ ವಾಪಸ್ ಹೊರಡೋರು. ಅಲ್ಲಿ ತನಕ Silent & Good Girl!

ಮೊದಲು ಸ್ವಲ್ಪ ಸಣ್ಣವರಿದ್ದಾಗ (ಇನ್ನೂ ಸ್ನೇಹಿತರು ಅಂತ ಗುಂಪು ಮಾಡಿಕೊಳ್ಳೋ ಮೊದಲು) ಬೆಳಿಗ್ಗೆ ಅವ್ವನ ಜೊತೆಗೇ ಎದ್ದು ಬಿಡ್ತಾ ಇದ್ದೆ. ಅಮೇಲೆ ಅವರ ಹಿಂದೆ ಸುತ್ತೋದು. ದನಗಳ ಬಾನಿಗೆ ಹುಲ್ಲು ಹಾಕೋದು, ಮುಸುರೆ ಹೀಗೆ ಎಲ್ಲಕೂ ಒಂದು ಕೈ ಹಾಕೋದು. ಇನ್ನ ಹಾಲು ಕರೆಯೋಕೆ ಹೋಗಿರ್ತಾರಷ್ಟೆ, ಹಾಲು ಬೇಕು ಅಂತ ಅವರ ಹಿಂದೆ ಹೋಗೋದು. ಆಗ ತಾನೆ ಕರ್ದಿದ್ದ ಬೆಚ್ಚಗಿನ ಹಾಲನ್ನ ಒಂದು ದೊಡ್ಡ ಭವಾನಿ ಲೋಟಕ್ಕೆ ಹಾಕಿ ಕೊಡೋರು.. ಒಂದು ಸಲ ಲೋಟ ಎತ್ತಿದ್ರೆ, ಪೂರ್ತಿ ಖಾಲಿ ಆಗೋ ತನಕ ಕೆಳಗೆ ಇಳಿಸುತ್ತಿರಲಿಲ್ಲ. ಅದೇನು ಹಾಗೆ 'ಗೊಟಕ್, ಗೊಟಕ್' ಅಂತ ಕುಡಿತೀಯೇ ಅಂತ ಅಮ್ಮ ಬೈತ ಇದ್ರೂ, ಅದೆಲ್ಲ ಕೇಳಿಸ್ಕೊತಾ ಇರ್ಲಿಲ್ಲ. ಎಲ್ಲ ಕುಡಿದು ಮುಗಿಸಿದ ಮೇಲೆ, ಮೂಡಿರ್ತಿದ್ದ ಆ ಮೀಸೇನ ಕೈಯಲ್ಲೇ ಒರೆಸಿಕೊಂಡು, ತಾತನಿಗೆ ಕಂಪ್ಲೇಂಟ್ ರವಾನೆ. ಅಮ್ಮನ ಕೋಪ ಅವರಿಗೆ ಹಿಂದಿರಿಗಿಸುವ ಯಶಸ್ವೀ ಪ್ರಯತ್ನ! ಆಮೇಲೆ ಮನೆಯೆಲ್ಲ ಒಂದು ರೌಂಡ್ ಹೊಡೆಯೋದು. ಸ್ವಲ್ಪ ಹೊತ್ತು ಅಟ್ಟದಲ್ಲಿ ಅನ್ವೇಷಣೆ. ದನ ಮೇಯಿಸ್ಲಿಕ್ಕೆ ಕರ್ಕೊಂಡು ಹೋಗಕ್ಕೆ ಬರ್ತಿದ್ದ ಮಂಜಣ್ಣನ ಹತ್ತಿರ ಸ್ವಲ್ಪ ಹರಟೆ. ತಾತ ಹೊರಡುವ ಮುನ್ನ ಅವರ ಹತ್ರ ಸ್ವಲ್ಪ ಕಥೆ. ಅಲ್ಲಿಂದ ಮಜ್ಜಿಗೆ ಕೋಣೆಗೆ ಸವಾರಿ. ನಾನೂ ಮಜ್ಜಿಗೆ ಕಡೀತೀನಿ ಅಂತ ಗಲಾಟೆ. ಕಡೆಗೋಲು ನನಗಿಂತಾ ಎರಡು ಪಟ್ಟು ಎತ್ತರವಾಗಿತ್ತು. ಒಂದು ಕಡೆ ಹಗ್ಗ ಎಳೆದರೆ, ಇನ್ನೊಂದರ ಜೊತೆಗೆ ನಾನೂ ಹೋಗಿ ಮಜ್ಜಿಗೆ ಕೊಳಗದಲ್ಲೇ ಬೀಳುವ ಎಲ್ಲ ಸಾಧ್ಯತೆ ಇತ್ತು. ಅವ್ವ 'ಮಾಡುವಾಗ ಎಲ್ಲಿ ಹೋಗಿರ್ತೀರೋ' ಅಂತ ಗೊಣಗ್ತಾ, ಅವರೇ ಕೈ ಹಿಡಿಸಿಕೊಂಡು ಒಂದೆರಡು ಸಲ ಕಡೆಸಿ ಕೈಬಿಡ್ತಾ ಇದ್ರು. ದನಗಳೆಲ್ಲ ಹೋದಮೇಲೆ ಕೊಟ್ಟಿಗೆ ಕ್ಲೀನಿಂಗ್. ಅವ್ವನ ಜೊತೆ ಕುಳ್ಳು ತಟ್ತೀನಿ ಅಂತ ಕುತ್ಕೋತಾ ಇದ್ದೆ. ಸಗಣಿ ಮುದ್ದೇನ ಗೋಡೆಗೆ ಬಡಿಯೋದ್ರಲ್ಲಿ ಏನೋ ಖುಷಿ. ನನ್ನ ಪುಟಾಣಿ ಕೈಯಲ್ಲಿ ಒಂದು ಕುಳ್ಳು ತಟ್ಟೊ ಹೊತ್ತಿಗೆ ಅವ್ವ ಪೂರ್ತಿ ಮಾಡಿ ಮುಗಿಸಿರ್ತಿದ್ರು! ಮತ್ತೆ ಅವ್ವ ಹೊಲಕ್ಕೆ ಬುತ್ತಿ ತಗೊಂಡು ಹೋಗುವಾಗ ಅವರ ಜೊತೆ. ಅಮ್ಮ ಸ್ಯಾಂಡಲ್ ಎಲ್ಲ ಹಾಕಿ, ಬಟ್ಟೆ ಕೊಳೆ ಮಾಡ್ಕೊಂಡ್ರೆ ನೋಡು ಅಂತೆಲ್ಲ ತಾಕೀತು ಮಾಡ್ತಾ ಇದ್ರು. ಅವ್ವ ಚಪ್ಪಲಿ ಇಲ್ಲದೇ ಬರೀ ಕಾಲಲ್ಲಿ ನಡ್ಕೊಂಡು ಬರ್ತಾ ಇದ್ರು! ಯಾವ ನೆರವಿಲ್ಲದೇ ಅವ್ವ ತಲೆಮೇಲೆ ಬುತ್ತಿನ ಬ್ಯಾಲೆನ್ಸ್ ಮಾಡ್ಕೊಂಡು ನಡಿತಾ ಇದ್ದದ್ದು ಒಂದು ಅಚ್ಚರಿಯಾಗಿತ್ತು. ಜೊತೆಗೆ ಅವರ ಸೆರಗು ನನ್ನ ತಲೆಮೇಲೆ ಇರ್ತಿತ್ತು. ನಾನೂ ಹೊತ್ಕೋತೀನಿ ಅಂತ ಹಠ ಮಾಡಿದಾಗ, ಒಂದು ಸಣ್ಣ ಚೌಕವನ್ನ ಸಿಂಬೆ ಮಾಡಿ ಪುಟ್ಟ ಹರಿವಾಣವನ್ನ (ನನ್ನ ಬುತ್ತಿ) ನನ್ನ ತಲೆ ಮೇಲೆ ಇಟ್ಟು ಕರ್ಕೊಂಡು ಹೋಗ್ತಾ ಇದ್ರು. ಸಂಜೆ ಮುಂದೆ ದನಗಳು ಮನೆಗೆ ಬರೋ ಹೊತ್ತಿಗೆ ಬಾಗಿಲಿಗೆ ನೀರು ಹಾಕಿ ಕಾಯೋದು. ಮತ್ತೆ ಅವ್ವನ ಹಿಂದೆ ಸುತ್ತೋದು, ದನ ಬಂದ್ವಲ್ಲಾ, ಹಾಲೆಲ್ಲಿ ಅಂತ! ಸಾಯಂಕಾಲ ತಾತನ ಜೊತೆ ಒಂದು ರೌಂಡ್ ವಾಕಿಂಗ್. ತಾತನ್ನ ಅದೂ ಇದೂ ಪ್ರಶ್ನೆ ಕೇಳ್ತಾ ಇದ್ದೆ, ಈಮರ ಇಲ್ಲ್ಯಾಕಿದೆ? ಚಾನೆಲ್ ನಲ್ಲಿ ನೀರು ಯಾಕೆ ಇಲ್ಲ? ಎರಡು ಎತ್ತು ಸಾಕಾಗತ್ತಾ? ಹೀಗೆ.. ತಾತ ನನ್ನ ಶಾಲೆ ಬಗ್ಗೆ, ಊರಿನ ಬಗ್ಗೆ ಕೇಳೋರು. ಕಥೆ ಹೇಳೋರು.

ಸ್ವಲ್ಪ ದೊಡ್ಡವರಾದ ಮೇಲೆ ಸ್ವಲ್ಪ ಬದಲಾವಣೆ. ಆಟ, ಆಟ,ಆಟ!! ಬೆಳಿಗ್ಗೆ ತಿಂಡಿ ತಿಂದು ಮನೆಯಿಂದ ಹೊರಟ್ರೆ, ಹಿಂತಿರುಗುತ್ತಿದ್ದುದು ಸಾಯಂಕಾಲವೇ. ಅಬ್ಬಾ! ಅದೆಷ್ಟು ಆಟಗಳು! ಲಗೋರಿ, ಗೋಲಿ, ಚಿನ್ನಿದಾಂಡು, ಮರಕೋತಿ, ಕಣ್ಣಮುಚ್ಚೇ, ಜೂಟಾಟ, ಕಳ್ಳಪೋಲಿಸ್, ರತ್ತೊ ರತ್ತೋ ರಾಯನ ಮಗಳೆ.. ಬಿಡುವಿಲ್ಲದಾಟಗಳು. ಹೊಟ್ಟೆ ಹಸೀತಾ ಇದೆ ಅನ್ಸಿದ್ರೆ, ಯಾರದಾದ್ರೂ ಹೊಲಕ್ಕೆ ನುಗ್ಗೋದು. ಮಾವಿನ ಮರ, ಪೇರಲೆ ಮರ, ಪಪ್ಪಯಿ ಹಣ್ಣು, ಬೇಲಿಲಿ ಸಿಕ್ತಾ ಇದ್ದ ತೊಂಡೆ ಹಣ್ಣು, ಕಾರೆಹಣ್ಣು, ಬೋರೆ ಹಣ್ಣು.., ಹುಣಸೆಕಾಯಿ... ಆಮೇಲೆ ಒಂದು ಎಳನೀರು. ಹುಡುಗರು ಮರಹತ್ತಿ ತಮಗೆ ಬೇಕಾದ ಹಣ್ಣು ಕಿತ್ಕೊಳ್ತಾ ಇದ್ರು. ಒಂದ್ಸಲ ಅಣ್ಣ ನಾನು ಕೇಳಿದ ಹಣ್ಣು ಕಿತ್ತು ಕೊಡ್ಲಿಲ್ಲ. ಆಗ ಹಟಕ್ಕೆ ಕಲ್ತಿದ್ದು ಮರ ಹತ್ತೋದನ್ನ. ನಾನು ಮರ ಹತ್ತಿದಾಗ ಬೇಕಂತ ಮರ ಅಲ್ಲಾಡಿಸ್ತಾ ಇದ್ದ. 'ತಡಿ, ತಾತಂಗೆ ಹೇಳ್ತೀನಿ' ಅಂತಿದ್ದೆ. 'ಹೋಗೇ, ತಾತನ ಮೊಮ್ಮಗಳೇ, ನಾನು ಅವ್ವನಿಗೆ ಹೇಳ್ತೀನಿ, ಹುಡಿಗೀರನೆಲ್ಲ ಗುಂಪು ಕಟ್ಕೊಂದು ಮರ ಹತ್ತಾಳೆ ಅಂತ' ಅಂತಿದ್ದ. ಆದ್ರೆ, ನಾನು ಅಲ್ಲೇ ಯಾರ್ದಾದ್ರು ಮನೆಗೆ ನುಗ್ಗಿ, ಉಪ್ಪುಖಾರ ಹಾಕ್ಕೊಂಡು ಹದ ಮಡ್ಕೊಂಡು ಹಣ್ಣು ತಿನ್ತಾ ಇರ್ಬೇಕಾದ್ರೆ ಹಲ್ಕಿರ್ಕೊಂಡು ಬರ್ತಾ ಇದ್ದ. ಮನೆಗೆ ಹೋಗೋಶ್ಟರಲ್ಲಿ ಎಲ್ಲ ಮರೆತು ಹೋಗಿರ್ತಿತ್ತು. ಹೊಲ ಬೇಜಾರಾದಾಗ ಚಾನೆಲ್ ಗೆ ಹೋಗ್ತಾ ಇದ್ವಿ. ನೀರಲ್ಲಾಡೋಕೆ. ಈ ಹುಡುಗ್ರು ಎಲ್ಬೇಕಾದ್ರು ಈಜೋಕೆ ಹೋಗೋರು. ಆದ್ರೆ ಹುಡಿಗೀರಿಗೆ ಆ ಸ್ವಾತಂತ್ರ್ಯ ಇರ್ಲಿಲ್ಲ. ಆಗೆಲ್ಲ ದೇವ್ರನ್ನ ಚೆನ್ನಾಗಿ ಬೈಕೊಂಡಿದ್ದೀನಿ. ನಾನು ಸೈಕಲ್ ಹೊಡೆಯೋದು ಕಲೀಬೇಕಾಗಿತ್ತು. ಸುಮ್ನೆ ಹೇಳಿದ್ರೆ ಇವ್ರು ಕಲಿಸ್ತಾ ಇರ್ಲಿಲ್ಲ. ದೊಡ್ಡಪ್ಪನಿಂದ ಶಿಫಾರಸು ತಂದಿದ್ದೆ. ಅಕ್ಕನಿಗೆ ಕಲಿಸುವಾಗ ಹತ್ತಿಸಿ ಕೈಬಿಟ್ಟು, ಅವಳು ಇವರು ಹಿಡ್ಕೊಂಡಿದಾರೆ ಅನ್ಕೊಂಡೇ ಓಡಿಸ್ತಾ, ಒಂದ್ಸಲ ಹಿಂದೆ ನೋಡಿ, ಮುಂದಿದ್ದ ಮನೆಯ ಗೋಡೆಗೆ ಗುದ್ದಿ ಗದ್ದ ಗಾಯ ಮಡ್ಕೊಂಡಿದ್ಲು. ನಾನು ಸ್ವಲ್ಪ ಮುಂಜಾಗ್ರತೆ ವಹಿಸಿ Open Field ಗೆ ಕರ್ಕೊಂಡು ಹೋಗಿದ್ದೆ. ಸೈಕಲ್ ಹತ್ಕೊಂಡೆ. 'ತುಳಿಯೇ, ತುಳಿದ್ರೆ ತಾನೇ ಮುಂದಕ್ಕೆ ಹೋಗೋದು, ಎಷ್ಟು ಅಂತ ತಳ್ಳಲಿ' ಅಂತ ಬೈತಾ ಇದ್ದ. ನಾನು ಹತ್ಕೊಂಡು ಬರೀ ರೆವೆರ್ಸೆ ತುಳಿತಾ ಇದ್ದೆ, easy ಅಲ್ವ! ಕೊನೆಗೂ ಮುಂದಕ್ಕೆ ತುಳಿದೆ. ನಂಗೂ ಒಂದ್ಸಲ ಹಾಗೇ ಮಾಡಿದ್ರು. ಹಿಡ್ಕೊಂಡಿದಾರೆ ಅಂತ ತುಳಿತಾ ಇದ್ದೋಳು, ತಿರುಗಿಸಿಕೊಂಡು ಬರ್ತಾ ಇದ್ದೆ, ಅಣ್ಣ ಮುಂದೆ ನಿಂತಿದ್ದ. ಅಷ್ಟೇ! ಸೈಕಲ್ ಒಂದ್ಕಡೆ, ನಾನೊಂದ್ಕಡೆ!

ಯಾವಾಗ್ಲೂ ತಾತನ ಕಣ್ತಪ್ಪಿಸಿ ಆಟಕ್ಕೆ ಹೋಗ್ತಾ ಇದ್ದದ್ದು. ಇಲ್ಲಾಂದ್ರೆ ಬಿಸ್ಲಲ್ಲಿ ಹೋಗಿದ್ದಕ್ಕೆ ಬೈತಾ ಇದ್ರು. ಎಲ್ಲೇ ಹೋಗಿದ್ರೂ ಸಾಯಂಕಾಲ ದೀಪಮುಡ್ಸೋ ಹೊತ್ತಿಗೆ ಸರಿಯಾಗಿ ಮನೆಲಿ ಇರ್ತಾ ಇದ್ವಿ. ಆಮೇಲೆ ತಾತನವರೊಂದಿಗೆ ಪಗಡೆ, ಚಾವಂಗ, ಕವಡೆ, ಆನೆ ಮನೆ, ಹಾವು ಏಣಿ, ಅಳ್ಗುಳಿಮಣೆ, ಕಡ್ಡಿ ಆಟ, ಕಲ್ಲಾಟ, ಸೆಟ್ ಹೀಗೇ ಈನಾದ್ರೊಂದು. ಆಮೇಲೆ ಊಟ. ಆದ್ಮೇಲೆ ಎಲ್ಲರೂ ಒಟ್ಟಿಗೇ ಕುತ್ಕೊಂಡು ಏನಾದ್ರು ಹರಟೆ. ಸ್ವಲ್ಪ ಪ್ರತಿಭಾ ಪ್ರದರ್ಶನ. ಅಕ್ಕ ಚೆನ್ನಾಗಿ ಹಾಡು ಹೇಳೋಳು. ಭರತನಾಟ್ಯ ಕೂಡ. ನಂದು average. ನಮ್ಮಿಬ್ರಿಗೂ ಚೆನ್ನಾಗಿದೆ ಅಂತ ಶಭಾಷ್ಗಿರಿ ಕೊಟ್ರೆ, ಅಣ್ಣನಿಗೇನೋ ಸಂಕಟ. ನಾನೂ ಹಾಡ್ತೀನಿ, ಕುಣಿತೀನಿ ಅಂತ ನಮ್ಗೆಲ್ಲ torture ಕೊಡ್ತಾ ಇದ್ದ. ತಾತ 'ಬಾರಿಸ್ತೀನಿ' ಅಂದ್ರೆ, ನಮ್ಮಮ್ಮ 'ಬಾರೋ ರಾಜ' ಅಂತ ಮುದ್ದಾಡೋರು.

ಅಪ್ಪ ಸ್ವಲ್ಪ ದಿನ ರಜೆ ಹಾಕಿ ಬಂದಾಗ, ಸ್ವಲ್ಪ ದಿನದ ಮಟ್ಟಿಗೆ ಇನ್ನೊಂದು ತಾತನ ಮನೆಗೆ ಪಯಣ. ರಾಣೆಬೆನ್ನೂರಿನ ತನಕ ಆರಾಮವಾಗಿ ಹೋಗಿದ್ದು ತಿಳಿದಿದೆ. ಆದರೆ ಅಲ್ಲಿಂದ ಹಳ್ಳಿಗೆ ಹೋಗಿದ್ದೇ ಮೆಟಡೋರ್ ಇತ್ಯಾದಿ ವಾಹನಗಳಲ್ಲೇ. ಅದರಲ್ಲಿ ಕೆಲವೊಮ್ಮೆ ಲಂಬಾಣಿ ತಾಂಡ್ಯಾದ ಹೆಂಗಸರು ಪರಮಾತ್ಮನ್ನ ಇಳಿಸಿಕೊಂಡು, ಮೀನು ಇತ್ಯಾದಿಗಳನ್ನು ತಗೊಂಡು ಬರ್ತಾ ಇದ್ರು. ಅವರ ಭಾಷೆ, ವೇಷಗಳೆಲ್ಲವೂ ಒಂಥರಾ ಮೋಜು. ಮಲ್ನಾಡ್ ಕಡೆ ನಮ್ದೊಂಥರಾ ಗ್ರಾಂಥಿಕ ಭಾಷೆ. ದಾವಣಗೆರೆ ಭಾಷೆ ಬೇರೆ. (ಏ ಪಾಪಿ ಬಾ ಇಲ್ಲಿ ಅಂತ ಕರೆದವರನ್ನ ಬೈಯುವ ಮುನ್ನ ಸ್ವಲ್ಪ ಯೋಚಿಸಿ!) ಬ್ಯಾಡಗಿಗೆ ಹೋದ್ರೆ ಇನ್ನೊಂಥರಾ. ಆದರೆ ನನಗೆ ಇಂದಿಗೂ ಆಶ್ಚರ್ಯ ಆಗುವ ವಿಷಯವೆಂದರೆ,. ಅಲ್ಲಲ್ಲಿಗೆ ಹೋದಾಗ ಆ ಭಾಷೆ ಹಾಗೇ ಬಂದು ಬಿಡುತ್ತದೆ. (ಭಾಷೆನೂ ರಕ್ತದಲ್ಲಿರತ್ತಾ!) ಈ ಹಳ್ಳಿಯಲ್ಲಿ ಇನ್ನೊಂತರಾ ಮಜಾ. ಕಪ್ಪು ಮಣ್ಣು, ಜೋಳದ ಹೊಲ. ಮೆಣಸಿನ ಮಂಡಿ (ಜಾಸ್ತಿ ಹೋಗೋಕೆ ಬಿಡ್ತಾ ಇರ್ಲಿಲ್ಲ, ಘಾಟು ಅಂತ). ಗುಡ್ಡಕ್ಕೆ ಹೋಗೋದು. ಹೊಂಡಕ್ಕೆ ಹೋಗೋದು. ತಂದೆಯವರ ಜೊತೆ ಅವರ ಶಾಲೆಗೆ ಹೋಗೋದು. ಅವರ ಮಾಸ್ತರರನ್ನು ಮಾತನಾಡಿಸುವುದು. ಸಂತೆ, ವೀರಭದ್ರನ ಗುಡಿ ಹೀಗೆ ಸುತ್ತಾಡೋದು. ಆ ಪುಟಾಣಿ ಅಡುಗೆ ಮನೆಯಲ್ಲಿ ದೊಡ್ಡಮ್ಮ ಪಟ ಪಟ ಅಂತ ರೊಟ್ಟಿ ಬಡಿಯೋದನ್ನ ನೋಡೋದೇ ಸಂಭ್ರಮ. ಜೋಳದ ರೊಟ್ಟಿಗಳ stack. ಏನ್ ಛಂದ ಜೋಡ್ಸಿರ್ತಾರಂತ! ಅದಕ್ಕೆ ಕರಿಂಡಿ, ಬಣ್ಣಬಣ್ಣದ ಚಟ್ನಿಪುಡಿಗಳು.. ಉಳ್ಳಾಗಡ್ಡಿ, ಹಸಿಮೆಣಸಿನಕಾಯಿ.. ಆ ಕಟಿಕಟಿ ರೊಟ್ಟಿ ನನ್ಗೆ ಉಣ್ಣಾಕ್ಬರಾಂಗಿಲ್ಲಾಂತ ಬಿಸಿ ಬಿಸಿ ರೊಟ್ಟಿ ಮಾಡ್ಕೊಡ್ತಾ ಇದ್ರು. ಉಂಡ್ಕೊಂಡು ಉಡಾಳಾಗಿದ್ದೇ ಬಂತು ಇಲ್ಲಿ. ಪಾಪ ತಮ್ಮಂದ್ರು/ ಕಾಕಾ ಎಲ್ಲ ಹೊಂಡದಿಂದ, ಮತ್ತೆಲ್ಲಿಂದಲೋ ನೀರು ತರ್ತಾ ಇದ್ರು. ತುಂಗೆ ಮಡಿಲಲ್ಲಿ ಬೆಳೆದಿರೋ ನಂಗೆಲ್ಲಿಂದ ಗೊತ್ತಾಗ್ಬೇಕು ನೀರಿನ ಬವಣೆ!

ಇನ್ನೊಂದ್ ಸ್ವಲ್ಪ ದೊಡ್ಡೋರಾದ ಮೇಲೆ ಸ್ವಲ್ಪ ಜವಾಬ್ದಾರಿ. ಮನೆ ಕಸ ಮುಸುರೆ ಎಲ್ಲ ಮುಗಿಸಿದ ಮೇಲೇ ಹೊರಗೆ ಹೊಗ್ತಾ ಇದ್ದದ್ದು. ಅಷ್ಟು ದೊಡ್ಡ ಪಡಸಾಲೆ, ಅಟ್ಟ, ಅಡುಗೆ ಮನೆ, ದೇವರ ಮನೆ, ಎಲ್ಲ ಗುಡಿಸಿ ಸಾರ್ಸೋ ಅಷ್ಟು ಹೊತ್ತಿಗೆ ಒಳ್ಳೇ ವ್ಯಾಯಾಮ. ಸಾಯಂಕಾಲ ನೀರು ಬಿಡೋ ಅಷ್ಟು ಹೊತ್ತಿಗೆ ಮನೆಗೆ ಬಂದ್ಬಿಡ್ಬೇಕು. ಇಲ್ಲಾಂದ್ರೆ ಅಮ್ಮನ ಪೊರಕೆ/ಸೌಟು ಕಾಯ್ತಾ ಇರ್ತಿತ್ತು. ಬೇಕಂತಲೇ ತಾತನ ಕೋಣೆ ಮುಂದೆನೇ ಸೊಂಟದ ಮೇಲೆ ಆ ದೊಡ್ಡ ದೊಡ್ಡ ಕೊಡ ಹೊತ್ಕೊಂಡು ಬರ್ತಾ ಇದ್ದೆ. ಅವ್ವನ ಹತ್ರ ಬೈಸ್ಕೊತಾ ಇದ್ದೆ.

ಎಲ್ಲಾ ದೊಡ್ಡೋರಾಗ್ತಾ ಅಗ್ತಾ ಊರಿಗೆ ಹೋಗೋ Frequency ಕಮ್ಮಿ ಆಗೋಯ್ತು. ಅಕ್ಕ ಅಣ್ಣಂಗೆ ಪರೀಕ್ಷೆ ಅಂತ ದೊಡ್ಡಮ್ಮ ಬರ್ತಾ ಇರ್ಲಿಲ್ಲ. ಇವ್ರು ಬರಲ್ಲ ಅಂತ ಅವ್ರು, ಅವ್ರಿಗೆ ಪರೀಕ್ಷೆ ಅಂತ ಇವ್ರು, ಇವ್ರು ಬರಲ್ಲ ಅಂತ ಅವ್ರು.. ಹೀಗೇ ಆಗೋಯ್ತು...

ಇಂದಿನ ನಗರವಾಸಿ ಪೀಳಿಗೆಗೆ ಇದೆಲ್ಲ ಲಭ್ಯವಿದೆಯಾ? ಗೊತ್ತಿಲ್ಲ. ಅಥವಾ ಅವರ 'ಮಜಾ' ಪದದ ಅರ್ಥವೇ ಬೇರೆನಾ ಗೊತ್ತಿಲ್ಲ. ಏನೇ ಆದ್ರೂ, ನಿಸರ್ಗದ ಮಡಿಲಲ್ಲಿ. ಸ್ನೇಹಿತರೊಡನೆ ಆಡಿದ ಆ ದಿನಗಳು, ಹಂಚಿತಿಂದ ಆ ಹಣ್ಣಿನ, ತಿಂಡಿಗಳ ರುಚಿ, ಅವ್ವ, ತಾತರ ಅನುಭವದ ಸಾರದೊಡನೆ ಕಳೆದ ಆ ಕಾಲ ಮತ್ತೆ ಬರಲಾರದು. ಏನಿದ್ದರೂ ಸವಿ ನೆನಪುಗಳು ಮಾತ್ರ...

ಆ ಲೋಕದಿಂದ ಹೊರಬರುವಷ್ಟರಲ್ಲಿ ಆಫೀಸು ಬಂತು. ಮತ್ತದೇ ಕಚೇರಿ.. ಮತ್ತದೇ ಕೆಲಸ... ಮತ್ತವೇ ಪರೀಕ್ಷೆಗಳು....

Monday, May 25, 2009

ಜೋಗಿ ಪುಸ್ತಕ ಜಾತ್ರೆಯಲ್ಲೊ೦ದಿಷ್ಟು ಸಮಯ...


ನಿನ್ನೆ ಭಾನುವಾರ, ಜೋಗಿ ಅಲಿಯಾಸ್ ಹತ್ವಾರ ಗಿರೀಶ್ ರಾವ್ ಅವರ 'ಚಿಟ್ಟೆ ಹೆಜ್ಜೆ ಜಾಡು' ಪುಸ್ತಕ ಬಿಡುಗಡೆ ಸಮಾರ೦ಭವಿತ್ತು. ಜೋಗಿಯವರ ಪರಿಚಯ ನನಗಾದದ್ದು ಬ್ಲಾಗ್ ಲೋಕದಿ೦ದ. 'ಹಾಯ್ ಬೆ೦ಗಳೂರ್' ನ 'ಜಾನಕಿ ಕಾಲಂ' ನ ಆಗೊಮ್ಮೆ ಈಗೊಮ್ಮೆ ಓದುತ್ತಿದ್ದೆನಾದರೂ. ಅದರ ಕರ್ತೃ ಇವರೇ ಎ೦ದು ತಿಳಿದಿದ್ದು ತೀರಾ ಇತ್ತೀಚಿಗೆ. ಇವರ ಈ ಪುಸ್ತಕ ಬಿಡುಗಡೆ ಸಮಾರ೦ಭದ ಆಹ್ವಾನ ಬ೦ದಾಗ ಹೋಗಬೇಕೆ೦ದು ನಿರ್ಧರಿಸಿದ್ದೆ.

ನನ್ನ ತ್ರಿಕಾಲ ಜ್ಞಾನವನ್ನೆಲ್ಲಾ ಬಳಸಿ, ದೂರದರ್ಶನದ ಚ೦ದನವಾಹಿನಿಯ ಕಚೇರಿ ಬಳಿ ಬಸ್ಸಿಳಿದು, ಅಲ್ಲಿದ್ದ ಟ್ರಾಫಿಕ್ ಪೋಲಿಸಿನವರನ್ನು 'ಇಲ್ಲಿ ಕನ್ನಡ ಭವನ ಎಲ್ಲಿದೆ' ಅ೦ತ ಕೇಳಿದಾಗ, ಪಾಪ! ಅವರಿಗೆ ಕ್ಷಣಕಾಲ ಬೆ೦ಗಳೂರಿನ ನಕ್ಷೆಯೇ ಮರೆತುಹೋಯಿತು. 'ಪೂರ್ತಿ ಅಡ್ರೆಸ್ ಹೇಳಿ ಮೇಡಂ' ಅ೦ದರಾತ. 'ನಯನ ಸಭಾ೦ಗಣ, ಕನ್ನಡ ಭವನ. ಜೆ.ಸಿ. ನಗರ' ಅ೦ದೆ ನಾನು. 'ಮೇಡಂ, ಅದು ಜೆ.ಸಿ ರಸ್ತೆ ಇರಬೇಕು, ಟೌನಹಾಲ, ರವೀ೦ದ್ರ ಕಲಾಕ್ಷೇತ್ರ ಆದಮೇಲೆ ಬರತ್ತೆ' ಅ೦ದ್ರು. ಬೆ೦ಗಳೂರಿಗೆ ಬ೦ದು ವರ್ಷಗಳೇ ಕಳೆದಿದ್ದರೂ, ನನಗೆ ಗೊತ್ತಿರೋ ಜಾಗಗಳ ಲೆಕ್ಕಕ್ಕೆ, ಅವರು ಹೇಳಿದ ಅಡ್ರೆಸ್ ನನಗೆ ಅರ್ಥವಾಗಿದ್ದೇ ದೊಡ್ಡ ವಿಷಯ! ಧನ್ಯವಾದ ಹೇಳಿ, ಅಲ್ಲಿ೦ದ ಶಿವಾಜಿನಗರಕ್ಕೆ ಹೋಗಿ, ಮಾರ್ಕೆಟ್ ಬಸ್ ಹಿಡಿದು ಅ೦ತೂ ಇ೦ತೂ ನಿಗದಿತ ಸ್ಥಳ ತಲುಪೋ ಹೊತ್ತಿಗೆ ಒ೦ದು ಗ೦ಟೆ ತಡವಾಗಿತ್ತು. ಪುಸ್ತಕ ಬಿಡುಗಡೆ ಮಾಡಿ ಹ೦ಸಲೇಖ ಹೊರಟು ಹೋಗಿದ್ದರು. ನಾಗತಿಹಳ್ಳಿ ಚ೦ದ್ರಶೇಖರ ತಮ್ಮ ಮಾತು ಮುಗಿಸಿದ್ದರು. 'Better late than never' ಅ೦ದುಕೊ೦ಡು ಕುಳಿತುಕೊ೦ಡೆ.

ಶ್ರೀಯುತ ಮೋಹನ್ ಮಾತನಾಡುತ್ತಿದ್ದರು. ಚಿಟ್ಟೆ ಹೆಜ್ಜೆ ಜಾಡಿನ ಮೂಲವನ್ನು ಹುಡುಕುತಿದ್ದರು. ಜೋಗಿಯವರ ಬರಹಗಳ ಮೇಲೆ ಜಾಗತೀಕರಣದ ಪ್ರಭಾವ, ಸಹವರ್ತಿಗಳ ಪ್ರಭಾವ, ಒತ್ತಡ ಇತ್ಯಾದಿಗಳ ಬಗ್ಗೆ ಹೇಳಿ ಮಾತು ಮುಗಿಸಿದರು. ನ೦ತರ ಬ೦ದ ಜೋಗಿಯವರ ಬಾಲ್ಯ ಸ್ನೇಹಿತ ಗೋಪಾಲ ಕೃಷ್ಣ ಕು೦ಟನಿಯವರು ಜೋಗಿಯವರ 'ಮಾನ ಹರಾಜು ಹಾಕುವ' ಅವಕಾಶವನ್ನು ಸದುಪಯೋಗಪಡಿಸಿಕೊ೦ಡರು. ಜೋಗಿ ಜ್ಯೋತಿಯವರಿಗಾಗಿ ಎರಡೇ ದಿನದಲ್ಲಿ ಆ೦ಗ್ಲ ಕಾದ೦ಬರಿಯೊ೦ದನ್ನು ಕನ್ನಡಕ್ಕೆ ಭಾಷಾ೦ತರಿಸಿದ್ದು, ಮಯೂರದಲ್ಲಿ ಪ್ರಕಟವಾದ ತಿ೦ಗಳಕಥೆಯ ಬಹುಮಾನದಿ೦ದ ಹೊಟ್ಟೆಯುರಿಸಿದ್ದು, ಯಕ್ಷಗಾನದ ಸಮಯದ ತು೦ಟಾಟಗಳು.. ಹೀಗೆ. ಪತ್ರಿಕೆಯೊ೦ದರ ದೀಪಾವಳಿ ವಿಶೇಷಾ೦ಕಕ್ಕೆ 'ಜ್ಯೋತಿ ಗಿರೀಶ್' ಎ೦ಬ ಹೆಸರಿನಲ್ಲಿ ಬರೆದಿದ್ದ ಕಥೆಗೆ ಬಹುಮಾನ ಬ೦ದಾಗ ಅದರ ಸ೦ಪಾದಕರು ಬರೆದ 'ಕನ್ನಡದ ಉದಯೋನ್ಮುಖ ಲೇಖಕಿ, ಉತ್ತಮ ಬರಹಗಾರ್ತಿ.........' ಟಿಪ್ಪಣಿಯನ್ನು ನಮ್ಮ ಮು೦ದಿಟ್ಟಾಗ ಸಭೆ ನಗೆಗಡಲಲ್ಲಿ ತೇಲಿತ್ತು. ಟಿ. ಎನ್. ಸೀತಾರಾಂ ಅವರಿಗೂ ಆ ನಗು, ಅವರ ಗಂಭೀರ ಚಹರೆಗೊ೦ದು ಮೆರುಗು ನೀಡಿದ೦ತೆ ಕಾಣುತ್ತಿತ್ತು. ಪೇಜಾವರ ಮಠದವರು ಆಯೋಜಿಸಿದ್ದ 'ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ' ಕುರಿತು ಜೋಗಿ ಬರೆದ ೪೦ ಪುಟದ ಪ್ರಬ೦ಧದ ಬಗ್ಗೆ ಹೇಳಿದಾಗಲ೦ತೂ ಎಲ್ಲರೂ ತು೦ಬುಮನದಿ೦ದ ನಕ್ಕಿದ್ದರು. ಮಾತನಾಡುವಾಗ ಇರುವ ಅಲ್ಪ ಉಗ್ಗು ಜೋಗಿಯನ್ನು ವಾಗ್ಮಿಯನ್ನಾಗಲು ಬಿಡದೆ ಕನ್ನಡ ಸಾಹಿತ್ಯಕ್ಕೆ ಕಾಣಿಕೆಯಾಗಿದೆ ಎ೦ದರು. ಬರಹದಿ೦ದಲೇ ಜಾನಕಿ-ಜೋಗಿ, ಮಡದಿ-ಮನೆ-ಮನಿ ಯನ್ನು ಪಡೆದಿದ್ದಾರೆ೦ದೂ, ಬಡತನದ ಹಿನ್ನೆಲೆ ಬರಹಕ್ಕೆ ಪಕ್ವತೆಯನ್ನು ಒದಗಿಸಿದೆಯೆ೦ದೂ ಹೇಳಿದರು. ದೇವರನ್ನೇ ನ೦ಬದ, ತ೦ದೆ ತಿಥಿಯ ದಿನದ೦ದು ಮಾತ್ರ ಜನಿವಾರ ಧರಿಸುವ ಜೋಗಿಯನ್ನು ಕ೦ಡಾಗ 'ದೇವರನ್ನು ನ೦ಬಬೇಕೇ' ಎ೦ಬ ಪ್ರಶ್ನೆಯೊ೦ದಿಗೆ ಮಾತು ಮುಗಿಸಿದರು. ನ೦ತರ ಬ೦ದ ಜೋಗಿಯವರು ಹೆಚ್ಚು ಮಾತನಾಡಲಿಲ್ಲ. ಅದೃಶ್ಯ ಕಾದ೦ಬರಿಯ ಕಲ್ಪನೆ, ತೂಕ ಇಳಿಸಿಕೊಳ್ಳಲು ಹೋದ ರಹಸ್ಯವ ಹಾಸ್ಯದಲ್ಲಿ ತೇಲಿಸಿ, ಇದೆ ಕಾಡಿನ ಕುರಿತಾದ ಕೊನೆಯ ಕಥೆ ಎ೦ದು ಹೇಳಿ, ಎಲ್ಲರಿಗೂ ಕೃತಜ್ಞತೆಗಳನ್ನರ್ಪಿಸಿ ಮಾತು ಮುಗಿಸಿದರು.

ನಾನೂ ಸಹ ಪುಸ್ತಕಗಳ ಮೇಲೆ ಅವರ ಹಸ್ತಾಕ್ಷರ ಪಡೆದು, ಸಿರಿಗನ್ನಡ ಪುಸ್ತಕ ಮಳಿಗೆಯ ಬಳಿ ಹೊರಟೆ. ಬಾಗಿಲು ಹಾಕಿತ್ತು. ನನ್ನ ಅದೃಷ್ಟವೇ ಎ೦ದು ಹಳಿದುಕೊಳ್ಳುತ್ತಿರುವಾಗ, ಅಲ್ಲಿಗೆ ಬ೦ದ ಮಹಿಳೆಯೊಬ್ಬರು, 'ಇವತ್ತು ರಜ ಇಲ್ಲ. ನಮ್ಮೆಜಮಾನ್ರು ಹೊರಗೆ ಹೋಗಿದಾರೆ, ಇನ್ನೇನು ಬ೦ದು ಬಿಡ್ತಾರೆ.' ಎ೦ದರು. 'ಸರ್ಕಾರದ ಕೆಲಸ ದೇವರ ಕೆಲಸ' ಎ೦ಬುದು ನೆನಪಾಗಿ, ಕಲಾಕ್ಷೇತ್ರವನ್ನು ಒ೦ದೆರಡು ಸುತ್ತು ಹಾಕಿದೆ. ಕೈಯಲ್ಲಿ ಪುಸ್ತಕವಿತ್ತು, ಚೆನ್ನಾದ ಮರದ ನೆರಳು, ಕಟ್ಟೆ ಇತ್ತು. ಓದಲು ಕುಳಿತೆ. ೧.೩೦ ಸುಮಾರಿಗೆ ಬಾಗಿಲು ತೆಗೆದರು. ಕಾರ೦ತರು, ಕುವೆ೦ಪು, ಇ೦ದಿರಾ, ಅಬುಬಕ್ಕರ್, ಇನಾಮದಾರ, ಚದುರ೦ಗ, ಸತ್ಯಕಾಮ ಮು೦ತಾದವರ ಸುಮಾರು ೧೫ ಪುಸ್ತಕಗಳನ್ನು ಕೊ೦ಡು ಹಿ೦ದಿರುಗಿದೆ.

ಸ೦ಜೆ ಏಕೋ, ಕು೦ಬ್ಳೆ ಟಾಸ್ ಗೆದ್ದಿದ್ದರೂ, ಗಿಲ್ಲಿಯ ಮುಖದಲ್ಲಿದ್ದ ಆ ಮ೦ದಹಾಸ, ಆತ್ಮವಿಶ್ವಾಸ, ರಾಯಲ್ ಚಾಲೆ೦ಜರ್ಸ ಗೆ ಸೋಲು ಖಚಿತ ಎ೦ದು ಹೇಳುತ್ತಿದೆ ಎ೦ದೆನಿಸಿತು. ಒ೦ಥರಾ ಗಟ್ ಫೀಲಿಂಗ. ದಡ್ಡ ಸಯಮ೦ಡ್ಸ ಕ್ಯಾಚ್ ಡ್ರಾಪ್ ಮಾಡಿದಮೇಲೆ ನಾನು ಮತ್ತೆ ಜೋಗಿಯ ಕಾಡಿನತ್ತ ಮುಖ ಮಾಡಿದೆ.

ಚಿಟ್ಟೆ ಹೆಜ್ಜೆ ಜಾಡು - ಹೆಸರೇ ಹೇಳುವ೦ತೆ ಇದೊ೦ದು ಹುಡುಕಾಟದ ಕಾದ೦ಬರಿ. ಶಿರಾಡಿ ಘಾಟಿನ ಕೆಲ ದುರ೦ತಗಳ ಪ್ರೇರಣೆಯಿರಬಹುದು. ಕಾಡಿನಲ್ಲಿ ಕಳೆದುಹೋದ ಸ್ನೇಹಿತರನ್ನು ಹುಡುಕುತ್ತಾ ಸಾಗುವ೦ತೆ ಕಥೆ ತೆರೆದುಕೊಳ್ಳುತ್ತದೆ. ಕಾಡಿನ ವಿವರ ಕಣ್ಣಿಗೆ ಕಟ್ಟುವ೦ತಿದೆ. ನಮ್ಮ ಮಲೆನಾಡಿನ ಹಾಗು ಪಶ್ಚಿಮ ಘಟ್ಟದ ಜನರಿಗೆ ಕಾಡೇನೂ ಹೊಸತಲ್ಲ. ಏನು ಇಲ್ಲದೆ, ಕೇವಲ ಕಾಡನ್ನು ವರ್ಣಿಸುತ್ತಾ ಹೋದರೆ ಅದೇ ಒ೦ದು ಕಥೆಯಾಗುತ್ತದೆ. ಪ್ರತಿಯೊಬ್ಬ ಸಾಮಾನ್ಯನು ಒ೦ದು ಪಾತ್ರವಾಗುತ್ತಾನೆ. ಅದಕ್ಕಾಗಿಯೇ ಕಾರ೦ತರು, ತೇಜಸ್ವಿ ಕುವೆ೦ಪು ನಮಗೆ ಹತ್ತಿರವಾಗುತ್ತಾರೆ. ಹ೦ತಹ೦ತವಾಗಿ ಕಾಡಿನ ಜೊತೆಗೆ ಚಾರಣಿಗರ ರಹಸ್ಯವನ್ನೂ ಬಯಲು ಮಾಡುತ್ತದೆ ಕಾದ೦ಬರಿ. ಕೊನೆಯ ತನಕ ಕುತೂಹಲ ಉಳಿಸಿಕೊ೦ಡಿದೆ. ಕಾಡಿನ ಪರಿಸರ, ಅರಣ್ಯ ಇಲಾಖೆ, ಆರಕ್ಷಕ ಇಲಾಖೆ, ಸರ್ಕಾರ, ಪರಿಸರವಾದಿಗಳು, ಬಹುರಾಷ್ಟ್ರೀಯ ಕ೦ಪನಿಗಳು ಇವೆಲ್ಲವೂ ಕಾಡಿನ ಹೊರತಾದ ಜಗತ್ತಿಗೆ ಎಷ್ಟು ಅಮಾಯಕವೋ, ಕಾಡಿನ ಒಳಜಗತ್ತಿಗೆ ಅಷ್ಟೇ ಮಾರಕಗಳು. ವೈಯಕ್ತಿಕ ಲಾಭಕ್ಕಾಗಿ ಬಹುರಾಷ್ಟ್ರೀಯ ಕ೦ಪನಿಗಳಿಗೆ ಸರ್ಕಾರ, ಅಧಿಕಾರಿಗಳು ಕಾಡನ್ನು ಮಾರಿಕೊಳ್ಳುತ್ತಿರುವುದು ಇ೦ದು ರಹಸ್ಯವಾಗಿ ಉಳಿದಿರದಿದ್ದರೂ, ಅದರ ಪರಿಣಾಮಗಳು, ನಮಗೇ ಮುಳುವಾಗಿರುವ ನಮ್ಮ ವ್ಯವಸ್ಥೆ, ಅದರ ವಿರುದ್ಧ ನಮ್ಮ ಅಸಹಾಯಕತೆ, ಈ ಚಕ್ರವ್ಯೂಹ ಭೇದಿಸ ಹೊರಟವರು ಅಭಿಮನ್ಯುವಿನ೦ತೆ ಒಳಗೇ ಪ್ರಾಣಕಳೆದುಕೊಳ್ಳುವ ಚಿತ್ರಗಳು ನಿಜಕ್ಕೂ ಭೀಕರವೆನಿಸುತ್ತವೆ. ಕಾದ೦ಬರಿಯ ಓದುತ್ತಾ ಓದುತ್ತಾ, ಕಾಡು ಸ೦ತಸತ೦ದರೂ, ರಹಸ್ಯ ಕುತೂಹಲ ಹುಟ್ಟಿಸಿದರೂ, ಆ ವ್ಯವಸ್ಥೆಯ ವಿಷವರ್ತುಲ ರಕ್ತ ಕುದಿಸುತ್ತದೆ. ಓದಿ ಮುಗಿಸಿದ ಬಳಿಕ ಏನೋ ಗೊತ್ತಿಲ್ಲ, ಏನನ್ನೋ ಕಳೆದುಕೊ೦ಡ ಅನುಭವ. ಏನೋ ಮಿಸ್ಸಿಂಗ್ ಅನಿಸುತ್ತದೆ. ಅ೦ತ್ಯ ಹಾಗಾಗಬಾರದಿತ್ತೋ, ವಿಷಯ ಇನ್ನು ಆಳಕ್ಕೆ ಹೋಗಬಹುದಿತ್ತೋ, ಅವಸರದಲ್ಲಿ ಮುಗಿದಿದೆಯೋ ಇನ್ನೇನೋ.

ಕಾಡಿನ ಬೆಳದಿ೦ಗಳಲ್ಲಿ ಬಾಲ್ಯವನ್ನು ನೆನೆಸಿಕೊಳ್ಳುವಾಗ ಬರುವ ಸಾಲುಗಳು "ಕಣ್ತುಂಬ ಚ೦ದ್ರನನ್ನು ತು೦ಬಿಕೊ೦ಡು ನಕ್ಷತ್ರಗಳನ್ನು ಲೆಕ್ಕ ಹಾಕುತ್ತಾ ಮಲಗಿದರೆ ಎಚ್ಚರವಾಗುವ ಹೊತ್ತಿಗೆ ಚ೦ದ್ರ ಸೂರ್ಯನಾಗಿರುತ್ತಿದ್ದ, ನಕ್ಷತ್ರಗಳು ಸ್ಕೂಲಿಗೆ ಹೋಗಿರುತ್ತಿದ್ದವು." ತು೦ಬಾ ಇಷ್ಟವಾದವು. ಬಹುಶ: ನನ್ನ ಬಾಲ್ಯದ ನ೦ಟಿರಬೇಕು. ಕೊನೆಯಲ್ಲಿ ಬರುವ "ಸರೋವರದಲ್ಲಿ ಅರಳಿದ ಹೂವಿನ ಮೇಲೆ, ಆ ಹೂವಿನ ಸೌ೦ದರ್ಯಕ್ಕಾಗಲೀ, ಒಳಮನಸ್ಸಿಗಾಗಲಿ ಒ೦ಚೂರೂ ಕಿರಿಕಿರಿಮಾಡದೇ ಸುಮ್ಮನೆ ಕೂತಿದ್ದು, ಬೇಕೆನಿಸಿದಾಗ ಅಲ್ಲಿ ಕೂತಿದ್ದೇ ಸುಳ್ಳು ಎ೦ಬ೦ತೆ ಹಾರಿಹೋಗುವ ಚಿಟ್ಟೆಯ೦ತೆ ಬದುಕಬೇಕು" ಸಾಲುಗಳು ಬಹಳ ಹೊತ್ತು ಆಲೋಚಿಸುವ೦ತೆ ಮಾಡಿದವು. ಅದೇ ಗು೦ಗಿನಲ್ಲಿ ಪರಿಸರವಾದಿ ತನ್ವಿ ಭಟ್ ನಾನಾಗಿ, ನಿದ್ರಾಲೋಕಕ್ಕೆ ಜಾರಿ, ಕನಸಿನಲ್ಲಿ ಚಿಟ್ಟೆಯಾಗಿ ಹಾರಿದ್ದೆ.

Monday, May 04, 2009

ನಿವೇದನೆ

ನಾನು ಮಾಡಿದ್ದು ತಪ್ಪಾ? ಅಪರಾಧವಾ? ಕ್ರೌರ್ಯವಾ? ಗೊತ್ತಿಲ್ಲ. ಗೊತ್ತಿದ್ದರೆ ಮಾಡುತ್ತಿರಲಿಲ್ಲ ಅಲ್ಲವಾ?

ಹದಿಹರೆಯದ ಹುಚ್ಚು ಮನಸು, ಕಥೆ ಕಾದ೦ಬರಿ ಸಿನಿಮಾಗಳನ್ನು ನೋಡಿಯೇ ಕನಸುಗಳ ರೂಪಿಸಿಕೊ೦ಡಿತ್ತು. ಪ್ರೀತಿ ಕುರುಡೆ೦ದೂ, ಅದಕ್ಕೆ ವಯಸ್ಸಿನ೦ತರವಿಲ್ಲವೆ೦ದೂ ಬಲವಾಗಿ ನ೦ಬಿ ಬಿಟ್ಟಿತ್ತು. ಆ ಕನಸುಗಳ ಮಾಯಾಲೋಕದಲ್ಲಿ ಒಮ್ಮೆಯೂ, 'ಆತ ನಿನ್ನ ಗುರು, ನಿನಗಿ೦ತ ಹಿರಿಯ' ಎ೦ಬ ಎಚ್ಚರಿಕೆಯ ಘ೦ಟೆ ಮೊಳಗಲೇ ಇಲ್ಲ. ಪ್ರೀತಿಯೆ೦ಬ ಹುಚ್ಚು ಹೊಳೆಯ ರಭಸದಲ್ಲಿ ನನ್ನೊ೦ದಿಗೆ ತಾಯಿತ೦ದೆಯರ ನನ್ನ ಡಬಲ್ ಡಿಗ್ರಿ, ಅನುರೂಪ ಗ೦ಡಿನೊ೦ದಿಗೆ ವಿವಾಹದ ಕನಸುಗಳೂ ಕೊಚ್ಚಿ ಹೋಗಿದ್ದವು.

ತಾಯಿಯ ತಿಳುವಳಿಕೆಯ ಮಾತುಗಳು ಸಿರಿವ೦ತಿಕೆಯ ಮೌಢ್ಯವಾಗಿ ಕಾಣಿಸಿದ್ದವು. ಹತ್ತಿರದ ಸ೦ಬ೦ಧಿಗಳು ಭಾವನೆಗಳಿಲ್ಲದ ಗೊಡ್ಡುಗಳ೦ತೆ ಕಾಣಿಸಿದ್ದರು. ನನ್ನ ಪ್ರೀತಿಯೆ೦ಬ ಭ್ರಾ೦ತಿಗೆ ಆಸರೆಯಾಗಿದ್ದು ತ೦ದೆಯ ನಿಜವಾದ ಪ್ರೀತಿ ಮಾತ್ರ ಅಥವಾ ಅದನ್ನು ಕುರುಡು ವ್ಯಾಮೋಹ ಅನ್ನಲೇ? ಅಥವಾ ಒಪ್ಪದಿದ್ದರೆ ಬಿಟ್ಟುಹೋಗುವೆನೆ೦ಬ ಭಯವೆನ್ನಲೇ? ಅ೦ತೂ 'ಪ್ರೇಮವಿವಾಹ' ಎನ್ನುವುದು ಹೊರಲೋಕಕ್ಕೆ ಗೊತ್ತಾಗದ೦ತೆ, ಮಧ್ಯಮ ವರ್ಗದ ಸ೦ಬ೦ಧ ಸ೦ಸ್ಕಾರಗಳಿಗಾಗಿ ಎ೦ಬ ಸೋಗಿನೊ೦ದಿಗೆ ಮರೆಮಾಚಿದ್ದರು. ಎಲ್ಲವೂ ಸರಿಯಾಗೇ ಇತ್ತು.

ಹೆಣ್ಣಾದ ನನ್ನ ಬಾಳನ್ನು ಪರಿಪೂರ್ಣಗೊಳಿಸಲು ವರ್ಷದಲ್ಲಿ ನೀನು ಬ೦ದೆ. ಕರುಳಬಳ್ಳಿಯ ಸರಿಯಾಗಿ ಕಡಿಯಲಾಗದೆ ಅನುಭವಿಸಿದ ನೋವುಗಳೆಷ್ಟು. ನಿನ್ನೆಲ್ಲ ನೋವುಗಳನ್ನು ನನಗೀಯುವ೦ತೆ ಆ ಕಾಣದ ಶಕ್ತಿಯೊ೦ದನ್ನು ಬಿನ್ನಹಿಸಿಕೊ೦ಡಿದ್ದೆನಲ್ಲ, ಮು೦ದೊ೦ದು ದಿನ ಈ ಕರುಳಬಳ್ಳಿಯನ್ನೇ ತೊರೆದು ಹೋಗುತ್ತೇನೆ೦ಬ ಆಲೋಚನೆ ಲವಶೇಷವೂ ಇಲ್ಲದೆ! ನಿನ್ನಾಗಮನದಿ೦ದ ಆತನೂ ಸ೦ತಸಗೊ೦ಡಿದ್ದ. ಸ್ವಲ್ಪ ಜವಾಬ್ದಾರಿಯುತನಾಗಿ ಕ೦ಡಿದ್ದ. ಎಲ್ಲವೂ ಸರಿಯಾಗೇ ಇತ್ತು.

ವಿವಾಹದ ಪೂರ್ವದಲ್ಲಿ ಚೆನ್ನಾಗಿ ಕಾಣುತ್ತಿದ್ದ ಆತನ ಮು೦ಗೋಪ ಸಿಟ್ಟು ಸೆಡವುಗಳು, ಇ೦ದು ಜೀವನಕ್ಕೆ ತೊಡರಾಗುತ್ತಿವೆ. ಅ೦ದು ಶೋಕಿಯಾಗಿ ಕಾಣುತ್ತಿದ್ದ ಆತ ಸುರುಳಿಸುರುಳಿಯಾಗಿ ಬಿಡುತ್ತಿದ್ದ ಹೊಗೆ ಇ೦ದು ನನ್ನನ್ನೇ ಸುಡುವ೦ತೆ ಭಾಸವಾಗುತ್ತಿದೆ. ಪ್ರೀತಿಯಿ೦ದ ಅದನ್ನು ಬಿಡಿಸುತ್ತೇನೆ೦ದು ತೊಟ್ಟಿದ್ದ ಹಠ ಆತನ ಚಟದ ಮು೦ದೆ ಸೋತಿತ್ತು. ಹಣದ ಜ೦ಜಾಟವಿರದಿದ್ದರೂ ಆತನ ಆಲೋಚನಾರಹಿತ ಖರ್ಚು ಕಾಡತೊಡಗಿತ್ತು. ಸ್ಥಿತಿವ೦ತ ಸ೦ಭ೦ದಿಕರ ಮು೦ದೆ, ನನ್ನಾಸೆಯನ್ನೀಡೇರಿಸಿದ ತ೦ದೆಯ ಗೌರವ ಕಾಪಾಡಲಾದರೂ ನಾನು ಸ್ಥಿತಿವ೦ತಳಾಗಿ ಬದುಕಬೇಕಿತ್ತು. ವಿದ್ಯಾಭ್ಯಾಸ ಮು೦ದುವರೆಸಿದೆ. ನಿನ್ನನ್ನು ನಿನ್ನಜ್ಜಿಯ ಮನೆಯಲ್ಲಿ ಬಿಟ್ಟು. ಅದೆಷ್ಟು ಹೊ೦ದಿಕೊ೦ಡಿದ್ದೆ ನೀನು ನಿನ್ನ ಚಿಕ್ಕಮ್ಮನಿಗೆ, ನಿನ್ನ ಅಜ್ಜಿಯ ಅಷ್ಟಕ್ಕಷ್ಟೇ ನೋಟಗಳ ನಡುವೆಯೂ! ನನ್ನ ಡಿಗ್ರಿಯೂ ಮುಗಿದು ಕೆಲಸವೂ ದೊರಕಿತು. ಎಲ್ಲವೂ ಸರಿಯಾಗೇ ಕಾಣುತಿತ್ತು.

ನನ್ನ ಸ೦ಪಾದನೆ ಅಲ್ಪವಾಗಿದ್ದು, ಕೇವಲ ಅಗತ್ಯಗಳಿಗಾಗಿದ್ದರೂ, ಆತನ ಹಮ್ಮಿಗೆಲ್ಲೋ ಹೊಡೆದಿತ್ತು. ಬೇಜವಾಬ್ದಾರಿಗಳು ಹೆಚ್ಚಿದವು. ಸ್ವಲ್ಪ ಸಾಲಗಳೂ ಆದವು. ಒಲವೆ ನಮ್ಮ ಬದುಕು ಎ೦ದುಕೊ೦ಡಿದ್ದಾಗ್ಯೂ, ಸುಧಾರಿತ ಜೀವನದಲ್ಲಿ ಮೂಲಭೂತ ಅವಶ್ಯಕತೆಗಳೇ ಮೇಲುಗೈ ಸಾಧಿಸಿದ್ದವು. ನಾನೇ ಆರಿಸಿಕೊ೦ಡ ಈ ದಾರಿಯಲ್ಲಿ ನಾನು ಬದುಕಲೇ ಬೇಕಾಗಿತ್ತು. ಎರಡರ ಮಗ್ಗಿ ಹೇಳಲು ೨ ಚಕ್ಕುಲಿ ಕೇಳುತ್ತಿದ್ದ, ಜಾಮೂನು ಬೇಕಾದಾಗ 'ಕೆ೦ಚಲೊ ಮ೦ಚಲೊ ಹೆ೦ಗವ್ಲ ನಿನ್ ಜಾಮೂನ್ಗಳು' ಎ೦ದು ಹಾಡಿನಲ್ಲಿ ಸೇರಿಸುತ್ತಿದ್ದ, ಫ್ಯಾನ್ಸಿಡ್ರೆಸ ಸ್ಪರ್ಧೆಯಲ್ಲಿ ಬಹುಮಾನ ಬರಲಿಲ್ಲವೆ೦ದು ಮೂರನೇಮನೆಯ ಗೇಟ್ ಬಳಿ ಮುಷ್ಕರ ಹೂಡಿದ್ದ ಆ ನಿನ್ನ ಮುಗ್ಧತೆಯಲ್ಲಿ, ಜಾಣತನದಲ್ಲಿ ನನ್ನ ದಣಿವನ್ನು ಮರೆಯುತಿದ್ದೆ. ನಿನ್ನನ್ನು ಓಲೈಸಲು ಆತ ನಿನಗೆಷ್ಟೇ ಲ೦ಚ ನೀಡಿದರೂ, ಅದೆಲ್ಲ ಸಿಕ್ಕಿದ ಕೂಡಲೇ, ಓಡಿಬ೦ದು ನನ್ನ ಬಳಸುತ್ತಿದ್ದ ಆ ನಿನ್ನ ಪುಟ್ಟ ಕೈಗಳಲ್ಲಿ ಅದೆ೦ತ ಚೇತನವಿತ್ತು! ನಿನ್ನಾಟಗಳಲ್ಲಿ, ನನ್ನ ಶಾಲೆಯ ಮಕ್ಕಳ ಒಡನಾಟದಲ್ಲಿ ಜೀವನ ಸಾಗುತಿತ್ತು. ಎಲ್ಲವೂ ಸರಿಯಾಗಿದೆಯೆ೦ದೇ ಭಾವಿಸಿದ್ದೆ.

ಮನುಷ್ಯನ ತಾಳ್ಮೆಗೂ ಮಿತಿಯಿದೆಯಲ್ಲವೇ? ಆತನಸಹನೆ ಮಿತಿಮೀರಿದಾಗ, ನನ್ನ ಸಹನೆಯ ಕಟ್ಟೆಯೊಡೆದಿತ್ತು. ಪ್ರೀತಿಯೆ೦ಬ ಹಾಲಿಗೆ ಸ೦ಶಯವೆ೦ಬ ಹುಳಿ ಬಿದ್ದು ಹೃದಯವೇ ಒಡೆದಿತ್ತು. ಒ೦ದು ದಿನವೂ ನನ್ನೊ೦ದಿಗೆ ಗಟ್ಟಿಯಾಗಿ ಜಗಳವಾಡಲಿಲ್ಲ. ಒ೦ದೇಟು ಹೊಡೆಯಲಿಲ್ಲ. ಪಡೆದ ವಿದ್ಯೆಗೆ ತಕ್ಕುನಾದ ನಯವಾದ, ವಿಷವೆ೦ದರೂ ವಿಷವೆನ್ನಲಾಗದ ಕಾರ್ಕೋಟಕ ವಿಷದ೦ತ ಮಾತುಗಳು. ಸರೀಕರೆದುರಿಗೆ ಅ೦ಥಾ ಪ್ರೀತಿಸುವ ಪತಿಯ ಪಡೆದಿದ್ದ ನಾನೇ ಪುಣ್ಯವತಿ. ಒಳಗಿನಿ೦ದ ಗೆದ್ದಲು ತಿನ್ನುತಿದ್ದರೂ, ಹೊರಜಗತ್ತಿಗೆ ಮರ ಗಟ್ಟಿಯಾಗೇ ಕಾಣುತಿತ್ತು. ಎಲ್ಲವೂ ಸರಿಯಿರಲಿಲ್ಲ.

ಅ೦ತಹುದೊ೦ದು ದಿನ ಬ೦ದೇ ಬಿಟ್ಟಿತ್ತು. ಅವನಿ೦ದ ದೂರವಾಗುವ ನಿರ್ಧಾರ ಕೈಗೊ೦ಡಿದ್ದೆ. ಆಗಲಾದರೂ ನನ್ನ ಬೆಲೆಯನ್ನರಿತಾನೆ೦ಬ ಆಸೆಯಲ್ಲಿ. ತನ್ನ ಜವಾಬ್ದಾರಿಗಳನ್ನರಿತಾನೆ೦ಬ ದೂರಾಲೋಚನೆಯಲ್ಲಿ. ನಿನ್ನನ್ನು ಪ್ರೀತಿಸುತ್ತಾನೆ, ಕಾಳಜಿ ಮಾಡುತ್ತಾನೆ, ಇಲ್ಲದಿದ್ದಲ್ಲಿ ನಿನ್ನ ಅಜ್ಜ-ಅಜ್ಜಿಯ೦ತೂ ಇದ್ದಾರೆ ಎ೦ಬ ಧೈರ್ಯದಲ್ಲಿ. ಸಮಾಜದಲ್ಲಿ ಒ೦ದು ಸ್ತರಕ್ಕೆ ಬರುವ೦ತೆ ಮಗಳನ್ನು ಒತ್ತಾಯಿಸುತಿದ್ದ ತ೦ದೆ ಆಕೆಯ ಬಾಳಿಗೆ ನ್ಯಾಯವನ್ನು ಒದಗಿಸುತ್ತಾರೆ೦ಬ ಭರವಸೆಯಲ್ಲಿ. ಆದರೆ ನಿನ್ನ ನಿದ್ದೆಯ ಭಗ್ನಾದೇವಿ ನಾನೇ ಆಗುತ್ತೇನೆ೦ದು ಎಣಿಸಿರಲಿಲ್ಲ. ನನ್ನ ತಾಯಿತ೦ದೆಗೂ ಇದೊ೦ದು ಪ್ರತಿಷ್ಠೆಯ ವಿಷಯವಾಗಿ ಸತ್ಯಾಸತ್ಯತೆಯನ್ನು ಅರಿವ ಗೋಜಿಗೆ ಅವರು ಹೋಗರೆ೦ಬ ಕಲ್ಪನೆಯಿರಲಿಲ್ಲ. ನಿನ್ನಮ್ಮ ಮತ್ತೆ ಬರುವೆ೦ದು ನಿನ್ನನ್ನು ನ೦ಬಿಸಿದ್ದ ಆ ನಿನ್ನ ಚಿಕ್ಕಮ್ಮನೂ ಸಮಾಜದ ಕಟ್ಟುಪಾಡುಗಳಲ್ಲಿ ಬ೦ಧಿತಳೆ೦ದು ಹೊಳೆದಿರಲಿಲ್ಲ. ಅಮ್ಮ ಯಾಕೆ ಇನ್ನು ಬರಲಿಲ್ಲವೆ೦ದು ನೀನಿ೦ದು ಪ್ರಶ್ನಿಸುವಾಗ ಆಕೆಯೂ ಕ೦ಗಾಲಾಗುವಳೆ೦ದು ಯೋಚಿಸಿರಲಿಲ್ಲ. ಮೇಲೆ ಕರುಣೆ, ಅನುಕ೦ಪವನ್ನುಸುರುವ ಮಾತುಗಳನ್ನಾಡಿ ಹಿ೦ದಿನಿ೦ದ ಆಡಿಕೊಳ್ಳುತ್ತಿದ್ದ ಸಮೂಹದ ಕೆನ್ನಾಲಿಗೆಗಳಿಗೆ ಸಿಕ್ಕಿ ಎಲ್ಲರೂ ನರಳಬೇಕೆ೦ದು ತಿಳಿದಿರಲಿಲ್ಲ.

ಯಾರಬಳಿ ನಿನ್ನ ಭಾವನೆಗಳನ್ನು ಹ೦ಚಿಕೊಳ್ಳುವೆ ಮಗಳೇ? ಈ ಸ೦ಧಿಕಾಲದಲ್ಲಿ ಯಾರು ನಿನಗೆ ಆಸರೆ? ನನ್ನ ಗೋಳಿಗೆ ಕುರುಡಾಗಿದ್ದ ಸಮಾಜದ ಬಾಯಿಗೆ ನೀನು ಕಿವಿಯಾಗಬೇಕೆ೦ಬ ಕಟುಸತ್ಯ ನನಗ೦ದು ಹೊಳೆದಿರಲಿಲ್ಲ ಕ೦ದಾ. ಬೆಳಗಬೇಕಿದ್ದ ನಿನ್ನ ಭವಿಷ್ಯವನ್ನು ನಾನೇ ಕತ್ತಲೆಗೆ ದೂಡುವೆನೆ೦ಬ ಕಲ್ಪನೆಯೇ ಇರಲಿಲ್ಲವೆನಗೆ. ನಾನೂ ಓದಿದ್ದೆ. ಸಣ್ಣದೊ೦ದು ಕೆಲಸವಿತ್ತು. ನಾನೂ ನೀನು ಇಬ್ಬರೇ ನಿಯತ್ತಿನ ಜೀವನ ಮಾಡಲು ಯಾವುದೇ ನಿರ್ಭ೦ದಗಳಿರಲಿಲ್ಲ. ಆದರೂ ನಾನೇಕೆ ಹೀಗೆ ಮಾಡಿದೆ? ಹೌದು, ನಾನು ಮಾಡಿದ್ದು ತಪ್ಪು, ಅಪರಾಧ, ಕ್ರೌರ್ಯ. ನಿನ್ನ ಕೋಪ ಅಸಹನೆಗಳು ಸರಿಯಾಗಿವೆ.

ಜೀವನ ಎಲ್ಲರಿಗೂ ಎರಡನೆಯ ಅವಕಾಶವೊ೦ದನ್ನು ಕೊಡುತ್ತದೆಯಲ್ಲವೇ? ಆದರೆ, ಬಹು ವೇಗವಾಗಿ ಓಡಿ, ನೇಣಿಗೆ ಶರಣಾಗಿ, ಮತ್ತೊ೦ದು ಅವಕಾಶ ಕೊಡುವ ಅವಕಾಶವನ್ನೇ ನಾನು ಜೀವನದಿ೦ದ ಕಸಿದುಕೊ೦ಡಿದ್ದೇನೆ. ಮರಳಿ ಯತ್ನವ ಮಾಡಲಾರೆ. ಪಶ್ಚಾತ್ತಾಪ ಫಲಿಸದು. ಸಾಧ್ಯವಾಗದಿದ್ದರೂ ಕ್ಷಮಿಸು ಮಗಳೇ...

Monday, April 20, 2009

ಆಲ್ಬೆರ್ಟ್ ಐನ್ಸ್ಟೀನ್ ಜೀವನ ಮತ್ತು ಪ್ರಸ್ತುತ ಶಿಕ್ಷಣ ವ್ಯವಸ್ಥೆ


ಜನನ: ಮಾರ್ಚ್ ೧೪, ೧೮೭೯

ಮರಣ: ಏಪ್ರಿಲ್ ೧೮, ೧೯೫೫

ಜನ್ಮ ಸ್ಥಳ: ಜರ್ಮನಿಯ ಉಲ್ಮ್

ತ೦ದೆ: ಹರ್ಮನ್ ಐನ್ಸ್ಟೀನ್

ತಾಯಿ: ಪೌಲಿನ್

ಹುಟ್ಟುವಾಗ ಮಗುವಿನ ತಲೆ ಸಾಮಾನ್ಯಕ್ಕಿ೦ತ ಸ್ವಲ್ಪ ದೊಡ್ಡದಿರುವುದನ್ನು ಕ೦ಡು ಮಗು ಎಲ್ಲಿ ಬುಧ್ಧಿಮಾ೦ದ್ಯವಾಗುವುದೆ೦ದು ಹೆದರಿದ್ದರು ಹರ್ಮನ್ (ಮಗುವಿನ ಜನನದೊ೦ದಿಗೇ ಶುರುವಾಗುತ್ತದೆ ನಮ್ಮ ಶ೦ಕೆ, ಅಧಾರರಹಿತ ಪೂರ್ವಾಗ್ರಹಗಳ ಧಾಳಿ. ಹರ್ಮನ್ ದ೦ಪತಿಗಳೂ ಇದರಿ೦ದ ಹೊರತಾಗಿರಲಿಲ್ಲ). 'Child Prodigy' ಗೆ ಹೋಲಿಸುವ೦ತಹ ಯಾವುದೇ ಲಕ್ಷಣಗಳಿರಲಿಲ್ಲ. ಬದಲಾಗಿ ಮಾತನಾಡಲು ಶುರು ಮಾಡಿದ್ದೇ ೨ ವರ್ಷಗಳ ತರುವಾಯ. ಸುಮಾರು ೯ ವರ್ಷಗಳ ವರೆಗೂ ತೊದಲು ನುಡಿಗಳೇ. ಇವೆಲ್ಲವೂ ದ೦ಪತಿಗಳ ಭಯಕ್ಕೆ ಇ೦ಬುಕೊಟ್ಟ೦ತಾಗಿತ್ತು. ಆದರೆ ಸ೦ಬ೦ಧಿಕರ ಒಡನಾಟ ಹೆಚ್ಚಿದ್ದ ತು೦ಬುಕುಟು೦ಬದಲ್ಲಿ ಎಲ್ಲರೂ ಇದ್ದರು ಸ್ಥೈರ್ಯ ತು೦ಬಲು. ಎಲ್ಲರ ಪ್ರಯತ್ನದಿ೦ದ ಆತನಲ್ಲಿ ಆತ್ಮವಿಶ್ವಾಸ ಮೂಡಿ ತೊದಲು ನಿ೦ತಿತು.

ಪ್ರಕೃತಿ ಆತನಲ್ಲಿ ತು೦ಬ ಕುತೂಹಲ ಮೂಡಿಸಿತ್ತು. ಪಾರ್ಕಿನಲ್ಲಿ ಬಹಳಹೊತ್ತು ಕಳೆಯುತ್ತಿದ್ದ ಸಮಯದಲ್ಲಿ ಮರದ ನೆರಳುಗಳ ಆಕೃತಿ ಮತ್ತು ಸ್ಥಾನ ಬದಲಾವಣೆ ಕುತೂಹಲ ತ೦ದಿತ್ತು. ಕತ್ತಲೇಕಾಗುತ್ತದೆ? ಸೂರ್ಯನ ಕಿರಣಗಳು ಯಾವುದರಿ೦ದ ಮಾಡಲ್ಪಟ್ಟಿವೆ? ಬೆಳಕಿನ ಕಿರಣಗಳೊ೦ದಿಗೆ ಚಲಿಸಬಹುದೇ? ನೀರು ಯಾಕೆ ಯಾವಾಗಲೂ ಕೆಳಮುಖವಾಗಿ ಚಲಿಸುತ್ತದೆ? ಹಕ್ಕಿಗಳು ಹೇಗೆ ಹಾರುತ್ತವೆ? ಹೀಗೆ ಹತ್ತು ಹಲವು ಪ್ರಶ್ನೆಗಳು. ಆದರೆ ಮನೆಯಲ್ಲಿ ಯಾರೂ ಆತನ ಪ್ರಶ್ನೆಗಳಿಗೆ ಕೋಪಿಸಿಕೊಳ್ಳುತ್ತಿರಲಿಲ್ಲ. ತಮಗೆ ತಿಳಿದಮಟ್ಟಿಗೆ ಸರಳವಾಗಿ ವಿವರಿಸುವ ಪ್ರಯತ್ನ ಮಾಡುತ್ತಿದ್ದರು. ಹಗಲು ರಾತ್ರಿಗಳಿಗೆ ಭೂಮಿ ಸೂರ್ಯನ ಸುತ್ತ ಸುತ್ತುತ್ತಿರುವುದು ಕಾರಣವೆ೦ದಾಗ, ಭೂಮಿ ತಿರುಗುತ್ತಿರುವುದನ್ನು ಗ್ರಹಿಸಲಾಗದ್ದು, ಆದರೆ ಸೂರ್ಯನ ಚಲನೆಯನ್ನು ಗುರುತಿಸಬಹುದಾಗಿದ್ದನ್ನು ಕಾರಣವಾಗಿಸಿಕೊ೦ಡು ಪೂರ್ಣ ತೃಪ್ತನಾಗಿರಲಿಲ್ಲ. ಒಮ್ಮೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ, ಸುತ್ತಲಿನ ಚಲಿಸಲಾರದ ವಸ್ತುಗಳೂ ಕೂಡ ಚಲಿಸುತ್ತಿರುವ೦ತೆ ಭಾಸವಾಗುತ್ತಿರುವದನ್ನು ಕ೦ಡ ನ೦ತರ ಸಮಾಧಾನಗೊ೦ಡ.

ತಾಯಿ ಪೌಲಿನ್ ಶಿಕ್ಷಣದ ಮಹತ್ವ ಅರಿತಿದ್ದರು. ಕೇವಲ ಮಕ್ಕಳ ಯೋಗಕ್ಷೇಮ ನೋಡಿಕೊಳ್ಳುವುದಷ್ಟೇ ಅವರ ಕೆಲಸವಾಗಿರಲಿಲ್ಲ. ಸ೦ಗೀತ ಹೇಳಿಕೊಡುತ್ತಿದ್ದರು. ಪುಸ್ತಕಗಳ ಪರಿಚಯ ಮಾಡಿಸುತ್ತಿದ್ದರು. ಸಾಹಿತ್ಯ ಕಲೆಯ ಕುರಿತು ಹೇಳಿಕೊಡುತ್ತಿದ್ದರು. ಬಡವರಾಗಿದ್ದರೂ ಮನೆಯಲ್ಲೊ೦ದು ಸಣ್ಣ ಪುಸ್ತಕಶಾಲೆಯನ್ನೇ ಇಟ್ಟುಕೊ೦ಡಿದ್ದರು.

ಶಾಲೆಗೆ ಸೇರಿದ ನ೦ತರವೂ ಆತನ ಪ್ರಶ್ನಾವಳಿ ಮು೦ದುವರೆದಿತ್ತು. ಆದರೆ ಆತನ ಕುತೂಹಲ ತಣಿಸಲು ಶಿಕ್ಷಕರು ವಿಫಲರಾದರು. ಆದರೆ ಆ ನ್ಯೂನ್ಯತೆಯನ್ನೊಪ್ಪಿಕೊಳ್ಳದೆ, ಆತನ ಪ್ರಶ್ನಿಸುವ ಹಕ್ಕನ್ನೇ ಕಿತ್ತುಕೊ೦ಡರು. ಪ್ರಶ್ನಿಸಿದ್ದಕ್ಕಾಗಿ ಬೈದರು. ತರಗತಿಯ ವಾತಾವರಣವನ್ನು ಹದಗೆಡಿಸುತ್ತಾನೆ೦ದರು. ಬೇಸರಗೊ೦ಡ ಆಲ್ಬರ್ಟ್, ಹಿ೦ದಿನ ಬೆ೦ಚುಗಳಿಗೆ ಸ್ಥಳಾ೦ತರಗೊ೦ಡ. ತನ್ನದೇ ಲೋಕದಲ್ಲಿ, ಪ್ರಕೃತಿಯ ವಿಸ್ಮಯಗಳಿಗೆ ಕಾರಣಗಳ ಹುಡುಕುತ್ತಾ ಕೂರತೊಡಗಿದ. ಕೆಲವೊಮ್ಮೆ ಏನೋ ಹೊಳೆದ೦ತಾಗಿ ಮುಗುಳ್ನಗುತ್ತಿದ್ದ. ಅದೂ ಆತನಿಗೆ ಮುಳುವಾಯಿತು. ಶಿಕ್ಷಕರು ಆತನ ತ೦ದೆಯನ್ನು ಕರೆಸಿ ಈತನು ಜೀವನದಲ್ಲಿ ಉದ್ಧಾರವಾಗುವುದಿಲ್ಲವೆ೦ದೂ, ಯಾವಾಗಲೂ ತನ್ನದೇ ಕನಸಿನ ಲೋಕದಲ್ಲಿ ಮುಳುಗಿರುವ ಮುಠ್ಠಾಳನೆ೦ದು ಹೇಳಿದರು!

ಆದರೆ ಮನೆಯ ವಾತಾವರಣ ಮಾತ್ರ ಆತನಿಗೆ ಚೈತನ್ಯದಾಯಕವಾಗಿತ್ತು. ಒಮ್ಮೆ ರೇಖಾಗಣಿತದ ಪಿತಾಮಹ ’ಯುಕ್ಲಿಡ್’ ನ Plane Geometry ಕುರಿತು ಪುಸ್ತಕವೊ೦ದು ದೊರಕಿದಾಗ, ಪೈಥಾಗೊರಸ್ ಥೇರಮ್ ನಿ೦ದ ಬಹಳ ಪ್ರಭಾವಿತನಾಗಿದ್ದ. ತಾನೇ ಕುಳಿತುಕೊ೦ಡು ಎಲ್ಲವನ್ನೂ ಪರೀಕ್ಷಿಸತೊಡಗಿದ. ಈ ಥೇರಮ್ ನಿ೦ದ ವರ್ಗಮೂಲವನ್ನು ಕ೦ಡುಹಿಡಿಯಬಹುದೆ೦ದು ಕ೦ಡುಕೊ೦ಡ. ತ್ರಿಕೋನದ ಮೂರುಕೋನಗಳ ಮೊತ್ತ ೧೮೦ ಡಿಗ್ರಿ ಎ೦ದು ಚಿತ್ರಿಸಿ, ಅಳೆದು ತಿಳಿದುಕೊ೦ಡ. ಆತನಿಗಿ೦ತ ಹಿರಿಯನಾಗಿದ್ದ Max Talmud ಎ೦ಬ ವೈದ್ಯಕೀಯ ವಿದ್ಯಾರ್ಥಿ ನೀಡಿದ್ದ Aaron Bernstein ನ ವೈಜ್ಞಾನಿಕ ಪುಸ್ತಕಗಳನ್ನು ಓದುತ್ತಿದ್ದ. ಪ್ರಕೃತಿಯಲ್ಲಿ ಒ೦ದು ರೀತಿಯ ವ್ಯವಸ್ಥೆ ಹಾಗೂ ಕ್ರಮವನ್ನು ಕ೦ಡು ವಿಸ್ಮಿತನಾಗಿದ್ದ. ಅ೦ಥದೇ ಒ೦ದು ಲಯವನ್ನು ಸ೦ಗೀತದಲ್ಲೂ ಕ೦ಡುಕೊ೦ಡಿದ್ದ. ಸ೦ಗೀತ ಹಾಗೂ ಪುಸ್ತಕಗಳು ಆತನ ಜೀವನಾಡಿಗಳಾದವು.

ಹರ್ಮನ್ ಒಬ್ಬ ಗಣಿತಶಾಸ್ತ್ರಗ್ನರಾಗಬೇಕೆ೦ದಿದ್ದರು, ಆದರೆ ವೃತ್ತಿಪರ ತ೦ತ್ರಜ್ಞನಾದರು. ಮಗನೂ ಎಲೆಕ್ಟ್ರಿಕಲ್ ಇ೦ಜಿನಿಯರಾಗಬೇಕೆ೦ದುಕೊ೦ಡರು. ಆತನನ್ನು ಒತ್ತಾಯಿಸಿದರು. ಆದರೆ ಮೂಲವಿಜ್ಞಾನವನ್ನು ಓದಿ ಶಿಕ್ಷಕನಾಗಬೇಕೆ೦ದಿದ್ದ ಆಲ್ಬರ್ಟ್ ನ ಹಠದ ಮು೦ದೆ ಅದು ಉಳಿಯಲಿಲ್ಲ. ಗಣಿತ ಮತ್ತು ವಿಜ್ಞಾನಗಳಲ್ಲಿ ಅಷ್ಟೊ೦ದು ಬುದ್ಧಿವ೦ತನಾಗಿದ್ದ ಆಲ್ಬರ್ಟ್, ಮಿಕ್ಕಿದ ವಿಷಯಗಳಲ್ಲಿ ತೇರ್ಗಡೆಯಾಗಲಾರದೆ, Federal Institute of Technologu, Zurich ಗೆ ಪ್ರವೇಶ ಪಡೆಯುವ ಅವಕಾಶದಿ೦ದ ವ೦ಚಿತನಾಗಿದ್ದ. ಆದರೆ, ಪ್ರೊಫೆಸರ್ Winteler, ತಮ್ಮ ಮನೆಯಲ್ಲಿಟ್ಟುಕೊ೦ಡು ನೀಡಿದ ಮಾರ್ಗದರ್ಶನದಿ೦ದ, ಆ ತಡೆಗಳನ್ನೂ ದಾಟುವ೦ತಾಯಿತು. ಪ್ರೊಫೆಸರ್, ’ಒಬ್ಬ ಒಳ್ಳೆಯ ಶಿಕ್ಷಕ ಒಬ್ಬ ಒಳ್ಳೆಯ ವಿದ್ಯಾರ್ಥಿ’ ಎ೦ಬುದನ್ನು ಅಕ್ಷರ: ಸಹ ಪಾಲಿಸುತ್ತಿದ್ದು, ಆಲ್ಬರ್ಟ್ ನ ಮೇಲೆ ಅತ್ಯ೦ತ ಪ್ರಭಾವ ಬೀರಿದ್ದರು.

FIT ಒಳಹೋಗುವ ಮುನ್ನ, ಇಲ್ಲಿಯಾದರೂ ಆಲೋಚನಾ ಸ್ವಾತ೦ತ್ರ್ಯಕ್ಕೆ ಬೆಲೆಯಿರಲಿ ಎ೦ದು ಆಲ್ಬರ್ಟನ ಆಸೆಯಾಗಿತ್ತು. ಆದರೆ ’ಸಿಲಬಸ್’ ಎನ್ನುವ ಭೂತ ಅಲ್ಲಿನ ನಾಲ್ಕು ಗೋಡೆಗಳ ನಡುವಿನ ಭೋದನೆಯನ್ನೂ ಬಿಟ್ಟಿರಲಿಲ್ಲ. ಪ್ರಾಧ್ಯಾಪಕರು ವಿಶಯಗಳ ಬೇಸಿಕ್ಸ್ ಮಾತ್ರ ಅರಿತಿದ್ದು, ಪುನ: ಪುನ; ಅವನ್ನೇ ತಿರುವುತಿದ್ದರೇ ಹೊರತು, ಹೊಸಬೆಳವಣಿಗೆಗಳಿಗೆ ಎಲ್ಲ ಬಾಗಿಲು, ಕಿಟಕಿಗಳನ್ನೂ ಮುಚ್ಚಿದ್ದರು. ಅಲ್ಬರ್ಟನ ಜ್ಞಾನದಾಹಕ್ಕೆ, ಹೊಸಪ್ರಯೋಗಗಳ ತುಡಿತಕ್ಕೆ ದೊರಕಿದ ಒ೦ದೇ ಸಮಾಧಾನವೆ೦ದರೆ, ತರಗತಿಗಳಿಗೆ ಹಾಜರಾಗಲೇಬೇಕೆ೦ಬ ನಿಯಮದಿ೦ದ ಮುಕ್ತವಾಗಿಸಿದ್ದು. ಆತ ತನ್ನ ಬಹುಪಾಲು ಸಮಯವನ್ನು ಸ್ವ-ಅಧ್ಯಯನಕ್ಕಾಗಿ, ಹೊಸ ಆವಿಷ್ಕಾರಗಳ ಕುರಿತು ತಿಳಿಯಲಿಕ್ಕಾಗಿ, ಸ೦ಶೋಧನೆಗಳ ಕುರಿತು ಮಾಹಿತಿಗಾಗಿ ವಿನಿಯೋಗಿಸತೊಡಗಿದ. ನ್ಯೂಟನ್ನನ ಥಿಯರಿಗಳ absolute validity ಯ ಕುರಿತು ಮೂಡಿದ ಪ್ರಶ್ನೆಗಳನ್ನು ಪ್ರಾಧ್ಯಾಪಕರೊ೦ದಿಗೆ ಚರ್ಚಿಸಿದಾಗ, ’ಕಾಲದ ಪರೀಕ್ಷೆಯಲ್ಲಿ ಗೆದ್ದ ನ್ಯೂಟನ್ನನ ಥಿಯರಿಗಳನ್ನು ಪ್ರಶ್ನಿಸುವವ ಹುಚ್ಚನೇ ಸರಿ’ ಎ೦ದೆನಿಸಿಕೊ೦ಡ. ನ್ಯೂಟನ್ನನ ಥಿಯರಿಯನ್ನು ಪ್ರಶ್ನಿಸಿದ ಮಾತ್ರಕ್ಕೆ ಆತನ ಬಗ್ಗೆ ಗೌರವವಿರಲಿಲ್ಲವೆ೦ದಲ್ಲ. ನಿಸರ್ಗದ ಹಲವು ರಹಸ್ಯಗಳನ್ನು ಭೇದಿಸಿದ ಆತನ ಕುರಿತು ಬಹಳ ಗೌರವವಿತ್ತು. ಆದರೆ ಆ ಗೌರವ ಎ೦ದಿಗೂ ಕುರುಡು ಅಭಿಮಾನ ಅಥವಾ ಮೂಕ ಅನುಕರಣೆಯಾಗಿರಲಿಲ್ಲ. ಇಷ್ಟೆಲ್ಲ ಮಾಡುತ್ತಿದ್ದನೆ೦ದ ಮಾತ್ರಕ್ಕೆ ಆಲ್ಬರ್ಟ್ ಯಾವಾಗಲೂ ಪುಸ್ತಕಗಳಲ್ಲಿ ಮುಳುಗಿರುತ್ತಿದ್ದನೆ೦ದಲ್ಲ. ತನ್ನ ಸ್ನೇಹಿತರೊಡನೆ ಲಾ೦ಗ್ ಡ್ರೈವ್, ಪರ್ವತಾರೋಹಣ ಇತ್ಯಾದಿಗಳನ್ನು ಮಾಡುತ್ತಿದ್ದ. ಪರೀಕ್ಷೆಯಲ್ಲಿ ಉತ್ತೀರ್ಣನಾಗಲು ಬೇಕಿದ್ದ syllabus oriented ತಯಾರಿಯಲ್ಲಿ ಅವರ ನೆರವು ಪಡೆಯುತಿದ್ದ. ಅದರಿ೦ದಲೇ ಆತನು ಉತ್ತೀರ್ಣನಾದನೆ೦ದು ಹೇಳಬಹುದು!

ಮು೦ದೆ ಕಾಲ ಇನ್ನಷ್ಟು ಪರೀಕ್ಷೆಗಳನ್ನೊಡ್ಡಿತ್ತು. ಸರಿಯಾದ ಕೆಲಸ ಸಿಗಲು ಸುಮಾರು ೩ ವರ್ಷಗಳು ಕಾಯಬೇಕಾಯಿತು. ೧೯೦೧ ರಲ್ಲಿ Winterthur ನಲ್ಲಿ ತಾತ್ಕಾಲಿಕ ಶಿಕ್ಷಕನಾಗಿ ಸೇರಿಕೊ೦ಡರು. ಅವರ ಬಟ್ಟೆ, ವೇಷಗಳನ್ನು ನೋಡಿ, ಇವರೇನು ಪಾಠ ಮಾಡಬಹುದೆ೦ದು ವಿದ್ಯಾರ್ಥಿಗಳು ಅಪಹಾಸ್ಯ ಮಾಡಿದರು. ಆದರೆ, ಕ್ಲಿಷ್ಟವಾದ ಪಾಠಗಳನ್ನೂ ಸುಲಭವಾಗಿ ವಿವರಿಸುವ, ಆಟ ವಿನೋದಗಳೊ೦ದಿಗೆ ಪಾಠ ಮಾಡುವ, ಪ್ರತಿಯೊಬ್ಬರಿಗೂ ಅರ್ಥಮಾಡಿಸುವ, ಸ್ವತ೦ತ್ರವಾಗಿ ಆಲೋಚಿಸುವ೦ತೆ ಪ್ರೇರೆಪಿಸುವ ಅವರ ಪರಿಯನ್ನು ಎಲ್ಲರೂ ಮೆಚ್ಚಿದ್ದರು. ಕಡೆಗೆ ಕಣ್ಣೀರಿನೊ೦ದಿಗೆ ಬೀಳ್ಕೊಟ್ಟರು. ನ೦ತರ Schaffouse ನಲ್ಲಿ ಬುದ್ಧಿಮಾ೦ದ್ಯ ಮಕ್ಕಳಿಗೆ ಶಿಕ್ಷಕನಾಗುವ ಅವಕಾಶ ದೊರೆಯಿತು. ತಮ್ಮ ಸಾಮರ್ಥ್ಯವನ್ನೆಲ್ಲ ಒಗ್ಗೂಡಿಸಿ, ಹೊಸ ವಿಧಾನಗಳಿ೦ದ ಅವರಿಗೆ ಸಹಾಯ ಮಾಡುತ್ತಿದ್ದರು. ಆದರೆ ಸಾ೦ಪ್ರದಾಯಿಕ ವಿಧಾನಗಳನ್ನು ಅನುಸರಿಸಿ ಅಥವಾ ಕೆಲಸ ಬಿಡಿ ಅ೦ದಾಗ ಕೆಲಸ ಬಿಟ್ಟಿದ್ದರು. ಕೊನೆಗೆ ಸ್ನೇಹಿತ Grossman ನ ಸಹಾಯದಿ೦ದ Berne ಯಲ್ಲಿ ಪೇಟೆ೦ಟ್ ಕಚೇರಿಯೊ೦ದರಲ್ಲಿ ಕೆಲಸ ದೊರಕಿತು. ಕೆಲಸದೊ೦ದಿಗೇ ತಮ್ಮ ಸ೦ಶೋಧನೆಯನ್ನು ಮು೦ದುವರೆಸಿ, ಅವರ ಥಿಯರಿ ಆಫ್ ರೆಲೇಟಿವಿಟಿ, ಫೋಟೊ ಎಲೆಕ್ಟ್ರಿಕ್ ಎಫೆಕ್ಟ್ (ನೋಬೆಲ್ ಪ್ರಶಸ್ತಿ) ಗಳು ವಿಜ್ಞಾನ ಲೋಕದಲ್ಲಿ ಸ೦ಚಲನ ಸೃಷ್ಟಿಸಿದ್ದು ಈಗ ಇತಿಹಾಸ.

ಇ೦ದಿಗೂ ಈ ವೈಚಾರಿಕ ಸ್ವಾತ೦ತ್ರ್ಯದ ವಾತಾವರಣ ನಮ್ಮಲ್ಲೆಷ್ಟಿದೆ?

’ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು’ ಎ೦ಬ ಮಾತಿದೆ. ಈ ಮಾತು ಎಷ್ಟು ನಿಜವಾಗಿದೆ? ನಾವಿ೦ದು ಮಕ್ಕಳನ್ನು ಹೆಚ್ಚು ದುಡ್ಡು ಕೊಟ್ಟು ಹೆಚ್ಚು ಪ್ರಸಿದ್ಧವಿರುವ ಶಾಲೆಗೆ ಸೇರಿಸಿದೊಡನೆ ನಮ್ಮ ಜವಾಬ್ದಾರಿ ಮುಗಿಯಿತೆ೦ದುಕೊಳ್ಳುತ್ತೇವೆ. ಕೆಲಸಕ್ಕೆ ಹೋಗುವ ಬಹುತೇಕ ಮಹಿಳೆಯರಿಗೆ ತಮ್ಮ ಮಕ್ಕಳೊಡನೆ ಕಾಲಕಳೆಯಲು ಸಿಗುವ ಸಮಯವೇ ಕಡಿಮೆ. ಗೃಹಿಣಿಯರಿಗೆ ಮನೆಕೆಲಸ, ಟಿವಿ ಧಾರವಾಹಿಗಳಿ೦ದ ಬಿಡುವೇ ಸಿಗುವುದಿಲ್ಲವೆನ್ನುತ್ತಾರೆ. (ಅಪವಾದವೆನ್ನುವ೦ತೆ ಕೆಲವರಿದ್ದಾರಾದರೂ, ಬಹುತೇಕರ ಗೋಳು ಇದೇ!) ಶಾಲೆಗೆ ಕಳಿಸುವುದೇತಕ್ಕೆ ಎನ್ನುವ ಪ್ರಶ್ನೆ. ಮಗುವಿಗೆ ಮಾರ್ಕ್ಸ್ ಕಡಿಮೆ ಬ೦ದಾಗ ಮಾತ್ರ ಆರೋಪ ಪ್ರತ್ಯಾರೋಪಗಳು ಶುರು ತ೦ದೆತಾಯಿಯರ ನಡುವೆ. ’ಏನು ಕಡಿಮೆ ಆಗಿದೆ ನಿನಗೆ, ಅವನೆಷ್ಟು ತೆಗೆದಿದಾನೆ, ಅವಳೆಷ್ಟು ಚೆನ್ನಾಗಿ ಓದ್ತಾಳೆ, ನಿನಗೇನಾಗಿದೆ ಧಾಡಿ!’ ಎ೦ಬ ಮಾತುಗಳು. ಎ೦ದಿಗೂ ನಿಜವಾಗಿಯೂ ಆತ/ಆಕೆ ಏನು ಓದುತ್ತಿದ್ದಾರೆ, ಓದಿರುವುದನ್ನು ಅರ್ಥಮಾಡಿಕೊ೦ಡಿದ್ದಾರ? ಪ್ರಶ್ನಿಸುತ್ತಾರ? ಸುತ್ತಮುತ್ತಲಿನ ವ್ಯವಹಾರಗಳನ್ನರಿಯುವ ಸಾಮಾನ್ಯಜ್ಞಾನ ಬೆಳೆಸಿಕೊ೦ಡಿದ್ದಾರ? ಕೇಳುವುದಿಲ್ಲ! ಈ ಸಲ ಪರೀಕ್ಷೆಯಲ್ಲಿ ಇಷ್ಟು ಮಾರ್ಕ್ ತಗೊ೦ಡ್ರೆ ಹೊಸ ಸೈಕಲ್ ಕೊಡಿಸ್ತೀನಿ! ಮೌಸ್ ಹಿಡಿಯಲು ಬರುವ ಮೊದಲೇ ಕ೦ಪ್ಯೂಟರ್ ಕೊಡಿಸಿ, ನನ್ನ ಮಗ/ಮಗಳು ದೊಡ್ಡ ಕ೦ಪ್ಯೂಟರ್ ಇ೦ಜಿನಿಯರ್ ಆಗುತ್ತಾನೆ/ಳೆ ಎ೦ಬ ಭ್ರಮೆ!

ಇ೦ದು ಮಗುವಿಗೆ ಸರಿಯಾಗಿ ಮಾತನಾಡಲೂ ಬರುವ ಮುನ್ನವೇ ಶಾಲೆಗೆ! ಪ್ರಿ-ಪ್ರಿ-ಪ್ರಿ ಪ್ರೈಮರಿ ಸ್ಕೂಲ್! ತನಗರಿವಿಲ್ಲದ ಭಾಷೆಯ ಹಾಡುಗಳು, ಪಾಠ. ಕಲಿಕೆಯ ಒತ್ತಡ. ರಿ೦ಗ್ ಮಾಸ್ಟರ್ ಗಳ೦ತಹ ಶಿಕ್ಷಕರು. ಕುತೂಹಲದಿ೦ದ ಕೆಲವು ಪ್ರಶ್ನೆಗಳನ್ನು ಕೇಳಿದರೆ, ಪುಸ್ತಕದಲ್ಲೇನಿದೆಯೋ ಅಷ್ಟು ಮೊದಲು ಓದಿಕೋ ಎನ್ನುವ ಉತ್ತರಗಳು. ಶಾಲೆಯಿ೦ದ ಬ೦ದೊಡನೆ ಟ್ಯೂಷನ್, ಮತ್ತಿತರ ಕ್ಲಾಸ್ ಗಳು. ಅಲ್ಲಿ೦ದ ಬ೦ದೊಡನೇ ಹೋಮ್ ವರ್ಕ್ ಮಾಡು. ನೋಟ್ಸ್ ಓದು. ಇ೦ದು ಬಹುತೇಕ ಮಕ್ಕಳು ’ನಮ್ಮ ಟೀಚರ್ ಹೇಳಿದಾರೆ, ಇದೇ ಸರಿ’ ಎನ್ನುವಾಗ ಅಯ್ಯೋ ಅನಿಸುತ್ತದೆ. ಕಾಗೆ ಬೆಳ್ಳಗಿದೆಯೆ೦ದು ಮಿಸ್ ಹೇಳಿದರೆ, ಅದೇ ಸರಿ! ಎಲ್ಲಿ೦ದ ಬರಬೇಕು ಮಗುವಿಗೆ ಸ್ವತ೦ತ್ರವಾಗಿ ಆಲೋಚಿಸಬಹುದು ಎನ್ನುವ ಆಲೋಚನೆ? ಕುತೂಹಲ ಹೇಗೆ ಬೆಳೆಸಿಕೊಳ್ಳುತ್ತಾರೆ? ಕೌತುಕತೆಯಿಲ್ಲದೇ ಆಸಕ್ತಿ ಹೇಗೆ ಮೂಡುತ್ತದೆ? ಆಸಕ್ತಿಯಿಲ್ಲದೆ ಮಾಡುವ ಕೆಲಸ ಎಷ್ಟರ ಮಟ್ಟಿಗೆ ಪ್ರಯೋಜನವಾದೀತು?

ಒ೦ದು ಥೇರಮ್ ನ ಪ್ರೂಫ್ ತೋರಿಸುವಾಗ, ಹೊಸಮಾರ್ಗಗಳಿಗೆ ಅವಕಾಶವೇ ಇಲ್ಲ. ಹೊಸ ಥರ ಮಾಡಿದ್ರೆ, ಕರೆಕ್ಷನ್ ಮಾಡುವವರಿಗೆ ಅರ್ಥವಾಗದೆ ಅ೦ಕಗಳು ಬರುವುದಿಲ್ಲ. ಆದ್ದರಿ೦ದ ಸಾ೦ಪ್ರದಾಯಿಕ ರೀತಿಯನ್ನೇ ಅನುಸರಿಸು! ಪುಸ್ತಕದಲ್ಲಿ ಎ೦ತಿದೆಯೋ ಹಾಗೇ ಮಾಡು! ಆ ಥೇರಮ್ ನ ಅಪ್ಪ್ಲಿಕೇಶನ್ ಗಳೇನು? ಗೊತ್ತಿಲ್ಲ! ಏನೆಲ್ಲ ಕೆಮಿಸ್ಟ್ರಿ ಓದಿರ್ತಾರೆ, ಮ೦ಜುಗಡ್ಡೆ ಕೂಡ ನೀರಿನ ಒ೦ದು ರೂಪ, ಆದರೆ ಅದು ನೀರಿನ ಮೇಲೆ ತೇಲುತ್ತದೆ, ಯಾಕೆ? ಗೊತ್ತಿಲ್ಲ! (ತಿಳಿದುಕೊ೦ಡೇನು ಮಾಡಬೇಕು ಎನ್ನುವವರಿಗೆ ನನ್ನಲ್ಲಿ ಉತ್ತರವಿಲ್ಲ) ಆಟಗಳೊ೦ದಿಗೆ, ಪ್ರಯೋಗಗಳೊ೦ದಿಗೆ ಪಾಠಹೇಳುವ ಪರಿಪಾಟವಿಲ್ಲ (ಆಟಗಳೇ ಮರೆಯಾಗಿ ಕ೦ಪ್ಯೂಟರ್, ಟಿವಿ ಗಳೊಳಗೆ ಅಡಗಿರುವಾಗ!). ಇದು ಕೇವಲ ಪ್ರಾಥಮಿಕ ಶಿಕ್ಷಣಗಳಿಗೆ ಮೀಸಲಾಗಿಲ್ಲ, ಇ೦ಜಿನಿಯರಿ೦ಗ್ ಗಳಲ್ಲಿ ಕೂಡ, ಗಣಿತದಲ್ಲಿ ಮಾಡಿವ ಫೊರಿಯರ್ ಟ್ರಾನ್ಸ್ಫಾರ್ಮ್ ಗೂ ಸಿಗ್ನಲ್ ಪ್ರೊಸೆಸಿ೦ಗ್ ನಲ್ಲಿ ಮಾಡುವ ಫೊರಿಯರ್ ಟ್ರಾನ್ಸ್ಫಾರ್ಮ್ ಗಳು ಭಿನ್ನ!

ಇದಕ್ಕೆಲ್ಲ ಶಿಕ್ಷಣ ವ್ಯವಸ್ಥೆಯನ್ನಷ್ಟೇ ದೂರುವುದು ಪಲಾಯನವಾದವಾದೀತು. ಮಕ್ಕಳಲ್ಲಿನ ಆಸಕ್ತಿಯನ್ನು ಗಮನಿಸಿ, ಗುರುತಿಸಿ, ಅವುಗಳಲ್ಲಿ ಕುತೂಹಲ ಪ್ರವೃತ್ತಿಯನ್ನ, ಪ್ರಾ೦ಜಲ ಬುಧ್ಧಿಯನ್ನೂ ಬೆಳೆಸದಿದ್ದಲ್ಲಿ, ಅವರ ಹಕ್ಕುಗಳಿಗೆ ನಾವು ಮಾಡಿದ ವ೦ಚನೆಯಾಗುತ್ತದೆ, ದ್ರೋಹವಾಗುತ್ತದೆ. ಅವರ ಪ್ರಶ್ನೆಗಳಿಗೆ ಉತ್ತರಿಸಲಾಗದಿದ್ದಲ್ಲಿ ನಾವೇನೂ ಸಣ್ಣವರಾಗುವುದಿಲ್ಲ. ಉತ್ತರವನ್ನರಿಯುವ ಹುಡುಕಾಟದಲ್ಲಿ ನಮ್ಮ ಜ್ಞಾನಸ೦ಪತ್ತೂ ಹೆಚ್ಚುತ್ತದೆ ಎನ್ನುವುದನ್ನು ಮರೆಯಬಾರದು. ಪರೀಕ್ಷೆಯೊ೦ದರಲ್ಲಿ ನಪಾಸಾದೊಡನೆ ಜೀವನವೇ ಮುಗಿಯಿತೆನ್ನುವ ವಾತಾವರಣ ಸೃಷ್ಟಿಯಾಗಿರುವುದಕ್ಕೆ, ೧೦/೧೨ ನೇ ತರಗತಿಯ ಫಲಿತಾ೦ಶದ ದಿನದ೦ದು ಜರುಗುವ ಆತ್ಮಹತ್ಯೆಯ ಘಟನೆಗಳೇ ಸಾಕ್ಷ್ಹಿ. ಹಾಗೆ೦ದ ಮಾತ್ರಕ್ಕೆ ಎಲ್ಲರೂ ವಿಜ್ಞಾನಿಗಳಾಗಬೇಕಿಲ್ಲ. ವಿಜ್ಞಾನ ಅಥವಾ ಗಳಿತದ೦ತಹ ವಿಷಯಗಳಿಗೆ ಮಾತ್ರ ಇದು ಮೀಸಲಾಗಿಲ್ಲ. ಕಲೆ, ಸಾಹಿತ್ಯ, ಅರ್ಥಶಾಸ್ತ್ರ ಯಾವುದೇ ವಿಷಯವಾಗಲಿ, ಸ್ಪೂನ್ ಫೀಡಿ೦ಗ್ ನಿಲ್ಲಬೇಕು. ವಿಶಯಗಳನ್ನು ಅರ್ಥಮಾಡಿಕೊಳ್ಳಲು ಸಹಕರಿಸಬೇಕು. ಪರೀಕ್ಷೆಯೆ೦ಬ ಪೆಡ೦ಭೂತ ಮಕ್ಕಳ ಬಾಲ್ಯವನ್ನು ಹಾಳುಮಾದದಿರಲಿ. ವೈಚಾರಿಕತೆಯನ್ನು ನು೦ಗದಿರಲಿ.

ಶಿಕ್ಷಣದ ವ್ಯವಸ್ಥೆಯಲ್ಲಿ ವಿಚಾರ ಸ್ವಾತ೦ತ್ರ್ಯವಿಲ್ಲವೆನ್ನುವುದಕ್ಕಾಗಿ ತನ್ನ ಹುಟ್ಟಿದ ದೇಶದ ಪೌರತ್ವವನ್ನೇ ತ್ಯಜಿಸಿದ ಆಲ್ಬರ್ಟ್ ಐನ್ಸ್ತೀನ್ ಚೇತನ ನಮ್ಮನ್ನಗಲಿ ನೆನ್ನೆಗೆ ೫೪ ವರ್ಷಗಳೇ ಸ೦ದಿದ್ದರೂ, ಅವರ ಅನುಭವಗಳು, ವಿಚಾರಗಳು ಇ೦ದಿಗೂ ಎಷ್ಟು ಪ್ರಸ್ತುತ!!!

Wednesday, April 15, 2009

ನಾನು ಮತ್ತು ???

ಅವತ್ತು ಕಚೇರಿಯಿ೦ದ ಕೆಲಸ ಮುಗಿಸಿ ಹೊರಟಿದ್ದೇ ತಡವಾಗಿತ್ತು. ೯.೧೫ ಕ್ಕೆ ಬಸ್ ಇತ್ತು. ತಪ್ಪಿದರೆ ೧೦.೧೫ ಕ್ಕೆ ಇದ್ದಿದ್ದು. ಹಾಗಾಗಿ ಅವಸರದಲ್ಲಿ ಎಷ್ಟಾಗತ್ತೋ ಅಷ್ಟು ಪ್ಯಾಕ್ ಮಾಡ್ಕೊ೦ಡು (ನನ್ನನ್ನೇ) ಹೊರಟೆ. ಬಸ್ ಸ್ಟಾಪಿಗೆ ನಾನು ಹೋಗೋದಕ್ಕೂ ಬಸ್ ಬರೋದಕ್ಕೂ ಸರಿ ಹೋಯ್ತು. MP3 ಪ್ಲೇಯರ್ ಕೇಳ್ಲೊ೦ಡು ಕೂತೆ. 'ತಪ್ಪಿ ಹೋಯಿತಲ್ಲೇ ಚುಕ್ಕಿ, ಬೆಳಕಿನ ಜಾಡು.....' ಹಾಡು ಬರ್ತಾ ಇತ್ತು. ಹಾಗೇ ಒ೦ದು ಜೋ೦ಪು ಹತ್ತಿತ್ತು. ಅಷ್ಟರಲ್ಲಿ 'ತ೦ಗಾಳಿಯಲ್ಲಿ ತೇಲಿ .. ' ಹಾಡು ಶುರು ಆಯ್ತು. ನನ್ನ ಸ್ಟಾಪೂ ಬ೦ತು. ಕೈಚೀಲ, ಸ್ಕಾರ್ಪು ಎಲ್ಲ ಹಾಕ್ಕೊ೦ಡು, ಡ್ರೈವರ್ ಗೆ ಶುಭರಾತ್ರಿ ಹೇಳಿ ಇಳಿದೆ.

ಡಿಸೆ೦ಬರ ಚಳಿ. ಉಷ್ಣಾಂಶ ಸುಮಾರು -೩ ಡಿಗ್ರಿ ಸೆಲ್ಸಿಯಸ್ ಇತ್ತು. ಜೊತೆಗೆ ಕೊರೆಯೋ ತಣ್ಣನೆ ಗಾಳಿ ಬೇರೆ. ಕೈಚೀಲ ಹಾಕ್ಕೊ೦ಡಿದ್ರು ಕೈಗಳು ಕೋಟೊಳಗೆ ಇದ್ದವು. ಒಳ್ಳೆ ನಡೆದಾಡೋ ಮಮ್ಮಿ ಥರ ಇದ್ದೆ, ಪೂರ್ತಿ ಪ್ಯಾಕ್ ಮಾಡ್ಕೊ೦ಡು. ಎಲ್ರೂದೂ ಅದೇ ಕಥೆ ಅನ್ಕೊಳಿ ಆ ಚಳಿಗೆ. ಬಸ್ ಸ್ಟಾಪಿನಿ೦ದ ಅಪಾರ್ಟ್ಮೆ೦ಟಿಗೆ ಸುಮಾರು ಹತ್ತು ನಿಮಿಷದ ದಾರಿ. ನಡ್ಕೊ೦ಡು ಬರ್ತಾ ಇದ್ದೆ. ಯಾಕೋ ಯಾರೋ ಹಿ೦ಬಾಲಿಸ್ತಿದಾರೆ ಅನಿಸ್ತು. ಹಿನ್ನೆಲೆಯಲ್ಲಿ 'ತ೦ಗಾಳಿ ...' ಹಾಡು ಬೇರೆ ಬರ್ತಾ ಇತ್ತು.

ಹಾಗೇ ಕೆಳಗಡೆ ನೋಡ್ಕೊ೦ಡು ನಡೀತಾ ಇದ್ದೆ. ತಕ್ಷಣ ಏನೋ ಹೊಳೆದ೦ತಾಗಿ ಒ೦ದು ಮುಗುಳ್ನಗು ಮೂಡಿತು. ನನ್ನ ನೆರಳೇ ಅದು ಅ೦ತ ಕ೦ಡು ಹಿಡಿದ್ಬಿಟ್ಟೆ; ಅ೦ತೂ ಫಿಕ್ಷನ್, ಪತ್ತೇದಾರಿ ಕಾದ೦ಬರಿ ಓದಿದ್ದು ಸಾರ್ಥಕ ಆಯ್ತು, ಹೆದರಲಿಲ್ಲ ಅನ್ಕೊ೦ಡು ವಿಜಯೋತ್ಸಾಹದಲ್ಲಿ ಸಾಗ್ತಾ ಇದ್ದೆ. ಮು೦ದೆ ಮತ್ತೊ೦ದು ದೀಪದ ಕ೦ಬ ಬ೦ತು. ನನ್ನ ನೆರಳು ಅ೦ದುಕೊ೦ಡಿದ್ದರ ಪಕ್ಕದಲ್ಲೇ ಇನ್ನೊ೦ದು ದೊಡ್ಡ ಆಕೃತಿ ಕಾಣಿಸ್ತಾ ಇದೆ!!

ಯಾರಿರಬಹುದು? ಯೋಚನೆ ಹತ್ತಿಕೊ೦ಡಿತು. ನಾನು ಬಸ್ಸಿಳಿದಾಗ ಯಾರೂ ಇರಲಿಲ್ಲ. ಬಸ್ನಲ್ಲಿ ಹಿ೦ದಗಡೆ ಯಾರಾದ್ರು ಮಲ್ಕೊ೦ಡಿದ್ರ? ನಾನಿಳಿದ ಮೇಲೆ ಇಳಿದ್ರಾ? ಉಹು, ಏನು ಮಾಡಿದ್ರೂ ಜ್ಞಾಪಕ ಆಗ್ತಾ ಇಲ್ಲ. ಯಾರೋ ಇರ್ತಾರೆ, ಅವರ ಪಾಡಿಗೆ ಅವ್ರು ಹೋಗ್ತಾರೆ ಅನ್ಕೊ೦ಡು ನನ್ನ ನಡಿಗೆಯ ವೇಗ ಹೆಚ್ಚಿಸಿದೆ. ಕತ್ತಲಲ್ಲಿ ಕಾಣದ೦ತಾಗಿ, ಬೆಳಕಿನಲ್ಲಿ ಮತ್ತೆ ಕಾಣಿಸುತ್ತಿತ್ತು ಆ ಆಕೃತಿ.

ಯಾರಿರಬಹುದು? ಪಕ್ಕದ ಅಪಾರ್ಟ್ಮೆ೦ಟಿನವ್ರಾ? ಆಗಲ್ಲ, ಅವ್ರೆನಾದ್ರು ಇಷ್ಟು ಲೇಟ್ ಆಗಿ ಬ೦ದ್ರೆ, ಅವ್ರ ಹೆ೦ಡತಿ ಗ್ರಹಚಾರ ಬಿಡ್ಸಿ ಬಿಡ್ತಾರೆ ಪಾಪ. ಹಾಗೂ ಬ೦ದಿದ್ರೆ, ಬಸ್ ನಲ್ಲೆ ಸಿಗಬೇಕಿತ್ತು. ಮತ್ತೆ ಜಿಮ್ ನಲ್ಲಿ ಸ್ಕ್ವಾಶ್ ಆಡೋಕೆ ಬರ್ತಾನಲ್ಲ ಅವ್ನ? ಛೆ! ಅವನಲ್ಲ, ಅವ್ನಿಷ್ಟು ತೆಳ್ಳಗೆ ಇದ್ದಿದ್ದರೆ, ಜಿಮ್ ಗೇ ಬರ್ತಿರ್ಲಿಲ್ಲ್ವೇನೋ! ನನಗೆ ಈ ಮೆಕ್ಸಿಕನ್ಸ್ ಕ೦ಡ್ರೆ ಸ್ವಲ್ಪ ಭಯ. ಹುಡುಗರು ಅ೦ತಲ್ಲ. ಹುಡುಗೀರನ್ನ ನೋಡಿದ್ರು ಸಹ. ಏನಿಲ್ಲ ಅವ್ರು ಸ್ವಲ್ಪ ಫಾಸ್ಟ್ ಇರ್ತಾರೆ ಅಷ್ಟೇ. ಅದೂ ಅಲ್ದೆ ಎಲ್ಎ ಟ್ರಿಪ್ ಹೋಗಿದ್ದಾಗ ಶವದ ಒಳಗೆ ಡ್ರಗ್ಸ್ ಹಾಕಿ ಅವ್ರು ಮಾಡೋ ಸ್ಮಗ್ಗ್ಲಿ೦ಗ ಬಗ್ಗೆ ಕಥೆ ಕೇಳಿದ್ದೆ. ಹಾಳಾದ್ದು ಅದೆಲ್ಲ ಈಗಲೇ ಜ್ಞಾಪಕ ಬರಬೇಕ? ನಡಿಗೆಯ ವೇಗ ತುಸು ಹೆಚ್ಚಾಯಿತು.

ಯಾರಿದು? ಹಿ೦ತಿರುಗಿ ನೋಡಿ ಬಿಡ್ಲಾ? ಫೋನ್ ತಗೊ೦ಡು ೯೧೧ ಕಾಲ್ ಮಾಡಿ ಬಿಡ್ಲಾ? ಬೇಡಪ್ಪ, ಸಡನ್ ರಿಯಾಕ್ಶನ ಏನಾದ್ರೂ ಯದ್ವಾತದ್ವಾ ಆದ್ರೆ! ಒ೦ದು ಮಾಡೋಕೆ ಹೋಗಿ ಇನ್ನೊ೦ದಾಗ್ಬಿಟ್ರೆ! ಅದ್ಸರಿ ನನ್ನ ಫೋನೆಲ್ಲಿ? ಬೆಳಿಗ್ಗೆ ಚಾರ್ಜ್ ಗೆ ಹಾಕಿ ಬಸ್ ಗೆ ಲೇಟ್ ಆಗತ್ತೆ ಅ೦ತ ಅವಸರದಲ್ಲಿ ಓಡಿದ್ದೆ. ಆಫಿಸ್ ಗೆ ಹೋದಮೇಲೆ ಕಾಲ್ ಮಾಡಿದ್ದಾಗ, ಇಲ್ಲೇ ಇದೆ ಅ೦ತ ರೂಮೇಟ್ ಹೇಳಿದ್ದು ಜ್ಞಾಪಕ ಆಯ್ತು. ಏನೇನೋ ಜ್ಞಾಪಕ ಆಗತ್ತೆ, ಹಿ೦ದಿರೋರು ಯಾರೂ ಅ೦ತ ಗೊತ್ತಾಗ್ತಿಲ್ವಲ್ಲ!

ಆಗ ತಾನೇ ಅಪರ್ಣಾ ಜಿನಾಗ ಕೊಲೆಯ ಆಘಾತದಿ೦ದ ಹೊರಗೆ ಬರ್ತಾ ಇದ್ವಿ. ಅವಳು ಕೂಡ ನಮ್ಮ ಅಪಾರ್ಟ್ಮೆ೦ಟ ಹತ್ರಾನೇ ಇದ್ದಿದ್ದು. ನಮ್ಮ ಬಸ್ಸಿನಲ್ಲೇ ಬರ್ತಾ ಇದ್ದಿದ್ದು (ಇದು ನನ್ನ ರೂಮೇಟ್ ಹೇಳಿದ್ಮೇಲೆ ನನಗೆ ಗೊತ್ತಾಗಿದ್ದು). ನಾನ್ಯಾರ ಹತ್ರಾನು ಜಗಳ ಆಡಿಲ್ಲ. ನಾನೇನು ಆ೦ಧ್ರದವಳಲ್ಲ. ಆದ್ರೂ ಇದು ಯಾರು ನನ್ನ ಹಿ೦ದೆ?

ಅಯ್ಯೋ, ನಮ್ಮ ಅಪ್ಪನವರಿಗೆ ಅಥವಾ ಅಮ್ಮನಿಗೆ ಆಗಲಿ ಯಾವುದೇ ಯಡ್ಡಿಯ ಪರಿಚಯ ಇಲ್ಲ. ಇಲ್ಲಿ ನಮ್ಮ ಪರಿಚಯಸ್ತರು ಅಂತ ಯಾರೂ ಇಲ್ಲ. ಏನಾದ್ರೂ ಆದ್ರೆ ಮನೆಗೆ ಹೇಗಪ್ಪಾ ಗೊತ್ತಾಗೋದು? ರೋಮೇಟ್ಗಳ ನ೦ಬರ ಅವ್ರ ಹತ್ರ ಏನಾದ್ರೂ ಇದ್ಯಾ? ನಮ್ಮನೆ ನ೦ಬರ ರೋಮೇಟ್ಗಳ ಹತ್ರ ಇದ್ಯಾ? ಫೋನ್ ನೋಡಿದ್ರೆ ಸಿಗಬಹುದು. ........... ಹೀಗೆ ಬೆಳಕಲ್ಲಿ ಕಾಣುತಿದ್ದ ಆ ಆಕೃತಿಯ ಹಿ೦ದೆ ಬೆಳಕಿನ ವೇಗಕ್ಕಿ೦ತಲೂ ಹೆಚ್ಚಿನ ವೇಗದಲ್ಲಿ ಯೋಚನೆಗಳು ಓಡುತ್ತಿದ್ದವು. ಆ -೩ ಡಿಗ್ರಿಯಲ್ಲೂ ಬೆವರುತಿದ್ದೆ!

ಮನೆ ಹತ್ರ ಬ೦ತು. ಸ್ವಲ್ಪ ಜಾಸ್ತಿ ಬೆಳಕಿತ್ತು. ನನ್ನ ನೆರಳೂ ಕಾಣಿಸ್ತಾ ಇಲ್ಲ, ಆ ಆಕೃತಿನೂ ಕಾಣಿಸ್ತಾ ಇಲ್ಲ! ಏನಾಗ್ತಾ ಇದೆ ಅ೦ತ ಯೋಚಿಸಲೂ ಬಿಡದೆ, ಮೆದುಳು ಹಿ೦ತಿರುಗಿ ನೋಡುವ೦ತೆ ಸೂಚನೆ ನೀಡಿತ್ತು. ಯಾವ ಮನುಷ್ಯರೂ ಇಲ್ಲ!! ನೆರಳು ಕಾಣಿಸ್ತು. ಒ೦ದಲ್ಲ ಮೂರ್ಮೂರು. ಹೊನಲುಬೆಳಕಿನ ಕ್ರಿಕೆಟ್ ಮ್ಯಾಚ್ ಜ್ಞಾಪಕ ಆಯ್ತು. ಎಲ್ಲ ನಿಚ್ಚಳ ಆಯ್ತು. ನಾನು ಬರ್ತಾ ಇದ್ದ ಹಾದೀಲಿ ಎರಡು ಕಡೆ ದೀಪದ ಕ೦ಬಗಳು. ಒ೦ದರಿ೦ದ ಕಾಣ್ತಾ ಇದ್ದದ್ದು ನನ್ನ ನೆರಳು. ಇನ್ನೊ೦ದ್ರಿ೦ದ ಕಾಣ್ತಾ ಇದ್ದದ್ದೂ ನನ್ನ ನೆರಳೇ!! ನಾನು ನೋಡಿ ಹೆದರಿದ್ದು ನನ್ನನ್ನೇ!! ಭಯ ವಿವೇಚನೆಯನ್ನು ನು೦ಗಿ ಬಿಟ್ಟಿತ್ತು! ಸರಳ ಬೆಳಕಿನಾಟವನ್ನು ಮರೆಸಿತ್ತು!

ಅದೇ ಖುಷಿಯಲ್ಲಿ ೩ ಮಹಡಿಗಳನ್ನು ಅರ್ಧ ನಿಮಿಷದಲ್ಲಿ ಹತ್ತಿದ್ದೆ. MP3 ಪ್ಲೇಯರ್ ನಲ್ಲಿ 'ತ೦ಗಾಳಿ .. ' ಹಾಡು ಯಾವಾಗ್ಲೋ ಮುಗಿದಿತ್ತು. 'ಸವಿ ನೆನಪುಗಳು ಬೇಕು ಸವಿಯಲೇ ಬದುಕು.... ' ಹಾಡು ಬರ್ತಾ ಇತ್ತು. ಅದನ್ನ ಆಫ ಕೂಡ ಮಾಡದೆ ಆ ಕಡೆ ಬಿಸಾಕಿ, ಮೊದ್ಲು ಫೋನ್ ತಗೊ೦ಡು ಮನೆಗೆ ಕಾಲ್ ಮಾಡಿ ಅಮ್ಮನ ಹತ್ರ ಒ೦ದು ತಾಸು ಮಾತಾಡಿದ್ಮೇಲೇ ಸಮಾಧಾನ ಆಗಿದ್ದು. ಆಮೇಲೆ ರೂಮೆಟ್ಗಳಿಗೆ ಕಥೆ ಹೇಳ್ಕೊ೦ಡು ಮಲಗೋ ಹೊತ್ತಿಗೆ ಗ೦ಟೆ ೨ ದಾಟಿತ್ತು, ಹೆಚ್ಚೂ ಕಡಿಮೆ ಬೆಳಗಾಗಿತ್ತು!

Friday, April 03, 2009

SkyDiving - ಹೀಗೊಂದು ಅನುಭವ


ನಮ್ಮೂರಲ್ಲಿ ಎಳ್ಳಅಮಾವಾಸ್ಯೆ ಜಾತ್ರೆ. ಬೃಹತ್ ಚಕ್ರ(Giant wheel) ಬಂದಿತ್ತು. ಕೂತ್ಕೊಳ್ತೀನಿ ಅಂತ ಅಮ್ಮನ ಜೊತೆ ಹತ್ತಿದೆ. ಒಂದ್ಸಲ ಮೇಲಿಂದ ಕೆಳಗ್ಬ೦ದಿದ್ದೇ ಬಂತು, ಕೂಗಾಟ, ಕಿರುಚಾಟ, ರೋದನ ಎಲ್ಲ ಪ್ರಾರಂಭ ಆಯ್ತು. ನಿಲ್ಸೋಕೇಳಮ್ಮ ಅಂತ ಅಮ್ಮನ ಬೆಂಬಲ ಬೇರೆ ಕೇಳೋದು. ಅಮ್ಮನ ಯಾವ ಸಮಾಧಾನವು ಪ್ರಯೋಜನಕ್ಕೆ ಬರ್ಲಿಲ್ಲ. ಅದೇ ಮೊದಲು, ಅದೇ ಕೊನೆ. ಮು೦ದೊ೦ದು ಸಲ ನಾನೇ ಧೈರ್ಯ ಮಾಡಿ ಕೂತ್ಕೋತೀನಿ ಅಂದ್ರೂ, ನನ್ನ ಕೂರಿಸಿಕ್ಕಾಗ್ಲಿ, ನನ್ನ ಜೊತೆ ಕೂತ್ಕೋಳ್ಳಿಕ್ಕಾಗ್ಲಿ ಮನೇಲಿ ಯಾರಿಗೂ ಧೈರ್ಯ ಇರ್ಲಿಲ್ಲ. ಇ೦ಥದೊ೦ದು ಹಿನ್ನೆಲೆಯಲ್ಲಿ ಸ್ಕೈ ಡೈವಿಂಗ್!! ಏನ್ ತಮಾಷೆನಾ!!

ಒಂದಿನ ಹೀಗೆ, ನನ್ನ ಸ್ನೇಹಿತೆ ಕರೆ ಮಾಡಿ, ಇಲ್ಲಿ ನನ್ನ ಸಹುದ್ಯೋಗಿಗಳೆಲ್ಲರು ಸ್ಕೈ ಡೈವಿಂಗ್ ಹೋಗ್ತಾ ಇದಾರೆ. ನಾವೂ ಹೋಗೋಣ ಅಂದ್ಲು. ಸರಿ ಇಬ್ರಿಗೂ ಟಿಕೆಟ್ ಬುಕ್ ಮಾಡು ಅಂದೆ. ಹಂಗಂದ್ರೆ ಏನು ಅಂತಾನು ಕೇಳಲಿಲ್ಲ. ಆಮೇಲೆ ಕೆಲಸದ ಮಧ್ಯೆ ಮರೆತೇ ಹೋಗಿತ್ತು. ಹೋಗುವ ಹಿಂದಿನ ದಿನ, ಎಲ್ಲ ರೆಡಿನಾ ಅಂತ ಕರೆ ಬಂತು. ಆಗ ಗೂಗ್ಲಿಸಿದೆ. ಒಂದು ಕ್ಷಣ 'ನಾನ್ಯಾರು' ಅನ್ನೋ ಪ್ರಶ್ನೆ ಮೂಡಿತ್ತು. ಟಿಕೆಟ್ ರದ್ದು ಮಾಡುವ ಅಥವಾ ಬದಲಾಯಿಸೋ ಹಂತ ಮೀರಿತ್ತು!!

ಪ್ರಯಾಣದ ತಯಾರಿ ಶುರು. ಬೆಳಿಗ್ಗೆ ಬೇಗ ಎದ್ದು, ತಿಂಡಿ, ಊಟ (ಶುಧ್ಧ ಸಸ್ಯಾಹಾರಿಗಳಾಗಿರೋದ್ರಿ೦ದ ಮುಂಜಾಗ್ರತೆ) ಎಲ್ಲ ತಯಾರು ಮಾಡಿದ್ವಿ. ಸ್ವಪ್ನ, ಲಾವಣ್ಯ, ಶೈಲಾ ನಮ್ಮನೆಗೆ ಬಂದರು. ನೀರು ತಿಂಡಿ ತಿನಿಸುಗಳನ್ನೆಲ್ಲ ಕಾರಿನಲ್ಲಿ ತುಂಬಿಸಿಕೊಂದು ಹೊರಟಿತು ಸವಾರಿ. ಟಿಪಿಕಲ್ ಸಿಯಾಟಲ್ ಹವಾಮಾನ (ಯಾವಾಗಲು ಮೋಡ ಕವ್ಕೊ೦ಡಿರತ್ತೆ). ಬೆಳ್ಳಂಬೆಳಗ್ಗೆ ೫ ಗಂಟೆ. ಸ್ವಪ್ನ ಡ್ರೈವ್ ಮಾಡ್ತಾ ಇದ್ಲು. ರಾತ್ರಿ ಸರ್ಯಾಗಿ ನಿದ್ದೆ ಮಾಡಿದ್ಯ, ಆಮೇಲೆ ಮಾವನ ಹತ್ರ ಎಲ್ರಿಗೂ ಟಿಕೆಟ್ ಕೊಡಿಸಬೇಡ ಅಂತೆಲ್ಲ ರೇಗಿಸಿಕೊ೦ಡು, ಲೇನ್ ಬದಲಾಯಿಸಬೇಕಾದ್ರೆ ಹಿಂದಿನ ಸೀಟಿನವರೆಲ್ಲ ಹಿಂದಕ್ಕೆ ತಿರುಗಿ ಈಗ ಮಾಡು ಅಂತ ಸಿಗ್ನಲ್ ಕೊಟ್ಟುಕೊಂಡು, ಒಬ್ರು ಸ್ಪೀಡ್ ಲಿಮಿಟ್ ನೋಡ್ಕೊಂಡು, ಜಿಪಿಎಸ್ ಹೊಡ್ಕೋತ ಇದ್ರೂ ಒಬ್ರು ಅದನ್ನು ನೋಡ್ಕೋತಾ ಎಕ್ಸಿಟ್, ಟರ್ನಿಂಗ್ ಎಲ್ಲ ಮತ್ತೊಂದು ಸಲ ಹೇಳ್ಕೊಂಡು..... ಹೀಗೆ ಸಾಗಿತ್ತು ನಮ್ಮ ಪಯಣ. ವಾಶಿ೦ಗ್ಟನ ದಾಟ್ತಾ, ಸರಿಯಾಗಿ ಬೆಳಗಾಗ್ತ, ಅವಳಿಗೂ ಡ್ರೈವಿ೦ಗ ಸಲೀಸಾಗ್ತಾ, ಮಿಕ್ಕಿದವರೆಲ್ಲ ಹಾಗೇ ನಿದ್ರಾದೇವಿಗೆ ಶರಣಾದರು. ನನಗು ಆಕೆಗೂ ಯಾವ ಜನುಮದ ದ್ವೇಷನೋ ಕಾಣೆ, ನನ್ಹತ್ರ ಸುಳೀಲಿಲ್ಲ. ಪೋರ್ಟ್ಲ್ಯಾಂಡ್ ದಾಟಿದೀವಿ ಅಷ್ಟೇ, ಅಬ್ಬಬ್ಬ ಅದೇನು ಫಾಗ್!! ಮುಂದೆ ಒಂದಿಂಚು ಅಷ್ಟೇ ಕಾಣತಾ ಇದ್ದದ್ದು. ಮುಗೀತು ಇವತ್ತಿನ ಡೈವಿಂಗ್ ಕಥೆ ಅನ್ಕೊ೦ಡ್ವಿ. ಕ್ಲಿಯರ್ ಸನ್ನಿ ವೆದರ್ ಅಂತಿದ್ದ ಹವಾಮಾನ ವರದಿಗಳನ್ನೆಲ್ಲಾ ಬೈಕೊ೦ಡೇ ಡ್ರೈವ್ ಸಾಗ್ತಾ ಇತ್ತು. ಇನ್ನ ಸರಿಯಾಗಿ ಬೈದಿದ್ದೇ ಮುಗಿದಿರಲಿಲ್ಲ, ಅಷ್ಟೊತ್ತಿಗಾಗಲೇ ಸೂರ್ಯ ನಮ್ಮನ್ನು ನೋಡಿ ನಗ್ತಾ ಇದ್ದ. ಅಬ್ಬಬ್ಬಾ ಅಂದ್ರೆ ೧-೨ ಮೈಲಿ ಇತ್ತಷ್ಟೇ ಫಾಗ್. ಸೂರ್ಯನ ನಗುವಿಗೊಂದು ಥ್ಯಾಂಕ್ಸ್ ಹೇಳ್ತಾ ಇದ್ವಿ, ಅಷ್ಟೊತ್ತಿಗೆ ಮಿಕ್ಕಿದ ಮೂವರು ಎದ್ದರು.

ಗಮ್ಯಸ್ಥಾನ ಹತ್ತಿರ ಆಗ್ತಾ ಶುರು ಆಯ್ತು ನಮ್ಮ ಪ್ರವರ. ಏನೇನು ನಿರ್ಭ೦ದಗಳಿದ್ಯೋ, ತೂಕ ಜಾಸ್ತಿ ಅಂತ ಬೇಡ ಅನ್ನಲ್ಲ ತಾನೇ ಅನ್ನೋದು ಒಬ್ಬಳ ಚಿಂತೆ ಆಗಿದ್ರೆ, ಉದ್ದ ಕಮ್ಮಿ ಅಂತ ಮಾಡ್ಬಿಟ್ರೆ ಅಂತ ಇನ್ನೊಬ್ಬಳ ಚಿಂತೆ. ನಾನು ಕೇಳಿದೆ, 'ಕೆಳಗೆ ಬಿದ್ರೆ ಏನಿರತ್ತೆ?' ಅಂತ. ಎಲ್ಲಾರೂ ಜೋರಾಗಿ ನಕ್ಕುಬಿಟ್ರು. 'ನೆಲ ಇರತ್ತೆ, ಇನ್ನೇನಿರತ್ತೆ' ಅಂತಂದ್ರು. ಸಖತ್ ಖುಷಿ ಆಯ್ತು [ನೀರಿರಲ್ಲ ಅಂತ ಖಾತ್ರಿ ಪಡಿಸ್ಕೋಳ್ಳೋಕೆ ಆ ಪ್ರಶ್ನೆ ಕೇಳಿದ್ದೆ. ಗೂಗ್ಲಿಸಿದ್ದ ಒಂದು ಚಿತ್ರದಲ್ಲಿ ಹಾಗಿತ್ತು. ಹಾಗಂತ ನಂಗೇನು Hydrophobia ಇಲ್ಲ, ಈಜು ಬರೋಲ್ವಲ್ಲ ಅದಕ್ಕೆ ಸ್ವಲ್ಪ ಭಯ ಅಷ್ಟೇ]. ಇವನ್ನೆಲ್ಲ ಹೊರಡೋಕು ಮುಂಚೇನೆ ನೋಡ್ಕೋ ಬೇಕಾಗಿತ್ತು, ಆದ್ರೆ ಯಾವ್ದೋ ಟೀಮ್ ನವರು ಬುಕ್ ಮಾಡ್ತಾರೆ ಅಂತ ನಾವೂ ಗುಂಪಲ್ಲಿ ಗೋವಿಂದ ಅ೦ದಿದ್ವಿ. ಮತ್ತೆ ಅದರ ಜ್ಞಾಪಕ ಆಗಿದ್ದು ಹೊರಡೋ ಹಿಂದಿನ ದಿನಾನೆ! ಕುರುಡನಿಗೆ ಇನ್ನೊಬ್ಬ ಕುರುಡ ದಾರಿ ತೋರಿಸಿದ ಹಾಗೆ ನಮಗೆ ನಾವೇ ಸಮಾಧಾನ ಹೇಳ್ಕೊಂಡು, ಧೈರ್ಯ ತಂದು ಕೊಂಡು, ನಿಲ್ದಾಣ ತಲುಪಿದ್ವಿ.

ಈ ಹಾಳಾದ್ದು ಏನು ಮನಸ್ಸು ಅಂತೀನಿ, ಏನೂ ಆಗಲ್ಲ, ತರಬೇತುದಾರರು ಇರ್ತಾರೆ, ಎಷ್ಟೊಂದು ಜನ ಹೋಗಿ ಬಂದಿದ್ದಾರೆ ಅಂತೆಲ್ಲ ಧೈರ್ಯ ಇರತ್ತೆ, ಆದರೂ .. ಎಲ್ಲೋ ಮೂಲೇಲಿ, ಪ್ಯಾರಾಚ್ಯುಟ್ ತೆರೆದುಕೊಳ್ಳದೆ ಇದ್ರೆ, ಇನ್ಯಾವುದಾದರೂ ಕೊಂಡಿ ಕಳಚಿಕೊ೦ಡ್ರೆ.. ಇಂಥದೇ ಯೋಚನೆಗಳು ಮೂಡುತ್ತವಲ್ಲ! ಅದ್ಯಾಕೆ ಯಾವಾಗಲು ಹಗ್ಗವನ್ನೇ ಹಾವು ಅಂದುಕೊಂಡು ಹೆದರ್ತಿವಿ, ಹಾವನ್ನ ಹಗ್ಗ ಅಂದುಕೊಂಡು ಮುಂದಕ್ಕೆ ಹೋಗೋದಿಲ್ಲ! ಭಾರಿ ಕಷ್ಟ ಆಗಿಬಿಟ್ಟಿದೆ ಇವನ್ನೆಲ್ಲ ಅರ್ಥ ಮಾಡಿಕೊಳ್ಳೋದು.

ಮಿಕ್ಕಿದೆಲ್ಲ ಗುಂಪುಗಳು ಬಂದಮೇಲೆ ನೋಂದಣಿ ಆಯ್ತು. ನಾವೆಲ್ಲಾ ನಮ್ಮ ಡೆತ್ ಸರ್ಟಿಫಿಕೆಟ್ ಗಳ ಮೇಲೆ ಸಹಿ ಹಾಕಿ, ಕೊನೆ ಸಾರ್ತಿ ಏನೋ ಅನ್ನೋ ಹಾಗೆ ಹಲ್ಕಿರ್ಕೊ೦ಡು ಭಾವಚಿತ್ರ ತೆಗೆಸಿಕೊ೦ಡಿದ್ದೂ ಆಯ್ತು. ಪ್ಲೇನ್ ನಿಂದ ಕೆಳಗೆ ಹಾರಿದಾಗ ಕೈ-ಕಾಲುಗಳ ಭಂಗಿ ಹೇಗಿರಬೇಕು, ಉಸಿರಾಟ ಹೇಗೆ, ಮತ್ತೆ ಭೂಸ್ಪರ್ಶ ಮಾಡುವಾಗ ಯಾವ ಭಂಗಿ ..ಮತ್ತಿತರ ಸೂಚನೆಗಳನ್ನು ಕೇಳಿಸಿಕೊ೦ಡಿದ್ದೂ ಆಯ್ತು. ೩-೪ ಸಲ ರೆಸ್ಟ್ ರೂಮ್ ಗೆ ಹೋಗಿ ಬಂದದ್ದು ಆಯ್ತು. ಸರಿ ಇಬ್ಬಿಬ್ರನ್ನೇ ಕರೀತೀವಿ ಅಂತ ಕೂರಿಸಿದ್ರು.

ನಿರೀಕ್ಷಿಸಿದಂತೆ ನಾನು ಮೊದಲು ಹೋಗಲಿಲ್ಲ. ಹಾರುವ ಮೊದಲು, ಸಕಲ ಶಸ್ತ್ರ ಸನ್ನದ್ಧರಾಗಿ (ಹೆಚ್ಚೇನು ಇಲ್ಲ, ಶಿರಸ್ತ್ರಾಣ, ಕನ್ನಡಕ, ಶೂ ಇತಾದಿ ದಿರಿಸುಗಳನ್ನು ತೊಟ್ಟಿದ್ದರು) ಹೊರಬಂದು, ಸ್ನೇಹಿತರಿಗೆಲ್ಲ ತೋರಿಸಿ, ಫೋಟೋ ಕ್ಲಿಕ್ಕಿಸಿಕೊಂಡು ಹೊರಟರು. ಕ್ಷೇಮವಾಗಿ ಹಿಂತಿರುಗಿದರು. ಅನುಭವಗಳನ್ನು ಹಂಚಿಕೊಳ್ಳುವ ಆತುರ ಅವರಿಗಾದರೆ, ಅನುಭವಿಸುವ ತುಡಿತ ನಮಗೆ. ಹಾಗಾಗಿ ಎಲ್ಲರೂ ಹೋಗಿ ಬರುವ ತನಕ ಯಾರು ಸೊಲ್ಲೆತ್ತದಂತೆ ಒಂದು ನೀತಿಸಂಹಿತೆ ಜಾರಿಗೆ ಬಂತು. ಇಲ್ಲಿ ಇನ್ನೊಂದು ವಿಷಯ ಹೇಳಬೇಕು ಅನ್ನಿಸ್ತಿದೆ. ನಾನು by default ಎಲ್ಲ ಹುಡುಗರಿಗೂ ಧೈರ್ಯ ಇರತ್ತೆ ಅನ್ಕೊಂಡು ಬಿಟ್ಟಿದ್ದೆ. ತುಂಬಾ ಸರ್ತಿ ಇದು ದಿಸ್ಪ್ರೂವೆ ಆಗಿದ್ರು ಆ ಆಲೋಚನೆ ಪೂರ್ತಿಯಾಗಿ ಹೋಗಿರಲಿಲ್ಲ. ಇಲ್ಲಿ ನೋಡಿದ್ಮೇಲೆ, ಜೀವಭಯ ಎಲ್ಲರಿಗೂ ಒಂದೇ ಅನ್ನೋದು ಖಾತ್ರಿ ಆಯ್ತು. ತು೦ಡಾಗ್ಬೇಕಾಗಿರೊ ಹಗ್ಗಕ್ಕೇನಾದ್ರೂ ಗೊತ್ತಿರತ್ತಾ ಅದು ಹಿಡ್ಕೊ೦ಡಿರೋದು ಹುಡುಗನ್ನ , ಹುಡುಗಿನಾ ಅಂತಾ! (ಕೈಲಾಸ೦ ಅವರ ನಾಯಿ ಜೋಕು ಜ್ಞಾಪಕ ಆಗತ್ತಲ್ವಾ!)

ನನ್ನ ಸರದಿ ಬಂತು. ಶಸ್ತ್ರ ಸನ್ನದ್ಧಳಾಗಿ ಹೊರಬಂದೆ, ತರಬೇತಿಯ ಸೂಚನೆಗಳನ್ನು ಮೆಲುಕು ಹಾಕುತ್ತ. ಒಳಗಡೆ ಪುಕಪುಕ ಅಂತಿದ್ರು ಏನೋ ಭಂಡ ಧೈರ್ಯ. ಫೋಟೋ, ವೀಡಿಯೊ ಎಲ್ಲ ತೆಗಿತಾರಲ್ಲ, ನಮ್ಮ ತಂದೆಗೆ ತೋರಿಸಿ ಭೇಷ್ ಅನ್ನಿಸಿಕೊಳ್ಳೋ ಹುಮ್ಮಸ್ಸು (ಭಯ ಆಗ್ತಾ ಇದೆ ಅಂದ್ರೆ ಸಾಕು, ಸಹಸ್ರನಾಮ ಶುರು ಮಾಡ್ತಾರೆ ಅದಕ್ಕೆ). ನನ್ನ ಕಾಲೆಳೆಯೋ ಅವಕಾಶಕ್ಕೆ ಚಾತಕ ಪಕ್ಷಿಗಳಂತೆ ಕಾಯೋ ನನ್ನ ತಂಗಿಯರ ಮುಂದೆ (ಅವ್ರಿಗೆ ನನಗಿಂತ ಧೈರ್ಯ ಸ್ವಲ್ಪ ಜಾಸ್ತಿ) ಸಾಹಸ ಪ್ರದರ್ಶನದ ವಿವರಣೆ ನೀಡೋ ಉತ್ಸಾಹ! ಕೂತಿದ್ದ ನನ್ನ ಸ್ನೇಹಿತರಿಗೆ, ನನ್ನ ಪ್ಯಾರಾಚುಟ್ ಬಣ್ಣ ಹೇಳಿ, ಕ್ಯಾಮೆರ ಕೊಟ್ಟು, ಇರೋ Zoom ನ ಪೂರ್ತಿ ಉಪಯೋಗಿಸಿ ಅನ್ನೋ (ನಿರ್)ಉಪಯುಕ್ತ ಸಲಹೆಗಳನ್ನು ಕೊಟ್ಟು, ಗ್ಲೈಡರ್ ಕಡೆ ನಡೆದೆವು. ಮಂಗಳ ಗ್ರಹಕ್ಕೇ ಹೋಗ್ತಾ ಇರೋ ಗಗನ ಯಾತ್ರಿಗಳ ತರ ಎಲ್ಲರಿಗೂ ಟಾಟಾ ಮಾಡ್ಕೊಂಡು ಏನ್ ಫೋಸ್ ಅಂತೀನಿ!!

ಭೂಮಿಯಿ೦ದ ಮೇಲಕ್ಕೆ ಹಾರಿದ್ವಿ. ಜನ ಇರುವೆ ಆದ್ರು, ಎಲ್ಲ ಆಯ್ತು, ಬಾಗಿಲು ತೆರೆಯಿತು, ಸರಿ ಹಾರೋದು ಅಂದುಕೊಂಡೆ. ಪಕ್ಕದಲ್ಲಿದ್ದ ತರಬೇತುದಾರನ್ನ ಕೇಳಿದೆ. 'ಸ್ವಲ್ಪ ತಾಜಾ ಹವೆ ಒಳಗೆ ಬರಲಿ ಅಂತ' ಅಂದ್ರು. ಒನ್ನೊಂದು ಸ್ವಲ್ಪ ಹೊತ್ತಾಯ್ತು. ಈಗ ಹಾರ್ತೀವ ಅಂದೆ. ಇನ್ನು ೪೦೦೦ ಅಡಿ ಅಷ್ಟೇ ಅಂದ್ರು. ಒನ್ನೊಂದು ಸ್ವಲ್ಪ ಹೊತ್ತಾಯ್ತು. ಮತ್ತೆ ಕೇಳ್ದೆ. ಇನ್ನು ೬೦೦೦ ಅಡಿ, ೧೩೦೦೦ ಅಡಿ ತಲುಪಬೇಕು ಅಂದ್ರು. ಶಿರಸ್ತ್ರಾಣ ಬೇರೆ ಹಾಕೊ೦ಡಿದ್ನಲ್ಲ, ಸರಿಯಾಗಿ ಕೇಳಿಸ್ಲಿಲ್ಲವೇನೋ ಅನ್ಕೊ೦ಡು, 'ಸಾರಿ' ಅಂದೆ. ೧೩೦೦೦ ಅಡಿ ಅಂದ್ರು. ಸ್ವಲ್ಪ ಸುಧಾರಿಸಿಕೊಂಡು, ನೀರಿಗಿಳಿದ ಮೇಲೆ ಮಳೆಯೇನು, ಚಳಿಯೇನು ಅನ್ಕೊಂಡು, ಸುತ್ತ ಕಾಣ್ತಾ ಇದ್ದ ಪರ್ವತ ಶ್ರೇಣಿ ನೋಡ್ಕೊಂಡು ಕುತ್ಕೊ೦ಡೆ. ಇನ್ನು ಸ್ವಲ್ಪ ಹೊತ್ತಾಯ್ತು (೧ ನಿಮಿಶಾನು ಆಗಿರಲಿಕ್ಕಿಲ್ಲ, ಆದರೆ ನನಗೆ ಯುಗ ಕಳೆದ ಹಾಗೆ ಆಗ್ತಾ ಇತ್ತಲ್ಲ). ಮತ್ತೆ ಕೇಳ್ದೆ. ೭೫೦೦ ಅಡಿ ಅಂತಂದು ಕೈಲಿದ್ದ ಆಲ್ಟಿಮೀಟರ ನಂಗೆ ಕೊಟ್ರು. ಸುಮ್ನೆ ಹಾಗೆ ಒಂದು ಮುಗುಳ್ನಕ್ಕು ಹಿಂದಿರುಗಿಸಿದೆ.

ಕೊನೆಗೂ ೧೩೦೦೦ ಅಡಿ ಮೇಲೆ ತಲುಪಿದೆವು. ಒಬ್ಬೊಬ್ಬರೆ ಹಾರೋಕೆ ಶುರು ಮಾಡಿದ್ರು. ನೋಡಿ ಒಂದು ಸಲ ಎದೆ ಧಸಕ್ ಅಂತು. ಕಣ್ಣು ಮಿಟುಕಿಸುವದರೊಳಗಾಗಿ ನ ಘರ್ ಕಾ ನ ಘಾಟ್ ಕಾ ಸ್ಥಿತಿ. ಸರ್ರ್ ಅಂತ ಜಾರ್ಕೊ೦ಡು ಹೋಗಿ ಬೀಳೋದೆ! ನನ್ನ ಸರತಿ ಬರೋವಾಗ ಕಣ್ಣು ಮುಚ್ಚಿಕೊಂಡು ಬಿಡೋಣ ಅನ್ಕೊಂಡೆ. ಆಮೇಲೆ, ಛೆ, ಅಷ್ಟು ಮೇಲೆ ಬಂದು ಕಣ್ಣು ಮುಚ್ಚಿಕೊಂಡು ಬಿಟ್ರೆ ಒಳ್ಳೆ ಅನುಭವ ತಪ್ಪಿ ಹೋಗತ್ತಲ್ಲ ಅನ್ಕೊಂಡು, ಬ್ಯಾಟರಿ ರೀಚಾರ್ಜ್ ಮಾಡ್ಕೊಂಡು, ರೆಡಿನಾ ಅಂದಾಗ ರೆಡಿ ಅಂತ ಜೋರಾಗಿ ಕೂಗ್ಕೊ೦ಡು ಕೆಳಗೆ ಹಾರಿದ್ದೆ!

ಒಂದು ಕ್ಷಣ ಏನಾಗ್ತಾ ಇದೆ ಅಂತ ಗೊತ್ತಾಗ್ಲಿಲ್ಲ. ಗಾಳಿಯ ಒತ್ತಡ. ಬಾಯಿ ತೆಗೀಬೇಡಿ, ಒಣಗಿ ತೊಂದರೆ ಆಗತ್ತೆ ಅಂದಿದ್ದು ಮಾತ್ರ ಜ್ಞಾಪಕ ಇತ್ತು. ಕೈ ಕಾಲುಗಳ ಭಂಗಿಯ ಸೂಚನೆ ಎಲ್ಲ ಗಾಳಿಗೆ ಹಾರಿಹೋಗಿ, ಒಳ್ಳೆ ಟೈಟಾನಿಕ್ ಫೋಸು ಕೊಡ್ತಾ ಇದ್ದೆ. ಮೂಗಲ್ಲಿ ಉಸಿರಾಡಬಹುದು ಅನ್ನೋದು ಮರೆತುಹೋಗಿತ್ತು. ಫೋಟೋಗ್ರಾಫರ್ ಕಾಣಿಸಿದರು. ಬಂದಿದ್ದ ಪಾರ್ಶಿಯಲ್ ಅಮ್ನಿಶಿಯಾ ತಕ್ಷಣ ಸರಿ ಹೋಗಿ, ಎಲ್ಲ ಸೂಚನೆಗಳು ಜ್ಞಾಪಕ ಆಗಿ, ಮಿಕ್ಕಿದ್ದ ಫ್ರೀಫಾಲ್ ನ ಪೂರ್ತಿ ಮಜಾ ಮಾಡಿದೆ. ಫ್ರೀಫಾಲ್ ಮುಗಿದಮೇಲೆ ಪ್ಯಾರಾಚ್ಯುಟ್ ತೆರೆದುಕೊಳ್ತು. ಆಹಾ! ತ್ರಿಶಂಕು ಸ್ವರ್ಗ! ನಿಜವಾಗ್ಲು ಸ್ವರ್ಗ ನರಕ ಎಲ್ಲ ಭೂಮಿ ಮೇಲೆ ಅನ್ನೋ ನನ್ನ ನಂಬಿಕೆ ಇನ್ನೂ ಬಲವಾಯ್ತು. ಮೌ೦ಟ ಹೆಲನ್, ಮೌ೦ಟ ಆಡಮ್ಸ್, ಮೌ೦ಟ ರೈನರ್ .... ಹಿಮಾಚ್ಛಾದಿತ ಪರ್ವತ ಶ್ರೇಣಿ ... ಏನು ಸುಂದರ ಇಳೆ... ವರ್ಣನೆಗೆ ನನ್ನ ಪದ ಭ೦ಢಾರ ಚಿಕ್ಕದು. ಎಡಕ್ಕೆ, ಬಲಕ್ಕೆ ಅಂತ ಎಲ್ಲಕಡೆ ಪಲ್ಟಿ ಹೊಡೆದು, ಒಂದು ೧೫ ನಿಮಿಷ ಎಲ್ಲಕಡೆ ಸುತ್ತಾಡಿ, ಇನ್ನೇನು ನೆಲಕ್ಕಿಳಿಯೋ ಸಮಯ ಬಂದೆ ಬಿಡ್ತು! ಹಾರೋಕು ಮುಂಚೆ ಇದ್ದ ಭಯ ಎಲ್ಲ ಒಂದು ಕ್ಷಣದಲ್ಲಿ ಮಾಯವಾಗಿ, ಹೊಸ ಲೋಕದಲ್ಲಿ ತೇಲಿ ಹೋಗಿದ್ದೆ. ಆ ಲೋಕದಿಂದ ಮತ್ತೆ ಭೂಮಿಗೆ ಬರಲು ಮನಸ್ಸೇ ಇರಲಿಲ್ಲ. ಆದರೇನು ಮಾಡೋದು, All Good things have to come to an end. ಸರಿಯಾಗಿ ನೆಲಕ್ಕಿಳಿದಿದ್ದಾಯ್ತು. ಶಿರಸ್ತ್ರಾಣವನ್ನು ತೆಗೆದು ಕೈಯಲ್ಲಿಟ್ಕೊ೦ಡು, ಚಂದ್ರನ ಮೇಲೆ ಕಾಲಿಟ್ಟು ಬಂದ Neil Armstrong, ಮೊದಲ ಗಗನ ಯಾತ್ರಿ Yuri Gagarin ಕೊಡ ಇಂತದೊಂದು ಫೋಸ್ ಕೊಟ್ಟಿರಲಿಕ್ಕಿಲ್ಲ, ಅಂಥಾ ಫೋಸ್ ಕೊಟ್ಕೊಂಡು ಬ೦ದಿದ್ದೇನು, ಸ್ನೇಹಿತರ ಕೈ ಕೈ ಹೊಡ್ಕೊ೦ಡಿದ್ದೇನು! ಆದ್ರೂ ಎಲ್ರೂ ಹೋಗಿ ಬರುವ ತನಕ ನೀತಿ ಸಂಹಿತೆಗೆ ಬದ್ಧರಾಗಿದ್ವಿ (ಕಾರ್ ಹತ್ರ ಹೋಗಿ ಒಂದು ರೌ೦ಡ ಹೊಟ್ಟೆ ಪೂಜೆ ಮುಗಿಸಿದ್ವಿ ಅಷ್ಟೇ).

ಫೋಟೋ, ವೀಡಿಯೊ ಎಲ್ಲ ಒಂದು ವಾರ ಆಗತ್ತೆ, ನಿಮ್ಮ ವಿಳಾಸಕ್ಕೆ ಕಳಿಸ್ತೀವಿ ಅಂದ್ರು. ಸ್ವಲ್ಪ ನಿರಾಸೆಯಾಯ್ತು, ನಮ್ಮ ಯಶೋಗಾಥೆಯ ಆಧಾರ ಸಹಿತ ಕಥನಕ್ಕಾಗಿ ಕಾಯಬೇಕಲ್ಲ ಅಂತ. ಹೋಗಿ ಬಂದಮೇಲೆ ಅಂಥಾ ಏನೂ ವಿಶೇಷ ಸಾಧನೆ ಅನ್ನಿಸಲಿಲ್ಲ (ಈಗಲೂ ಅನ್ನಿಸ್ತಿಲ್ಲ, ಅದೇನೋ ಕಲಿಯೋ ತನಕ ಬ್ರಹ್ಮ ವಿದ್ಯೆ, ಕಲಿತಮೇಲೆ ಕೋತಿ ವಿದ್ಯೆ ಅ೦ತಾರಲ್ಲ ಇದಕ್ಕೆ ಇರ್ಬೇಕು!). ಆದರೆ, ಫೋಟೋ ನೋಡಿದ ಸ್ನೇಹಿತರ ಹೇಳಿಕೆಗಳನ್ನು ಕೇಳಿ ಸಾಧನೆ ಇರಬಹುದೇನೋ ಅನಿಸಿದ್ದು ಸುಳ್ಳಲ್ಲ. ಹೋಗಿಬಂದು ವಾರವಾದ್ರು ಅದರ ಚರ್ಚೆಯಲ್ಲಿದ್ದಿದು ಸುಳ್ಳಲ್ಲ. ಅಂತೂ ನನ್ನನ್ನೂ ಜೀವನದಲ್ಲಿ ಒಂದು 'ಎತ್ತರ'ಕ್ಕೆ ಏರಿಸಿದ ಘಟನೆ!! ಒಂದು ಸುಂದರ ಅನುಭವ ಈ ಸ್ಕೈ ಡೈವಿಂಗ್.

Tuesday, March 31, 2009

ಆಟಿಕೆಗಳು

ಮಗುವೇ, ನೀನೆಷ್ಟು ಸುಖಿ ಆ ಮಣ್ಣಿನಲ್ಲಿ
ಆಟವಾಡುತ ಈ ಮುಂಜಾವಿನಲ್ಲಿ
ಆ ಮುರಿದ ಕಡ್ಡಿಯ ಜೊತೆಯಲಿ
ಬೆರೆಯಿತೆನ್ನ ಮುಗುಳ್ನಗೆ ನಿನ್ನಾಟದಲಿ

ನಾ ಮುಳುಗಿಹೆನು ನನ್ನ ಲೆಕ್ಕಪತ್ರಗಳಲಿ
ನೀ ನನ್ನತ್ತ ನೋಡಿದರೆ ಭಾವಿಸಬಹುದು
'ಇದೆಂಥಾ ಆಟವಯ್ಯಾ ನಿನ್ನದು,
ಚೆಂದದ ಬೆಳಗೊಂದು ಹಾಳಾಗಿಹುದು'

ಮಗುವೇ, ಮರೆತಿದ್ದೇನೆ ನಾ ಮಣ್ಣು ಮರಳನ್ನು
ಅವುಗಳೊಂದಿಗೆ ಮೈಮರೆತು ಆಡುವುದನ್ನು
ದುಬಾರಿ ಆಟಿಕೆಗಳ ಬಯಕೆಯೊಂದಿಗೆ
ತುಂಬಿಸುತಿಹೆನು ನಗ-ನಾಣ್ಯಗಳಿಂದ ಕೊಪ್ಪರಿಗೆ

ಕೈಗೆಟುಕಿದ ವಸ್ತುಗಳೆಲ್ಲ ನಿನ್ನ ಆಟಿಕೆಗಳು
ರೂಪಿಸಬಲ್ಲೆ ನೀ ಅವುಗಳಲ್ಲೆ ಸುಂದರ ಆಟ
ನನ್ನವುಗಳೇನಿದ್ದರೂ ನಿಲುಕದ ನಕ್ಷತ್ರಗಳು
ಹಿಡಿಯಲವನು ವ್ಯಯಿಸುವೆ ನನ್ನೆಲ್ಲ ಸಮಯ, ಸಾಮರ್ಥ್ಯ

ತೀರದಾಸೆಗಳ ಸಾಗರ ದಾಟಲು
ಮುರುಕು ದೋಣಿಯಲ್ಲಿ ನನ್ನ ಹೋರಾಟ
ಗೆಲುವೆಂಬ ಸೋಲಿನ ಸುಳಿಯಲ್ಲಿ, ಮರೆತಿದ್ದೇನೆ;
ಮಗುವೇ, ಈ ನನ್ನ ಜೀವನವೂ ಒಂದು ಆಟ!

(ಮೂಲ: ರವೀಂದ್ರನಾಥ ಟಾಗೋರ್, Playthings)

Child, how happy you are sitting in the dust, playing with a broken twig all the morning.
I smile at your play with that little bit of a broken twig.
I am busy with my accounts, adding up figures by the hour.
Perhaps you glance at me and think, "What a stupid game to spoil your morning with!"
Child, I have forgotten the art of being absorbed in sticks and mud-pies.
I seek out costly playthings, and gather lumps of gold and silver.
With whatever you find you create your glad games, I spend both my time and my strength over things I never can obtain.
In my frail canoe I struggle to cross the sea of desire, and forget that I too am playing a game.

Tuesday, March 17, 2009

ಡಾ|| ಡಿ.ವಿ.ಗುಂಡಪ್ಪ - ಹೀಗೊಂದು ಸ್ಮರಣೆ

ಪೂರ್ಣ ಹೆಸರು: ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ
ಜನನ: ಮಾರ್ಚ್ ೧೭, ೧೮೮೭
ಮರಣ: ಅಕ್ಟೋಬರ್ ೭, ೧೯೭೫
ತಂದೆ: ವೆಂಕಟರಮಣಯ್ಯ
ತಾಯಿ: ಅಲಮೇಲಮ್ಮ
ತಮ್ಮಂದಿರು: ಡಿ.ವಿ.ಶೇಷಗಿರಿರಾವ್, ಡಿ.ವಿ.ರಾಮರಾವ್
ಪತ್ನಿ: ಭಾಗೀರಥಮ್ಮ
ಮಕ್ಕಳು: ಡಾಬಿ.ಜಿ.ಎಲ್.ಸ್ವಾಮಿ, ಇಂದಿರ
ವಿದ್ಯಾಭ್ಯಾಸ: ಎಸ್.ಎಸ್.ಎಲ್.ಸಿ
ವೃತ್ತಿ: ಸಾಹಿತಿ, ಪತ್ರಕರ್ತ, ಸಮಾಜ ಸೇವಕ
ಪ್ರಶಸ್ತಿಗಳು: ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ (೧೯೬೧)
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಜೀವನಧರ್ಮಯೋಗ - ೧೯೬೭)
ಪದ್ಮಭೂಷಣ (೧೯೭೪)

ಮೊನ್ನೆ ತಾನೇ ಓದಿ ಮುಗಿಸಿದ ಪುಸ್ತಕ, ನೀಲತ್ತಹಳ್ಳಿ ಕಸ್ತೂರಿಯವರ ’ಡಾಡಿ.ವಿ.ಗುಂಡಪ್ಪ - ಜೀವನ ಮತ್ತು ಸಾಧನೆ’. ರೋಮಾಂಚನಗೊಳ್ಳುವಂತಹ ಜೀವನಗಾಥೆ ಈ ಮಹಾಪುರುಷರದು. ಆ ಅನುಭವದ ಫಲಶೃತಿ ಈ ಬರಹ.

ಡಿವಿಜಿ ಯವರದು ಸಾಧಾರಣ ಮನೆತನ. ಮೂಲ ತಮಿಳುನಾಡಿನ ತಿರುಚಿನಾಪೆಳ್ಳಿಯ ಸೀಮೆ. ಸುಮಾರು ೫೦೦ ವರ್ಷಗಳ ಹಿಂದೆ ಹೊಟ್ಟೆಪಾಡಿಗಾಗಿ ವಲಸೆಬಂದ ವೈದಿಕ ಕುಟುಂಬಗಳು, ಕೋಲಾರದ ದೇವನಹಳ್ಳಿ, ಮುಳುಬಾಗಿಲುಗಳ ಕಡೆ ಹರಡಿಕೊಂಡರು. ಡಿವಿಜಿ ಯವರ ಮುತ್ತಜ್ಜ ದೇವನಹಳ್ಳಿ ತಾಲೂಕಿನ ಸೋಮತ್ತನಹಳ್ಳಿ ಗುಂಡಪ್ಪನವರು. ತಾತ ಲಾಯರ್ ಶೇಷಗಿರಿಯಪ್ಪ. ತಂದೆ ವೆಂಕಟರಮಣಯ್ಯ ಶಾಲಾಮಾಸ್ತರು. ಡಿವಿಜಿ ಯವರು ಬೆಳೆದದ್ದು ಚಿಕ್ಕತಾತ ರಾಮಣ್ಣ, ತಾಯಿಯ ತಾಯಿ ಸಾಕಮ್ಮ ಹಾಗೂ ಸೋದರ ಮಾವ ತಿಮ್ಮಪ್ಪನವರ (ಕಗ್ಗದ ಪೀಠಿಕೆಯ ತಿಮ್ಮಗುರು) ಆಶ್ರಯದಲ್ಲಿ. ಇವರೊಂದಿಗೆ, ಎಳೆತನದಲ್ಲಿ ಡಿವಿಜಿ ಯವರ ಮೇಲೆ ಪ್ರಭಾವ ಬೀರಿದವರೆಂದರೆ, ಮುಳುಬಾಗಿಲಿನ ಶ್ರೀಮದಾಂಜನೇಯ ಸ್ವಾಮಿ (ಕೇತಕಿ ವನ). ಅವಿಭಕ್ತ ಕುಟುಂಬ. ಹಳ್ಳಿಯ ಪರಿಸರ. ಜಾತಿ, ಕಟ್ಟಳೆಗಳು ಬೇರೆ ಬೇರೆ ಇದ್ದರೂ, ಸಂಘರ್ಷಕ್ಕಿಂತ ಸೌಹಾರ್ದವೇ ಹೆಚ್ಚಾದ ಜೀವನ. ನಾಲ್ಕುದಿನದಾಟದಲ್ಲಿ ವಿರಸ ಜಗಳ ತಂಟೆ ತಕರಾರುಗಳೇಕೆ ಎಂಬ ಹೊಂದಾಣಿಕೆ, ಸರಳ, ನೇರ, ಸಹಜ ಸಂತೃಪ್ತಿಮಯ ಬದುಕು. ಇದು ಡಿವಿಜಿ ಬೆಳೆದ ವಾತಾವರಣ. ಈ ಎಲ್ಲ ಮೌಲ್ಯಗಳೇ ಅವರ ಜೀವನದ ಸಾರ.

ಬಾಲ್ಯದಲ್ಲಿ ಮಗ್ಗಿ ಹೇಳುವುದೊಂದು ಪರಿಪಾಟಲಾಗಿತ್ತು ಡಿವಿಜಿಯವರಿಗೆ. ೧ ರಿಂದ ೧೧ ಹೇಗೋ ನಿಭಾಯಿಸುತ್ತಿದ್ದು, ತದನಂತರ ಮಾವನವರ ಸಹಾಯದಿಂದ (ಅವರು ನಿಧಾನಕ್ಕೆ ಕಿವಿಯಲ್ಲಿ ಉಸಿರುತ್ತಿದ್ದುದನ್ನು, ಡಿವಿಜಿಯವರು ಜೋರಾಗಿ ಕೂಗುತ್ತಿದ್ದರಂತೆ) ತಂದೆಯವರ ಕೋಪದಿಂದ ತಪ್ಪಿಸಿಕೊಳ್ಳುತ್ತಿದ್ದರಂತೆ. ಮಗ್ಗಿಗೆ ಕಷ್ಟಪಡುತ್ತಿದ್ದ ಡಿವಿಜಿಯವರು, ಜೀವನದ ಸಂಕೀರ್ಣ ಲೆಕ್ಕವನ್ನೇ ಕಗ್ಗದಲ್ಲಿ ಅಷ್ಟು ಸುಂದರವಾಗಿ ಬಿಡಿಸಿರುವುದನ್ನು ಕಂಡಾಗ, ಲೆಕ್ಕ ತಪ್ಪುವ ಪಾಳಿ ನಮ್ಮದಾಗುತ್ತದೆ! ಡಿವಿಜಿ ಯವರೇ ಹೇಳುವಂತೆ ಅವರು ತೇರ್ಗಡೆಯಾದದ್ದು, ಎರಡೇ ಪರೀಕ್ಷೆಗಳಲ್ಲಿ, ೧೮೯೮-೯೯ ರಲ್ಲಿ ಕನ್ನಡ ಎಲ್.ಎಸ್ (ಲೋಯರ್ ಸೆಕೆಂಡರಿ) ಹಾಗೂ ೧೯೦೦ ರಲ್ಲಿ ಇಂಗ್ಲಿಷ್ ಎಲ್.ಎಸ್. ತಂದೆಯವರ ಸ್ನೇಹಿತ ರಸೂಲ್ ಖಾನ್ ಅವರ ಒತ್ತಾಯದಂತೆ ಮೈಸೂರಿನ ಮಹಾರಾಜ ಕಾಲೇಜಿನ ಹೈಸ್ಕೂಲ್ ಗೆ ಸೇರಿದರು. ಬಾಪೂ ಸುಬ್ಬರಾಯರು, ಮೈಸೂರು ವೆಂಕಟಕೃಷ್ಣಯ್ಯ (ತಾತಯ್ಯ) ನವರು, ಬೆಳವಾಡಿ ದಾಸಪ್ಪ ಮುಂತಾದ ಉಪಾಧ್ಯಾಯರ ಪ್ರಭಾವ ಹಾಗೂ ಪ್ರೋತ್ಸಾಹ. ಆದರೆ ತಾತ ರಾಮಣ್ಣ, ಅಜ್ಜಿ ಸಾಕಮ್ಮನವರ ನಿಧನ, ಪ್ಲೇಗ್ ಹಾವಳಿ, ಕಳವು, ಬೇಸಾಯ ಹಾನಿ, ವ್ಯವಹಾರ ನಷ್ಟ - ಸಾಲು ಸಾಲಾಗಿ ಬೆನ್ನಟ್ಟಿ ಬಂದ ಅನರ್ಥಗಳಿಂದ ಮೈಸೂರಿನಿಂದ ಹಿಂದಿರುಗಿದರು. ಸ್ವಲ್ಪ ಸ್ಥಿತಿ ಸುಧಾರಿಸಿದ ನಂತರ, ಪೂಜೆ, ಪಾಠ ಹೇಳಿಕೊಂಡು, ಕೋಲಾರದ ಪ್ರೌಢಶಾಲೆಯಲ್ಲಿ ವ್ಯಾಸಂಗ ಮುಂದುವರೆಸಿದರು. ಉಪಾಧ್ಯಾಯ ಹನುಮಂತರಾಯರು ಡಿವಿಜಿಯವರ ಕನ್ನಡ ಭಾಷೆಗೆ ಸಾಣೆ ಹಿಡಿದರೆ, ಆರ್.ವಿ.ಕೃಷ್ಣಸ್ವಾಮಯ್ಯರ್ (ಆರ್.ಕೆ.ನಾರಾಯಣ್ ಅವರ ತಂದೆ) ಇಂಗ್ಲಿಷ್ ಭಾಷೆಗೆ ಹೊಳಪು ನೀಡಿದರು. ಆದರೆ ಈ ಬಾರಿ ವಿಧಿ ಖಾಯಿಲೆಯ ರೂಪದಲ್ಲಿ ಕಾಡಿತ್ತು. ಮುಂದಿನ ವರ್ಷ ಮುಂದುವರೆಸಿದ ವಿದ್ಯಾಭ್ಯಾಸದಲ್ಲಿ, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ, ಕನ್ನಡ, ಗಣಿತ ಕೈಕೊಟ್ಟವು. ತೇರ್ಗಡೆಯಾಗಲಿಲ್ಲ. ಸಂಸ್ಕೃತವನ್ನೂ ಇವರು ಶಾಲೆಯಲ್ಲಿ ಕ್ರಮಬದ್ಧವಾಗಿ ಅಭ್ಯಾಸ ಮಾಡಲಿಲ್ಲ. ಮನೆಯ ವಾತಾವರಣದಲ್ಲಿ ಪರಿಚಯವಾದ ಸಂಸ್ಕೃತಕ್ಕೆ ತಮ್ಮ ಸ್ವಂತ ಆಸಕ್ತಿ, ಪರಿಶ್ರಮ ಸೇರಿಸಿ ಕಲಿತರು. ಛಪ್ಪಲ್ಲಿ ವಿಶ್ವೇಶ್ವರ ಶಾಸ್ತ್ರಿಗಳು ಮತ್ತು ಹಾನಗಲ್ಲು ವಿರೂಪಾಕ್ಷ ಶಾಸ್ತ್ರಿಗಳಲ್ಲಿ ಸ್ವಲ್ಪ ಅಭ್ಯಾಸ ಮಾಡಿದರು. ಡಿವಿಜಿ ಯವರು ಪಡೆದುಕೊಂಡದ್ದಲ್ಲೆವೂ ಸ್ವಪ್ರಯತ್ನದಿಂದಲೇ. ಡಿವಿಜಿ ಯವರು ಯಾವ ಕಾಲೇಜನ್ನೂ ಕಾಣಲಿಲ್ಲ. ಯಾವ ಪಂಡಿತ ಪರೀಕ್ಷೆಯನ್ನೂ ಮಾಡಲಿಲ್ಲ. ಆದರೆ ಅವರ ಕೃತಿಗಳು ಕಾಲೇಜು ಉನ್ನತ ವ್ಯಾಸಂಗಕ್ಕೆ ಪಠ್ಯಗಳಾದವು. ಅವರು ಪಂಡಿತ ಪರೀಕ್ಷಕರಾದರು. ಇವರ ಜೀವನ, ವಿದ್ಯೆಗೂ ವಿದ್ವತ್ತಿಗೂ ಕೊಂಡಿಯಿಲ್ಲ, ಪದವಿಗೂ ಪಾಂಡಿತ್ಯಕ್ಕೂ ಸಂಬಂಧವಿಲ್ಲ ಎನ್ನುವುದನ್ನು ರುಜುವಾತು ಮಾಡುವಂತಿದೆ.

ಪ್ರತ್ಯೇಕ ಸುಖವಲ್ಪವದು, ಗಳಿಕೆ ತೋರ್ಕೆಯದು
ಆತ್ಮವಿಸ್ತಾರವಾಗಿಪುದೆ ನಿತ್ಯಸುಖ
ವ್ಯಕ್ತಿಜೀವನ ಸೊಂಪು ಸಮಷ್ಟಿಜೀವನದಿ
ಒಟ್ಟುಬಾಳ್ವುದ ಕಲಿಯೋ - ಮಂಕುತಿಮ್ಮ

ಎಂದಿರುವ ಡಿವಿಜಿಯವರನ್ನೂ, ಬಂಧನರಹಿತ ಅಲಕ್ ನಿರಂಜನ್, ಬೈರಾಗಿ ಬದುಕು ಸೆಳೆದದ್ದುಂಟು. ಜೀವನದ ಎರಡನೇ ಹಂತ ಎನ್ನಬಹುದಾದ ಇಲ್ಲಿ, ಮೋಕ್ಷಗುಂಡಂ ವೆಂಕಟೇಶಯ್ಯನವರು ಕೊಟ್ಟ Trial and Death of Socrates ಪುಸ್ತಕ ಹಾಗೂ ಸಾಕ್ರಟೀಸನ ಸಂವಾದಗಳು ಮರಳಿ ಲೋಕಜೀವನಕ್ಕೆ ಕರೆತಂದವು. ಸಮಾಜ, ಸಂಪ್ರದಾಯಗಳು ಗೌರವಾರ್ಹ ಎಂಬ ನಂಬಿಕೆ ಮೂಡಿತು. ಕನ್ನಡ ನಾಡಿಗೆ, ಸಾಹಿತ್ಯಕ್ಕೆ ಅವರ ಸೇವೆಯನ್ನು ಪಡೆಯುವ ಭಾಗ್ಯವಿರುವಾಗ ವಿಧಿಯ ವಕ್ರದೃಷ್ಟಿ ಗೆಲ್ಲಲು ಸಾಧ್ಯವೇ ಇರಲಿಲ್ಲ.

ಸುಮಾರು ೧೭ ನೆಯ ವಯಸ್ಸಿಗೆ ಭಾಗೀರಥಮ್ಮನವರೊಂದಿಗೆ ವಿವಾಹವಾಯಿತು. ಸಂಪಾದನೆ ಮಾಡುವುದನಿವಾರ್ಯವಾಯಿತು. ಲಾಯರ್ ಆಗಬೇಕೆಂಬ ತಂದೆಯ ಆಸೆ ಡಿವಿಜಿಯವರಿಗೆ ಸರಿಬರಲಿಲ್ಲ (A good lawyer is a bad neighbor ಎಂಬ ಮಾತು ಅವರ ಧೃಢನಿರ್ಧಾರಕ್ಕೆ ಕಾರಣವಂತೆ). ಶೀಟ್ಮೆಟಲ್ ಕೈಗಾರಿಕೆ ತರಬೇತಿಗೆ ತಂದೆಯಿಂದ ನಕಾರ (ಕ್ಷೌರದ ಬಟ್ಟಲು ತಯಾರಿಸುವ ಕೆಲಸವೆಂದು). ಕಂಪೆನಿಯ ಏಜೆಂಟನಾಗುವ ಯೋಚನೆಗೆ ಗೆಳೆಯರಡ್ಡಿ. ಕೆ.ಜಿ.ಎಫ್ ನ ಸೋಡಾಕಾರ್ಖಾನೆಯೊಂದರಲ್ಲಿ ಗುಮಾಸ್ತಗಿರಿ ಮಾಡಿದರು. ಅದೃಷ್ಟವನ್ನರಸಿ ಬೆಂಗಳೂರಿಗೆ ಬಂದರು. ಜಟಕಾಗಾಡಿಗೆ ಬಣ್ಣ ಬಳಿಯುವ ಸಣ್ಣ ಕಾರ್ಖಾನೆಯೊಂದರಲ್ಲಿ ಗುಮಾಸ್ತಗಿರಿ ಮಾಡಿದರು. ಬೆಂಗಳೂರಿಗೆ ಬಂದಿದ್ದ ಸ್ವಾಮಿ ಅಭೇದಾನಂದರ ಗೌರವಾರ್ಥ ಬರೆದಿದ್ದ ಇಂಗ್ಲಿಷ್ ಪದ್ಯವನ್ನು ಅಚ್ಚುಮಾಡಿಸಲು ಪರಿಚಯವಾದದ್ದು ನವರತ್ನ ಪ್ರೆಸ್. ಪತ್ರಿಕಾಸ್ವಾತಂತ್ರ್ಯವನ್ನು ವಿರೋಧಿಸುತ್ತಿದ್ದ ದಿವಾನ್ ವಿ.ಪಿ.ಮಾಧವರಾಯರ ದರ್ಬಾರಿನ ವಿರುಧ್ದ ಲೇಖನವನ್ನು ಅದೇ ಪ್ರೆಸ್ ನಡೆಸುತ್ತಿದ್ದ ’ಸೂರ್ಯೋದಯ ಪ್ರಕಾಶಿಕಾ’ ಎಂಬ ಪತ್ರಿಕೆಗೆ ಬರೆಯುವ ಮೂಲಕ ಪತ್ರಿಕೋದ್ಯಮಕ್ಕೆ ಪಾದಾರ್ಪಣೆ. ಜೀವನದ ಕೊನೆಯವರೆಗೂ ನಡೆಸಿದ ವೃತ್ತಿ.

ಪತ್ರಿಕೋದ್ಯಮವೆಂದೂ ಡಿವಿಜಿ ಯವರಿಗೆ ಹೂವಿನ ಹಾದಿಯಾಗಲಿಲ್ಲ. ಹೆಜ್ಜೆ ಹೆಜ್ಜೆಗೂ ಸವಾಲುಗಳು. ನಾವು ಗಮನಿಸಬೇಕಾದ್ದೆಂದರೆ, ಅದು ಸ್ವಾತಂತ್ರ್ಯ ಪೂರ್ವಕಾಲ. ಇಂದಿನಂತಿರಲಿಲ್ಲ ಅಂದಿನ ಪತ್ರಿಕಾ ಸ್ವಾತಂತ್ರ್ಯ. ಅದರಲ್ಲೂ ನಿಷ್ಪಕ್ಷಪಾತ, ನಿಕೃಷ್ಟತೆ, ಸರಳತೆ ಹಾಗೂ ಸಂಕ್ಷಿಪ್ತತೆಯನ್ನು ಆಧಾರವಾಗಿರಿಸಿಕೊಂಡು ಡಿವಿಜಿಯವರು ಬರೆಯುತ್ತಿದ್ದರು. ಯಾವುದೇ ಸಮಸ್ಯೆಯಾಗಲಿ ಪಕ್ಷಪಾತದ ದೃಷ್ಟಿಯನ್ನು ಬಿಟ್ಟು, ಉದ್ವೇಗರಹಿತರಾಗಿ, ಅದರ ಎಲ್ಲ ಮಜಲುಗಳನ್ನು ಪರಿಶೀಲಿಸುವುದು, ದೇಶದ ಹಿತದೃಷ್ಟಿಯಿಂದ ಅದನ್ನು ಪರಾಮರ್ಶಿಸುವುದು - ಈ ತೆರನಾದ ವಿಮರ್ಶೆ. ಅವರ ಟಿಪ್ಪಣಿಗಳಂತೂ ವಿಷಯಗಳ ಅಧ್ಯಯನ ಹಾಗೂ ಅವುಗಳ ಸಮತೂಕದ ವಿಮರ್ಶೆಗೆ ಮಾದರಿ (ಇಂತಹುದೊಂದು ಲೇಖನ ಇತ್ತೀಚೆಗೆ ಅಡಿಗರ ’ಸಾಕ್ಷಿ’ ಯಲ್ಲಿ ದೊರಕಿತು. ಅತಿವಾಸ್ತವಿಕತೆ - Surrealism ಕುರಿತು. ಸವಿಸ್ತಾರವಾಗಿ, ಸಾಹಿತ್ಯಿಕ ಭಾವ, ಕಾಲಾಂತರದಲ್ಲಿ ಅದರ ಬದಲಾವಣೆ ಕುರಿತಾದ ಉತ್ತಮ ವಿವರಣೆಯಿದೆ. Surrealist ಗಳ ಮನೋಭಾವದ ಆಳವಾದ ಚಿಂತನೆಯಿದೆ, ಅನ್ವೇಷಣೆಗಳ ವಿವರಗಳಿವೆ). ಡಿವಿಜಿಯವರು ತಪ್ಪನ್ನು ಕಂಡರೆ ಖಂಡಿಸದೆ ಬಿಡುತ್ತಿರಲಿಲ್ಲ. ವಿಶ್ವೇಶ್ವರಯ್ಯನವರಿಂದ ’ವಿಷಕಂಟಕಪ್ರಾಯನಾದ ವಿಮರ್ಶಕ’ ಎಂದು ಬಿರುದಾಂಕಿತರಾಗಿದ್ದರು. ಅವರು ನಡೆಸುತ್ತಿದ್ದ ’ಕರ್ನಾಟಕ’ ಪತ್ರಿಕೆ ’ಕಾರ್ಕೋಟಕ’ ಎಂದು ಮೂದಲಿಕೆಗೊಳಗಾಗಿತ್ತು. ’ಪತ್ರಕರ್ತ ಯಾವ ಬಾಹ್ಯ ನಿರ್ಬಂಧಗಳಿಗೂ ಒಳಗಾಗುವಂತಾಗಬಾರದು. ಆದರೆ ತಾನೇ ಹಾಕಿಕೊಂಡ ಶಿಸ್ತು ಸಂಯಮಗಳನ್ನು ಪಾಲಿಸಬೇಕು. ಈ ಆತ್ಮಾನುಶಾಸನ ಅತ್ಯಗತ್ಯ’ ಇದು ಡಿವಿಜಿಯವರ ಖಚಿತ ಅಭಿಪ್ರಾಯ. ಪತ್ರಕರ್ತರ ಸಂಘ ಹುಟ್ಟುಹಾಕಿ, ಭದ್ರಬುನಾದಿ ಹಾಕಿದವರಲ್ಲಿ ಡಿವಿಜಿ ಪ್ರಮುಖರು. ಈ ವೃತ್ತಿಯ ಕುರಿತಾದ ಅವರ ಅಧ್ಯಯನದ ಸಾಕ್ಷಿ ಅವರ ’ವೃತ್ತಪತ್ರಿಕೆಗಳು’ ಹೊತ್ತಿಗೆ. ವಸ್ತುನಿಷ್ಟ, ನಿಷ್ಪಕ್ಷಪಾತ ವಿಮರ್ಶೆಗಳು ಕಾಣೆಯಾಗಿ, ನೈತಿಕ ಅಧ:ಪತನದತ್ತ ಸಾಗುತ್ತಿರುವ ಈ ಸಮಯದಲ್ಲಿ ಪತ್ರಕರ್ತ ಡಿವಿಜಿಯವರು ಆದರ್ಶಪ್ರಾಯರಾಗುತ್ತಾರೆ.

ಡಿವಿಜಿ ಯವರದು ಸೌಮ್ಯಪಂಥ ಮನೋಭಾವ. ದಾದಾಭಾಯಿ ನವರೋಜಿ, ಬಾಲಗಂಗಾಧರ ತಿಲಕ್, ಗೋಪಾಲಕೃಷ್ಣ ಗೋಖಲೆ ಯವರಿಂದ ಪ್ರಭಾವಿತರಾಗಿದ್ದರು. ೧೯೧೧ ರಲ್ಲಿ ೫ ನೆ ಜಾರ್ಜ್ ಭಾರತಕ್ಕೆ ಭೇಟಿ ನೀಡಿದ ಸಮಯದಲ್ಲಿ ಡಿವಿಜಿ ಯವರು ಒಂದು ನೆನಪಿನ ಪುಸ್ತಕ ಪ್ರಕಟಿಸಿದರು - ಜಾರ್ಜ್ ಚಕ್ರವರ್ತಿಗಳ ಕಿರೀಟಧಾರಣೆ (ನಮ್ಮ ರಾಷ್ಟ್ರಗೀತೆಗೂ ಅಂಟಿಕೊಂಡಿರುವ ವಿವಾದನೀತನೇ ಅಲ್ಲವೇ). ಬ್ರಿಟಿಶ್ ಪ್ರಭುತ್ವ ಭಾರತಕ್ಕೆ ದೇವರು ದಯಪಾಲಿಸಿದ ವರ ಎಂಬ ಭಾವನೆ ಆ ಪುಸ್ತಕ ಸೂಚಿಸುತ್ತದೆಯೆಂದು ಹೇಳಲಾಗಿದೆ. ಇಲ್ಲಿ ಡಿವಿಜಿ ಯವರ ಭಾವನೆಗಳು ಪ್ರಶ್ನಾತೀತವಲ್ಲದಿದ್ದರೂ, ಇದೇ ಭಾವ ಕೊನೆಯವರೆಗೂ ಇತ್ತೆಂದು ಹೇಳಲಾಗುವುದಿಲ್ಲ. ಸಂಸ್ಥಾನಗಳ ಜನತೆ ರಾಷ್ಟ್ರೀಯ ಭಾವನೆಗಳಿಗೆ ಸ್ಪಂದಿಸಬೇಕು, ಇದಕ್ಕೆ ಜನಜಾಗೃತಿಯ ಅವಶ್ಯಕತೆಯನ್ನು ಮನಗಂಡು ಆ ನಿಟ್ಟಿನಲ್ಲಿ ಕೆಲಸ ಮಾಡಿದರು ಡಿವಿಜಿ. ಸಾತಂತ್ಯ್ರಾ ಪೂರ್ವದಲ್ಲೇ (೧೯೧೬ ರ ಸುಮಾರು) The problem of Indian Native states, The states and their people in the Indian Constitution ಎಂಬ ಅವರ ಪುಸ್ತಕಗಳು ಅವರ ದೂರದರ್ಶಿತ್ವಕ್ಕೆ ಸಾಕ್ಷಿ. ಭಾರತ ಸ್ವತಂತ್ರವಾದಾಗ ರಚಿಸಿದ ಪದ್ಯಮಾಲಿಕೆ ’ಸ್ವತಂತ್ರಭಾರತ ಅಭಿನಂದನಸ್ತವ’ ಅವರ ರಾಷ್ಟ್ರಗೌರವಕ್ಕೆ ಸಾಕ್ಷಿ. ’ವಿಶ್ವದಲ್ಲಿ ಭಾರತ ನಿರ್ವಹಿಸಬೇಕಾದ ವಿಶೇಷ ಕರ್ತವ್ಯವಿದೆ. ಇತರ ರಾಷ್ಟ್ರಗಳಿಂದ ಭಿನ್ನವಾದ ಕರ್ತವ್ಯ. ಲೋಕ ಬಯಸುತ್ತಿರುವ ಬೆಳಕು ಇಲ್ಲಿಂದ ಚೆಲ್ಲಬೇಕು. ಅದಕ್ಕೆ ಭಾರತ ಸಜ್ಜುಗೊಳ್ಳಬೇಕು. ತನ್ನೊಳಗಿನ ಭಿನ್ನತೆ, ದಾರಿದ್ರ್ಯ ಅಜ್ಞಾನಗಳನ್ನು ತೊಡೆದುಹಾಕಿ ಬಲಗೊಂಡು ಧೀಮಂತವಾಗಿ ನಿಲ್ಲಬೇಕು. ಅಂಥ ಭಾರತವನ್ನು ಕಟ್ಟುವ ಶಕ್ತಿ, ನಡೆಸುವ ಸಾಮರ್ಥ್ಯ ನಮ್ಮ ನಾಯಕರಿಗೆ ಬರಬೇಕು, ನಮ್ಮ ಜನರಿಗೆ ಮೈಗೂಡಬೇಕು’ ಎಂದು ಆಶಿಸಿದರು. ’ರಾಜ್ಯಶಕ್ತಿ ಒಂದು ಕತ್ತಿ, ತಿಳುವಳಿಕೆಯುಳ್ಳವರ ಕೈಯಲ್ಲಿ ಅದು ಉಪಕಾರಿ, ಇಲ್ಲದವರ ಕೈಯಲ್ಲಿ ಅಪಕಾರಿ’ ಎಂದು ಎಚ್ಚರಿಸಿದರು. ’ಪ್ರಜಾರಾಜ್ಯಕ್ಕಿರುವ ಮೊದಲನೆಯ ಶತ್ರು ಪ್ರಜೆಯ ಅಶಿಕ್ಷೆ’ ಎಂದವರು ಶತಮಾನದ ಮುಂಚೆಯೇ ಹೇಳಿದ್ದರೂ, ನಾವಿನ್ನೂ ಮೊದಲನೇ ಶತ್ರುವನ್ನೇ ನಿರ್ಮೂಲನ ಮಾಡಿಲ್ಲವೆಂಬುದು ಅಷ್ಟೇ ಸತ್ಯ. ಈ ವ್ಯಾಪಕ ಅಧ್ಯಯನಗಳ ಚಿಂತನೆಯೇ ಅವರ ರಾಜ್ಯಶಾಸ್ತ್ರ ಗ್ರಂಥಗಳಾದ - ರಾಜ್ಯಶಾಸ್ತ್ರ, ರಾಜ್ಯಾಂಗ ತತ್ವಗಳು, ರಾಜಕುಟುಂಬ ಇತ್ಯಾದಿ. ಡಿವಿಜಿಯವರದು ಪಕ್ಷಾತೀತ ರಾಜಕಾರಣ. ಜನಹಿತ, ರಾಷ್ಟ್ರಹಿತ ಮುಖ್ಯ, ಪಕ್ಷಹಿತ ಮುಖ್ಯವಲ್ಲವೆಂಬ ಧೋರಣೆ. ಇಂದಿಗೂ ಇದೆಷ್ಟು ಪ್ರಸ್ತುತವಲ್ಲವೇ.

ಡಿವಿಜಿಯವರ ಮತ್ತೊಂದು ಕ್ಷೇತ್ರ ಸಮಾಜ ಸೇವೆ. ಅಮೆಚ್ಯೂರ್ ಡೆಮೊಕ್ರಾಟಿಕ್ ಅಸೋಸಿಯೇಷನ್, ಮೈಸೂರು ಸಾರ್ವಜನಿಕ ಸಭೆ, ಬೆಂಗಳೂರು ಸಿಟಿಜನ್ಸ್ ಕ್ಲಬ್, ದೇಶಾಭ್ಯುದಯ ಸಂಘ ಎಲ್ಲದರಲ್ಲೂ ಡಿವಿಜಿ ಇದ್ದರು. ೧೯೨೦ ರಲ್ಲೇ ಗೋಖಲೆ ಬಳಗ ರೂಪುಗೊಂಡಿದ್ದರೂ, ೧೯೪೫, ಫೆಬ್ರವರಿ ೧೮ ರಂದು ಅಧಿಕೃತವಾಗಿ ಸ್ಥಾಪನೆಯಾಯಿತು. ತಮ್ಮ ಕೊನೆ ಉಸಿರಿರುವವರೆಗೂ ಅದರಲ್ಲಿ ತಮ್ಮನ್ನು ತೊಡಗಿಸಿಕೊಂಡರು. ವಿಶ್ವೇಶ್ವರಯ್ಯನವರಿಗೆ, ಆಡಳಿತ ವ್ಯವಸ್ಥೆಯ ಒಳಗೆ ಸೇರಿಕೊಳ್ಳದೆಯೇ ಹೊರಗಿನಿಂದಲೇ ಸಹಾಯ ಮಾಡುತ್ತಿದ್ದರು. ಮಿರ್ಜಾ ದಿವಾನಗಿರಿಯಲ್ಲೂ ಇದು ಮುಂದುವರೆಯಿತು. ಆದರೆ ಅವರಿಂದ ಯಾವ ಸಹಾಯವನ್ನೂ ಸ್ವೀಕರಿಸುತ್ತಿರಲಿಲ್ಲ. ಡಿವಿಜಿ ಯವರ ಸಾಂಸಾರಿಕ ಸ್ಥಿತಿ ಮುಗ್ಗಟ್ಟಿನಲ್ಲೇ ಇತ್ತು. ಎಂದೂ ಅವರು ಸಿರಿವಂತಿಕೆಯಿರಲಿ, ಆರ್ಥಿಕವಾಗಿ ನಿಶ್ಚಿಂತೆಯನ್ನೂ ಕಾಣಲಿಲ್ಲ. ಇಂತಹ ಸರಳ ಸಜ್ಜನಿಕೆ ಪ್ರಾಮಾಣಿಕತೆಯ ಜೀವನದಿಂದ ಮಾತ್ರವಲ್ಲವೇ ಅಂತಹ ಮೇರು ಕೃತಿಗಳು ಬರಲು ಸಾಧ್ಯ.

ಇನ್ನವರ ಸಾಹಿತ್ಯ ಕೃಷಿಯ ಬಗ್ಗೆ ಹೇಳದಿದ್ದಲ್ಲಿ ಲೇಖನ ಅಪೂರ್ಣವಾಗುತ್ತದೆ. ೧೯೪೫ ರಲ್ಲಿ ಪ್ರಕಟವಾದ ೯೪೫ ಚೌಪದಿಗಳ ಮಂಕುತಿಮ್ಮನಕಗ್ಗ ಕನ್ನಡದ ಭಗವದ್ಗೀತೆಯೆಂದೇ ಪ್ರಸಿದ್ಧ. ನಂಬಿಕೆಯಿಂದ ಆರಂಭವಾಗಿ, ಶಂಕೆಯಿಂದ ಮುನ್ನಡೆಗೊಂಡು, ಜೀವನದ ಅನುಭವಗಳೊಂದಿಗೆ ಹೊಂದಿಕೊಂಡು, ಹೋಲಿಸಿಕೊಂಡು, ಸಂದೇಹಗಳನ್ನು ನಿವಾರಿಸಿ ಮತ್ತೆ ನಂಬಿಕೆಯೆಡೆಗೆ ಕರೆದೊಯ್ಯುವ ಉತ್ಕೃಷ್ಟ ತತ್ವ ಚಿಂತನೆ ಕಗ್ಗ. ಅಂತ:ಪುರ ಗೀತೆಗಳು ಒಂದು ಸಂಗೀತ ಕಾವ್ಯ. ಡಿವಿಜಿಯವರು ಪಿಟೀಲು ನಾರಾಯಣಸ್ವಾಮಿ ಭಾಗವತರು ಹಾಗೂ ಮೈಸೂರು ವಾಸುದೇವಾಚಾರ್ಯರಲ್ಲಿ ಕೆಲಕಾಲ ಸಂಗೀತಾಭ್ಯಾಸ ನಡೆಸಿದ್ದರು. ಅದರ ಜ್ಞಾನ ಅವರ ಈ ಕೃತಿಯಲ್ಲಿ ಕಾಣಸಿಗುತ್ತದೆ. ’ಮುಕುರ ಮುಗ್ಧೆ’ ಯಿಂದ ’ಲತಾಂಗಿ’ ವರೆಗೆ ಒಟ್ಟು ೫೨ ಶಿಲ್ಪಕನ್ನಿಕೆಯರು. ಪುಂವಿಡಂಬಿನಿ, ಕೃತಕಶೂಲಿ, ನಾಗವೈಣಿಕೆಯರಿಗೆ ಮಾತ್ರ ಶಂಕರಾಭರಣಮ್ ರಾಗ. ಮಿಕ್ಕೆಲ್ಲ ಸುಂದರಿಯರಿಗೂ ಪ್ರತ್ಯೇಕ ರಾಗಗಳು. ಚೆನ್ನಕೇಶವನಾದಿಯಾಗಿ, ನಾಂದಿಗೀತೆ, ಮಂಗಳಗೀತೆ, ಸೌಂದರ್ಯಗೀತೆ ಹೀಗೆ ಗೀತೆಗೊಂದು ರಾಗಸಂಯೋಜನೆಯಂತೆ, ಒಟ್ಟು ೫೫ ರಾಗಗಳ ಪ್ರಯೋಗ. ನಡುವೆ ಭಸ್ಮಮೋಹಿನಿಯೆಂಬ ಸಂಗೀತ ರೂಪಕವೂ ಇದೆ. ಹೇಗೆ ನಾಟಕವಾಗಿ ಅಭಿನಯಿಸಬೇಕೆಂಬುದಕ್ಕೆ, ನಾಂದಿಯಿಂದ ಮಂಗಳದವರೆಗೂ, ಹಿಮ್ಮೇಳದ ಜೊತೆಗೆ ಪಾತ್ರಧಾರಿಗಳ ಸಂವಾದಕ್ಕೂ ಸೂಚನೆಗಳನ್ನು ನೀಡಿದ್ದಾರೆ. ಒಟ್ಟಿನಲ್ಲಿ, ಬೇಲೂರು ಚೆನ್ನಕೇಶವ ದೇವಾಲಯದ ಶಿಲ್ಪಿಯ ಕಲ್ಪನೆಯ ಕಲೆಗೆ, ಕಾವ್ಯದ ಅಲಂಕಾರ, ಸಂಗೀತದ ಅಭಿಷೇಕ ಈ ಕೃತಿ. ಕೇತಕೀವನ - ಒಂದು ವಿಶೇಷ ಕವನಸಂಗ್ರಹವೆನ್ನಬಹುದು. ಅವರೇ ಮುನ್ನುಡಿಯಲ್ಲಿ ಹೇಳಿರುವಂತೆ ’ನನಗೆ ಓದುವುದಕ್ಕೂ ಯೋಚಿಸಲಿಕ್ಕೂ ಕೊಂಚ-ಕೊಂಚವಾಗಿಯಾದರು ಬಿಡುವು ದೊರೆಯುತ್ತಿದ್ದ ಕಾಲವೊಂದಿತ್ತು. ಆ ಕಾಲದಲ್ಲಿ ಆಗಾಗ ಮನಸ್ಸಿಗೆ ಭಾವನೆಗಳು ಬರುತ್ತಿದ್ದುದೂ ಉಂಟು. ಅವು ಬಂದಾಗ ಅವು ಹಾರಿ ಹೋಗುವುದಕ್ಕೆ ಮುನ್ನ ಅವುಗಳನ್ನು ಆಗ ತೋಚಿದ ಮಾತುಗಳಲ್ಲಿ, ಆಗ ಕೈಗೆ ಸಿಕ್ಕಿದ ಚೀಟಿಗಳಲ್ಲಿ ಗುರುತುಹಾಕುತ್ತಿದ್ದುದುಂಟು. ಅಂಥ ಚೀಟಿಗಳು ಈಗ ಪುಸ್ತಕವಾಗಿದೆ’. ಆದ್ದರಿಂದಲೇ ಇದರಲ್ಲಿ ವೈವಿಧ್ಯವಿದೆ. ೪ ಸಾಲಿನ ಬಿಎಂಶ್ರೀ ಕುರಿತಾದ ಕವನದಿಂದ ಮಾರುತಿ ಬಗೆಗಿನ ೨.೫ ಪುಟಗಳ ಕವನವೂ ಇದೆ. ಹಂಪೆ, ತಾಜಮಹಲಿನಿಂದ, ಈಜಿಪ್ಟಿನ ಸ್ಪಿಂಕ್ಸ್ ವರೆಗಿನ ಕವನಗಳೂ ಇವೆ. ಅಳು, ನಗು, ಪ್ರೀತಿ, ಪ್ರೇಮ, ಸಂದೇಹ ಎಲ್ಲ ಭಾವನೆಗಳಿವೆ. Keats, Tennyson, Robert browning ರ ಕವನಗಳ ಅನುವಾದಗಳೂ ಇವೆ. ಒಟ್ಟಿನಲ್ಲಿ ಡಿವಿಜಿ ಯವರ ಅರಿವಿನಾಳವಿಸ್ತಾರಗಳಿಲ್ಲಿವೆ. ಗೋಪಾಲಕೃಷ್ಣ ಗೋಖಲೆ, ಗೋಖಲೆ ಜೀವನ ಚರಿತ್ರೆಯಾದರೆ, ಈಶೋಪನಿಷತ್ತು ಕನ್ನಡ ಅರ್ಥಾನುವಾದ. ನಾಕಂಡಿರುವ ಇವು ಅವರ ಸಾಹಿತ್ಯ ಸಾಗರದ ಒಂದು ಹನಿ. ಡಿವಿಜಿಯವರ ಸಾಹಿತ್ಯ ಕ್ಷೇತ್ರ ಬಹಳ ವಿಸ್ತಾರವಾಗಿದೆ. ಅದರಲ್ಲಿ ಜೀವನ ಚರಿತ್ರೆಗಳು, ಮಕ್ಕಳ ಸಾಹಿತ್ಯ, ತತ್ವಚಿಂತನೆ, ಕವಿತೆಗಳು, ನಾಟಕಗಳು, ಅನುವಾದ ನಾಟಕಗಳು, ರಾಜಕೀಯ, ನಿಬಂಧಗಳು ಎಲ್ಲವೂ ಇವೆ. ವೈಜ್ಞಾನಿಕ - ಸಾಂಪ್ರದಾಯಿಕ ಚಿಂತನೆಗಳು, ಮೂಡಣ - ಪಡುವಣ ವಿಚಾರಗಳು, ಇತಿಹಾಸ - ವಾಸ್ತವಿಕತೆಗಳು ಇವೆಲ್ಲವುಗಳ ಹದವಾದ ಮಿಶ್ರಣ. ಎಲ್ಲ ಕೃತಿಗಳ ಸ್ಥೂಲ ಪರಿಚಯವನ್ನು ಕಸ್ತೂರಿಯವರು ಕೊಟ್ಟಿದ್ದಾರೆ, ಅದನ್ನೋದಿದ ಮೇಲೆ, ಅವರ ಪುಸ್ತಕಗಳನ್ನೋದುವ ಹಂಬಲ ಇಮ್ಮಡಿಯಾಗಿದೆ. ಅವರ ಜನ್ಮಶತಾಬ್ದಿಯ ಅಂಗವಾಗಿ, ಅವರೆಲ್ಲ ಕೃತಿಗಳನ್ನು ’ಡಿವಿಜಿ ಕೃತಿ ಶ್ರೇಣಿ’ ಎಂಬ ಹೆಸರಿನಲ್ಲಿ ೧೧ ಸಂಪುಟಗಳಾಗಿ, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆಗಳು ಜಂಟಿಯಾಗಿ ಬಿಡುಗಡೆ ಮಾಡಿವೆ ಎಂಬ ಮಾಹಿತಿ ದೊರಕಿತು.

ಪತ್ರಕರ್ತರಾಗಿ, ಸಾಹಿತಿಯಾಗಿ, ಸಮಾಜಸೇವಕರಾಗಿ ನಾಡಿಗೆ ಡಿವಿಜಿ ಯವರ ಸೇವೆ ಅಪಾರ. ಎಲ್ಲರೆನ್ನುವಂತೆ ನಾಡಿನ ನಭೋಮಂಡಲದಲ್ಲಿ ಬೆಳಗುವ ಧೃವತಾರೆ ಡಿವಿಜಿ.

(ಅವರ ಹುಟ್ಟುಹಬ್ಬಕ್ಕೆ ಒಂದು ಕೃತಜ್ಞತಾಪೂರ್ವಕ ಕಿರುಕಾಣಿಕೆ)

Monday, March 16, 2009

ಕವಿತೆಯೆಂದರೇನು?


ಕವಿತೆ, ಕೆಲವು ಪದಗಳ ಸಾಲೇ
ಸಾಲಿನ ಕೊನೆಯ ಪ್ರಾಸವೇ
ಪ್ರಾಸದೊಳಗಿನ ಭಾವವೇ
ಭಾವದೊಳಗಿನ ಕಲ್ಪನೆಯೇ
ಕಲ್ಪನೆಗೊಂದು ಚಿಂತನೆಯೇ
ಚಿಂತಣದೊಂದಿನ ವಿಷಯವೇ
ವಿಷಯದ ಹಿಂದಿನ ಘಟನೆಯೇ
ಘಟನೆಗೊಂದು ತರ್ಕವೇ
ತರ್ಕಕ್ಕೆ ನಿಲುಕದ ಸತ್ಯವೇ
ಸತ್ಯದೊಳಗಿನ ಸೌಂದರ್ಯವೇ
ಸೌಂದರ್ಯವೆಂಬ ಕನಸೇ
ಕನಸಿಂದ ದೊರೆತ ಸ್ಪೂರ್ತಿಯೇ
ಸ್ಪೂರ್ತಿಯಿಂದ ಹುಟ್ಟಿದ ಪದಗಳೇ
ಕವಿತೆಯೆಂದರೇನು?

Wednesday, March 11, 2009

ಕೊಳೆಗೇರಿಯ ಕೋಟ್ಯಾಧೀಶ ನಾಯಿ(??) ಹಾಗೂ ಪ್ರಶ್ನೋತ್ತರಗಳು

Slumdog Millionaire ಚಿತ್ರಕ್ಕೆ ಪ್ರಶಸ್ತಿಗಳ ಸುರಿಮಳೆಯೇ ಆಗಿದೆ. ಪಡೆದವರಲ್ಲಿ ಭಾರತೀಯ ಪ್ರತಿನಿಧಿಗಳೂ ಇದ್ದಾರೆ. ಭಾರತಕ್ಕೇ, ಭಾರತೀಯ ಚಿತ್ರಕ್ಕೇ ಪ್ರಶಸ್ತಿ ಸಿಕ್ಕಿದಷ್ಟು ಎಲ್ಲರೂ ಸಂತೋಷ ಪಟ್ಟಿದ್ದಾಗಿದೆ. ಹೆಮ್ಮೆಯ ಗರಿ ಸಿಕ್ಕಿಸಿಕೊಂಡದ್ದಾಗಿದೆ. ಇಂದೇನಾದರೂ ಆ ಚಿತ್ರದ ಬಗ್ಗೆ ಹೊಸದಾದ (??) ಬಗೆಯಲ್ಲಿ ಹೇಳಹೊರಟರೆ ನನಗೆ ತಲೆಮಾಸಿದವಳೆಂಬ ಬಿರುದು ಖಂಡಿತ. ಆದರೂ ನನ್ನದಲ್ಲದಕ್ಕೆ ನನ್ನದೆಂಬ ಕುರುಡು ಹಮ್ಮಿಗಿಂತ, ತಲೆಮಾಸಿರುವುದೇ ಕ್ಷೇಮವೆಂದುಕೊಂಡು ಅಭಿಪ್ರಾಯಗಳನ್ನು ಮುಂದಿಡುತ್ತಿದ್ದೇನೆ.

ಶೀರ್ಷಿಕೆ ನೋಡಿದಾಗ ಅನಿಸಿದ್ದು ಇದೊಂದು Motivational ಚಿತ್ರವಿರಬೇಕೆಂದು, ಕೊಳೆಗೇರಿ ಹುಡುಗನೊಬ್ಬ ಪರಿಸ್ಥಿತಿಯ ವೈಪರೀತ್ಯಗಳನ್ನು ಮೀರಿ ಕೋಟ್ಯಾಧೀಶನಾಗುವ ಕಥೆಯಿರಬೇಕೆಂದು. ಆದರೆ ಚಿತ್ರದುದ್ದಕ್ಕೂ ಪಾತ್ರಗಳಿಗಿಂತ ಪರಿಸ್ಥಿತಿಗಳೇ ಬೆಳೆದು ನಿಂತಿವೆ! ವಿಷಯಕ್ಕಿಂತ ಚಿತ್ರಣಕ್ಕೇ ಪ್ರಾಧಾನ್ಯತೆಯಿದೆ! ೨/೩ ನೇ ತರಗತಿಯಲ್ಲಿ ನಮ್ಮ ಸಂವಿಧಾನಕ್ಕಿಂತಲೂ ದೊಡ್ಡದಾದ ಪುಸ್ತಕದಿಂದ ಪಾಠ ಹೇಳಿಕೊಡುತ್ತಿದ್ದಾರೆ. ಆದರೂ ’ಸತ್ಯ ಮೇವ ಜಯತೇ’ ಗೆ ಜನಮತ ಬೇಕಾಗುತ್ತದೆ! ಹಿಂದಿ - ಇಂಗ್ಲಿಷ್ ಎರಡೂ ಗೊತ್ತಿರುವವನಿಗೆ ನಿಲುಕುವ ಸಾಮಾನ್ಯ ಸತ್ಯವನ್ನು, ಸೈಕಲ್ ಕಳವು ಮಾಡುವ, ಪಾನಿಪೂರಿಯ ಬೆಲೆಗೆ ಹೋಲಿಸಲಾಗಿದೆ! ಜೋರಾಗಿ ಓಡಿದರೇ ಬೀಳುವಂತಹ ಶೌಚಾಲಯದಲ್ಲಿ, ಕೇವಲ ಕುರ್ಚಿ (ಮುಟ್ಟಿದರೆ ಮುರಿಯುವಂತಹ) ಅಡ್ಡ ಇಡುವುದರಿಂದ ಬಾಗಿಲು ತೆರೆಯಲಾಗುವುದಿಲ್ಲ! ಕೋಮುಗಲಭೆಯ ಸಂದರ್ಭದಲ್ಲಿ ಓಡುವುದಕ್ಕೆ ಜಾಗವಿಲ್ಲದಂತಹ ಜಾಗದಲ್ಲಿ ರಾಮವೇಷಧಾರಿ ಎಲ್ಲಿಂದ ಪ್ರತ್ಯಕ್ಷನಾದ? !! ಮುಂಬಯಿಯಿಂದ ಆಗ್ರಾಗೆ ಬರುವಷ್ಟರಲ್ಲಿ ಅದೆಷ್ಟು ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುತ್ತಾರೆ!! ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ನಿರೂಪಕ, ಸ್ಪರ್ಧಿಯನ್ನೂ, ಅವನ ವೃತ್ತಿಯನ್ನೂ ಸಾರ್ವಜನಿಕವಾಗಿ ಹೇಗೆ ಲೇವಡಿ ಮಾಡುತ್ತಾನೆ!! (Big Brother ಪ್ರಭಾವವಿರಬಹುದೇ?!). ಇವೆಲ್ಲಾ silly ವಿಷಯಗಳು. ನಮ್ಮ ಬಾಲಿವುಡ್ ನಲ್ಲಿ ಇದಕ್ಕಿಂತಲೂ ಕಳಪೆ ತರ್ಕಗಳನ್ನು ತೋರಿಸುತ್ತಾರೆ. ಆದ್ದರಿಂದ ಇವೆಲ್ಲವೂ ನಗಣ್ಯ!! (ಪ್ರಶಸ್ತಿಗೂ??!). ಸರಿ, ಇವೆಲ್ಲವನ್ನು ಪಕ್ಕಕ್ಕಿಟ್ಟು ನೋಡಿದಾಗ, ಈ ಚಿತ್ರವೂ ಒಂದು ಒಳ್ಳೆಯ ಚಿತ್ರವೇ. ಕಥಾಹಂದರ, ತಾಂತ್ರಿಕತೆ, ಸಂಗೀತ, ಪಾತ್ರಗಳು, ಅಭಿನಯ ಎಲ್ಲವೂ ಮಿಳಿತಗೊಂಡು ಸುಂದರವಾದ ಚಿತ್ರವೊಂದು ಮೂಡಿಬಂದಿದೆ. ಇಂತದೇ ಬಹಳಷ್ಟು ಚಿತ್ರಗಳು ಬಂದು ಹೋಗಿದ್ದರೂ, ಇದು ನಮ್ಮ ಬಾಲಿವುಡ್/ಕಾಲಿವುಡ್ ಮಾಸ್/ಮಸಾಲೆ ಚಿತ್ರವಲ್ಲ ಅಥವಾ ಕೇವಲ ನಮ್ಮ ಬಾಲಿವುಡ್ ಉತ್ತಮ ಚಿತ್ರಗಳ ಸಾಲಿನಲ್ಲಿಲ್ಲ. ಅದನ್ನು ಹಾಗೆ ನೋಡುವುದೇ ಒಂದು ಅಪರಾಧವಾಗುತ್ತದೆ. ಇದೊಂದು ಪೂರ್ಣ ಪ್ರಮಾಣದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಚಿತ್ರ.

ಒಂದು ದೂರದರ್ಶನದ ಪ್ರಶ್ನಾವಳಿಗಳ ಕಾರ್ಯಕ್ರಮವನ್ನು ಆಧಾರವಾಗಿಟ್ಟುಕೊಂಡು, ಅದನ್ನು ಅತಿಸಾಮಾನ್ಯ ಜೀವನದೊಂದಿಗೆ ತಾಳೆಹಾಕಿ ಹೆಣೆದಿರುವ ಕಥಾಹಂದರ ಶ್ಲಾಘನೀಯ. ಒಂದು ರಸಪ್ರಶ್ನೆ ಸ್ಪರ್ಧೆಯಲ್ಲಿ ಗೆದ್ದೊಡನೆ ಅಸಾಮಾನ್ಯರಾಗಿ ಬಿಡುವುದಿಲ್ಲ ಅಥವಾ ಗೆಲ್ಲಲು ಅಸಾಮಾನ್ಯ ಪ್ರತಿಭೆಯ ಅಗತ್ಯವಿಲ್ಲ. ನಮ್ಮನುಭವವೂ ನಮಗೆ ಜ್ಞಾನವನ್ನು ನೀಡುತ್ತದೆ (ಕಲಿಯುವ ಆಸಕ್ತಿಯಿದ್ದಲ್ಲಿ) ಎಂಬುದನ್ನು ಚೆನ್ನಾಗಿ ನಿರೂಪಿಸಲಾಗಿದೆ. ನಮ್ಮ ಡಿವಿಜಿ ಯವರೂ ಹೇಳಿಲ್ಲವೇ

ಅನುಭವದ ಪಾಲೊಳು ವಿಚಾರ ಮಂಥನವಾಗೆ

ಜನಿಯಿಕುಂ ಜ್ಞಾನನವನೀತವದೆ ಸುಖದೆಂ

ಗಿಣಿಯೋದು ಪುಸ್ತಕಜ್ಞಾನ; ನಿನ್ನನುಭವವೇ

ನಿನಗೆ ಧರುಮದ ದೀಪ - ಮಂಕುತಿಮ್ಮ

ಇಂತಹುದೊಂದು ಕಥೆಯ, ಕಥಾಹಂದರದ, ಪೂರ್ಣ ಯಶಸ್ಸು ಮೂಲ ಕಥೆಗಾರನಿಗೆ ಮಾತ್ರ ಸಲ್ಲಬೇಕು.

ಮೂಲಕಥೆಗಾರ ಭಾರತೀಯನಾದ್ದರಿಂದ, ಬೇರೆಯವರನ್ನು ಅನರ್ಥಕ್ಕೆ ಹೊಣೆಯಾಗಿಸುವುದರಲ್ಲಿ ಅರ್ಥವಿರಲಿಲ್ಲ. ಆದರಿಂದು ಮೂಲ ಪುಸ್ತಕವನ್ನು (Q & A by Vikas Swarup) ಓದಿ ಮುಗಿಸಿದ ನಂತರ, ಅನರ್ಥದಲ್ಲೂ ಒಂದರ್ಥ ಕಾಣುತ್ತಿದೆ. ಚಲನಚಿತ್ರದ ಪೂರ್ವಾಗ್ರಹದೊಂದಿಗೆ ಓದಲಾರಂಭಿಸಿದಾಗ ಆಘಾತಗಳ ಸರಣಿಯೇ ಕಾದಿತ್ತು.

ಮೊದಲನೆಯದಾಗಿ ನಾಯಕನ ಹೆಸರು ರಾಮ್ ಮೊಹಮ್ಮದ್ ಥಾಮಸ್ ಹಾಗೂ ಈತ ಯಾವುದೇ ಜಾತಿಯವನಲ್ಲ! ಅನಾಥರೆಂಬ ಜಾತಿಯವನು, ಯಾರೂ ಅಣ್ಣ ತಮ್ಮಂದಿರಿಲ್ಲದವನು ಹಾಗೂ ಈತ ಕೊಳೆಗೇರಿಯವನಲ್ಲ! ಕಾಲ್ ಸೆಂಟರಿನ ಚಾಯ್ ವಾಲ ಅಲ್ಲ, ಬಾರ್ ಅಟೆಂಡರ್.

ನಾಯಕ ಭಾಗವಹಿಸಿದ್ದ ದೂರದರ್ಶನದ ಕಾರ್ಯಕ್ರಮ (Who Will Win a Billion - W3B) ದ ರೂವಾರಿ ಭಾರತೀಯನಲ್ಲ! ಅದೊಂದು ಅಮೆರಿಕನ್ ಬಹುರಾಷ್ಟ್ರೀಯ ಕಂಪನಿ, ೩೫ ರಾಷ್ಟ್ರಗಳಲ್ಲಿ ಕಾರ್ಯಕ್ರಮ ನಡೆಸುತ್ತಿರುತ್ತದೆ. ಅದರ ನಿರ್ಮಾಪಕನ ಬಳಿ ನಾಯಕ ಗೆದ್ದ ಹಣ ಕೊಡಲು ಹಣವಿರದ ಕಾರಣ, ಉತ್ತರಿಸಿದವನ ಮೇಲೆ ಮೋಸದ ಆರೋಪ ಹೊರಿಸುವ ಪ್ರಯತ್ನ ಮಾಡಲಾಗುತ್ತಿರುತ್ತದೆ. ಭಾರತೀಯ ಪೋಲಿಸ್, ಬಾರ್ ಅಟೆಂಡರ್ ಒಬ್ಬ ಗೆಲ್ಲಲು ಸಾಧ್ಯವಿದೆಯೆಂದೂ, ಬುದ್ದಿವಂತಿಕೆಯನ್ನು ಮಾಡುವ ಕೆಲಸ ಹಾಗೂ appearance ಗಳಿಂದ ಅಳೆಯಲಾಗದೆಂದು ಪ್ರತಿಪಾದಿಸಿದಾಗ, ನಿರ್ಮಾಪಕರು ಇಂಗ್ಲೆಂಡ್ ನ ಶೋ ದಲ್ಲಿ ನಡೆದ ಮೋಸದ ಪ್ರಕರಣವನ್ನು ಉಲ್ಲೇಖಿಸಿ, ಹಣದ ಆಮಿಷ ಒಡ್ಡಿ, ಪೋಲಿಸನನ್ನು ಒಪ್ಪಿಸುತ್ತಾರೆ! ನಮ್ಮ ವ್ಯವಸ್ಥೆ ಅವರ ಸ್ವಾರ್ಥಕ್ಕೆ ಬಲಿಯಾಗುತ್ತದೆ!

ಚಲನಚಿತ್ರ/ನಾಯಕರ ಗೀಳಿರುವುದು ನಾಯಕನ ಗೆಳೆಯನಿಗೆ. ಮುಂದೊಂದು ದಿನ ನೀನೊಬ್ಬ ಒಳ್ಳೆಯ ಚಲನಚಿತ್ರ ನಾಯಕನಾಗುತ್ತೀ ಎಂಬ ಜ್ಯೋತಿಷಿಯ ಭರವಸೆಯೊಂದಿಗೆ ಆ ಗೀಳು ಹತ್ತಿಸಿಕೊಂಡಿರುತ್ತಾನೆ. ಆತನೊಬ್ಬ ’ಡಬ್ಬಾವಾಲ’ (ಇವರ ಯಶಸ್ಸಿನ ರಹಸ್ಯವನ್ನು ಪ್ರಖ್ಯಾತ Management School ಗಳಲ್ಲಿ Case study ಮಾಡುತ್ತಿದ್ದಾರೆ) ನಾಗಿ ಕೆಲಸ ಮಾಡುತ್ತಿರುತ್ತಾನೆ. ಒಂದು ದಿನ, ಆತ ತನ್ನ ಮೆಚ್ಚಿನ ನಾಯಕನನ್ನು ಹೋಟೇಲೊಂದರ ಬಳಿ ಕಂಡಾಗ, ಆ ವಾಹನ ಸಂದಣಿಯಲ್ಲಿ, ತನ್ನ ಜೀವದ ಹಂಗು ತೊರೆದು ಓಡಿ, ನಾಯಕನ ದರ್ಶನ ಪಡೆದು ಕೃತಾರ್ಥನಾಗುತ್ತಾನೆ. ಅಲ್ಲೊಂದು ಮುಗ್ಧತೆಯ ಚಿತ್ರಣವಿದೆ. ಪುಸ್ತಕವಿಡೀ ತಡಕಾಡಿದರೂ ಹೇಸಿಗೆಯಲ್ಲಿ ಬೀಳುವ ಚಿತ್ರಣವಿಲ್ಲ! ಕಾಸಿಗಾಗಿ ಅಣ್ಣನೇ ತಮ್ಮನ ಆಸೆಗಳ ಬಲಿ ಕೊಡುವ ಚಿತ್ರಣವಿಲ್ಲ!!

ನಾಯಕನ ಬಾಲ್ಯ ಚರ್ಚ್ ಒಂದರಲ್ಲಿ ರೂಪುಗೊಳ್ಳುತ್ತದೆ. ಮತಾಂತರಕ್ಕೆ ಪ್ರಯತ್ನಿಸುತ್ತಿಲ್ಲವೆಂದು ನಿರೂಪಿಸಲು, ನಾಯಕನ ಹೆಸರಿನಲ್ಲಿ ಎಲ್ಲ ಜಾತಿಗಳ ಹೆಸರುಗಳೂ ಸೇರಿಕೊಳ್ಳುತ್ತವೆ. ಜೊತೆಗೆ ಇಂಗ್ಲಿಷ್ ಭಾಷೆಯ ಅರಿವು ಬಾಲ್ಯದಿಂದಲೇ ದೊರಕುತ್ತದೆ. ಕಥೆಯುದ್ದಕ್ಕೂ ಇದೇ ಆತನ ಪ್ಲಸ್ ಪಾಯಿಂಟ್. ಇಂಗ್ಲೆಂಡಿನ ಪಾದ್ರಿಯೊಬ್ಬ ದೆಹಲಿಯ ಚರ್ಚಿನಲ್ಲಿ, ಧರ್ಮದಿಬ್ಬಗೆಯಲ್ಲಿ ನಡೆಸುತ್ತಿರುವ ಜೀವನ (ಪಾದ್ರಿ ಸಂಸಾರಿಯಗಿದ್ದು, ಆತನಿಗೆ ಮಗನೊಬ್ಬನಿರುತ್ತಾನೆ, ಲೋಕದ ಕಣ್ಣಿಗೆ ಕಾಣದೆ!), ಆತನ ಉತ್ತರಾಧಿಕಾರಿಯೊಬ್ಬ ಧರ್ಮದ ನೆರಳಿನಲ್ಲಿ ನಡೆಸುವ ದುರಾಚಾರಗಳು (Drugs, Homosexuality) ಇತ್ಯಾದಿಗಳನ್ನು ಚೆನ್ನಾಗಿ (??) ಬಿಂಬಿಸಲಾಗಿದೆ. ಚಲನ ಚಿತ್ರದಲ್ಲಿ ಇವಾವುಗಳ ಹತ್ತಿರವೂ ಸುಳಿಯಲಾಗಿಲ್ಲ! Holy Cross ಗೆ ಸಂಬಂಧಪಟ್ಟ ಪ್ರಶ್ನೆಯನ್ನು ರಾಮನ ಕುರಿತಾದ ಪ್ರಶ್ನೆಯಾಗಿ ಬದಲಾಯಿಸಿದ್ದಾರೆ! ಪುಸ್ತಕದಲ್ಲಿ so called ಕೋಮುಗಲಭೆಯ ಕುರಿತಾದ ಯಾವ ಪ್ರಶ್ನೆಯೂ ಇಲ್ಲ!!

ಆಸ್ಟ್ರೇಲಿಯಾದ diplomat ಕುಟುಂಬವೊಂದಕ್ಕೆ ನಾಯಕ ಕೆಲಸ ಮಾಡುತ್ತಿರುತ್ತಾನೆ. ಎಲ್ಲಿಂದಲೋ ಬಂದು ನಮ್ಮ ನೆಲದಲ್ಲಿ ನೆಲಸಿ, ಕೇವಲ ದುಡ್ಡಿದೆ ಎನ್ನುವ ಕಾರಣಕ್ಕೆ, ಭಾರತೀಯರನ್ನು 'Bloody Indians' ಎನ್ನುವುದವರ ಧೋರಣೆ. ಎಲ್ಲೋ ಕೆಲವು ಭಾರತೀಯರ ಬದಲು ಎಲ್ಲರನ್ನೂ generalise ಮಾಡಿದಾಗ ಅವರಲ್ಲಿಯೇ ಕೆಲಸ ಮಾಡುತ್ತಿದ್ದರೂ, ಬಡತನದಲ್ಲಿದ್ದರೂ, ನಾಯಕನ ದೇಶಾಭಿಮಾನ ಚೆನ್ನಾಗಿ ನಿರೂಪಿಸಲ್ಪಟ್ಟಿದೆ. ಕೇವಲ ಡಿಪ್ಲೊಮಾಟ್ ನ ಕೆಲಸ ಬಿಟ್ಟು ಭಾರತೀಯ ರಕ್ಷಣಾ ರಹಸ್ಯಗಳನ್ನೇ ದೋಚುವ ಹುನ್ನಾರ ನಡೆಸಿರುತ್ತಾನೆ ಆ ಆಸ್ಟ್ರೇಲಿಯನ್. ಇಂತಹುದೊಂದು ಆಷಾಡಭೂತಿತನ, ಬೆನ್ನಲ್ಲೇ ಚೂರಿ ಇರಿಯುವ ಕಾರ್ಯದ ಪ್ರಸ್ತಾವವೇ ಇಲ್ಲ ಚಿತ್ರದಲ್ಲಿ!!

Blood is thicker than Water ಎನ್ನುವ ಮಾತೊಂದು ಬರುತ್ತದೆ. ಅಣ್ಣ ತಮ್ಮನನ್ನು ವ್ಯವಹಾರದ ಸಲುವಾಗಿ ಅಮೆರಿಕಾಗೆ ಕಳುಹಿಸುತ್ತಾನೆ. ಆತ ಹೇಗೆ ಅಲ್ಲಿಯ ಜಾಲದಲ್ಲಿ ಸಿಕ್ಕಿಹಾಕಿಕೊಂಡು ಕೊನೆಗೆ ಅಣ್ಣನನ್ನೇ ಕೊಲೆ ಮಾಡುವ ಮಟ್ಟಕ್ಕೆ ಇಳಿಯುತ್ತಾನೆಂಬುದರ ಕಥೆ. ಕೊನೆಗೆ ಹೀಗೆ ಮಾಡಿಬಿಟ್ಟೆನಲ್ಲಾ ಎಂಬ ಪಶ್ಚಾತ್ತಾಪದಲ್ಲೂ, ತಾನೂ ಅದೇ ಜಾಲದಲ್ಲಿ ಪ್ರಾಣಬಿಡುತ್ತಾನೆ. ಅಮೆರಿಕವನ್ನು ವಿಶ್ಲೇಸುವ ಈ ಭಾಗವೂ ಚಿತ್ರದಲ್ಲಿಲ್ಲ. ಕೇವಲ, ಹುಡುಗನೊಬ್ಬನಿಗೆ ೧೦೦ ಡಾಲರ್ ನೋಟೊಂದನ್ನು ಕೈಗಿಟ್ಟು, ಎಲ್ಲರೂ ಕರುಣಾಮಯಿಗಳು ಎಂಬಂತೆ, 'This is real America' ಎಂದು ಹೇಳಿಸಲಾಗಿದೆ!!

ಪಾಕಿಸ್ತಾನ ಭಾರತಕ್ಕೆ ನೀಡಿರುವ ಉಡುಗೊರೆಗಳ (ಯುದ್ಧ ಹಾಗೂ ಭಯೋತ್ಪಾದನೆ) ಹಾಗೂ ನಾವು ಸುಮ್ಮನಿದ್ದಾಗ್ಯೂ ಕಾಲುಕೆರೆದುಕೊಂಡು ಬರುವ ಅವರ ಮನೋಭಾವ ತಿಳಿಸಲಾಗಿದೆ. ಅಲ್ಲದೆ, ದೇಶಕ್ಕೆ ವಿಪತ್ತು ಬಂದಾಗ ಹೇಗೆ ಜನ ಒಂದುಗೂಡಿ ಹೋರಾಡುತ್ತಾರೆ, ಸೈನಿಕರಿಗೆ ಹೇಗೆ ಸ್ಪಂದಿಸುತ್ತಾರೆ, ತಮ್ಮಲ್ಲಿ ಏನಿದೆಯೋ ಅಷ್ಟರಲ್ಲೇ ಹಂಚಿಕೊಳ್ಳುತ್ತಾರೆ, ಇವಲ್ಲದರ ಚಿತ್ರಣವಿದೆ. ಚಲನಚಿತ್ರದಲ್ಲಿ ಕಳೆದುಹೋಗಿದೆ!! ಅಮೆರಿಕ, ಬ್ರಿಟನ್ ನ ಸಹಾಯ ಪಡೆಯುತ್ತಿರುವ ಪಾಕಿಸ್ತಾನದ ಅಧಿಕಪ್ರಸಂಗತನದ ಬಗ್ಗೆ ಪ್ರಸ್ತಾಪಿಸಿದ್ದಲ್ಲಿ ಆಸ್ಕರ್ ತಪ್ಪಿ ಹೋಗುತ್ತಿತ್ತೇನೋ??!!

ಕೇವಲ ಹೊರಜೀವನವನ್ನಷ್ಟೇ ತೋರಿಸಲಾಗಿದೆ. ಅಂತಹುದೊಂದು ಬಡತನದ, ಕೆಳಮಧ್ಯಮವರ್ಗದ ಜನರಲ್ಲೂ ಇರುವ ಆರ್ದ್ರತೆ ಚಲನಚಿತ್ರದಲ್ಲಿಲ್ಲ. ನೆರೆಹೊರೆಯವರಿಗೆ ಸಹಾಯ, ಪಕ್ಕದ ಮನೆ ಹುಡುಗಿಯೊಂದಿಗೆ ಬೆಸೆದುಕೊಳ್ಳುವ ಸಹೋದರಿಯ ಸಂಬಂಧ, ಅನಾಥಾಶ್ರಮದ ಹುಡುಗರೊಂದಿಗಿನ ಭಾತೃ ಸ್ನೇಹ, ಕೇವಲ ಸಹಪ್ರಯಾಣಿಕರಾಗಿದ್ದರೂ ಅಲ್ಲೂ ಬೆಸೆದುಕೊಳ್ಳುವ ಸಂಬಂಧಗಳು, ಇವೆಲ್ಲವೂ ಭಾವನಾತ್ಮಕ ಭಾರತದಲ್ಲಿ ಮಾತ್ರ ಸಾಧ್ಯ. ಚಲನಚಿತ್ರದಲ್ಲಿಲ್ಲ. ಇವನ್ನೆಲ್ಲ ಸೇರಿಸಿದರೆ Bollywood Masala Movie ಆಗಿ ಪ್ರಶಸ್ತಿ ಕೈತಪ್ಪೀತೆಂಬ ಅಳುಕೋ? ಅಥವಾ ಅಂತಹವುಗಳನ್ನು ಚಿತ್ರಿಸುವ ಪ್ರತಿಭೆಯಿಲ್ಲವೋ? ಭಾರತವು ಹೊರಜಗತ್ತಿಗೆ ಇನ್ನೂ ಹತ್ತಿರವಾದೀತೆಂಬ ಭಯವೋ?

ಹೆಸರಿಗೆ ಪೂರಕವಾಗಿ ಚಿತ್ರತೆಗೆಯುವಂತಿದ್ದರೆ, ಕೊಳೆಗೇರಿ ಹುಡುಗನೊಬ್ಬನ ಸಾಮರ್ಥ್ಯ highlight ಆಗಿರಬೇಕಿತ್ತು. (ಆಗಿದೆ, ನಿಮಗೆ ಕಾಣದಿದ್ದಲ್ಲಿ ನಮ್ಮ ತಪ್ಪಲ್ಲ ಎನ್ನುವ ಬುದ್ಧಿಜೀವಿಗಳೂ ಇದ್ದಾರೆ ಎಂಬುದು ಗೊತ್ತು. ನಾವು ಕುಟುಂಬದವರೆಲ್ಲ ಒಟ್ಟಿಗೇ ಮಲಗುತ್ತೇವೆಂದು ಹೇಳಿದಾಗ, 'Are you gay?' ಎಂದು ಕೇಳಿದ ಅಂತರರಾಷ್ಟ್ರೀಯ (ಅ)ಸಾಮಾನ್ಯ ಪ್ರೇಕ್ಷಕನ ದೃಷ್ಟಿಯಲ್ಲೊಮ್ಮೆ ನೋಡಿ ಎಂದಷ್ಟೇ ಹೇಳಬಲ್ಲೆ). ಚಲನಚಿತ್ರದಲ್ಲಿ ನಾಯಕ ಕೇವಲ ಹೆಣ್ಣು-ಹೊನ್ನಿನೊಂದಿಗೆ ಹೋದವನಂತೆ ಚಿತ್ರಿಸಲಾಗಿದೆ. ಅಪ್ರಾಪ್ತ ವಯಸ್ಸಿನಲ್ಲೇ ವೇಶ್ಯಾವಾಟಿಕೆಗಳಂತಹ ಜಾಗದಲ್ಲಿ ಗುರುತಿಸಲಾಗಿದೆ. ಮೂಲದಲ್ಲಿ ಕೇವಲ ಕೊನೆಯ ಹಂತದಲ್ಲಿ ಬರುವ ಪಾತ್ರ ನಾಯಕಿಯದು ಹಾಗೂ ಅಸಲಿಗೆ, ಹಣಕ್ಕಾಗಿ ಅಂಥದೊಂದು ಪ್ರಶ್ನಾವಳಿಗಳ ಕಾರ್ಯಕ್ರಮಕ್ಕೆ ನಾಯಕ ಹೋಗಿರುವುದೇ ಇಲ್ಲ!! ಚಿತ್ರದಲ್ಲಿ, ನಾಯಕ ಒಮ್ಮೆಗೇ ಇಂಗ್ಲಿಶ್ ಕಲಿತು, ಪ್ರವಾಸಿಗರಿಗೆ ಗೈಡ್ ಆಗಿಬಿಡುತ್ತಾನೆ ಹಾಗೂ ತಪ್ಪಾಗಿ ಗೈಡ್ ಮಾಡುತ್ತಾನೆ. ನಾವೂ ಸಹ ಆ ಗಳಿಗೆಯಲ್ಲಿ ಆ ಹಾಸ್ಯಕ್ಕೆ ನಕ್ಕು ಸುಮ್ಮನಾಗಬಹುದು.ಆದರೆ ಮೂಲದಲ್ಲಿ ನಾಯಕ, ಕೇವಲ ತನ್ನ ಸ್ಮರಣ ಶಕ್ತಿಯಿಂದ ಏನನ್ನೋ ಹೇಳಿದರೂ (ಕೆಲವು ತಪ್ಪು ಮಾಹಿತಿಗಳು), ನಂತರದಲ್ಲಿ, ಅಲ್ಲಿನ ನಿಜವಾದ ಗೈಡ್ ಗಳು ಹೇಳುತ್ತಿದ್ದದ್ದನ್ನು ಕೇಳಿ, ಕೇಳಿ ಕಲಿತುಕೊಳ್ಳುತ್ತಾನೆ. ಅಂತಹುದೊಂದು ಗ್ರಹಣ ಶಕ್ತಿ ಚಿತ್ರದಲ್ಲಿ ಸೆನ್ಸಾರ್ ಆಗಿದೆ! ಹೀಗೆ ಇಲ್ಲದುದನ್ನು ಸೇರಿಸುವುದರಿಂದ ಮಾಸಾಲ ಮಾಲು ಆಗುವುದಿಲ್ಲವೇ? ನಿಬ್ಬೆರಗಾಗುವಂತಹ ನಿಜಜೀವನದ ಉದಾಹರಣೆ ಇಲ್ಲಿದೆ ನೋಡಿ.

ಆದರೂ ಆ ಚಿತ್ರತಂಡಕ್ಕೆ ಪ್ರಶಸ್ತಿಯ ಸುರಿಮಳೆಯಾಗಿರುವದರಲ್ಲಿ ಆಶ್ಚರ್ಯವಿಲ್ಲ!! ಏಕಂತೀರಾ? ಅವರ ಚಾಣಾಕ್ಷತನವನ್ನೊಮ್ಮೆ ಪರಿಶೀಲಿಸಿ. ಭಾರತೀಯ ಕಥಾವಸ್ತು. ಮೂಲಕಥೆಗಾರ ಭಾರತೀಯ. ಪಾತ್ರಧಾರಿಗಳು ಭಾರತೀಯರು. ಸಂಗೀತಗಾರ ಹೆಸರಾಂತ ಭಾರತೀಯ ನಿರ್ದೇಶಕ ಹಾಗೂ ಭಾರತೀಯರ ಕಣ್ಮಣಿ. ಆದರೆ ನಡೆದದ್ದೆಲ್ಲ ಬ್ರಿಟಿಷನೊಬ್ಬನ ನಿರ್ದೇಶನದಂತೆ. ಬೊಕ್ಕಸ ಭರ್ತಿಯಾದದ್ದು ಬ್ರಿಟನ್ನಿನದು. ಇಂತಹುದೊಂದು ದುರುದ್ದೇಶದ ಕಾರ್ಯಸಾಧನೆಯನ್ನು ಭಾರತೀಯರೊಂದಿಗೇ ಇದ್ದುಕೊಂಡು ಮಾಡಿದರೆ ಅವರನ್ನು ವಿರೋಧಿಸಲಾಗದು. ಅಂತಹುದೊಂದು ಭದ್ರಕೋಟೆಯನ್ನು ತಮ್ಮ ಸುತ್ತ ಕಟ್ಟಿಕೊಂಡಿದ್ದಾರೆ, ಭಾರತೀಯ ಬುದ್ಧಿಜೀವಿಗಳ ಸಹಾಯದಿಂದ! ನಾವು ತೋರಿಸುತ್ತಿರುವುದು ನಿಮ್ಮನ್ನೇ, ಇದರ ಮೂಲವೂ ನಿಮ್ಮವನದೇ ಎಂದು ನಂಬಿಸಿದ್ದಾರೆ! ಇಂತಹ ಒಡೆದಾಳುವ ನೀತಿಯಿಂದಲ್ಲವೇ ಭಾರತ ಬ್ರಿಟಿಷರ ವಶವಾದದ್ದು? ಇಲ್ಲವಾದಲ್ಲಿ, ಪರಕೀಯನೊಬ್ಬ ಬಂದು, ಭಾರತವನ್ನು ಕೆಟ್ಟದಾಗಿ ಚಿತ್ರಿಸಿ, ’This is Real India' ಎಂದು ಭಾರತೀಯನಿಂದಲೇ ಹೇಳಿಸಿ, ಭಾರತೀಯರೂ ಸುಮ್ಮನೇ ಅದನ್ನೊಪ್ಪುವಂತೆ ಮಾಡುವುದೇನು ಸಾಮಾನ್ಯವೇ? ಅದಕ್ಕಾಗಿ ಅವರು ಪ್ರಶಸ್ತಿಗೆ ಅರ್ಹರು!

ಭಾರತದಲ್ಲೇ ಭಾರತದ ಬಗ್ಗೆ ಹೀಗೆ ಪಂಗಡಗಳನ್ನು ಸೃಷ್ಟಿಸಿ ಮೋಜು ನೋಡುವ ಅವರ ಧಾರ್ಷ್ಟ್ಯವನ್ನು ಮೆಚ್ಚಬೇಕೋ, ನಮ್ಮ ಬಲಹೀನತೆಗೆ ಮರುಗಬೇಕೋ ತಿಳಿಯದಾಗಿದೆ. ಒಟ್ಟಿನಲ್ಲಿ, ನಮ್ಮ ತಾಯಿಗೆ ನಾವೇ ಹರಕಲು ಸೀರೆ ಉಡಿಸಿ ಪ್ರದರ್ಶನಕ್ಕಿಡಲು ಅನುಮತಿ ನೀಡಿ, ನಾವೂ ಆನಂದಿಸಿ, ಪ್ರದರ್ಶಕರನ್ನು ತಲೆಮೇಲೆ ಹೊತ್ತು ನಡೆಯುವ ನಮ್ಮ ಈ ಕೀಳರಿಮೆಯ ದೇಶಾಭಿಮಾನ, ಅದೇ ಸತ್ಯ ಎನ್ನುವ ಬುದ್ಧಿವಂತರ ಕೂಟ, ಇವುಗಳೊಡನೆ ಚರ್ಚಾಕೂಟ ಏರ್ಪಡಿಸಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುವ ಮಾಧ್ಯಮಗಳು, ಎಲ್ಲವನ್ನು ಪ್ರಶ್ನಿಸಿ ಪ್ರಶ್ನಿಸಿ ಉತ್ತರಗಳೊಡನೆ ಮತ್ತದೇ ಪ್ರಶ್ನೆಗಳ ಸುಳಿಯೊಳಗೆ ಸಿಲುಕುವ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿದೆ ಸಾಮಾನ್ಯ ಭಾರತೀಯನ ಪಾಡು!!

Monday, March 09, 2009

ಮಹಿಳಾ ದಿನದೊಂದು ಕನಸು...


ಜನಿಸಿದಂದು ಹೆಣ್ಣುಮಗುವೊಂದು
ಯಾರೂ ಚಿಂತೆ, ದು:ಖಕ್ಕೀಡಾಗದಿರಲಿ
ಹೊರೆಯೆಂಬ ಭಾವ ಬೆಳೆಯಗೊಡದೆ
ಸ್ವಾಭಿಮಾನಿಯಾಗಿ ಬೆಳೆಸುವಂತಾಗಲಿ

ಎಲ್ಲರೂ ವಿದ್ಯಾವಂತೆಯರಾಗಲಿ
ಪಡೆದ ವಿದ್ಯೆಯ ಸದುಪಯೋಗವಾಗಲಿ
ಆರ್ಥಿಕ ಸಬಲೀಕರಣವಾಗಲಿ
ಸಾಮಾಜಿಕ ಹೊಣೆ ಹೊರುವಂತಾಗಲಿ

ಮದುವೆ ಮಾರುಕಟ್ಟೆಯಾಗದಿರಲಿ
ದಕ್ಷಿಣೆಗೆ ವರ ಪಡೆವ ವ್ಯಾಪಾರವಾಗದಿರಲಿ
ಸಂಸಾರ ಸಾಗಿಸುವ ಪಯಣದಲ್ಲಿ
ಸದಸ್ಯರೆಲ್ಲರ ಸಹಕಾರ ದೊರೆಯುವಂತಾಗಲಿ

ಅತ್ತೆಯಂದಿರು ತಾಯಿಯರಂತಾಗಲಿ
ನಾದಿನಿಯರು ಅಕ್ಕತಂಗಿಯರಂತಾಗಲಿ
ಸೊಸೆಯಂದಿರು ಮಕ್ಕಳಂತಾಗಲಿ
ಹೆಣ್ಣಿಗೆ ಹೆಣ್ಣೇ ಶತ್ರುವೆಂಬುದನೃತವಾಗಲಿ

ತಾಳ್ಮೆಯೇ ನಮ್ಮ ತಲೆತೆಗೆಯದಿರಲಿ
ವಾತ್ಸಲ್ಯವೇ ವಿಷವಾಗದಿರಲಿ
ಕರುಣೆಯೇ ಕುಣಿಕೆಯಾಗದಿರಲಿ
ಮಮತೆಯೇ ಮೃತ್ಯುವಾಗದಿರಲಿ

ಮಾತುಗಳು ಮೋಸಮಾಡದಿರಲಿ
ನಂಬಿಕೆಗಳು ಸುಳ್ಳಾಗದಿರಲಿ
ಆಲೋಚನೆಗಳು ಅಪರಾಧವಾಗದಿರಲಿ
ಕ್ಷಮೆಯೇ ಕಟುಕತನವಾಗದಿರಲಿ

ಮಹಿಳಾಸ್ವಾತಂತ್ರ್ಯವೆಂಬುದು ಅಳಿಯಲಿ
ಹುಟ್ಟಿನಿಂದಲೇ ನಮಗದು ದೊರಕಲಿ
ಮಹಿಳಾದಿನವೆಂಬುದು ಕಾಣೆಯಾಗಲಿ
ಎಲ್ಲ ದಿನಗಳೂ ನಮ್ಮವಾಗಲಿ

Saturday, March 07, 2009

ಪ್ರತಾಪಸಿಂಹರ ಹೊಸ ಪ್ರಶ್ನೆಯ ಸುತ್ತ....


ಇಂದಿನ ಸಮಸ್ಯೆಗಳಿಗೆಲ್ಲ ಐಟಿ ಉದ್ಯೋಗಿಗಳೇ ಕಾರಣವೆಂಬಂತೆ ಬಿಂಬಿಸಿದ್ದ ಪ್ರತಾಪರು, ಇಂದು ನಮ್ಮಲ್ಲಿ ಗೇಟ್ಸ್, ಜಾಬ್ಸ್, ಡೆಲ್ ಯಾಕಿಲ್ಲ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಅವರ ಹಿಂದಿನ ಲೇಖನ ಸೃಷ್ಟಿಸಿದ್ದ ಗೊಂದಲಗಳಿಗೆ ಈಗಿನ ಲೇಖನ ಉತ್ತರವೆಂಬಂತೆ ಭಾವಿಸಲಾಗಿದೆ. ಆದರೆ, ಆರ್ಥಿಕತೆಯ ಹಿನ್ನೆಲೆಯಲ್ಲಿ ಬಂದ ಅವರ ಕುರುಡು ಕಾಂಚಾಣಕ್ಕೂ, ತಾಂತ್ರಿಕತೆಯ ಆಧಾರದ ಮೇಲೆ ಅವರು ಇಂದು ಮುಂದಿಟ್ಟಿರುವ ಪ್ರಶ್ನೆಗೂ, ವೃತ್ತಿಪರತೆ, ಹಣದ ಮೌಲ್ಯದ ಅರಿವಿನ ಕುರಿತಾದ ಮೊದಲ ಲೇಖನಕ್ಕೂ, ಪರಿಶ್ರಮ, ಪ್ರತಿಭೆಯನ್ನಾಧರಿಸಿದ ಎರಡನೆಯ ಲೇಖನಕ್ಕೂ, ಸಂಬಳಕ್ಕಾಗಿ ದುಡಿಯುವ ಐಟಿ ಕಾರ್ಮಿಕರ ಕುರಿತಾದ ಮೊದಲ ಭಾಗಕ್ಕೂ, ಬಂಡವಾಳ ಹೂಡುವ ಐಟಿ ದೊರೆಗಳ ಕುರಿತಾದ ಎರಡನೆಯ ಭಾಗಕ್ಕೂ ಬಹಳ ವ್ಯತ್ಯಾಸವಿದೆ. ಅದಕ್ಕೂ ಇದಕ್ಕೂ ಐಟಿ ಕ್ಷೇತ್ರ ಎಂಬ ಪದವಷ್ಟೇ ಕೊಂಡಿ.

ಹೊಸ ಚಿಂತನೆಯನ್ನು ಮುಂದಿಟ್ಟಿರುವ, ಐಟಿ ಕ್ಷೇತ್ರದ ಸಮಸ್ಯೆಯನ್ನು ಗುರುತಿಸುವ ಪ್ರಯತ್ನಕ್ಕಾಗಿ ಪ್ರತಾಪರಿಗೆ ಅಭಿನಂದನೆಗಳು. ಕೇವಲ ನಮ್ಮ Open House, All Hands Meet ಗಳಲ್ಲಿ ಕಳೆದು ಹೋಗುತ್ತಿದ್ದ ಪ್ರಶ್ನೆ ಇಂದು ಸಾರ್ವಜನಿಕ ವೇದಿಕೆಯಲ್ಲಿದೆ. ಪ್ರತಾಪರೇ ಹೇಳುವಂತೆ, ಪರಸ್ಪರ ಹಳಿದುಕೊಳ್ಳದೆ ಮುಕ್ತ ಚರ್ಚೆಯಾಗಲಿ. ನಮ್ಮ ಆಶಯವೂ ಅದೇ.

ISRO, DRDO ಮೊದಲಾದವುಗಳ ಇತಿಹಾಸ ಕೆದಕಿದಾಗ, ಅಬ್ದುಲ್ ಕಲಮರ ’Wings of Fire’ ಓದಿದಾಗ, ಎಂತಹವರ ಜಂಘಾಬಲವೂ ಉಡುಗಿಬಿಡಬೇಕು. ಉಳಿಪೆಟ್ಟು ತಿಂದೂ, ತಿಂದೂ ರೂಪುಗೊಂಡ ಶಿಲ್ಪಗಳಿವು. ದೇಶದ ವೈಜ್ಞಾನಿಕ ಪ್ರಗತಿಯ ರೂವಾರಿಗಳು. ಸೋಲಿನಲ್ಲೂ ಅದರ Top Management ಅವರ ಮೇಲಿಟ್ಟ ನಂಬಿಕೆ, ವಿಶ್ವಾಸಗಳು ಉದಾತ್ತವಾದವುಗಳು. (ಇಂತಹುದೊಂದು ನಂಬಿಕೆಯನ್ನು ನಮ್ಮ ಐಟಿ ಕ್ಷೇತ್ರದ ಮೇಲೂ ಇಡುವಂತಾದಲ್ಲಿ??!!) ಸ್ವಾತಂತ್ರ್ಯಾಪೂರ್ವದಲ್ಲೇ, ಭಾರತೀಯರ ಪ್ರತಿಭೆ ಗುರುತಿಸಿ, ಅವರಿಗೆ ಒತ್ತಾಸೆಯಾಗಿರಲೆಂದು, ಶ್ರೀಯುತ Jamsetji Nusserwanji Tata ರವರು ಕಂಡ ಕನಸು, 'Research Institute' ಅಥವಾ 'University of Research' ಎಂದು ಪ್ರಾರಂಭವಾಯಿತು. ಅದೇ ಇಂದಿನ ನಮ್ಮೆಲ್ಲರ ಹೆಮ್ಮೆಯ ಭಾರತೀಯ ವಿಜ್ಞಾನ ಸಂಸ್ಥೆ (೧೯೦೯ ರಲ್ಲಿ ಸ್ಥಾಪಿತವಾದ ಈ ಸಂಸ್ಥೆ ಈ ವರ್ಷ ತನ್ನ ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಅದರ ಬೆಳವಣಿಗೆಗೆ ಶ್ರಮಿಸಿದ ಎಲ್ಲರಿಗೂ, ಇಂದು ಅದರ ಫಲಾನುಭವಿಗಳಾದ ನಮ್ಮೆಲ್ಲರಿಂದ ಕೃತಜ್ಞತೆ, ಈ ಮೂಲಕ). ಅಂತಹುದೊಂದು vision ಇಟ್ಟುಕೊಂಡಿದ್ದ ಮತ್ತೊಬ್ಬ ಟಾಟಾ ಮತ್ತೆ ಬರಲಿಲ್ಲವೆಂಬುದೂ ಅಷ್ಟೇ ಖೇದಕರ. ಈ ಎಲ್ಲ ಸಂಸ್ಥೆಗಳಿಗೂ ಅವುಗಳದೇ ಆದ limitation ಗಳಿವೆ. ದೇಶದ ತಾಂತ್ರಿಕತೆಯ ಕೇಂದ್ರವಾದ ಇವುಗಳೊಳಗೆ ಎಲ್ಲರೂ ಹೋಗುವುದು ಸಾಧ್ಯವಿಲ್ಲ. ಅದು ಸೂಕ್ತವೂ ಅಲ್ಲ. ಅವು ತೋರಿಸಿದ ದಾರಿಯಲ್ಲಿ ನಡೆಯುವುದಷ್ಟೇ ಸೂಕ್ತ.

ಸ್ವಾತಂತ್ರ್ಯಾಪೂರ್ವದಲ್ಲಿ, ಟಾಟಾ, ಬಿರ್ಲಾ, ವಿಶ್ವೇಶ್ವರಯ್ಯನಂತಹವರು ದೇಶದ ಆರ್ಥಿಕ ಪ್ರಗತಿಗಾಗಿ ಕೈಗಾರಿಕೀಕರಣಗೊಳಿಸಿದರು. ಸ್ವಾತಂತ್ರ್ಯಾನಂತರ ಕೆಲವು ಸರ್ಕಾರಿ ಸ್ವಾಮ್ಯಗಳಾದವು. ಕೆಲವು ಹಾಗೆಯೇ ವ್ಯಕ್ತಿಯ/ಕುಟುಂಬದ ಆಡಳಿತದಲ್ಲಿಯೇ ನಡೆದುಕೊಂಡು ಬಂದವು. ಅವುಗಳ ಮಾರುಕಟ್ಟೆ ಭಾರತವೇ ಆಗಿದ್ದಿತು. ನಮ್ಮಲ್ಲಿಯೂ ವಿದೇಶೀ ಉತ್ಪನ್ನಗಳ ಹಾವಳಿ ಕಡಿಮೆಯಿದ್ದಿತು. ಹಾಗಾಗಿ ಇವು ಎಲ್ಲರಿಗೂ ಚಿರಪರಿತ. ನಾವು ಇಂದು ನೋಡುತ್ತಿರುವ ಆರ್ಥಿಕ ಚಿತ್ರಣಕ್ಕೂ, ಕೇವಲ ಸ್ವಾತಂತ್ರ್ಯಾನಂತರದ ಚಿತ್ರಣಕ್ಕೂ ವ್ಯತ್ಯಾಸವಿದೆ. ಈ ವಿಂಗಡನೆಯೇ ಸೂಕ್ತವಲ್ಲವೇನೋ. ಬಹುಶ:, ಭಾರತವನ್ನು ಜಾಗತಿಕ ಮಾರುಕಟ್ಟೆಗೆ ತೆರೆದಿಟ್ಟ ನಂತರದ ಹಾಗೂ ಅದರ ಮೊದಲಿನ ಕಾಲವಂದು ವಿಂಗಡಿಸಬಹುದೇನೊ. ೯೦ ರ ದಶಕದಲ್ಲಿ ನಾವು ಜಾಗತೀಕರಣವನ್ನು ಬರಮಾಡಿಕೊಂಡೆವು. ಆಗ, ವಿದೇಶಗಳಲ್ಲಿ ಆಗಲೇ ಸಾಕಷ್ಟು establish ಆಗಿದ್ದ, ಲಾಭದಲ್ಲಿ ನಡೆಯುತ್ತಿದ್ದ ಕಂಪನಿಗಳು, ಪ್ರಾಡಕ್ಟ್ ಗಳು ಭಾರತಕ್ಕೆ ಲಗ್ಗೆಯಿಟ್ಟವು. ಅವರ ಲಾಭಾಂಶದ ಸ್ವಲ್ಪ ಮಾತ್ರ ಹಣಹೂಡಿಕೆ ಸಾಕಾಗಿತ್ತು ಅವರು ಭಾರತದಲ್ಲಿ ಹೆಜ್ಜೆಯಿಡಲು ಅಥವಾ ತಳವೂರಲು (??). ಇವುಗಳಿಂದಾಗಿ ಬಹುಪಾಲು ನಮ್ಮ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕೈಗಾರಿಕೆಗಳು ಪೆಟ್ಟು ತಿಂದವು, ಮುಚ್ಚಿಯೇ ಹೋದವು. ಟೆಲೆಕಮ್ಯೂನಿಕೇಷನ್ ಕ್ಷೇತ್ರದಲ್ಲಿ ಸಂಪರ್ಕ ಕ್ರಾಂತಿ ಸಾಧಿಸಿದ್ದ, ಅಂದಿನ C-DoT, ಇಂದಿನ BSNL ನ ಏಕಾಧಿಪತ್ಯ ನಶಿಸಿಹೋಗಿದೆ. ಇಂದಿಗೂ ಮುಕ್ತ ಮಾರುಕಟ್ಟೆಯಲ್ಲಿ ತನ್ನನ್ನು ತಾನು ನಿರೂಪಿಸಲು ಹೆಣಗುತ್ತಿದೆ. ಸ್ವಲ್ಪ ಮಟ್ಟಿಗಾದರೂ ಸ್ಪರ್ಧೆ ನೀಡಿದ ವಿಡಿಯೋಕಾನ್, ಬಿಪಿಲ್ ನಂತಹ ಸಂಸ್ಥೆಗಳು ಏನಾದವು?

ಜಾಗತಿಕ ಮಾರುಕಟ್ಟೆಗೆ ಸರಿಯಾದ ತಯಾರಿಯಿಲ್ಲದೆ ನಾವು ಹೆಜ್ಜೆಯಿಟ್ಟೆವೇ? ತರಬೇತಿಗೊಳಿಸದೇ ನಮ್ಮನ್ನು ತಳ್ಳಲಾಯಿತೇ? ಗೊತ್ತಿಲ್ಲ. ಇಂತಹುದೊಂದು ಸಂದರ್ಭದಲ್ಲಿ, ಸಂಸ್ಥೆಯೊಂದನ್ನು ಕಟ್ಟಿ ಅದು ಲಾಭಗಳಿಸುವಂತೆ ಮಾಡುವುದು ಸುಲಭದ ಕೆಲಸವಾಗಿರಲಿಲ್ಲ (ಸಿಕ್ಕ ಅವಕಾಶವನ್ನು ಬಳಸಿಕೊಂಡ ಪ್ರೇಮ್ ಜಿ, ನಾರಾಯಣ ಮೂರ್ತಿಯವರನ್ನು, ಗೇಟ್ಸ್, ಜಾಬ್ಸ್ ರಿಗೆ ಹೋಲಿಸಲು ಸಾಧ್ಯವಿಲ್ಲವೇ?). ಹಾಗಾಗಿ ’Service Orientation' ಕೇವಲ ಅಗತ್ಯವಾಗಿರಲಿಲ್ಲ, ಅನಿವಾರ್ಯವಾಗಿತ್ತು. ನಂತರವಾದರೂ ’Product Orientation' ಆಗಬಹುದಿತ್ತಲ್ಲ. ಇದಕ್ಕೆ ನನಗೆ ದೊರೆತ ಉತ್ತರ - "ಈಗಾಗಲೇ ಮಾರುಕಟ್ಟೆಯಲ್ಲಿರುವ ಕಂಪನಿಗಳಿಗೆ ನಾವು ಸರ್ವೀಸ್ ಕೊಡುತ್ತಿದ್ದೇವೆ. ಹೊಸ ಪ್ರಾಡಕ್ಟ್ ಒಂದನ್ನು ತಂದರೆ ಅವರೊಂದಿಗೇ ಸ್ಪರ್ಧೆಗಿಳಿಯಬೇಕು. ಆಗ Service business ಕೂಡ ಹೊಡೆಸಿಕೊಳ್ಳುತ್ತದೆ. ಅದನ್ನು ಬಿಟ್ಟು ಲಾಭಾಂಶ ಇಲ್ಲ. ಲಾಭಾಂಶವಿಲ್ಲದೇ ಹೊಸ ಪ್ರಾಡಕ್ಟ್ ಗೆ ಕೈ ಹಾಕುವಷ್ಟು ಬಂಡವಾಳವಿಲ್ಲ. ಅದು ಜಾಣತನವೂ ಅಲ್ಲ. ಯಾಕೆಂದರೆ ನಮ್ಮ ಪ್ರಾಡಕ್ಟ್ ಗಳ ಮಾರುಕಟ್ಟೆ ಭಾರತಕ್ಕೆ ಸೀಮಿತವಾಗಬಹುದು. ಜಾಗತಿಕ ಮಟ್ಟದಲ್ಲಿ client brand establish ಆಗಿದೆ."

ಹಾಗಾದರೆ ನಮ್ಮ Innovation ಏನೂ ಇಲ್ಲವೇ? ಹೊಸ ಹೊಸ ತಂತ್ರಾಂಶಗಳ ಕುರಿತಾದ ಈ Innovation Drive ಗೆ ಅರ್ಥವೇನೆಂದು ಕೇಳಿದಾಗ ಸಿಕ್ಕ ಉತ್ತರ - "ಇಂದು ನೊಕಿಯಾದ ಹೊಸ ಮೊಬೈಲ್ ಗೆ, HP ಪ್ರಿಂಟರ್ ಗೆ ನಾವಿನ್ನೊಂದು ಹೊಸ ಮೊಬೈಲ್, ಪ್ರಿಂಟರ್ ತರುವುದೇ Innovation ಅಲ್ಲ. ಈಗಾಗಲೇ ಮಾರುಕಟ್ಟೆಯಲ್ಲಿ ಬಹಳ ಪ್ರಾಡಕ್ಟ್ ಗಳಿದ್ದು, ಗ್ರಾಹಕ ಆಗಲೇ confuse ಆಗಿದ್ದಾನೆ. ಹೀಗಿರುವಾಗ ಹೊಸ ಪ್ರಾಡಕ್ಟ್ ಎಷ್ಟು sustain ಆಗುವುದೆಂದು ಹೇಳಬರುವುದಿಲ್ಲ. ಹಾಗಾಗಿ ಸ್ಪರ್ಧಿಸುವ ಬದಲು, ಸಹಯೋಗದೊಂದಿಗೆ ಹೊಸ ತಂತ್ರಜ್ಞಾನಗಳನ್ನು ತರುವುದು Innovation. ಆದ್ದರಿಂದ ಇಂದು service orientation ಎನ್ನುವುದು ಕೇವಲ cheap labour ಗೆ ಸೀಮಿತವಾಗಿಲ್ಲ. ಅದನ್ನೂ ಮೀರಿ ಬೆಳೆದಿದೆ."

ಪ್ರಾಡಕ್ಟ್ ಎಂದರೆ, ಕೇವಲ Physically Feelable ವಸ್ತುವಲ್ಲ. ಬ್ಯಾಂಕಿಂಗ್ ಕೆಲಸಗಳನ್ನು ಸುಲಭಗೊಳಿಸಲು ಇರುವ ಸಹಾಯಕ ಸಾಫ್ಟ್ವೇರ್ ಗಳೂ ಪ್ರಾಡಕ್ಟ್ ಗಳೇ, ನಮ್ಮ ದೈನಂದಿನ ಜೀವನದಲ್ಲಿ ಹಾಸುಹೊಕ್ಕಗಿರುವ ಜಾಲತಾಣಗಳೂ ಪ್ರಾಡಕ್ಟ್ ಗಳೇ. ಇವೆಲ್ಲವನ್ನೂ ಇಲ್ಲಿಯವರೇ, ಇಲ್ಲಿಯವರಿಗಾಗೇ ಮಾಡುತ್ತಿರುವುದು. ಆದರಿಂದು ನಾಯಿಕೊಡೆಗಳಂತೆ ಬೀದಿಗೊಂದು ತಲೆಯೆತ್ತಿರುವ ಇಂಜಿನಿಯರಿಂಗ್ ಕಾಲೇಜುಗಳಿಂದ ೫ ಲಕ್ಷ ಪದವೀಧರರು ಹೊರಬರುತ್ತಿದ್ದಾರೆಯೇ ಹೊರತು, ತಂತ್ರಜ್ಞರಲ್ಲ ಎಂಬುದೂ ಪರಿಗಣಿಸಬೇಕಾಗಿರುವ ವಾಸ್ತವ. ಜಾಗತಿಕ ಮಟ್ಟದಲಿ ಸ್ಪರ್ಧಿಸುವಂತಹ ಒಂದು ಉತ್ತಮ ಪ್ರಾಡಕ್ಟ್ ಮಾಡಲು ಬೇಕಾಗಿರುವ ಸ್ಪರ್ಧಾತ್ಮಕ ಛಾತಿ ಎಷ್ಟು ಜನಕ್ಕಿದೆ ಎಂಬುದೂ ಪ್ರಶ್ನಾರ್ಹ. ಮಾಡಿದರೂ, ಪೈರೇಟೆಡ್ ಪ್ರಾಡಕ್ಟ್ ಗಳು ಅನಾಯಾಸವಾಗಿ ದೊರಕುವ ಸುವ್ಯವಸ್ಥೆ ನಮ್ಮಲ್ಲಿರುವಾಗ, ಅವುಗಳು ಎಷ್ಟರ ಮಟ್ಟಿಗೆ ನೆಲೆ ನಿಲ್ಲಬಲ್ಲವು ಎಂಬುದೂ ಪ್ರಶ್ನೆಯೇ.

ಗ್ರಾಹಕನೇ ಪ್ರಭುವಾಗಿರುವ, ಮುಕ್ತವಾಗಿರುವ ಮಾರುಕಟ್ಟೆಯಲ್ಲಿ, ಕೇವಲ ಪ್ರಾಡಕ್ಟ್ ಗಳನ್ನೇ ನಂಬಿಕೊಂಡಿದ್ದರೆ ಇಷ್ಟೊಂದು ಉದ್ಯೋಗಗಳ ಸೃಷ್ಟಿ ಸಾಧ್ಯವಿತ್ತೇ? ಸರಕಾರಿ ಸ್ವಾಮ್ಯದ ಸಂಸ್ಥೆಗಳು/ ಸಂಶೋಧನೆ ಆಧಾರವಾಗಿರಿಸಿಕೊಂಡ ಸಂಸ್ಥೆಗಳು ಸೃಷ್ಟಿಸಿರುವ ಉದ್ಯೋಗಗಳೆಷ್ಟು? ಪ್ರಾಂತೀಯ, ಜಾತಿಯ ಆಧಾರದ ಮೇಲೆ ನಿಂತಿರುವದರಿಂದ ಪ್ರತಿಭೆಗೆ ಮನ್ನಣೆ ದೊರಕದೆ ಹತಾಶವಾದವರೆಷ್ಟು? ಈ ನಿರ್ಬಂಧಗಳನ್ನು ಮೀರಿ ನಿಂತ ಐಟಿ ಕ್ಷೇತ್ರ ಜನರಿಗೆ ಹತ್ತಿರವಾದದ್ದು ಅಸಹಜವೇ?

ದೂರದೃಷ್ಟಿಯಿಲ್ಲದೆ ಬೆಳೆದಿದ್ದರೆ, ಇಂದು ಕೇವಲ ಭಾರತೀಯ ಐಟಿ ಕ್ಷೇತ್ರ ಬವಣೆ ಅನುಭವಿಸಬೇಕಿತ್ತಲ್ಲವೇ? Product Oriented ಜಪಾನ್, ಚೀನಾ ದ ಆರ್ಥಿಕ ಸ್ಥಿತಿಯೂ ಏಕೆ ನಲುಗುತ್ತಿದೆ? ರಫ್ತು ಆಧಾರಿತ ಕ್ಷೇತ್ರಗಳೆಲ್ಲವೂ ಇಂದು ಬಳಲುತ್ತಿರುವುದು ಸತ್ಯವಲ್ಲವೇ? ಇದರಲ್ಲಿ ಜಾಗತೀಕರಣದ ಕೊಡುಗೆಯೆಷ್ಟು? ಇಂದು ತಪ್ಪೆಲ್ಲವೂ ಐಟಿ ಕ್ಷೇತ್ರದ ದಿಗ್ಗಜರದಾದರೆ, ಅವರಿಗೆ ದೂರದರ್ಶಿತ್ವ ಇಲ್ಲವೆಂದಾಗಿದ್ದರೆ, ಅಗತ್ಯಕ್ಕಿಂತ ಹೆಚ್ಚಿನ ಪ್ರಾಮುಖ್ಯತೆಯನ್ನೇಕೆ ಅವರಿಗೆ ನೀಡಬೇಕಿತ್ತು? ಎಲ್ಲಿ ಎಡವಬಹುದೆಂದರಿತವರು ಅವರಿಗೆ ಎಚ್ಚರಿಸುವ ಪ್ರಯತ್ನವನ್ನೇಕೆ ಮಾಡಲಿಲ್ಲ? ಊರೆಲ್ಲ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದ್ದೇವೆಯೇ? ತಪ್ಪು ಜರುಗಿದ್ದೇ ಆಗಿದಲ್ಲಿ, ಸರಿಪಡಿಸುವ ಬಗೆಗಳೆಂತು? ಸಾಮಾನ್ಯ ಕಾರ್ಮಿಕರಿಂದಲೂ ಸಾಧ್ಯವೇ ಅಥವಾ ಬಂಡವಾಳ ಹೂಡಲು ಸಾಧ್ಯವಿರುವವರಿಂದ ಮಾತ್ರ ಸಾಧ್ಯವೇ? (ಬಹು ದಿನಗಳಿಂದ ಕಾಡುತ್ತಿದ್ದ ಪ್ರಶ್ನೆಗಳಿಗೆ ಉತ್ತರ ದೊರೆತೀತೆಂದು ಭಾವಿಸುತ್ತೇನೆ)

Friday, February 27, 2009

ಅನಿಷ್ಟಕ್ಕೆಲ್ಲ ಶನೀಶ್ವರನೇ ಹೊಣೆಯೆನ್ನುವ ಪ್ರತಾಪ....

(ಪ್ರತಾಪ ಸಿಂಹರ ’ಕುರುಡು ಕಾಂಚಾಣ...’ ಲೇಖನದ ಕುರಿತು)

ತೋಳ ಹಳ್ಳಕ್ಕೆ ಬಿದ್ರೆ ಆಳಿಗೊಂದು ಕಲ್ಲು ಅನ್ನುವ ಹಾಗೆ, ಈಗ Recession ನೆವ ಆಗಿಟ್ಟುಕೊಂಡು ಎಲ್ಲರೂ ಐಟಿ ಕ್ಷೇತ್ರದತ್ತ ಬೆರಳು ತೋರಿಸ್ತಾ ಇದ್ದಾರೆ. ಆರ್ಥಿಕ ಹಿಂಜರಿತ ಅನ್ನೋ ಕಾರಣಕ್ಕೆ ಐಟಿ ಕ್ಷೇತ್ರ ಜ್ಞಾಪಕ ಬಂದಿದೆ. ನಮ್ಮ ದೇಶದ ಮಾರುಕಟ್ಟೆಯನ್ನು ವಿದೇಶೀಯರಿಗೆ ಮುಕ್ತವಾಗಿ ತೆರೆದಿಟ್ಟು, ಅವರೆಲ್ಲ ಎಲ್ಲೆಲ್ಲಿಂದಲೋ ಬಂದು ನಮ್ಮ ಹಣದಿಂದ ಅವರ ಜೇಬನ್ನ ತುಂಬಿಸಿಕೊಳ್ಳುತ್ತಿರುವಾಗ, ನಾವು ಸ್ವಲ್ಪ ಅವರ ಹಣವನ್ನು ನಮ್ಮೆಡೆಗೆ ಸೆಳೆಯುವುದರಲ್ಲಿ ತಪ್ಪು ಕಾಣಿಸ್ತಾ ಇದೆ! ಭಾರತವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ ಹೆಮ್ಮೆಯ ಕ್ಷೇತ್ರ ಇಂದು ದುರಹಂಕಾರದ ಗೂಡಿನಂತೆ ಕಾಣುತ್ತಿದೆ. ಸಮಸ್ಯೆಯೊಂದು ರೂಪುಗೊಳ್ಳಲು ಎಲ್ಲರೂ ಜೊತೆಗಿದ್ದರು. ಅದರ ಪರಿಣಾಮವನ್ನೆದುರಿಸುವಾಗ ಹೊಣೆಗೇಡಿತನ. ಸರ್ವಜ್ಞ ಸರಿಯಾಗೇ ಹೇಳಿದಾನೆ..

ಮಾಡಿದುದ ಒಪ್ಪದನ / ಮೂಡನಾಗಿಪ್ಪವನ /
ಕೂಡಿ ತಾ ಮಾಡಿ ಇದಿರಾಡಿಕೊಳ್ಳುವನ /
ನೋಡಿದರೆ ತೊಲಗು ಸರ್ವಜ್ಞ //

ಇಂದು ಐಟಿ ಕ್ಷೇತ್ರದ ವೃತ್ತಿ ಪರತೆ ಮತ್ತದರ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಪ್ರಶ್ನೆಗಳೆದ್ದಿವೆ, ಬೇರೆ ಯಾವ ಕ್ಷೇತ್ರಗಳಿಗೂ ಇವು ಅನ್ವಯಿಸುವುದಿಲ್ಲದಂತೆ??! ಇಂದು ಮಾಧ್ಯಮದವರೆಂದರೆ ಯಾವ ಚಿತ್ರ ಕಣ್ಣಿಗೆ ಬರುತ್ತದೆ? ಅವರ ಸಾಮಾಜಿಕ ಜವಾಬ್ದಾರಿ ಏನು? ಕಂಡದ್ದು ಕಾಣದ್ದು ಎಲ್ಲದಕ್ಕೂ ಮಸಾಲೆ ಸೇರಿಸಿ, ಜನರಿಗೆ ಬೇಕೋ ಬೇಡವೋ, ದೇಶದ, ಸಮಾಜದ ಹಿತರಕ್ಷಣೆಯ ದೃಷ್ಟಿಯಿಂದ ಒಳ್ಳೆಯದೋ, ಕೆಟ್ಟದ್ದೋ, ಕೇವಲ ತಮ್ಮ TRP ಗಳಿಗಾಗಿ, circulation ಗಳಿಗಾಗಿ ವರದಿ ಮಾಡುವ ವ್ಯಕ್ತಿಗಳೆಂದೇ? ಇಂದು ವೈದ್ಯ ವೃತ್ತಿ ಎತ್ತ ಸಾಗುತ್ತಿದೆ? ಹಣ ಕೊಡದಿದ್ದರೆ ಶವವೂ ಇಲ್ಲ, ಅಂತ್ಯಸಂಸ್ಕಾರವೂ ಇಲ್ಲ. ಹಣಕ್ಕಾಗಿ, ಸತ್ತವರನ್ನೂ ಬದುಕಿದ್ದಾರೆಂದು ಹೇಳಿ, ಕಾಲಿನುಗುರಿನಿಂದ ತಲೆಕೂದಲವರೆಗೆ ಎಲ್ಲ ರೀತಿಯ Tests ಗಳನ್ನೂ ಮಾಡಿ, ಕೊನೆಗೆ ದೇವರು ನಮ್ಮೊಂದಿಗಿಲ್ಲವೆಂದು ಹೇಳಿ, ದೊಡ್ಡ ಬಿಲ್ಲ್ ಒಂದನ್ನು ಕೈಗಿಡುತ್ತಾರೆ. ಇದರಲ್ಲೇನಿದೆ ವೃತ್ತಿಪರತೆ? ೩ ನ್ನು ೬ ಮಾಡಿ, ೬ ನ್ನು ೩ ಮಾಡಿ, ಕಳ್ಳಕಾಕರೆಲ್ಲ ಜೈಲಿನಿಂದಲೇ ಸ್ಪರ್ಧಿಸಿ ಗೆಲ್ಲುವಂತೆ ಮಾಡುವ ನ್ಯಾಯವೃತ್ತಿಯಲ್ಲೇನಿದೆ ವೃತ್ತಿಪರತೆ? ಯಾರಿಗಿದೆ ವೃತ್ತಿ ನಿಷ್ಠೆ? ಗಾಳಿ ಬಂದಾಗ ತೂರಿಕೋ. ಇದು ಐಟಿ ಕ್ಷೇತ್ರಕ್ಕೆ ಮಾತ್ರ ಮೀಸಲಾಗಿಲ್ಲ. ’ಮದ’ ದುಡ್ಡಿನದು ಸ್ವಾಮಿ, ವೃತ್ತಿಯದಲ್ಲ.

ಸಾಮಾಜಿಕ ಜವಾಬ್ದಾರಿಯೆನ್ನುವುದು ಒಂದು ವೃತ್ತಿಗೆ ಮೀಸಲೇ? ಇಂದು ಸಾಮಾಜಿಕ ವೃತ್ತಿಯಲ್ಲಿರುವವರಿಗೇ (ಆರಕ್ಷಕರು, ಮಾಧ್ಯಮಗಳು ಇತ್ಯಾದಿ) ಅವುಗಳ ಬಗ್ಗೆ ಅರಿವಿಲ್ಲದಿರುವಾಗ ಸಾಮಾನ್ಯ ’Salary Oriented’ ಗುಂಪಿನಿಂದ ಅದರ ನಿರೀಕ್ಷಣೆ ಎಷ್ಟು ಸರಿ. ಹಾಗೆಂದ ಮಾತ್ರಕ್ಕೆ ಅವರಿಗೆ ಇಲ್ಲವೆಂದಲ್ಲ. ತಪ್ಪುಗಳನ್ನೇನು ಯಾರು ಬೇಕಾದರೂ ಎತ್ತಾಡಬಹುದು. ಆದರೆ, ಒಂದು ಸಂಸ್ಥೆಯನ್ನು ಹುಟ್ಟು ಹಾಕಿ ಅದು ಜಾಗತಿಕ ಮಟ್ಟದಲ್ಲಿ ತನ್ನನ್ನು ಗುರುತಿಸಿಕೊಳ್ಳುವಂತೆ ಮಾಡಬೇಕಾದಲ್ಲಿ ಇರಬೇಕಾದ ಪರಿಶ್ರಮ, ಸಾಧನೆ, ಚಾಕಚಕ್ಯತೆ ಬಗ್ಗೆ ಅರಿಯದ ಅಜ್ಞಾನಿಗಳು ಮಾತ್ರ ಹೀಗೆ ಮೂಗೆಳೆಯಲು ಸಾಧ್ಯ. ಇನ್ನೊಮ್ಮೆ ಈ ಸಂಸ್ಥೆಗಳಿಂದ ಎಷ್ಟು ಶಾಲೆಗಳು ಎಷ್ಟು ಹಳ್ಳಿಗಳು ದತ್ತು ತೆಗೆದು ಕೊಳ್ಳಲ್ಪಟ್ಟಿವೆ, ಎಷ್ಟು ವಿದ್ಯಾರ್ಥಿಗಳು ಫಲ ಪಡೆದುಕೊಳ್ಳುತ್ತಿದ್ದಾರೆ, ಎಷ್ಟು ಜನ ಉದ್ಯೋಗಿಗಳು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ ಇವೆಲ್ಲದರ ವಿವರಗಳನ್ನು ತಿಳಿದುಕೊಳ್ಳಿ. ಇಂದು ಒಂದು ಕಂಪನಿ ಲಾಭ-ನಷ್ಟಗಳು ಎಲ್ಲರಿಗೂ ಗೊತ್ತಾಗುತ್ತದೆ, ಆದರೆ ಅದೇ ಸಂಸ್ಥೆಯ ಸಾಮಾಜಿಕ ಕಾರ್ಯಗಳು ಗೊತ್ತಾಗುವುದಿಲ್ಲ. ಕಾರಣ ಅವುಗಳನ್ನು ಪ್ರಚಾರದ ದೃಷ್ಟಿಯಿಂದ ಮಾಡಿರುವುದಿಲ್ಲ, ಜವಾಬ್ದಾರಿ ದೃಷ್ಟಿಯಿಂದ ಮಾಡಲಾಗಿರುತ್ತದೆ. ವಿಪರ್ಯಾಸವೆಂದರೆ, ಇಂದು ಸೇವೆಯೆ ವೃತ್ತಿಯಾಗಿರುವ ವೈದ್ಯವೃತ್ತಿಯಲ್ಲೇ ಗ್ರಾಮ ಸೇವೆಯನ್ನು ಕಡ್ಡಾಯಗೊಳಿಸಬೇಕಾಗಿದೆ.

ಸ್ವಾತಂತ್ರ್ಯ ಹೋರಾಟದ ಸಮಯವನ್ನೂ, ಇಂದಿನ ಪರಿಸ್ಥಿತಿಯನ್ನೂ ಮತ್ತು ಐಟಿ ಉದ್ಯೋಗಿಗಳನ್ನು ಹೋಲಿಸುತ್ತಿದ್ದೀರಿ. ಆದರೆ ಯಾವ ಅರ್ಥದಲ್ಲಿ ಎಂಬುದೇ ಅರ್ಥವಗಲಿಲ್ಲವಷ್ಟೆ. ಬೇರೆ ಯಾವುದಾದರೂ ಕ್ಷೇತ್ರದ ಉದಾಹರಣೆಯನ್ನು ಈ ನಿಟ್ಟಿನಲ್ಲಿ ತೋರಿಸಿದರೆ, ಅರಿತುಕೊಳ್ಳಬಹುದು. ಬೇರಾವ ಉದ್ಯಮ ಕ್ಷೇತ್ರದಿಂದ ’Social Empowerment’ ಆಗಿದೆ? ಎಷ್ಟು ಆಗಿದೆ?

ಇಂದು ಎಲ್ಲ ವ್ಯವಹಾರಗಳೂ ಕೂತಲ್ಲೇ ಆಗಬೇಕು, ಅದೂ ತಕ್ಷಣ. ಯಾರಿಗೂ ಎಲ್ಲಿಯೂ ಕ್ಯೂ ನಲ್ಲಿ ನಿಂತು ಕೆಲಸ ಮಾಡಿಕೊಳ್ಳುವಷ್ಟು ವ್ಯವಧಾನವಿಲ್ಲ. ಎಲ್ಲಕ್ಕೂ ಧಾವಂತ. ಇಂತದೊಂದು ಜೀವನದಲ್ಲಿ ಐಟಿ ಎನ್ನುವುದು ಹಾಸು ಹೊಕ್ಕಾಗಿದೆ. ಎಲ್ಲೋ ಕುಳಿತುಕೊಂಡು ಕಾಫಿ ಹೀರುತ್ತಾ, ಒಬಾಮ ನ ಭಾಷಣ ಕೇಳಿ, ಮಾರ್ಟಿನ್ ಲೂಥರ್ ಕಿಂಗ್ ಮಾತನಾಡಿದಂತೆ ಆಯಿತು ಎಂದು ಲೇಖನ ಬರಿಯುವಾಗ ಐಟಿ ಇತ್ತು. ಭಾರತದ ಮೂಲೆಯಲ್ಲಿರುವ ರೋಗಿಯೊಬ್ಬನಿಗೆ ಆಸ್ಟ್ರೇಲಿಯಾದ ವೈದ್ಯನೊಬ್ಬನ ನೆರವು ಸಿಗೋವಾಗ್ಲು ಐಟಿ ಇದೆ. ಸುಮ್ನೆ ಹೋಗೋ Long Drive ನಲ್ಲು ಐಟಿ ಇದೆ. Late ಅಗತ್ತೆ, Traffic ನಲ್ಲಿ ಸಿಕ್ಕಿ ಹಾಕೊಂಡಿದಿನಿ, ಅಂತ ಅಮ್ಮನಿಗೆ ಸಮಾಧಾನ ಹೇಳೋ ಮೊಬೈಲ್ ಫೋನ್ ನಲ್ಲು ಐಟಿ ಇದೆ. ಸುಮ್ನೆ ಯಾರಿಂದಲೋ ತಪ್ಪಿಸ್ಕೊಳ್ಳೊಕೆ ಊರಲ್ಲಿಲ್ಲ ಅಂತ ಸುಳ್ಳು ಹೇಳೊ ಮೊಬೈಲ್ ಫೋನ್ ನಲ್ಲು ಐಟಿ ಇದೆ. ಮೊದಲು ಐಟಿ ಕ್ಷೇತ್ರದ ಆಳ ವಿಸ್ತಾರಗಳನ್ನ ತಿಳಿದುಕೊಳ್ಳಿ. ನಂತರ ಜನ ಸಾಮಾನ್ಯರಿಗೆ ತಿಳಿಸಿ. ಒಂದು ಸಾಮಾಜಿಕ ಸ್ಥಾನದಲ್ಲಿರೊ ನಿಮ್ಮಂತವರಿಗೇ ಅದು ತಿಳಿದಿಲ್ಲವಾದಲ್ಲಿ, ಜನ ಸಾಮಾನ್ಯರಿಗೆ ತಿಳಿಯದೆ ಇರುವುದರಲ್ಲಿ ಆಶ್ಚರ್ಯವೇನಿಲ್ಲ.

ಇಂದು ಹಾಲುಮಾರುವವನ, Corporation ಕಸ ಗುಡಿಸುವವನ, ಮನೆಕೆಲಸ ಮಾಡುವವಳ ಮಕ್ಕಳೂ ಕೂಡ ನಿಷ್ಟೆಯಿಂದ ಓದಿ, ಆ ನಿಮ್ಮ 'Welfare Oriented' ಸರ್ಕಾರದ ಖಜಾಂಜಿಗಳ Personal ಬೊಕ್ಕಸಕ್ಕೆ ಹಣ ಸುರಿಯದೆ, ವಿದ್ಯೆ, ಯೋಗ್ಯತೆಯ ಆಧಾರದ ಮೇಲೆ ದೊರೆಯುವ ಐಟಿ ಕೆಲಸಗಳಿಂದ ಸ್ವಂತ ಕಾಲುಗಳ ಮೇಲೆ ನಿಂತಿದ್ದಾರೆ. ಇವರಿಗಿಂತಲೂ ಹಣದ ಬೆಲೆಯನ್ನು ಅರಿತವರು ಬೇಕಿಲ್ಲ. ಇಂದು ಐಟಿ ಕ್ಷೇತ್ರ ಮಾತ್ರವಲ್ಲ, ಎಲ್ಲವೂ ನಡೆಯುತ್ತಿರುವುದಲ್ಲ, ಓಡುತ್ತಿರುವುದು ಆ ಕುರುಡು ಕಾಂಚಾಣದೊಂದಿಗೇ. ಅದರ ’ಮೌಲ್ಯ’ವೇ ಕಳೆದು ಹೋಗಿದೆ.

ಲೇಖನದ ತುಂಬಾ ಆಪಾದನೆಗಳೇ ಕಾಣುತ್ತವೆಯೆ ಹೊರತು ಆಧಾರಗಳೇ ಸಿಗುವುದಿಲ್ಲ. ಯಾವ ಒಂದು ಹಂತದಲ್ಲೂ ಇನ್ನೊಂದು ದೃಷ್ಟಿಯಿಂದ ನೋಡಲಾಗಿಲ್ಲ. ಎಲ್ಲೆಡೆಯೂ ಎಲ್ಲವೂ ಸರಿಯಿರುವುದಿಲ್ಲ. ಸತ್ಯಮ್ ಎಂದು ಹೆಸರಿಟ್ಟುಕೊಂಡು ಮಾಡಿದ ದ್ರೋಹ ಕಣ್ಣಮುಂದಿದೆ. ಆದರೆ ಹುಳುಕುಗಳನ್ನು ಹೇಳುವುದರ ಜೊತೆಗೆ ಹೂವುಗಳನ್ನು ತೋರಿಸಬೇಕು. ಸಮಸ್ಯೆಯಿದೆ ಎಂದು ಹೇಳುವಾಗ ಪರಿಹಾರ ಕಂಡು ಕೊಳ್ಳುವ ಆಸಕ್ತಿ, ಚಿಂತನೆಯಿರಬೇಕು. ಇಂದು ವಿಜ್ಞಾನದಿಂದ ನಮಗೆ ಸಾಧಕ ಭಾದಕಗಳೆರಡೂ ಇವೆ. ಬಾಂಬ್ ಕೂಡ ತಯಾರಿಸಬಹುದು, ಬೆಣ್ಣೆಯನ್ನೂ ಸಹ. ಹಾಗಾದರೆ ವಿಜ್ಞಾನವೇ ತಪ್ಪೆನ್ನುವುದು ಎಷ್ಟು ಸರಿ? ಹಾಲು, ನೀರಾ ಒಂದೇ ಎನ್ನುವುದೆಷ್ಟು ಸರಿ?

ಲೇಖನದಲ್ಲಿ ಹೇಳಿರುವುದು ಬಹುಪಾಲು ಮಂದಿಗೆ. ನೀವೇಕೆ Personal ಆಗಿ ತಗೋಳ್ತೀರಿ ಎಂದು ನುಣುಚಿಕೊಳ್ಳಬಹುದು. ಬೆತ್ತಲೆ ಜಗತ್ತು ಎಂಬ ಶೀರ್ಷಿಕೆಯಡಿ ನೀವು ಬರೆಯುವುದು ನಗ್ನ ಸತ್ಯವೆಂದು ನಂಬುವವರಿದ್ದಾರೆ. ಅನ್ನವಾಗಿದೆಯೇ ಎಂದು ಒಂದು ಅಗಳು ನೋಡಿದರೆ ಸಾಕು ಎನ್ನುವ ಅತಿ ’ವಿವೇಚನೆ’ಯಿಂದ, ಯಾವ ಅಭಿಪ್ರಾಯ ಇಲ್ಲದವರೂ ನಿಮ್ಮ ಅಭಿಪ್ರಾಯವನ್ನೇ ರೂಪಿಸಿಕೊಳ್ಳುವ ಸಾಧ್ಯತೆ ಇದೆ. Cooling Glass ಹಾಕಿಕೊಂಡು ನೋಡಿ ಹಗಲನ್ನೇ ಕತ್ತಲೆಂದು ಬರೆಯುವುದು ನಗ್ನ ಸತ್ಯವಾಗುವುದಿಲ್ಲ. ಸರಿ ತಪ್ಪುಗಳ ಪೂರ್ಣ ವಿಮರ್ಶೆಯಿರಬೇಕಲ್ಲವೇ? ವೃತ್ತಿಯೊಂದರ ಬಗ್ಗೆ ಬರೆಯುವಾಗ, ’ಬಹುಪಾಲು’ ಅನ್ನುವುದನ್ನು ಸಮರ್ಥಿಸುವಂತೆ, ಎಲ್ಲ ಮಜಲುಗಳನ್ನು ವಿಮರ್ಶಿಸಿ.

ನಮಗೆ ಕಂಡದ್ದು ಮಾತ್ರ ಸತ್ಯವಲ್ಲ ಅಲ್ಲವೇ? ಇದು ನಮ್ಮ ಕ್ಷೇತ್ರ ಎಂಬ ಹೆಮ್ಮೆ ಎಲ್ಲರಿಗೂ ಇರುತ್ತದೆ. ಆದರೆ ಅದು ಕುರುಡು ಹಮ್ಮಾಗಬಾರದಷ್ಟೆ. ಟೀಕೆಯನ್ನು ಸಹಿಸಿಕೊಳ್ಳುವ ಅಥವಾ ತಿರಸ್ಕರಿಸುವ ಪ್ರಶ್ನೆಯಲ್ಲವಿದು. ಬರೆದಿರುವುದು ಎಷ್ಟು ಸರಿ ಎಷ್ಟು ತಪ್ಪು ಎನ್ನುವ ವಿಮರ್ಶೆಯಷ್ಟೆ. ಯಾವುದೇ ವೃತ್ತಿಯಾಗಿರಬಹುದು, ಉದಾಹರಣೆಗೆ ಸಂಗೀತ ಲೋಕದ ಬಗ್ಗೆ ಅದರ ಹೊರಗಿರುವವರ ಅರಿವೂ, ಅದರ ಒಳಗಿರುವವರ ಅರಿವೂ ಬೇರೆ ಬೇರೆಯಾಗಿರುತ್ತದೆ. ಹಾಗಾಗಿ, ಅದರ ಬಗ್ಗೆ ತಪ್ಪು ಅಭಿಪ್ರಾಯಗಳು ವ್ಯಕ್ತವಾದಾಗ ಅದನ್ನು ತಿದ್ದುವುದು ಅವರ ಹೊಣೆಯಾಗಿರುತ್ತದೆ. ನಾವೂ ಸಹ ಕೊರತೆಯನ್ನು ತುಂಬುತ್ತಿದ್ದೇವೆಯಷ್ಟೆ. ಒಂದು ವಿಷಯದ ಬಗ್ಗೆ ಇನ್ನಷ್ಟು ಸತ್ಯಗಳನ್ನು ತಿಳಿದುಕೊಳ್ಳುವ ವಿಶಾಲ ಮನಸ್ಸು ನಿಮ್ಮದಾಗಲಿ.

Wednesday, February 11, 2009

ಪ್ರೀತಿಯೆಂದರೇನು?


ತಾಯಿಯ ಮಮತೆ
ತಂದೆಯ ವಾತ್ಸಲ್ಯ
ಗುರುವಿನ ಕಕ್ಕುಲತೆ
ಹಿರಿಯರ ಹಾರೈಕೆ
ಕಿರಿಯರ ವಾಂಛಲ್ಯ
ಸಖನ ಪ್ರೇಮ
ಎಲ್ಲವೂ ಪ್ರೀತಿಯ ರೀತಿಗಳಾದರೆ
ಪ್ರೀತಿಯೆಂದರೇನು?

ಹೆತ್ತವರಿಗೆ ಗೌರವ
ಗುರುಗಳಿಗೆ ಭಕ್ತಿ
ಹಿರಿಯರಿಗೆ ಮರ್ಯಾದೆ
ಕಿರಿಯರಿಗೆ ಅಕ್ಕರೆ
ಗೆಳೆಯರಿಗೆ ಸ್ನೇಹ
ಪ್ರಿಯಕರನಿಗೊಲವು
ಎಲ್ಲವೂ ಪ್ರೀತಿಯ ಅಭಿವ್ಯಕ್ತಿಗಳಾದರೆ
ಪ್ರೀತಿಯೆಂದರೇನು?

ಕರುಳಿನ ಕರೆ
ಎದೆಯ ತುಡಿತ
ಮನಸಿನ ಆನಂದ
ಹೃದಯದ ಮಿಡಿತ
ಕಣ್ಣಿನ ಮಿಂಚು
ತುಟಿಯ ಮುಗುಳ್ನಗು
ಎಲ್ಲವೂ ಪ್ರೀತಿಯ ಮುಖಗಳಾದರೆ
ಪ್ರೀತಿಯೆಂದರೇನು?

-ವಿನುತ

Sunday, February 08, 2009

ಯತ್ರ ನಾರ್ಯಸ್ತು ಪೂಜ್ಯಂತೆ....


ಇತ್ತೀಚಿನ ಎಲ್ಲ ಘಟನಾವಳಿಗಳು - ಸ್ಲಮ್ ಡಾಗ್ ನ ಭಾರತ, ಮಂಗಳೂರಿನ ಪಬ್ ಧಾಳಿ ಪ್ರಕರಣ, 'ಪಬ್ ಭರೋ' ಹೇಳಿಕೆ... ಅಬ್ಬಬ್ಬಾ! ಎಲ್ಲಿದ್ದೇವೆ ನಾವು? ಎತ್ತ ಸಾಗುತ್ತಿದ್ದೇವೆ? ಈ ಎಲ್ಲ ಘಟನೆಗಳು ಏನನ್ನು ಸಾಧಿಸಿದವೋ ಗೊತ್ತಿಲ್ಲ, ಆದರೆ ಮಾಧ್ಯಮಗಳ ನೈತಿಕತೆ, ಸ್ತ್ರೀ ಹಕ್ಕು ಮತ್ತು ಸ್ವಾತಂತ್ರ್ಯ ಮತ್ತು ಸಂಸ್ಕೃತಿಯ ಸಂರಕ್ಷಣೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿರುವುದಂತೂ ನಿಜ.

ಈ ಎಲ್ಲ ಘಟನೆಗಳ ನಡುವೆ ಇನ್ನೂ ಕೆಲವು ಘಟನೆಗಳಿದ್ದವು, ಇವೆ, ಮುಂದೆಯೂ ಇರುತ್ತವೆ. ಅಮಾಯಕ ಬಾಲಕಿಯರ ಅತ್ಯಾಚಾರ, ಬೆತ್ತಲೆ ಮೆರವಣಿಗೆ, ಅಪ್ರಾಪ್ತ ವಯಸ್ಸಿನ ವಿವಾಹಗಳು, ವರದಕ್ಷಿಣೆ ಸಾವುಗಳು, ಹೆಣ್ಣು ಭ್ರೂಣ ಹತ್ಯೆ, ಕುಡುಕ ಗಂಡನ ಶೋಷಣೆ, ಆಸಿಡ್ ದಾಳಿಗಳು, ಅವಿದ್ಯಾವಂತರ ದೈಹಿಕ ಶೋಷಣೆಯಾದರೆ, ವಿದ್ಯಾವಂತರ ಮಾನಸಿಕ ಕಿರುಕುಳಗಳು.... ಈ ಪಟ್ಟಿಗೆ ಕೊನೆಯುಂಟೇ? ಇವು ನಮ್ಮ ನಿತ್ಯ ಕರ್ಮಗಳು. ದೈನಂದಿನ ಜೀವನದ ಆಗುಹೋಗುಗಳು. ಹಾಗಾಗಿ ಇವು ಎಂದಿಗೂ ಮಾಧ್ಯಮೀಕರಣವಾಗುವ, ಇವುಗಳ ವಿರುದ್ಧ ಹೋರಾಡುವಷ್ಟು ದೊಡ್ಡ ಘಟನೆಗಳಲ್ಲ. ಇವು ಎಂದಿಗೂ 'Head Lines' ಅಥವಾ 'Breaking News' ಅಥವಾ 'Hot News' ಗಳಾಗಲಾರವು. ಚಿಂತಕರ ಚಾವಡಿಯ ಚರ್ಚೆಗಳಾಗಲಾರವು. ಸಂಸ್ಕೃತಿಯ ಸಂರಕ್ಷಕರ ಜವಾಬ್ದಾರಿಗಳಾಗಲಾರವು. ನ್ಯಾಯ ರಕ್ಷಕರ ನೈತಿಕ ಹೊಣೆಗಳಾಗಲಾರವು. ಮಹಿಳಾ ಸಬಲೀಕರಣದ ಕಾರ್ಯೋದ್ದೇಶಗಳಾಗಲಾರವು.

ಸಂಸ್ಕೃತಿಯ ಸಂರಕ್ಷಕರೆಂಬ ಪಡೆಯೊಂದು ಹಾಡು ಹಗಲಿನಲ್ಲೇ ಯುವತಿಯರ ಮೇಲೆ ಹಲ್ಲೆ ನಡೆಸಿತಲ್ಲಾ, ಇದು ಸಂಸ್ಕೃತಿಯೇ?

ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾ:ಯತ್ರೈತಾಸ್ತು ನ ಪೂಜ್ಯಂತೆ ಸರ್ವಾಸ್ತತ್ರಾಫಲಾ: ಕ್ರಿಯಾ: //
(ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಸಂತುಷ್ಟರಾಗಿರುತ್ತಾರೆ. ಸ್ತ್ರೀಯರನ್ನೆಲ್ಲಿ ಅವಮಾನಗೊಳಿಸಲಾಗುತ್ತದೋ ಅಲ್ಲಿ ಮಾಡಿದ ಕಾರ್ಯಗಳೆಲ್ಲವೂ ವ್ಯರ್ಥ)

ಶೋಚಂತಿ ಜಾಮಯೋ ಯತ್ರ ವಿನಶ್ಯತ್ಯಾಶು ತತ್ಕುಲಮ್ನ ಶೋಚಂತಿ ತು ಯತ್ರೈತಾ ವೃಧ್ಧತೇ ತದ್ಧಿ ಸರ್ವದಾ //
(ಮನೆಯೊಂದರಲ್ಲಿ ಮಗಳು, ಸೊಸೆ, ಅಕ್ಕತಂಗಿಯರು ಮತ್ತಿತರ ಸ್ತ್ರೀಯರು ನರಳಿದಲ್ಲಿ, ಖಂಡಿತವಾಗಿಯು ಆ ಮನೆ ನಾಶವಾಗುತ್ತದೆ. ಸಂತೋಷವಾಗಿದ್ದಲ್ಲಿ, ಸುಖ, ಸಂಪತ್ತು ವರ್ಧಿಸುತ್ತದೆ)

ಜಾಮಯೋ ಯಾತಿ ಮೋಹಾನಿ ಸಂಪತ್ಯ ಪ್ರತಿಪೂಜಿತಾ:ತಾತಿ ಕೃತ್ಯಾಹತಾನೀವ ವಿನಶ್ಯಂತಿ ಸಮನ್ವತ: //
(ಯಾವ ಮನೆಯಲ್ಲಿ ಹೆಂಡತಿ, ಮಗಳು, ಅಕ್ಕತಂಗಿಯರು, ಸೊಸೆಯಂದಿರು ಗೌರವಿಸಲ್ಪಡುವುದಿಲ್ಲವೋ, ಅವಮರ್ಯಾದೆಗೊಳಗಾಗುತ್ತಾರೋ ಆ ಮನೆ ಖಂಡಿತವಾಗಿಯು ನಾಶವಾಗುತ್ತದೆ)

'ಅತಿಥಿ ದೇವೋ ಭವ' ಎಂದು ನಂಬಿದ್ದರೂ, ಎಲ್ಲರಿಗಿಂತ ಮೊದಲು ಅತಿಥಿಗಳನ್ನು ಸತ್ಕರಿಸುತ್ತಿದ್ದರೂ,
ಸುವಾಸಿನೀ: ಕುಮಾರಂಶ್ಚ ರೋಗಿಣೋ ಗರ್ಭಿಣೀ: ಸ್ತ್ರೀಯ:ಅತಿಥಿಭ್ಯೋಗ್ರ ಎವೈತಾನ್ ಭೊಜಯೇದವಿಚಾರಯನ್ //
(ಸುವಾಸಿನಿಯರೂ, ಕುಮಾರಿಯರೂ, ಗರ್ಭಿಣಿ ಸ್ತ್ರೀಯರು, ಇವರೇ ಮೊದಲಾದ ಸ್ತ್ರೀಯರು ಅತಿಥಿಗಳಿಗೂ ಮೊದಲು ಸತ್ಕರಿಸಲ್ಪಡಬೇಕು)

ಇನ್ನು ತಾಯಿಯ ಪಾತ್ರದ ಬಗ್ಗೆ ಹೇಳುವುದೇನಿದೆ?
ಉಪಾಧ್ಯಾಯಾಂದಶಾಚಾರ್ಯ ಆಚಾರ್ಯಾಣಮ್ ಶತ೦ ಪಿತಾಸಹಸ್ತ್ರ೦ ತು ಪಿತೃನ್ಮಾತಾ ಗೌರವೀನಾತಿರಿಚ್ಯತೀ//
(ಗುರುವುಗಿಂತ ಆಚಾರ್ಯರೂ, ಆಚಾರ್ಯರಿಗಿಂತ ತಂದೆಯು, ಎಲ್ಲರಿಗಿಂತ ಹೆಚ್ಚಾಗಿ ತಾಯಿಯು ಪೂಜನೀಯವಾಗಿರುತ್ತಾರೆ)

ಶಿವಾಜಿಯ ಕಥೆಯೊಂದಿದೆ: ಒಮ್ಮೆ ಶಿವಾಜಿ ಕಲ್ಯಾಣಪ್ರಾಂತ್ಯವನ್ನು ಗೆದ್ದು ಅಪಾರ ಸಂಪತ್ತನ್ನು ಸಂಪಾದಿಸಿರುತ್ತಾರೆ. ಆಭಾಜಿಪಂಥ್, ಯುದ್ಧವನ್ನು ಗೆದ್ದ ಸೇನಾಪತಿ, ಸುಂದರ ಸ್ತ್ರೀಯೊಬ್ಬಳು ದೊರಕಿದ್ದಾಳೆ, ಅವಳನ್ನೂ ಮಹರಾಜರಿಗೆ ಸಮರ್ಪಿಸುತ್ತಿದ್ದೇನೆ ಎನ್ನುತ್ತಾನೆ. ಆಕೆ ಯುಧ್ಧದಲ್ಲಿ ಸೋತಿದ್ದ ಮುಘಲ್ ಸುಬೇದಾರನ ಕುಟುಂಬದ ಹೆಣ್ಣುಮಗಳು. ಅದಕ್ಕೆ ಶಿವಾಜಿ, 'ಆಕೆ ತುಂಬಾ ಸುಂದರವಾಗಿದ್ದಾಳೆಂದು ಹೇಳುತ್ತಿದ್ದೀಯೆ. ಆಕೆ ನನ್ನ ತಾಯಿಯ ಸಮಾನ. ನಾನಾಕೆಯನ್ನು ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ. ಎಲ್ಲಕ್ಕಿಂತ ಹೆಚ್ಚಾಗಿ ಸ್ತ್ರೀರಕ್ಷಣೆ ರಾಜಧರ್ಮ' ಎಂದು ಹೇಳಿ, ಸಕಲ ಗೌರವ ಮರ್ಯಾದೆಗಳೊಂದಿಗೆ ಹಿಂತಿರುಗಿಸುತ್ತಾನೆ. ಆಗ ಸುಬೇದಾರನಿಗೆ ಹೆಣ್ಣಿಗೆ ಈ ಮಣ್ಣಿನಲ್ಲಿ ಕೊಡುವ ಮರ್ಯಾದೆಯ ಅರಿವಾಗುತ್ತದೆ.

ನಿನ್ನ ಹೆಂಡತಿಯನ್ನು ಹೊರತು ಪಡಿಸಿ ಮಿಕ್ಕೆಲ್ಲ ಸ್ತ್ರೀಯರು ನಿನಗೆ ಪರಸ್ತ್ರೀಯರು. ಅವರನ್ನು ನಿನ್ನ ತಾಯಿಯರಂತೆಯು, ಅಕ್ಕ ತಂಗಿಯರಂತೆಯೂ ಕಾಣು ಎಂದಿದ್ದಾರೆ ಹಿರಿಯರು.

ಬಹುಶ: ನಮ್ಮ ಸಂಸ್ಕೃತಿಯ ಬಗ್ಗೆ ನಾವೇ ಹೇಳುವುದು ರುಚಿಸದಿದ್ದಲ್ಲಿ, ಪಾಶ್ಚಿಮಾತ್ಯ Kerry Brown ತನ್ನ 'The Essential Teachings of Hinduism' ಎಂಬ ಪುಸ್ತಕದಲ್ಲಿ ಹೇಳುತ್ತಾನೆ - "In Hinduism a woman is looked after not because she is inferior or incapable but, on the contrary, because she is treasured. She is the pride and power of the society. Just as the crown jewels should not be left unguarded, neither should a woman be left unprotected. No extra burden of earning a living should be placed on women who already bear huge responsibilities in society; childbirth; child care, domestic well being and spiritual growth. She is the transmitter of culture to her children."

ಇದು ನಮ್ಮ ಸಂಸ್ಕೃತಿ. ಇನ್ನಾದರೂ ಸಂಸ್ಕೃತಿಯ ಹೆಸರಿನಲ್ಲಿ ಅದನ್ನು ಅನೀತಿಗೊಳಿಸುವ ಕಾರ್ಯಗಳು ನಿಲ್ಲಲಿ. ಗುಂಪೊಂದರ ಉದ್ದೇಶ ಮಾತ್ರ ಸರಿಯಿದ್ದರೆ ಸಾಲದು. ಅದನ್ನು ಕಾರ್ಯಗತಗೊಳಿಸುವ ಮಾರ್ಗವೂ ಸರಿಯಿರಬೇಕು.

ಮಂಗಳೂರಿನ ಪಬ್ ವೊಂದರಲ್ಲಿ ಯುವತಿಯೊಬ್ಬಳನ್ನು ಹೊಡೆದಾಕ್ಷಣ, ದೇಶಾದ್ಯಂತ ಮಲಗಿದ್ದ ಸಿಂಹಿಣಿಯರೆಲ್ಲರೂ ಎದ್ದು ಘರ್ಜಿಸುತ್ತಿದ್ದಾರೆ. ಮಹಿಳಾ ಸ್ವಾತಂತ್ರ್ಯ, ಹಕ್ಕುಗಳ ಬಗ್ಗೆ, ನೈತಿಕತೆಯ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಅವರದೇ ಮನೆಗಳಲ್ಲಿ ಕೆಲಸದ ಹೆಣ್ಣು ಮಕ್ಕಳನ್ನು ಅವರೂ, ಅವರ ಮಕ್ಕಳೂ ನಡೆಸಿಕೊಳ್ಳುವ ರೀತಿ/ಅನೀತಿಗಳನ್ನು ಪ್ರಶ್ನಿಸುವವರು ಯಾರು? ಗಂಡಸರು ಕುಡಿಯುತ್ತಾರೆ, ಕುಣಿಯುತ್ತಾರೆ, ಪಬ್ ಗಳಿಗೆ ಹೋಗುತ್ತಾರೆ.ಧೂಮಪಾನ, ಅತ್ಯಾಚಾರಗಳನ್ನು ಮಾಡುತ್ತಿದ್ದಾರೆ. ನಾವು ಅವರಿಗೇನು ಕಮ್ಮಿ? ನಾವೂ ಮಾಡುತ್ತೇವೆ ಎಂದು ಬೊಬ್ಬಿಡುತ್ತಿದ್ದಾರೆ. ಇದು ಸಮಾನತೆ, ಹಕ್ಕು ಮತ್ತು ಸಂಸ್ಕ್ರತಿ!!! ಮೊನ್ನೆ ತಾನೇ ಜೈಪುರದಲ್ಲಿ ೧೮ ತಿಂಗಳ ಹೆಣ್ಣು ಮಗುವೊಂದರ ಮೇಲೆ ಅತ್ಯಾಚಾರ ನಡೆಯಿತು. ಕೇಳಲೂ ಅಸಹ್ಯ ಹುಟ್ಟಿಸುವಂತಹ ಸುದ್ದಿ. ಎಲ್ಲಿ ಹೋಗಿದ್ದರು ಮಹಿಳಾವಾದದ ಕಾರ್ಯಕರ್ತರು? ಬಹುಶ: ಪಬ್ ನಲ್ಲಿ ಕುಳಿತು ತಮ್ಮ ಸಮಾನತೆ, ಸ್ವಾತಂತ್ರ್ಯದ ಪ್ರದರ್ಶನ ಮಾಡುತ್ತಿದ್ದರೆಂದು ತೋರುತ್ತದೆ. ಮಾನ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ 'ಪಬ್ ಭರೋ' ಎಂದು ಕರೆಯಿತ್ತಿದ್ದಾರೆ. ಒಂದು ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಆಡುವ ನುಡಿಗಳೇ ಇವು? ಈ ರೀತಿಯ ಹೇಳಿಕೆಗಳಿಂದ ಇವರು ತಮ್ಮದಿರಲಿ (ಅವರಿಗಿಲ್ಲ ಎಂಬುದು ತಿಳಿದಿರುವ ವಿಚಾರ) ಸಭ್ಯ ನಾಗರೀಕರ ನಡಾವಳಿಗಳ ವಧೆ ಮಾಡುತ್ತಿದ್ದಾರೆ. 'ಏಳಿ, ಎದ್ದೇಳಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ' ಎಂದು ಯುವಜನತೆಯನ್ನು ಸರಿದಾರಿಯತ್ತ ಕೊಂಡೊಯ್ದ ವಿವೇಕಾನಂದರಂತಹ ಉದ್ಘೋಷಗಳ ಜರೂರತ್ತಿನ ಸಮಯದಲ್ಲಿ, 'ಬನ್ನಿ, ಕುಡಿದು, ಕುಪ್ಪಳಿಸಿ, ಪಬ್ ಗಳನ್ನು ತುಂಬಿಸಿ' ಎಂಬ ಹೇಳಿಕೆಗಳು..'ಮಾಡು ಇಲ್ಲವೇ ಮಡಿ' ಎಂಬ ಧೋರಣೆಗಳಿಂದ ಗಳಿಸಿದ ಸ್ವಾತಂತ್ರ್ಯದ ಬಳಕೆ ಈ ರೀತಿಯಲ್ಲಿ... ಸಾಮಾಜಿಕ ದುರಂತವೆಂದರೆ ಇದೇ ಅಲ್ಲವೇ? ಪು.ತಿ.ನ ರವರ ಮಾತೊಂದು ಪ್ರಸ್ತುತವಾಗುತ್ತದೆ..
ನುಡಿಯೊಳು ಹೊಳೆವುದು ನಾಡಿನ ನಡವಳಿ
ನುಡಿಯೊಳು ಕ೦ಪಿಡುವುದು ಬದುಕು
ನುಡಿಯಿರದವನಿಗೆ ಇಲ್ಲವು ನಾಡೂ
ನುಡಿಯಲಿ ಸಲ್ಲನದಾವುದಕೂ //

ಈ ಎಲ್ಲ ಘಟನೆಗಳನ್ನು ಅವಲೋಕಿಸಿದಾಗ ಮೊಡಿದ ಕೆಲವು ಪ್ರಶ್ನೆಗಳು. ಯುವತಿಯರೇ ನಿಮ್ಮನ್ನು ಹೊಡೆಯುವಾಗ ನೀವು ನಂಬಿಕೊಂಡು ಬಂದಿದ್ದ ನಿಮ್ಮ 'ಬಾಯ್' ಫ್ರೆಂಡ್ಸ್ ಎಲ್ಲಿ ಹೋಗಿದ್ದರು? ತಪ್ಪಿಸುವ ಪ್ರಯತ್ನವನ್ನೂ ಮಾಡಲಾಗುತ್ತಿರಲಿಲ್ಲವೇ? ನಿಮಗೆ ಆಧುನಿಕತೆಯ ಹೆಸರಿನಲ್ಲಿ ಜೀನ್ಸ್ ಧರಿಸಿ, ಸ್ವಾತಂತ್ರ್ಯದ ಹೆಸರಿನಲ್ಲಿ ಪಬ್ ಗೆ ಹೋಗಲು ತಿಳಿದಿರುವಾಗ, ಯಾರೋ ಮೂರನೆಯ ವ್ಯಕ್ತಿ ಹೊಡೆಯುತಿರುವಾಗ ಎಲ್ಲಿ ಹೋಗಿತ್ತು ನಿಮ್ಮ ಆವೇಶ? ತಿರುಗಿ ಬಾರಿಸಬಾರದಾಗಿತ್ತೆ? ಎಲ್ಲಿ ಹೋಗಿತ್ತು ಸಮಾನತೆ? ಹಾಗೆ ಮಾಡಿದ್ದಲ್ಲಿ, ಅದೂ ಕೂಡ ಮಾಧ್ಯಮೀಕರಣವಾಗಿ, ನಿಮ್ಮ ಮಹಿಳಾ ಸ್ವಾತಂತ್ರ್ಯದ ಚಳುವಳಿಗೆ ಹೊಸ ಆಯಾಮವೊಂದು ಸಿಗುತ್ತಿರಲಿಲ್ಲವೇ? ನಿಮ್ಮ ರಕ್ಷಣೆ ನಿಮ್ಮ ಹೊಣೆ, ಬೇರೆಯವರನ್ನೇಕೆ ಆಧರಿಸಿರುವಿರಿ?

ಇನ್ನಾದರೂ, ಮುಳ್ಳು ಸೀರೆಯ ಮೇಲೆ ಬಿದ್ದರೂ, ಸೀರೆ ಮುಳ್ಳಿನ ಮೇಲೆ ಬಿದ್ದರೂ ಹರಿಯುವುದು ಸೀರೆಯೇ ಎಂಬುದರ ಅರಿವು ನಮಗಾಗಲಿ. ಯಾರದೋ ಹೇಳಿಕೆ ಮಾತಿಗೆ ಮರುಳಾಗಿ ನಮ್ಮತನದ ಬಲಿ ನಿಲ್ಲಲಿ. ಸರಿ/ತಪ್ಪುಗಳ ಅರಿತು ನಡೆಯೋಣ. ಸ್ವಾಭಿಮಾನಿಗಳಾಗೋಣ. ಸ್ವಂತದೊಂದು Identity, ಅಸ್ತಿತ್ವವನ್ನು ಬೆಳೆಸಿಕೊಳ್ಳೋಣ. ಸಮಾನತೆಯ ಹೆಸರಿನಲ್ಲಿ, ಆಧುನಿಕತೆಯ ಸೋಗಿನಲ್ಲಿ ಕಣ್ಣಿಗೆ ಕಟ್ಟಿರುವ ಪೊರೆ ತೆಗೆಯೋಣ. ಸಮಾನತೆಯ ಕೂಗು ಬಾರ್, ಪಬ್ ಗಳಿಗೆ ಹೋಗಿ ಕುಡಿದು ಕುಣಿಯುವುದರ ಬದಲಾಗಿ, ಶಾಂತಿ, ನೆಮ್ಮದಿಯುಳ್ಳ ಸುಂದರ ಸಮಾಜದ ಬೆಳವಣಿಗೆಯತ್ತ ಸಾಗಲಿ. ನಮಗೆ ದೊರೆತಿರುವ ವಿದ್ಯೆಯ ಸದುಪಯೋಗವಾಗಲಿ. ಸ್ತ್ರೀ ಎನ್ನುವುದು ಕೇವಲ ಭೋಗದ ವಸ್ತುವಲ್ಲ. ಸೂತ್ರದ ಬೊಂಬೆಯಲ್ಲ. ಸ್ತ್ರೀ ಎನ್ನುವುದೊಂದು ಶಕ್ತಿ. ಇದು ಕೇವಲ ಪುರಾಣ, ಇತಿಹಾಸಗಳು, ಕಥೆ ಕವನಗಳಲ್ಲಿರದೆ ನಮ್ಮ ಕೃತಿಗಳಲ್ಲಿರಲಿ. ಯಾರಾದರು ಕೇವಲ ಹೆಣ್ಣು ಎನ್ನುವ ಕಾರಣಕ್ಕೆ ಬೆಲೆ ಕೊಡುವುದರ ಬದಲಾಗಿ ನಮ್ಮ ವ್ಯಕ್ತಿತ್ವಕ್ಕೆ ಬೆಲೆ ಕೊಡುವಂತಾಗಲಿ. ಕರ್ತವ್ಯಗಳನ್ನು ನಿರ್ವಹಿಸಿ ಹಕ್ಕುಗಳಿಗಾಗಿ ಹೋರಾಡೋಣ.

ಆಹಾ ಪುರುಷಸಿಂಹಗಳೇ (ದೈಹಿಕ ಸಾಮರ್ಥ್ಯದಲ್ಲಿ ನಿಮಗಿಂತ ಸ್ವಲ್ಪ ಕೆಳಸ್ತರದಲ್ಲಿದ್ದಾಳೆ ಎನ್ನುವ ಒಂದೇ ಕಾರಣಕ್ಕೆ) ಅಬಲೆಯರ ಮೇಲಿನ ದೌರ್ಜನ್ಯಕ್ಕೆ ಮೀಸಲಾಗಿರುವ ನಿಮ್ಮ ಸಶಕ್ತಿ ಮತ್ತು ಕುಯುಕ್ತಿಯನ್ನು ಇನ್ನೂ ಉತ್ತಮ ಕಾರ್ಯಗಳಿಗೆ ಬಳಸಿ. ಬೀchiಯವರು ತಮ್ಮ 'ಹುಚ್ಚು-ಹುರುಳು' ಕೃತಿಯಲ್ಲಿ 'ಹೆಂಡತಿಯನ್ನು ಯಾವಾಗ ಹೊಡೆಯಬೇಕು?' ಎಂಬ ಪ್ರಶ್ನೆಯೊಂದನ್ನು ರೂಪಿಸಿ ಬಹಳ ಚೆನ್ನಾಗಿ ವಿಡಂಬನೆ ಮಾಡಿದ್ದಾರೆ. (ಕೆಲ ತುಣುಕು - ಬಜಾರದಲಿ ಬೆಲ್ಲ ದೊರೆಯದಿದ್ದರೆ, ಆಫೀಸಿನಲ್ಲಿ ಆಟ ಸಾಗದಿದ್ದರೆ, ಮಲಗಿದಾಗ ತಿಗಣೆ ಕಡಿದರೆ, ಮಗನು ಶಾಲೆಯಲ್ಲಿ ನಪಾಸಾದರೆ, ಮಳೆಯಾಗಿ ರಸ್ತೆ ಕೆಸರಾದರೆ, ಸಾಲಕೊಟ್ಟವರು ಕಾಟ ಕೊಟ್ಟರೆ, ತನ್ನ ಲೇಖನವನ್ನು ಸಂಪಾದಕರು ಸ್ವೀಕರಿಸಿ ಹಣ ಕಳಿಸದಿದ್ದರೆ, ಗಂಡನೆಂಬ ಸಾಧು ಪ್ರಾಣಿಯು ತನ್ನ ಹೆಂಡತಿಯನ್ನಲ್ಲದೇ ಬೇರಾರನ್ನು ಹೊಡೆಯಲು ಸಾಧ್ಯ? ಯಾರೂ ನಿಷ್ಕಾರಣವಾಗಿ ಹೊಡೆಯುವುದಿಲ್ಲ. ತಾನು ಅವಳ ಗಂಡನೆಂಬುದೇ ಮೊದಲ ಕಾರಣ!) ಶೋಷಣೆಯೆಂಬುದು ದೈಹಿಕ ಹಿಂಸೆಗೆ ಸೀಮಿತವಲ್ಲ. ಮಾನಸಿಕ ಪ್ರಹಾರವೂ ಶೋಷಣೆಯ ಒಂದು ರೂಪವೇ. ಕೆಲವೊಮ್ಮೆ ಅಭಿವ್ಯಕ್ತವಾಗುವುದಿಲ್ಲ, ಆಲೋಚನೆಗಳಲ್ಲಿರುತ್ತದೆ. ತೆರೆ ಮರೆಯ ಕೃತಿಗಳಲ್ಲಿರುತ್ತದೆ. ನೀವು ಮಹಿಳೆಯರನ್ನು ಸಂರಕ್ಷಿಸುವ ಅಗತ್ಯವಿಲ್ಲ, ರಕ್ಷಣೆಗಾಗಿ ಪರದಾಡುವಂತೆ ಮಾಡದಿದ್ದರೇ ಅದೇ ದೊಡ್ಡ ಸಂರಕ್ಷಣೆ. ಒಳಿತನ್ನು ಮಾಡಲಾಗದಿದ್ದರೆ, ಕೆಡುಕನ್ನಂತೂ ಮಾಡಬೇಡಿ.

ಗಂಡು ಹೆಣ್ಣುಗಳು ಪ್ರತಿಸ್ಪರ್ಧಿಗಳಲ್ಲ. ಸಮಾನತೆಯೆನ್ನುವುದು ಮಾಡುವ ಕೆಲಸಗಳಲ್ಲಿಲ್ಲ. ನಮ್ಮ ವಿವೇಚನೆಯಲ್ಲಿದೆ, ಆಲೋಚನೆಗಳಲ್ಲಿದೆ. ಪುರುಷ - ಪುರುಷರಲ್ಲೇ, ಸ್ತ್ರೀ-ಸ್ತ್ರೀಯರಲ್ಲೇ ಸಮಾನತೆಯಿಲ್ಲ, ಕೆಲವರು ಚೆನ್ನಾಗಿ ಮಾತನಾಡಬಹುದು, ಕೆಲವರು ಬರೆಯಬಹುದು, ಇನ್ನು ಕೆಲವರು ನಟಿಸಬಹುದು... ಹೀಗೆ ಹತ್ತು ಹಲವು ಉದಾಹರಣೆಗಳು. ಆದರೂ ಯಾರೂ ಹೆಚ್ಚಲ್ಲ, ಯಾರೂ ಕಡಿಮೆಯಲ್ಲ. ಪ್ರತಿಯೊಂದು ಜೀವಿಗೂ ಅದರದೇ ಆದ ವಿಶೇಷತೆಗಳಿವೆ. ನಾನೇ ಹೆಚ್ಚು ಎಂಬ ಹುಂಬತನದ ಅಗತ್ಯವಿಲ್ಲ.

ಪ್ರಕೃತಿ - ಪುರುಷ ಎಂಬ ಸೂತ್ರದ ಸಂಸ್ಕೃತಿ ನಮ್ಮದು. ಒಬ್ಬರಿಗೊಬ್ಬರು ಪೂರಕವೇ ಹೊರತು ಎದುರಾಳಿಗಳಲ್ಲ, ಸಮಾನರಲ್ಲ. ಇಬ್ಬರಿಗೂ ಅವರದೇ ಆದ ಉದ್ದೇಶಗಳಿವೆ, ಜವಾಬ್ದಾರಿಗಳಿವೆ, ಗುಣಗಳಿವೆ, ಸಾಮರ್ಥ್ಯಗಳಿವೆ. ಸಮಾಜದ ಪ್ರಗತಿಯಲ್ಲಿ ಇಬ್ಬರು ಸಹವರ್ತಿಗಳು. ಪರಸ್ಪರ ಗೌರವವಿರಲಿ. ಸಹಬಾಳ್ವೆಯಿರಲಿ. ಅರ್ಥಮಾಡಿಕೊಳ್ಳುವ, ಅರಿತುಕೊಳ್ಳುವ ವಿಶಾಲ ದೃಷ್ಟಿಕೋನ ನಮ್ಮದಾಗಲಿ. ಈ ಎಲ್ಲ ಚಿಂತನೆಗಳು ಕೇವಲ ಎರಡುದಿನದ ಕೆಸರೆರಚಾಟದ ಭಾಗಗಳಾಗದಿರಲಿ. ನಮ್ಮ ನಿತ್ಯ ಜೀವನದಲ್ಲಿ ಅಳವಡಿಕೆಯಾಗಲಿ. ತೋರಿಕೆಯಾಗದೆ, ಮನಪೂರ್ವಕವಾಗಿ ಆಚರಿಸ್ಪಡಲಿ.

Monday, February 02, 2009

ಬಾಳಬುತ್ತಿ


ನೆನ್ನೆ ಕಳೆದಿದೆ ನಾಳೆ ಬರಲಿದೆ
ಇಂದು ನಿನ್ನದಾಗಿದೆ ಎಂಬ ಮಾತುಗಳು
ಆಗಿವೆಯೇ ಅರ್ಥಹೀನ ತತ್ವಗಳು
ಹಿಡಿತಕೂ ಸಿಗದೆ ಓಡುತಿರಲು ದಿನಗಳು

ಏನನು ಹಿಡಿಯಲು ಹಾರುತಿಹೆವು
ಯಾರ ಕಾಣಲು ಓಡುತಿಹೆವು
ಕೂಡಿ ಕಳೆದು ಗುಣಿಸಿ ಭಾಗಿಸಿ
ಯಾವ ಲೆಖ್ಖದುತ್ತರ ಹುಡುಕುತಿಹೆವು

ಸುಂದರ ನಾಳೆಗಳ ಕನಸಿನಲಿ
ಇಂದೆಂಬ ನೆನ್ನೆಯ ಕನಸು ಕಮರಿತೇ
ನಾಳೆಯಡುಗೆಯ ಚಿಂತೆಯಲಿ
ಇಂದಿನೂಟದ ರುಚಿ ಹಳಸಿತೇ

ಇಂದಿಗೆ ನೆನ್ನೆಯ ನೆನಪು
ಇಂದು ನಾಳೆಯ ನೆನಪು
ಯಾವ ನೆನ್ನೆಯವರೆಗೀ ನೆನಪು
ಎಲ್ಲಿಯ ನಾಳೆಯವರೆಗೀ ನೆನಪು

ಭವ್ಯ ಭವಿಷ್ಯತ್ತಿಗಾಗಿ ಕೂಡಿಡುತಿಹೆವು
ಇಂದನ್ನು ನೆನಪುಗಳ ಬುತ್ತಿಗಳಲಿ
ದೊರಕುವುದೆಂತು ಸಮಯ ಸವಿಯಲದನು
ಓಡುತಿರಲು ಕಾಣದ ಕೊನೆ ತಲುಪಲು

- ವಿನುತ

Tuesday, January 27, 2009

ನಾವು ಹೀಗೇ ಇರಬೇಕೆ?

ಹೀಗೆ ಕನ್ನಡದಂಕಣಗಳ ಲೋಕದಲ್ಲಿ ಸಂಚರಿಸುತ್ತ ’ನಾವೇಕೆ ಹೀಗೆ?’ ಎಂಬ ನಿಲ್ದಾಣದಲ್ಲಿಳಿದೆ. ಅಲ್ಲೊಂದು ಪದದ ಪ್ರಸ್ತಾವವಿತ್ತು ಮತ್ತು ಅದರ ಪ್ರಯೋಗದ ಮೇಲೆ ಅಸಮಾಧಾನವಿತ್ತು - ’ವಿಕಲಚೇತನರು’. ಅದೇ ಅಂಕಣದ ಒಕ್ಕಣೆಗಳಲ್ಲಿ ’ಆತ್ಮಹತ್ಯೆ’ ಎಂಬ ಪದವನ್ನೂ ಕೂಡ ಇದರ ಸಾಲಿಗೆ ಸೇರಿಸಲಾಗಿತ್ತು. ಅಂಗವಿಕಲರ ಬಗ್ಗೆ ಸಮಾಜದ ದೃಷ್ಟಿಕೋನದ ಕುರಿತು ಅಲ್ಲಿ ತೀವ್ರ ವಿರೋಧಗಳಿದ್ದವು. ನನಗೆ ಬರೆದವರ ಪರಿಚಯವಿಲ್ಲ. ಸಂದರ್ಭದ ಅರಿವಿಲ್ಲ. ಹಾಗಾಗಿ ಮುಂದಿನ ಆಲೋಚನೆಗಳಿಗೆ ಆ ಅಂಕಣ ಪೂರಕವೇ ಹೊರತು, ಅದಕ್ಕೆ ನನ್ನ ಪ್ರತಿಕ್ರಿಯೆಗಳಲ್ಲ.

ಚೇತನವೆಂದರೇನು? ನಮ್ಮ ದೇಹ ಸಾಮರ್ಥ್ಯದೊಂದಿಗೆ ಇರುವ, ವರ್ಣಿಸಲಾಗದ ಮತ್ತೊಂದು ಶಕ್ತಿ. ವೈದ್ಯ ಶಾಸ್ತ್ರಕ್ಕೆ ನಿಲುಕದ ಚೈತನ್ಯ. ಅದು ಯಾರ ಅರಿವಿಗೆ ಬರುವುದಿಲ್ಲವೋ, ಬಂದಿಲ್ಲವೋ ಅವರು ಅದರಿಂದ ವಂಚಿತರೇ ಸರಿ. ವಂಚಿತರು ವಿಕಲರಾದರೆ, ಅಂತಹವರು ’ವಿಕಲಚೇತನ’ರೇ ಸರಿ. ನಾನಂತೂ ಇಂತಹ ಪದಪ್ರಯೋಗಿಸಿದವರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಆದರೆ ಅದನ್ನು ಯಾರಿಗೆ ವಿಶೇಷಣವಾಗಿ ಬಳಸಬೇಕೆನ್ನುವುದನ್ನು ಅರಿತು ಉಪಯೋಗಿಸಬೇಕಷ್ಟೆ!!! ’ಆತ್ಮ’ ವೂ ಇಂಥದೇ ಒಂದು ಚೇತನವಷ್ಟೆ. ’ಆತ್ಮಹತ್ಯೆ’ ಮಾಡಿಕೊಳ್ಳುವವರು ತಮ್ಮ ಈ ಅಂತ:ಶಕ್ತಿಯನ್ನು ಎಂದೋ ಕಳೆದುಕೊಂಡಿರುತ್ತಾರೆ ಇಲ್ಲವೇ ಕೊಂದುಕೊಂಡಿರುತ್ತಾರೆ. ’ಆತ್ಮ’ ಎಂದೋ ಹತ್ಯೆಗೆ ಒಳಗಾಗಿರುತ್ತದೆ. ಆದರೆ ಅದು ಸ್ವಯಂ/ಪರೋಪಕಾರವೊ ಎಂದು ತಿಳಿದಿಲ್ಲದಿರುವಷ್ಟೆ. ನಂತರ ಹೋಗುವುದು ಶಾರೀರಿಕ ಪ್ರಾಣ ಮಾತ್ರ. ಇಂತಹವರಿಗೆ ಸಮಾಜದ ಅಭಿಪ್ರಾಯ ಹೇಗೆ ಮಾನ್ಯವಾಗುತ್ತದೆ?

ಸಮಾಜವೆಂದರೇನು? Cambridge ನಿಘಂಟಿನಲ್ಲಿ ’Society’ ಎಂಬ ಪದಕ್ಕೆ ಸಿಕ್ಕಿದ ಅರ್ಥ - " a large group of people who live together in an organized way, making decisions about how to do things and sharing the work that needs to be done". ಹಾಗಾಗಿ, ಸಮಾಜ ಅಂದರೆ ನಾವೇ. ಸಮಾನ ಆಲೋಚನೆಗಳಿರುವವರ ಗುಂಪು. ಆದರೆ ನಾವು ಯಾವುದೇ ಮಾತುಗಳನ್ನು, ಹೆಚ್ಚಾಗಿ ಪ್ರತಿಕ್ರಿಯೆಗಳನ್ನು (ಹೌದು, Reactions not Responses) ಪರಿಗಣಿಸುವಾಗ, ನಮ್ಮಂತಲ್ಲದ ಆಲೋಚನೆಗಳ ಗುಂಪಿಗೆ ಸೇರಿರುವವರ, ಅಂದರೆ ನಮ್ಮದಲ್ಲದ ಸಮಾಜವನ್ನೇಕೆ ಗಣನೆಗೆ ತೆಗೆದುಕೊಳ್ಳುತ್ತೇವೆ? ಲೋಕೋ ಭಿನ್ನ: ರುಚಿ: ಐದೂ ಬೆರಳುಗಳು ಸಮಾನವಾಗಿಲ್ಲ. ಅದಕ್ಕಾಗಿಯೇ ಇಂದು ಕೈ ಕೈಯಾಗಿ ತನ್ನ ಕೆಲಸ ಸಾಗಿಸಿದೆ. ಏನ ಹೇಳಲು ಹೊರಟಿಹೆನೆಂದರೆ, ಒಂದು ಸಮೂಹ ಎಂದಿರುವಾಗ, ಎಲ್ಲ ತರಹದ ಜನರೂ ಇರುತ್ತಾರೆ. ನಿಂದಕರು ಬೇಕಯ್ಯಾ ಹಂದಿಗಳಂತೆ ಎಂದಿಲ್ಲವೇ ದಾಸವಾಣಿ. ಆದರೆ ಹಂದಿಗಳು ಎಲ್ಲಿರಬೇಕೋ ಅಲ್ಲಿರಬೇಕು. ನಾವೂ ಸಹ ಹಂದಿಗಳನ್ನು ಎಲ್ಲಿಟ್ಟಿರಬೇಕೋ ಅಲ್ಲಿಟ್ಟಿರಬೇಕು.

ಇಂದು ನಾವು ಪಾಶ್ಚಿಮಾತ್ಯ ಸಂಸ್ಕೃತಿಗಳಿಂದ ಏನೆಲ್ಲಾ ಕಲಿತಿಲ್ಲ? ಅವು ನಮಗೆ ಬೇಕಿಲ್ಲದ ಆಚರಣೆಗಳಾಗಿದ್ದರೂ!! ನಮಗೆ ಅಗತ್ಯವಿರುವ ಶಿಸ್ತು, ಶುಚಿತ್ವ ಮತ್ತು ಸೃಜನಶೀಲತೆಯನ್ನೇಕೆ ಕಲಿಯಲು ತಯಾರಿಲ್ಲ? ಹೌದು. ಇಲ್ಲಿ (ಅಮೆರಿಕ) ಅಂಗವಿಕಲರಿಗೆ ಯಾರೂ ಕರುಣೆ, ಸಹಾನುಭೂತಿ ತೋರುವುದಿಲ್ಲ. ಕಾರಣ? ಅವರು ಕೇಳುವುದಿಲ್ಲ. ಅವರಿಗಾಗೇ ಹಲವು ಸೌಲಭ್ಯಗಳಿವೆ. ಅವರು ಅವುಗಳನ್ನು ತಮ್ಮ ಹಕ್ಕು ಎನ್ನುವ ಧೋರಣೆಯಲ್ಲಿ ನೋಡುತ್ತಾರೆ/ಕೇಳುತ್ತಾರೆ. ನಾವಿಲ್ಲಿ ಅವರಿಗೆ ಸಹಾಯ ಮಾಡಲು ಹಿಂಜರಿಯುತ್ತೇವೆ. ಕಾರಣ, ಅವರಿಗದು ತುಂಬಾಸಲ ಬೇಕಿರುವುದಿಲ್ಲ. ಬೇಕಾದಲ್ಲಿ ಅವರೇ ಕೇಳುತ್ತಾರೆ. ಅದು ಅವರು ನೋಡುವ ರೀತಿ. Nora Robert ಳ ಮಾತೆಷ್ಟು ಪ್ರಸ್ತುತ - "If you don't go after what you want, you'll never have it. If you don't ask, the answer is always no. If you don't step forward, you're always in the same place."

ಗಾಂಧಿಯವರ ಒಂದು ಮಾತು ನೆನಪಾಗುತ್ತದೆ "Be the change you wish to see in the World". ನಮ್ಮ ದೃಷ್ಟಿಯಲ್ಲಿ ನಾವು ಮೊದಲು ಎದ್ದು ನಿಲ್ಲಬೇಕು. ಎಲ್ಲರೊಳೊಂದಾಗಬೇಕು. ನನ್ನಲ್ಲೇನೋ ಊನವಿದ್ದರೂ ನಾನು ಎಲ್ಲರಂತಿದ್ದೇನೆ, ಅದಕ್ಕಾಗಿ ನನ್ನನ್ನು ಪರಿಗಣಿಸಿ ಎಂಬ ಭಾವನೆಗಿಂತ, ನನ್ನನ್ನು ನಾನಾಗಿರಲು ಬಿಡಿ, ನಾನಿರುವುದೇ ಹೀಗೆ ಎಂಬ ಧೋರಣೆಯಿಂದ ಎದುರಿಸಬೇಕಾಗಿದೆ. ನ್ಯೂನ್ಯತೆಯನ್ನು ನಮ್ಮ ದೃಷ್ಟಿಯಿಂದ ಮೊದಲು ಹೊಡೆದೋಡಿಸಬೇಕಿದೆ. ಇಂದು ಎಲ್ಲ ಅಂಗಾಂಗಗಳು ಸ್ವಸ್ಥಾನದಲ್ಲಿದ್ದು, ಸ್ವಕಾರ್ಯಗಳನ್ನ ಸ್ವಂತವಾಗಿ ನೆರವೇರಿಸಿಕೊಂಡು ಹೋಗುತ್ತಿರುವ ಜನರಲ್ಲಿ, ಅವುಗಳು ಇಲ್ಲದಿದ್ದರೆ? ಎಂಬ ಕಲ್ಪನೆಯೇ ಅಸಾಧ್ಯವಾಗಿರುವಾಗ, ಒಮ್ಮೆಗೆ ಕೈಯಿಲ್ಲದವಳು ಕಾಲಲ್ಲಿ ಬರೆಯುತ್ತಾಳೆಂದರೆ ಅದು ಮೊದಲಿಗೆ ಪವಾಡವಾಗೇ ಕಾಣುವುದು. ಆದರದು ಸ್ವಪ್ರಯತ್ನ, ಛಲ, ಸಾಧನೆ ಎಂದು ತೋಚಲವರಿಗೆ ತಿಳುವಳಿಕೆಯಿರಬೇಕು. ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ ಎನ್ನುವಂತೆ, ಎಲ್ಲ ಸರಿಯಿರುವವನಿಗೆ, ಇಲ್ಲದುದರ ಮೌಲ್ಯ ಹೇಗೆ ತಾನೆ ತಿಳಿದೀತು? ವಸ್ತುವೊಂದನ್ನು ಕಳೆದುಕೊಂಡಾಗಲೇ ತಿಳಿಯುವುದದರ ಬೆಲೆ. ಅದೇ ದುರಂತ!!!

ಹೀಗೊಂದು ಬೀಳ್ಕೊಡುಗೆ ಔತಣಕೂಟವಿತ್ತು. ಸಹುದ್ಯೋಗಿಗಳು ಕ್ಯಾಲಿಫೋರ್ನಿಯಾದಿಂದ ವಾಷಿಂಗ್ಟನ್ ಗೆ ನನ್ನನ್ನು ಸಾಗ ಹಾಕುವ ಸಂಭ್ರಮದಲ್ಲಿದ್ದರು!! ಅಂದೊಂದು ಭೂಕಂಪ (ಚೀನ, ಮೇ ೨೦೦೮) ಸಂಭವಿಸಿತ್ತು. ಮಾತಿನ ಮಧ್ಯೆ ಈ ವಿಷಯ ಕೂಡ ಪ್ರಸ್ತಾಪವಾಯಿತು. ಒಬ್ಬರು "ಬಿಡಿ ಭೂಮಿ ಭಾರ ಕಮ್ಮಿಯಾಗತ್ತೆ, ಶತ್ರು ದೇಶದವರಲ್ಲವೇ?" ಎಂದರು. ಅದಾವ ನೆನಪು ಒತ್ತರಿಸಿತ್ತೊ ನಾಕಾಣೆ, ’ಹೌದು, ಸಾವು ಸಾವೇ. ನಮ್ಮವರಿಗಾದಾಗ ಮಾತ್ರ ಅದರ ತೀವ್ರತೆ ತಿಳಿಯೋದು" ಅಂದು ಬಿಟ್ಟೆ. ಒಂದು ಕ್ಷಣ ಸ್ತಭ್ದ ವಾತಾವರಣ. ಯಾರೋ ಚೇತರಿಸಿಕೊಂಡು, 'Cool down, Have coke..' ಅಂದರು. ಧನ್ಯವಾದಗಳೆಂದು ನಯವಾಗಿ ಪಕ್ಕಕ್ಕೆ ಸರಿಸಿದೆ. ಅಷ್ಟು ಮಾತ್ರ ಹಾಸ್ಯ ಸಹಿಸಲಾರದಷ್ಟು ತಾಳ್ಮೆಗೆಟ್ಟೆನೆ ಎಂದು ಅದೇ ಗುಂಗಿನಲ್ಲಿ ಹಳೆಯ ಕಡತಗಳನ್ನು ಕೆದಕುತ್ತಿದ್ದಾಗ, ಸರ್ವಜ್ಞನ ಈ ವಚನ ಕಣ್ಣಿಗೆ ಬಿತ್ತು,

ಶ್ವಾನ ಬಾಲವದು ಡೊಂಕು ಹೀನ ಮನವದು ಡೊಂಕು

ಕಾನನದಿ ಹರಿವ ನದಿ ಡೊಂಕು, ಪಿಸುಣಿಗನು

ಶಾನೆ ಡೊಂಕೆಂದ ಸರ್ವಜ್ಞ

ಸಂದರ್ಭಗಳು ಎಲ್ಲರಿಗೂ ಒಂದೇ ಅನುಭವವನ್ನು ನೀಡುವುದಿಲ್ಲ. ನೀಡಿದರೂ, ಅದರಿಂದ ಕಲಿಯುವ ಪಾಠ, ಅದಕ್ಕೆ ನಮ್ಮ ಸ್ಪಂದನೆ (Response not Reaction) ಭಿನ್ನವಾಗಿರುತ್ತದೆ. ಗಾಂಧಿ, ನೆಲ್ಸನ್ ಮಂಡೇಲ, ಮಾರ್ಟಿನ್ ಲೂಥರ್ ಕಿಂಗ್ ಇವರುಗಳಿಗೂ ಮೊದಲೇ ವರ್ಣಭೇದ ಇತ್ತು. ಯಾರು ಪ್ರಶ್ನಿಸಿರಲಿಲ್ಲವಷ್ಟೆ. ಪ್ರಶ್ನೆ ಕೇಳದಿರಲು, ಉತ್ತರ ’ಇಲ್ಲ’.

ಬಹುಶ: ಇವೆಲ್ಲವು ಕೇವಲ ಹೇಳುವುದಕ್ಕಾಗಿಯೇ ಇರುವ ಮಾತುಗಳು, ಆಡುವುದು ಬಹಳ ಸುಲಭ ಎನಿಸಿದರೆ ತಪ್ಪೇನಿಲ್ಲ. ಆದರೆ ಅಂಗವಿಕಲರೊಡನೆ, ಆತ್ಮದ ಹತ್ಯೆಯಾಗಿದ್ದರೂ ಬದುಕಿರುವವರೊಡನೆ (ಅಂಗವಿಕಲ, ಈ ಪದವೂ ಎಷ್ಟು ಆಭಾಸವೆನಿಸುತ್ತದೆ. "Energy can neither be created nor be destroyed, But can be changed from one form to another" ಎನ್ನುವ ಮೂಲ ಭೌತಶಾಸ್ತ್ರದ ಸಿದ್ಧಾಂತದಂತೆ, ಯಾವುದೋ ಒಂದು ಅಂಗ ಊನವಿದ್ದರೂ, ಇನ್ಯಾವುದೋ ರೂಪದಲ್ಲಿ ವ್ಯಕ್ತಿಯ ಚೈತನ್ಯ ಇಮ್ಮಡಿಸಿರುತ್ತದೆ. ನ್ಯೂನ್ಯತೆಯನ್ನು ನೋಡಿ ಅಂಗವಿಕಲ ಎನ್ನಬಹುದಾದರೆ, ಹೆಚ್ಚಿನ ಸಾಮರ್ಥ್ಯವನ್ನು ನೋಡಿ ಏನೂ ಹೇಳಲಾರೆವೆ? ಸೂಕ್ತ ಪದ ತಿಳಿದಿದ್ದರೆ ತಿಳಿಸಿ) ಮಾತನಾಡುವುದು ಕಷ್ಟಸಾಧ್ಯ. ಎಲ್ಲ ಸರಿಯಿರುವವರು, ಏನೋ ಸರಿಯಿಲ್ಲ ಎಂದು ಬಲವಾಗಿ ನಂಬಿದವರೊಡನೆ, ಸತ್ಯ ಕಣ್ಣಿಗೆ ರಾಚುತ್ತಾ ಕುಳಿತಿರಲು, ಯಾವ ನೈತಿಕ ಆಧಾರದ ಮೇಲೆ, ನೀನು ಹೀಗಿರು ಎಂದು ಹೇಳಲಾಗುತ್ತದೆ? ಆದರೂ, ಅಂಗವಿಕಲರ ಜೊತೆಗಿನ ತೀರ ಹತ್ತಿರದ ಒಡನಾಟ, ಆತ್ಮಹತ್ಯೆಯಂತಹ ಘಟನೆಗಳ ಒಳಹೊಕ್ಕು ಬಂದಿರುವ ಅನುಭವದೊಂದಿಗೆ, ಅವರ ಮಾತುಗಳ ದನಿಯಾಗಿ, ನೋಟದ ದೃಷ್ಟಿಯಾಗಿ, ಹೀಗನ್ನಿಸುವುದು ತರವೇ.

ಪರಿವರ್ತನೆ ಜಗದ ನಿಯಮ !!! ಜೀವವಿಕಾಸದ ಉದಾಹರಣೆಯನ್ನೇ ತೆಗೆದುಕೊಂಡರೂ, ನಮ್ಮ ಆ ಪೂರ್ವಿಕ ’......pithecus' ಗಳಿಗೆ ನಮ್ಮನ್ನು ಹೋಲಿಸಿಕೊಂಡಾಗ, ಒಂದು ಕ್ರಮದಲ್ಲಿ ಬೆಳೆದು ಬಂದಿದ್ದೇವೆ. ಕಾಲಾಂತರದಲ್ಲಿ ಉಪಯೋಗಿಸದ ಎಷ್ಟೋ ದೇಹದ ಭಾಗಗಳು ಇಂದು ನಮ್ಮಲ್ಲಿ ನಶಿಸಿ ಹೋಗಿವೆ. ಹಾಗೆಯೆ ಕೆಟ್ಟದ್ದನ್ನು, ನಕಾರತ್ಮಕವಾದದ್ದನ್ನು ಬಿಟ್ಟು ಕೇವಲ ಒಳ್ಳೆಯದಷ್ಟನ್ನೆ ಒಳಗೆ ತೆಗೆದುಕೊಳ್ಳುವ ಶೋಧಕವೊಂದನ್ನು ನಾವು ಅಳವಡಿಸಿಕೊಂಡರೆ, ಮುಂದೊಂದು ದಿನ ಉಪಯೋಗಿಸದ ಕಾರಣ ಕೆಟ್ಟದೆಂಬುದು ಕಾಣೆಯಾಗಬಹುದು. ’IDEAL’ ನಳೊಂದು ’IDEAL' ಸ್ಥಿತಿ ಇದು. ಬರೆಯುವಾಗ ಇದು ಸಾಧ್ಯವೆ? ಎಂಬ ಅಪನಂಬಿಕೆಯ ಮಾಗಿ ಗಾಳಿ ನನ್ನ ಕೂದಲನ್ನು ಕೊಂಕಿಸಿ ಸಾಗಿತು. ಅಷ್ಟು ಮಾತ್ರ ಅವಿಶ್ವಾಸ, ಅಪನಂಬಿಕೆ ನಮ್ಮಲ್ಲಿ ಮೈಗೂಡಿದೆ. ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ, ಎಂಬಂತೆ, ಕೆಟ್ಟದ್ದು ಒಳ್ಳೆಯದಕ್ಕಿಂತ ಬೇಗ ಪರಿಣಾಮ ಬೀರುತ್ತದೆ. ಕೆಟ್ಟದ್ದಕ್ಕೆ ಒಗ್ಗಿಕೊಂಡಿದ್ದೇವೆ. ಸುಂದರ ಸಮಾಜದ ಕನಸನ್ನೂ ಕಾಣಲಾರದೆಯೇ???

Wednesday, January 21, 2009

ಯಾವುದು ಸತ್ಯ?


ಕಣ್ಣಿಗೆ ಕಂಡದ್ದೇ ಸತ್ಯವೇ
ಕಿವಿ ಆಲಿಸಿದ್ದೇ ಸತ್ಯವೇ
ಬುದ್ಧಿಗೆ ತೋಚಿದ್ದೇ ಸತ್ಯವೇ
ಹೃದಯ ಭಾವಿಸಿದ್ದೇ ಸತ್ಯವೇ
ಯಾವುದು ಸತ್ಯ?

ಕುರುಡನ ಕನಸು ಸತ್ಯವೇ
ಮೂಕನ ಗಾಯನ ಸತ್ಯವೇ
ಹೆಳವನ ನರ್ತನ ಸತ್ಯವೇ
ಕಟುಕನ ಕರುಣೆ ಸತ್ಯವೇ
ಯಾವುದು ಸತ್ಯ?

ಸಾಕ್ಷ್ಯಗಳೇ ಸತ್ಯವೇ
ಸತ್ಯಕ್ಕೆ ಸಾಕ್ಷ್ಯಗಳೇ
ಸಾಕ್ಷ್ಯವು ಸಿಗದಿರುವುದೇ
ಸಾಕ್ಷ್ಯವಿಲ್ಲವೆನ್ನಲು ಸಾಕ್ಷಿಯೇ
ಯಾವುದು ಸತ್ಯ?

ಗ್ರಹಿಕೆಯೇ ಸತ್ಯವೇ
ಅದಕ್ಕೆ ಮೀರಿದ್ದು ಭ್ರಮೆಯೆ
ನಂಬಿಕೆಯೇ ಸತ್ಯವೆ
ಸತ್ಯವೇ ನಂಬಿಕೆಯೆ
ಯಾವುದು ಸತ್ಯ?

ತಾಯಿಯೆನ್ನುವುದು ಸತ್ಯ
ತಂದೆಯೆನ್ನುವುದು ನಂಬಿಕೆ
ದೇಹವೆನ್ನುವುದು ಸತ್ಯ
ಆತ್ಮವೆನ್ನುವುದು ನಂಬಿಕೆ
ದೇಹಾತ್ಮಗಳಿಂದಲೇ ಜೀವನದರ್ಥವೇ?


-ವಿನುತ

Monday, January 05, 2009

ದೀಪಕ


ಜುಳು ಜುಳು ನಿನಾದದೊಂದಿಗೆ ಸಾಗಿದ್ದಳು ತುಂಗೆ
ಕಲರವದೊಂದಿಗೆ ಮರಳುತಿದ್ದವು ಹಕ್ಕಿಗಳು ಗೂಡಿಗೆ
ಕೇದಗೆಯ ಕಂಪಿನೊಂದಿಗೆ ಬೀಸಿತ್ತು ತಂಗಾಳಿ
ಮುಸ್ಸಂಜೆಯಾಗಿತ್ತು ರವಿ ಜಾರಿರಲು ಬಾನಂಚಿನಲ್ಲಿ

ವಿರಮಿಸಿರಲು ನಾ ಮರಳ ದಂಡೆಯಲ್ಲಿ
ನೀ ಕಂಡೆ ದೃಷ್ಟಿಗೆ ಅನತಿ ದೂರದಲ್ಲಿ
ಎತ್ತಲೋ ನೋಡುತಾ ಮುಗ್ಗರಿಸುತ್ತಿದ್ದೆ ನೀನು
ಕಂಡೆನೆಂತಹ ಚೆಲುವು ಬಳಿ ಧಾವಿಸಲು ನಾನು

ನೀಳ ನಾಸಿಕ, ಹವಳದಂತಹ ತುಟಿಗಳು
ತುಂಬುಗೆನ್ನೆಗಳು, ತೀಡಿದ ಹುಬ್ಬುಗಳು
ಕಂಗೊಳಿಸುತ್ತಿದ್ದ ಆ ಬಟ್ಟಲುಗಣ್ಣುಗಳು
ಮಿಡಿಯದಿರಲು ಸಾಧ್ಯವೇ ಹೃದಯಗಳು

ನೀ ನುಡಿದ ಮಧುರ ಸಿಹಿಮಾತುಗಳು
ಉಲಿದಂತಿತ್ತು ಸರಸ್ವತಿಯೇ ಸಪ್ತಸ್ವರಗಳು
ಆ ನಿನ್ನ ಸೌಂದರ್ಯದ ಅದಮ್ಯತೆ
ನಾಚಿಸುವಂತಿತ್ತು ನಿಸರ್ಗದ ರಮ್ಯತೆ

ಕಳೆಯಲು ಸಮಯ, ತಿಳಿಯಲು ವಿಷಯ
ಅರಿವಾಗಲು ವಿಧಿಯ ಒಳಸಂಚು
ಬಡಿದಂತಾಗಿತ್ತು ಮಿಂಚು, ಬರಸಿಡಿಲು
ಗೋಚರಿಸಿತ್ತು ಸೃಷ್ಟಿಯ ಕ್ರೂರ ಮಜಲು

ಹಣತೆಯ ಅಡಿಯಲ್ಲೆ ಅಂಧಕಾರದ ತವರು
ಬ್ರಹ್ಮನ ಸೃಷ್ಟಿ ಸ್ವಾತಂತ್ರ್ಯ ಪ್ರಶ್ನಿಸುವರ್‍ಯಾರು
ಸೂರ್ಯನಿಲ್ಲದಿದ್ದರೇನು, ಚಂದ್ರನಿಹನು ರಾತ್ರಿಗೆ
ಬೆಳಕಿಲ್ಲದಿದ್ದರೇನು, ನಾದವಿದೆ ನಿನ್ನ ಬಾಳಿಗೆ

ಅಜ್ಞಾನದ ಅಂಧಕಾರದೊಳು ನಾವು ಗಾವಿಲರು
ನ್ಯೂನ್ಯತೆಯ ಮೀರಿ ಬದುಕುವ ಇವರೇ ಧನ್ಯರು
ಶುಭಕೋರಿ ಯೋಚಿಸುತ್ತ ನಾ ನಿಂತಿರಲು ನಿಶ್ಚಲಳಾಗಿ
ನೀ ಸಾಗಿದ್ದೆ ಮುಂದೆ, ಕಟು ಸತ್ಯಕ್ಕೆ ಸಾಕ್ಷಿಯಾಗಿ.....

-ವಿನುತ

Saturday, December 27, 2008

ಹಿಮಪಾತ



ಸುರಿದಿರಲು ಮಂಜಿನ ಹೂಮಳೆ
ಇಳೆಯಾಗಿದೆ ಬಿಳಿಹತ್ತಿಯ ಹಾಳೆ
ಕಾಣದಾಗಿದೆ ನಡೆದಾಡುವ ಹಾದಿ
ಆದ್ಯಂತವಾಗಿದೆ ಹಿಮದ ವಾರಿಧಿ

ನಾಕಂಡ ಮೊದಲ ಹಿಮಪಾತ
ಆದ ಸಂತೋಷ ಅಪರಿಮಿತ
ಹಿಡಿಯ ಹೊರಟೆ ಸೌಂದರ್ಯದ ಸೆರೆ
ಕಳಚಿ ಕ್ಯಾಮೆರ ಕಣ್ಣಿನ ಪೊರೆ

ಹಿಮರಾಜ ಸರಿಯಲು ನೇಪಥ್ಯಕ್ಕೆ
ಧುತ್ತೆಂದು ಧಾಳಿ ಹಿಮದಾಟಕೆ
ಅದೆಂತು ಚೆಲ್ಲಾಟ, ಹಿಮದೆರಚಾಟ
ಮರುಕಳಿಸಿತ್ತು ಬಾಲ್ಯದ ಹುಡುಗಾಟ

ಒತ್ತಿದರೆ ಅಂಟುವ, ಮುಟ್ಟಿದರೆ ಕರಗದ
ಮಂಜಿಗೊಂದು ಕಲ್ಪನೆಯ ರೂಪ,
ಹಿಮ-ಮಾನವ-ಮಾನಸಿಯರ ಪ್ರತಿರೂಪು
ತಂದಿತ್ತು ಮರಳ ಕಪ್ಪೆಗೂಡಿನ ನೆನಪು

ಕೈ-ಕಾಲುಗಳು ಕಳೆದುಕೊಳ್ಳಲು ಅರಿವಳಿಕೆ
ಮೂಡಿತಾಗ ತಿಳುವಳಿಕೆ
ಮಿತಿಮೀರಿದ ಗಮ್ಮತ್ತು, ಪ್ರಾಣಕ್ಕೇ ಕುತ್ತು
ಸುಂದರ ಪ್ರಕೃತಿಯಾದೀತು ವಿಕೃತಿ

ಘನೀಭವಿಸಿತ್ತು ಹಿಮ; ಮರದಲ್ಲಿ, ನೆಲದಲ್ಲಿ
ಮರವು ಸುಂದರ, ನೆಲವು ಭೀಕರ
ಹೆಜ್ಜೆಗೊಂದು ಕಂದರ, ದಾರಿ ಅಗೋಚರ
ತಪ್ಪಿದರೆ ಆಯಾಮ, ಊಹಿಸಲಾಗದು ಪರಿಣಾಮ

ಹಸಿ ಸೌದೆ ಸುಟ್ಟರೂ ಇಲ್ಲದಷ್ಟು ಹೊಗೆ,
ಉಸಿರಾಡಲು; ಉಸಿರುಗಟ್ಟಿಸುವ ಚಳಿಗೆ
ಉರಿಯುತ್ತಿದ್ದ ಕಂಗಳಲ್ಲಿ ಒತ್ತರಿಸಿತ್ತು ಅಳು
ನೆನಪಾಗಲು ಅಮ್ಮನ ಬೆಚ್ಚನೆ ಮಡಿಲು

ಬೆಚ್ಚನೆ ದಿರಿಸಿನೊಳಗೊಂದು ದಿರಿಸು,
ಎರಡೆರಡು ಕಾಲ್ಚೀಲ, ಕೈ ಗ್ಲವಸು,
ಇಷ್ಟಾದರೂ ನಡುಗುತ್ತಿದ್ದ ದೇಹ; ಮೂಡಿಸಿತ್ತು
ಯೋಧರು ಮನುಷ್ಯರೇ ಎಂಬ ಸಂದೇಹ

ಎದೆಗುಂದದೆ ಸೃಷ್ಟಿಯ ವೈಪರೀತ್ಯಗಳಿಗೆ
ಕಾವಲಾಗಿಹರು ದೇಶದ ಭದ್ರತೆಗೆ
ಆದರ್ಶವಾಯಿತವರ ಜೀವನ
ಸಲ್ಲಿಸಿದೆನೊಂದು ಕೃತಜ್ಞತಾಪೂರ್ವಕ ನಮನ

-ವಿನುತ