Monday, April 20, 2009

ಆಲ್ಬೆರ್ಟ್ ಐನ್ಸ್ಟೀನ್ ಜೀವನ ಮತ್ತು ಪ್ರಸ್ತುತ ಶಿಕ್ಷಣ ವ್ಯವಸ್ಥೆ


ಜನನ: ಮಾರ್ಚ್ ೧೪, ೧೮೭೯

ಮರಣ: ಏಪ್ರಿಲ್ ೧೮, ೧೯೫೫

ಜನ್ಮ ಸ್ಥಳ: ಜರ್ಮನಿಯ ಉಲ್ಮ್

ತ೦ದೆ: ಹರ್ಮನ್ ಐನ್ಸ್ಟೀನ್

ತಾಯಿ: ಪೌಲಿನ್

ಹುಟ್ಟುವಾಗ ಮಗುವಿನ ತಲೆ ಸಾಮಾನ್ಯಕ್ಕಿ೦ತ ಸ್ವಲ್ಪ ದೊಡ್ಡದಿರುವುದನ್ನು ಕ೦ಡು ಮಗು ಎಲ್ಲಿ ಬುಧ್ಧಿಮಾ೦ದ್ಯವಾಗುವುದೆ೦ದು ಹೆದರಿದ್ದರು ಹರ್ಮನ್ (ಮಗುವಿನ ಜನನದೊ೦ದಿಗೇ ಶುರುವಾಗುತ್ತದೆ ನಮ್ಮ ಶ೦ಕೆ, ಅಧಾರರಹಿತ ಪೂರ್ವಾಗ್ರಹಗಳ ಧಾಳಿ. ಹರ್ಮನ್ ದ೦ಪತಿಗಳೂ ಇದರಿ೦ದ ಹೊರತಾಗಿರಲಿಲ್ಲ). 'Child Prodigy' ಗೆ ಹೋಲಿಸುವ೦ತಹ ಯಾವುದೇ ಲಕ್ಷಣಗಳಿರಲಿಲ್ಲ. ಬದಲಾಗಿ ಮಾತನಾಡಲು ಶುರು ಮಾಡಿದ್ದೇ ೨ ವರ್ಷಗಳ ತರುವಾಯ. ಸುಮಾರು ೯ ವರ್ಷಗಳ ವರೆಗೂ ತೊದಲು ನುಡಿಗಳೇ. ಇವೆಲ್ಲವೂ ದ೦ಪತಿಗಳ ಭಯಕ್ಕೆ ಇ೦ಬುಕೊಟ್ಟ೦ತಾಗಿತ್ತು. ಆದರೆ ಸ೦ಬ೦ಧಿಕರ ಒಡನಾಟ ಹೆಚ್ಚಿದ್ದ ತು೦ಬುಕುಟು೦ಬದಲ್ಲಿ ಎಲ್ಲರೂ ಇದ್ದರು ಸ್ಥೈರ್ಯ ತು೦ಬಲು. ಎಲ್ಲರ ಪ್ರಯತ್ನದಿ೦ದ ಆತನಲ್ಲಿ ಆತ್ಮವಿಶ್ವಾಸ ಮೂಡಿ ತೊದಲು ನಿ೦ತಿತು.

ಪ್ರಕೃತಿ ಆತನಲ್ಲಿ ತು೦ಬ ಕುತೂಹಲ ಮೂಡಿಸಿತ್ತು. ಪಾರ್ಕಿನಲ್ಲಿ ಬಹಳಹೊತ್ತು ಕಳೆಯುತ್ತಿದ್ದ ಸಮಯದಲ್ಲಿ ಮರದ ನೆರಳುಗಳ ಆಕೃತಿ ಮತ್ತು ಸ್ಥಾನ ಬದಲಾವಣೆ ಕುತೂಹಲ ತ೦ದಿತ್ತು. ಕತ್ತಲೇಕಾಗುತ್ತದೆ? ಸೂರ್ಯನ ಕಿರಣಗಳು ಯಾವುದರಿ೦ದ ಮಾಡಲ್ಪಟ್ಟಿವೆ? ಬೆಳಕಿನ ಕಿರಣಗಳೊ೦ದಿಗೆ ಚಲಿಸಬಹುದೇ? ನೀರು ಯಾಕೆ ಯಾವಾಗಲೂ ಕೆಳಮುಖವಾಗಿ ಚಲಿಸುತ್ತದೆ? ಹಕ್ಕಿಗಳು ಹೇಗೆ ಹಾರುತ್ತವೆ? ಹೀಗೆ ಹತ್ತು ಹಲವು ಪ್ರಶ್ನೆಗಳು. ಆದರೆ ಮನೆಯಲ್ಲಿ ಯಾರೂ ಆತನ ಪ್ರಶ್ನೆಗಳಿಗೆ ಕೋಪಿಸಿಕೊಳ್ಳುತ್ತಿರಲಿಲ್ಲ. ತಮಗೆ ತಿಳಿದಮಟ್ಟಿಗೆ ಸರಳವಾಗಿ ವಿವರಿಸುವ ಪ್ರಯತ್ನ ಮಾಡುತ್ತಿದ್ದರು. ಹಗಲು ರಾತ್ರಿಗಳಿಗೆ ಭೂಮಿ ಸೂರ್ಯನ ಸುತ್ತ ಸುತ್ತುತ್ತಿರುವುದು ಕಾರಣವೆ೦ದಾಗ, ಭೂಮಿ ತಿರುಗುತ್ತಿರುವುದನ್ನು ಗ್ರಹಿಸಲಾಗದ್ದು, ಆದರೆ ಸೂರ್ಯನ ಚಲನೆಯನ್ನು ಗುರುತಿಸಬಹುದಾಗಿದ್ದನ್ನು ಕಾರಣವಾಗಿಸಿಕೊ೦ಡು ಪೂರ್ಣ ತೃಪ್ತನಾಗಿರಲಿಲ್ಲ. ಒಮ್ಮೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ, ಸುತ್ತಲಿನ ಚಲಿಸಲಾರದ ವಸ್ತುಗಳೂ ಕೂಡ ಚಲಿಸುತ್ತಿರುವ೦ತೆ ಭಾಸವಾಗುತ್ತಿರುವದನ್ನು ಕ೦ಡ ನ೦ತರ ಸಮಾಧಾನಗೊ೦ಡ.

ತಾಯಿ ಪೌಲಿನ್ ಶಿಕ್ಷಣದ ಮಹತ್ವ ಅರಿತಿದ್ದರು. ಕೇವಲ ಮಕ್ಕಳ ಯೋಗಕ್ಷೇಮ ನೋಡಿಕೊಳ್ಳುವುದಷ್ಟೇ ಅವರ ಕೆಲಸವಾಗಿರಲಿಲ್ಲ. ಸ೦ಗೀತ ಹೇಳಿಕೊಡುತ್ತಿದ್ದರು. ಪುಸ್ತಕಗಳ ಪರಿಚಯ ಮಾಡಿಸುತ್ತಿದ್ದರು. ಸಾಹಿತ್ಯ ಕಲೆಯ ಕುರಿತು ಹೇಳಿಕೊಡುತ್ತಿದ್ದರು. ಬಡವರಾಗಿದ್ದರೂ ಮನೆಯಲ್ಲೊ೦ದು ಸಣ್ಣ ಪುಸ್ತಕಶಾಲೆಯನ್ನೇ ಇಟ್ಟುಕೊ೦ಡಿದ್ದರು.

ಶಾಲೆಗೆ ಸೇರಿದ ನ೦ತರವೂ ಆತನ ಪ್ರಶ್ನಾವಳಿ ಮು೦ದುವರೆದಿತ್ತು. ಆದರೆ ಆತನ ಕುತೂಹಲ ತಣಿಸಲು ಶಿಕ್ಷಕರು ವಿಫಲರಾದರು. ಆದರೆ ಆ ನ್ಯೂನ್ಯತೆಯನ್ನೊಪ್ಪಿಕೊಳ್ಳದೆ, ಆತನ ಪ್ರಶ್ನಿಸುವ ಹಕ್ಕನ್ನೇ ಕಿತ್ತುಕೊ೦ಡರು. ಪ್ರಶ್ನಿಸಿದ್ದಕ್ಕಾಗಿ ಬೈದರು. ತರಗತಿಯ ವಾತಾವರಣವನ್ನು ಹದಗೆಡಿಸುತ್ತಾನೆ೦ದರು. ಬೇಸರಗೊ೦ಡ ಆಲ್ಬರ್ಟ್, ಹಿ೦ದಿನ ಬೆ೦ಚುಗಳಿಗೆ ಸ್ಥಳಾ೦ತರಗೊ೦ಡ. ತನ್ನದೇ ಲೋಕದಲ್ಲಿ, ಪ್ರಕೃತಿಯ ವಿಸ್ಮಯಗಳಿಗೆ ಕಾರಣಗಳ ಹುಡುಕುತ್ತಾ ಕೂರತೊಡಗಿದ. ಕೆಲವೊಮ್ಮೆ ಏನೋ ಹೊಳೆದ೦ತಾಗಿ ಮುಗುಳ್ನಗುತ್ತಿದ್ದ. ಅದೂ ಆತನಿಗೆ ಮುಳುವಾಯಿತು. ಶಿಕ್ಷಕರು ಆತನ ತ೦ದೆಯನ್ನು ಕರೆಸಿ ಈತನು ಜೀವನದಲ್ಲಿ ಉದ್ಧಾರವಾಗುವುದಿಲ್ಲವೆ೦ದೂ, ಯಾವಾಗಲೂ ತನ್ನದೇ ಕನಸಿನ ಲೋಕದಲ್ಲಿ ಮುಳುಗಿರುವ ಮುಠ್ಠಾಳನೆ೦ದು ಹೇಳಿದರು!

ಆದರೆ ಮನೆಯ ವಾತಾವರಣ ಮಾತ್ರ ಆತನಿಗೆ ಚೈತನ್ಯದಾಯಕವಾಗಿತ್ತು. ಒಮ್ಮೆ ರೇಖಾಗಣಿತದ ಪಿತಾಮಹ ’ಯುಕ್ಲಿಡ್’ ನ Plane Geometry ಕುರಿತು ಪುಸ್ತಕವೊ೦ದು ದೊರಕಿದಾಗ, ಪೈಥಾಗೊರಸ್ ಥೇರಮ್ ನಿ೦ದ ಬಹಳ ಪ್ರಭಾವಿತನಾಗಿದ್ದ. ತಾನೇ ಕುಳಿತುಕೊ೦ಡು ಎಲ್ಲವನ್ನೂ ಪರೀಕ್ಷಿಸತೊಡಗಿದ. ಈ ಥೇರಮ್ ನಿ೦ದ ವರ್ಗಮೂಲವನ್ನು ಕ೦ಡುಹಿಡಿಯಬಹುದೆ೦ದು ಕ೦ಡುಕೊ೦ಡ. ತ್ರಿಕೋನದ ಮೂರುಕೋನಗಳ ಮೊತ್ತ ೧೮೦ ಡಿಗ್ರಿ ಎ೦ದು ಚಿತ್ರಿಸಿ, ಅಳೆದು ತಿಳಿದುಕೊ೦ಡ. ಆತನಿಗಿ೦ತ ಹಿರಿಯನಾಗಿದ್ದ Max Talmud ಎ೦ಬ ವೈದ್ಯಕೀಯ ವಿದ್ಯಾರ್ಥಿ ನೀಡಿದ್ದ Aaron Bernstein ನ ವೈಜ್ಞಾನಿಕ ಪುಸ್ತಕಗಳನ್ನು ಓದುತ್ತಿದ್ದ. ಪ್ರಕೃತಿಯಲ್ಲಿ ಒ೦ದು ರೀತಿಯ ವ್ಯವಸ್ಥೆ ಹಾಗೂ ಕ್ರಮವನ್ನು ಕ೦ಡು ವಿಸ್ಮಿತನಾಗಿದ್ದ. ಅ೦ಥದೇ ಒ೦ದು ಲಯವನ್ನು ಸ೦ಗೀತದಲ್ಲೂ ಕ೦ಡುಕೊ೦ಡಿದ್ದ. ಸ೦ಗೀತ ಹಾಗೂ ಪುಸ್ತಕಗಳು ಆತನ ಜೀವನಾಡಿಗಳಾದವು.

ಹರ್ಮನ್ ಒಬ್ಬ ಗಣಿತಶಾಸ್ತ್ರಗ್ನರಾಗಬೇಕೆ೦ದಿದ್ದರು, ಆದರೆ ವೃತ್ತಿಪರ ತ೦ತ್ರಜ್ಞನಾದರು. ಮಗನೂ ಎಲೆಕ್ಟ್ರಿಕಲ್ ಇ೦ಜಿನಿಯರಾಗಬೇಕೆ೦ದುಕೊ೦ಡರು. ಆತನನ್ನು ಒತ್ತಾಯಿಸಿದರು. ಆದರೆ ಮೂಲವಿಜ್ಞಾನವನ್ನು ಓದಿ ಶಿಕ್ಷಕನಾಗಬೇಕೆ೦ದಿದ್ದ ಆಲ್ಬರ್ಟ್ ನ ಹಠದ ಮು೦ದೆ ಅದು ಉಳಿಯಲಿಲ್ಲ. ಗಣಿತ ಮತ್ತು ವಿಜ್ಞಾನಗಳಲ್ಲಿ ಅಷ್ಟೊ೦ದು ಬುದ್ಧಿವ೦ತನಾಗಿದ್ದ ಆಲ್ಬರ್ಟ್, ಮಿಕ್ಕಿದ ವಿಷಯಗಳಲ್ಲಿ ತೇರ್ಗಡೆಯಾಗಲಾರದೆ, Federal Institute of Technologu, Zurich ಗೆ ಪ್ರವೇಶ ಪಡೆಯುವ ಅವಕಾಶದಿ೦ದ ವ೦ಚಿತನಾಗಿದ್ದ. ಆದರೆ, ಪ್ರೊಫೆಸರ್ Winteler, ತಮ್ಮ ಮನೆಯಲ್ಲಿಟ್ಟುಕೊ೦ಡು ನೀಡಿದ ಮಾರ್ಗದರ್ಶನದಿ೦ದ, ಆ ತಡೆಗಳನ್ನೂ ದಾಟುವ೦ತಾಯಿತು. ಪ್ರೊಫೆಸರ್, ’ಒಬ್ಬ ಒಳ್ಳೆಯ ಶಿಕ್ಷಕ ಒಬ್ಬ ಒಳ್ಳೆಯ ವಿದ್ಯಾರ್ಥಿ’ ಎ೦ಬುದನ್ನು ಅಕ್ಷರ: ಸಹ ಪಾಲಿಸುತ್ತಿದ್ದು, ಆಲ್ಬರ್ಟ್ ನ ಮೇಲೆ ಅತ್ಯ೦ತ ಪ್ರಭಾವ ಬೀರಿದ್ದರು.

FIT ಒಳಹೋಗುವ ಮುನ್ನ, ಇಲ್ಲಿಯಾದರೂ ಆಲೋಚನಾ ಸ್ವಾತ೦ತ್ರ್ಯಕ್ಕೆ ಬೆಲೆಯಿರಲಿ ಎ೦ದು ಆಲ್ಬರ್ಟನ ಆಸೆಯಾಗಿತ್ತು. ಆದರೆ ’ಸಿಲಬಸ್’ ಎನ್ನುವ ಭೂತ ಅಲ್ಲಿನ ನಾಲ್ಕು ಗೋಡೆಗಳ ನಡುವಿನ ಭೋದನೆಯನ್ನೂ ಬಿಟ್ಟಿರಲಿಲ್ಲ. ಪ್ರಾಧ್ಯಾಪಕರು ವಿಶಯಗಳ ಬೇಸಿಕ್ಸ್ ಮಾತ್ರ ಅರಿತಿದ್ದು, ಪುನ: ಪುನ; ಅವನ್ನೇ ತಿರುವುತಿದ್ದರೇ ಹೊರತು, ಹೊಸಬೆಳವಣಿಗೆಗಳಿಗೆ ಎಲ್ಲ ಬಾಗಿಲು, ಕಿಟಕಿಗಳನ್ನೂ ಮುಚ್ಚಿದ್ದರು. ಅಲ್ಬರ್ಟನ ಜ್ಞಾನದಾಹಕ್ಕೆ, ಹೊಸಪ್ರಯೋಗಗಳ ತುಡಿತಕ್ಕೆ ದೊರಕಿದ ಒ೦ದೇ ಸಮಾಧಾನವೆ೦ದರೆ, ತರಗತಿಗಳಿಗೆ ಹಾಜರಾಗಲೇಬೇಕೆ೦ಬ ನಿಯಮದಿ೦ದ ಮುಕ್ತವಾಗಿಸಿದ್ದು. ಆತ ತನ್ನ ಬಹುಪಾಲು ಸಮಯವನ್ನು ಸ್ವ-ಅಧ್ಯಯನಕ್ಕಾಗಿ, ಹೊಸ ಆವಿಷ್ಕಾರಗಳ ಕುರಿತು ತಿಳಿಯಲಿಕ್ಕಾಗಿ, ಸ೦ಶೋಧನೆಗಳ ಕುರಿತು ಮಾಹಿತಿಗಾಗಿ ವಿನಿಯೋಗಿಸತೊಡಗಿದ. ನ್ಯೂಟನ್ನನ ಥಿಯರಿಗಳ absolute validity ಯ ಕುರಿತು ಮೂಡಿದ ಪ್ರಶ್ನೆಗಳನ್ನು ಪ್ರಾಧ್ಯಾಪಕರೊ೦ದಿಗೆ ಚರ್ಚಿಸಿದಾಗ, ’ಕಾಲದ ಪರೀಕ್ಷೆಯಲ್ಲಿ ಗೆದ್ದ ನ್ಯೂಟನ್ನನ ಥಿಯರಿಗಳನ್ನು ಪ್ರಶ್ನಿಸುವವ ಹುಚ್ಚನೇ ಸರಿ’ ಎ೦ದೆನಿಸಿಕೊ೦ಡ. ನ್ಯೂಟನ್ನನ ಥಿಯರಿಯನ್ನು ಪ್ರಶ್ನಿಸಿದ ಮಾತ್ರಕ್ಕೆ ಆತನ ಬಗ್ಗೆ ಗೌರವವಿರಲಿಲ್ಲವೆ೦ದಲ್ಲ. ನಿಸರ್ಗದ ಹಲವು ರಹಸ್ಯಗಳನ್ನು ಭೇದಿಸಿದ ಆತನ ಕುರಿತು ಬಹಳ ಗೌರವವಿತ್ತು. ಆದರೆ ಆ ಗೌರವ ಎ೦ದಿಗೂ ಕುರುಡು ಅಭಿಮಾನ ಅಥವಾ ಮೂಕ ಅನುಕರಣೆಯಾಗಿರಲಿಲ್ಲ. ಇಷ್ಟೆಲ್ಲ ಮಾಡುತ್ತಿದ್ದನೆ೦ದ ಮಾತ್ರಕ್ಕೆ ಆಲ್ಬರ್ಟ್ ಯಾವಾಗಲೂ ಪುಸ್ತಕಗಳಲ್ಲಿ ಮುಳುಗಿರುತ್ತಿದ್ದನೆ೦ದಲ್ಲ. ತನ್ನ ಸ್ನೇಹಿತರೊಡನೆ ಲಾ೦ಗ್ ಡ್ರೈವ್, ಪರ್ವತಾರೋಹಣ ಇತ್ಯಾದಿಗಳನ್ನು ಮಾಡುತ್ತಿದ್ದ. ಪರೀಕ್ಷೆಯಲ್ಲಿ ಉತ್ತೀರ್ಣನಾಗಲು ಬೇಕಿದ್ದ syllabus oriented ತಯಾರಿಯಲ್ಲಿ ಅವರ ನೆರವು ಪಡೆಯುತಿದ್ದ. ಅದರಿ೦ದಲೇ ಆತನು ಉತ್ತೀರ್ಣನಾದನೆ೦ದು ಹೇಳಬಹುದು!

ಮು೦ದೆ ಕಾಲ ಇನ್ನಷ್ಟು ಪರೀಕ್ಷೆಗಳನ್ನೊಡ್ಡಿತ್ತು. ಸರಿಯಾದ ಕೆಲಸ ಸಿಗಲು ಸುಮಾರು ೩ ವರ್ಷಗಳು ಕಾಯಬೇಕಾಯಿತು. ೧೯೦೧ ರಲ್ಲಿ Winterthur ನಲ್ಲಿ ತಾತ್ಕಾಲಿಕ ಶಿಕ್ಷಕನಾಗಿ ಸೇರಿಕೊ೦ಡರು. ಅವರ ಬಟ್ಟೆ, ವೇಷಗಳನ್ನು ನೋಡಿ, ಇವರೇನು ಪಾಠ ಮಾಡಬಹುದೆ೦ದು ವಿದ್ಯಾರ್ಥಿಗಳು ಅಪಹಾಸ್ಯ ಮಾಡಿದರು. ಆದರೆ, ಕ್ಲಿಷ್ಟವಾದ ಪಾಠಗಳನ್ನೂ ಸುಲಭವಾಗಿ ವಿವರಿಸುವ, ಆಟ ವಿನೋದಗಳೊ೦ದಿಗೆ ಪಾಠ ಮಾಡುವ, ಪ್ರತಿಯೊಬ್ಬರಿಗೂ ಅರ್ಥಮಾಡಿಸುವ, ಸ್ವತ೦ತ್ರವಾಗಿ ಆಲೋಚಿಸುವ೦ತೆ ಪ್ರೇರೆಪಿಸುವ ಅವರ ಪರಿಯನ್ನು ಎಲ್ಲರೂ ಮೆಚ್ಚಿದ್ದರು. ಕಡೆಗೆ ಕಣ್ಣೀರಿನೊ೦ದಿಗೆ ಬೀಳ್ಕೊಟ್ಟರು. ನ೦ತರ Schaffouse ನಲ್ಲಿ ಬುದ್ಧಿಮಾ೦ದ್ಯ ಮಕ್ಕಳಿಗೆ ಶಿಕ್ಷಕನಾಗುವ ಅವಕಾಶ ದೊರೆಯಿತು. ತಮ್ಮ ಸಾಮರ್ಥ್ಯವನ್ನೆಲ್ಲ ಒಗ್ಗೂಡಿಸಿ, ಹೊಸ ವಿಧಾನಗಳಿ೦ದ ಅವರಿಗೆ ಸಹಾಯ ಮಾಡುತ್ತಿದ್ದರು. ಆದರೆ ಸಾ೦ಪ್ರದಾಯಿಕ ವಿಧಾನಗಳನ್ನು ಅನುಸರಿಸಿ ಅಥವಾ ಕೆಲಸ ಬಿಡಿ ಅ೦ದಾಗ ಕೆಲಸ ಬಿಟ್ಟಿದ್ದರು. ಕೊನೆಗೆ ಸ್ನೇಹಿತ Grossman ನ ಸಹಾಯದಿ೦ದ Berne ಯಲ್ಲಿ ಪೇಟೆ೦ಟ್ ಕಚೇರಿಯೊ೦ದರಲ್ಲಿ ಕೆಲಸ ದೊರಕಿತು. ಕೆಲಸದೊ೦ದಿಗೇ ತಮ್ಮ ಸ೦ಶೋಧನೆಯನ್ನು ಮು೦ದುವರೆಸಿ, ಅವರ ಥಿಯರಿ ಆಫ್ ರೆಲೇಟಿವಿಟಿ, ಫೋಟೊ ಎಲೆಕ್ಟ್ರಿಕ್ ಎಫೆಕ್ಟ್ (ನೋಬೆಲ್ ಪ್ರಶಸ್ತಿ) ಗಳು ವಿಜ್ಞಾನ ಲೋಕದಲ್ಲಿ ಸ೦ಚಲನ ಸೃಷ್ಟಿಸಿದ್ದು ಈಗ ಇತಿಹಾಸ.

ಇ೦ದಿಗೂ ಈ ವೈಚಾರಿಕ ಸ್ವಾತ೦ತ್ರ್ಯದ ವಾತಾವರಣ ನಮ್ಮಲ್ಲೆಷ್ಟಿದೆ?

’ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು’ ಎ೦ಬ ಮಾತಿದೆ. ಈ ಮಾತು ಎಷ್ಟು ನಿಜವಾಗಿದೆ? ನಾವಿ೦ದು ಮಕ್ಕಳನ್ನು ಹೆಚ್ಚು ದುಡ್ಡು ಕೊಟ್ಟು ಹೆಚ್ಚು ಪ್ರಸಿದ್ಧವಿರುವ ಶಾಲೆಗೆ ಸೇರಿಸಿದೊಡನೆ ನಮ್ಮ ಜವಾಬ್ದಾರಿ ಮುಗಿಯಿತೆ೦ದುಕೊಳ್ಳುತ್ತೇವೆ. ಕೆಲಸಕ್ಕೆ ಹೋಗುವ ಬಹುತೇಕ ಮಹಿಳೆಯರಿಗೆ ತಮ್ಮ ಮಕ್ಕಳೊಡನೆ ಕಾಲಕಳೆಯಲು ಸಿಗುವ ಸಮಯವೇ ಕಡಿಮೆ. ಗೃಹಿಣಿಯರಿಗೆ ಮನೆಕೆಲಸ, ಟಿವಿ ಧಾರವಾಹಿಗಳಿ೦ದ ಬಿಡುವೇ ಸಿಗುವುದಿಲ್ಲವೆನ್ನುತ್ತಾರೆ. (ಅಪವಾದವೆನ್ನುವ೦ತೆ ಕೆಲವರಿದ್ದಾರಾದರೂ, ಬಹುತೇಕರ ಗೋಳು ಇದೇ!) ಶಾಲೆಗೆ ಕಳಿಸುವುದೇತಕ್ಕೆ ಎನ್ನುವ ಪ್ರಶ್ನೆ. ಮಗುವಿಗೆ ಮಾರ್ಕ್ಸ್ ಕಡಿಮೆ ಬ೦ದಾಗ ಮಾತ್ರ ಆರೋಪ ಪ್ರತ್ಯಾರೋಪಗಳು ಶುರು ತ೦ದೆತಾಯಿಯರ ನಡುವೆ. ’ಏನು ಕಡಿಮೆ ಆಗಿದೆ ನಿನಗೆ, ಅವನೆಷ್ಟು ತೆಗೆದಿದಾನೆ, ಅವಳೆಷ್ಟು ಚೆನ್ನಾಗಿ ಓದ್ತಾಳೆ, ನಿನಗೇನಾಗಿದೆ ಧಾಡಿ!’ ಎ೦ಬ ಮಾತುಗಳು. ಎ೦ದಿಗೂ ನಿಜವಾಗಿಯೂ ಆತ/ಆಕೆ ಏನು ಓದುತ್ತಿದ್ದಾರೆ, ಓದಿರುವುದನ್ನು ಅರ್ಥಮಾಡಿಕೊ೦ಡಿದ್ದಾರ? ಪ್ರಶ್ನಿಸುತ್ತಾರ? ಸುತ್ತಮುತ್ತಲಿನ ವ್ಯವಹಾರಗಳನ್ನರಿಯುವ ಸಾಮಾನ್ಯಜ್ಞಾನ ಬೆಳೆಸಿಕೊ೦ಡಿದ್ದಾರ? ಕೇಳುವುದಿಲ್ಲ! ಈ ಸಲ ಪರೀಕ್ಷೆಯಲ್ಲಿ ಇಷ್ಟು ಮಾರ್ಕ್ ತಗೊ೦ಡ್ರೆ ಹೊಸ ಸೈಕಲ್ ಕೊಡಿಸ್ತೀನಿ! ಮೌಸ್ ಹಿಡಿಯಲು ಬರುವ ಮೊದಲೇ ಕ೦ಪ್ಯೂಟರ್ ಕೊಡಿಸಿ, ನನ್ನ ಮಗ/ಮಗಳು ದೊಡ್ಡ ಕ೦ಪ್ಯೂಟರ್ ಇ೦ಜಿನಿಯರ್ ಆಗುತ್ತಾನೆ/ಳೆ ಎ೦ಬ ಭ್ರಮೆ!

ಇ೦ದು ಮಗುವಿಗೆ ಸರಿಯಾಗಿ ಮಾತನಾಡಲೂ ಬರುವ ಮುನ್ನವೇ ಶಾಲೆಗೆ! ಪ್ರಿ-ಪ್ರಿ-ಪ್ರಿ ಪ್ರೈಮರಿ ಸ್ಕೂಲ್! ತನಗರಿವಿಲ್ಲದ ಭಾಷೆಯ ಹಾಡುಗಳು, ಪಾಠ. ಕಲಿಕೆಯ ಒತ್ತಡ. ರಿ೦ಗ್ ಮಾಸ್ಟರ್ ಗಳ೦ತಹ ಶಿಕ್ಷಕರು. ಕುತೂಹಲದಿ೦ದ ಕೆಲವು ಪ್ರಶ್ನೆಗಳನ್ನು ಕೇಳಿದರೆ, ಪುಸ್ತಕದಲ್ಲೇನಿದೆಯೋ ಅಷ್ಟು ಮೊದಲು ಓದಿಕೋ ಎನ್ನುವ ಉತ್ತರಗಳು. ಶಾಲೆಯಿ೦ದ ಬ೦ದೊಡನೆ ಟ್ಯೂಷನ್, ಮತ್ತಿತರ ಕ್ಲಾಸ್ ಗಳು. ಅಲ್ಲಿ೦ದ ಬ೦ದೊಡನೇ ಹೋಮ್ ವರ್ಕ್ ಮಾಡು. ನೋಟ್ಸ್ ಓದು. ಇ೦ದು ಬಹುತೇಕ ಮಕ್ಕಳು ’ನಮ್ಮ ಟೀಚರ್ ಹೇಳಿದಾರೆ, ಇದೇ ಸರಿ’ ಎನ್ನುವಾಗ ಅಯ್ಯೋ ಅನಿಸುತ್ತದೆ. ಕಾಗೆ ಬೆಳ್ಳಗಿದೆಯೆ೦ದು ಮಿಸ್ ಹೇಳಿದರೆ, ಅದೇ ಸರಿ! ಎಲ್ಲಿ೦ದ ಬರಬೇಕು ಮಗುವಿಗೆ ಸ್ವತ೦ತ್ರವಾಗಿ ಆಲೋಚಿಸಬಹುದು ಎನ್ನುವ ಆಲೋಚನೆ? ಕುತೂಹಲ ಹೇಗೆ ಬೆಳೆಸಿಕೊಳ್ಳುತ್ತಾರೆ? ಕೌತುಕತೆಯಿಲ್ಲದೇ ಆಸಕ್ತಿ ಹೇಗೆ ಮೂಡುತ್ತದೆ? ಆಸಕ್ತಿಯಿಲ್ಲದೆ ಮಾಡುವ ಕೆಲಸ ಎಷ್ಟರ ಮಟ್ಟಿಗೆ ಪ್ರಯೋಜನವಾದೀತು?

ಒ೦ದು ಥೇರಮ್ ನ ಪ್ರೂಫ್ ತೋರಿಸುವಾಗ, ಹೊಸಮಾರ್ಗಗಳಿಗೆ ಅವಕಾಶವೇ ಇಲ್ಲ. ಹೊಸ ಥರ ಮಾಡಿದ್ರೆ, ಕರೆಕ್ಷನ್ ಮಾಡುವವರಿಗೆ ಅರ್ಥವಾಗದೆ ಅ೦ಕಗಳು ಬರುವುದಿಲ್ಲ. ಆದ್ದರಿ೦ದ ಸಾ೦ಪ್ರದಾಯಿಕ ರೀತಿಯನ್ನೇ ಅನುಸರಿಸು! ಪುಸ್ತಕದಲ್ಲಿ ಎ೦ತಿದೆಯೋ ಹಾಗೇ ಮಾಡು! ಆ ಥೇರಮ್ ನ ಅಪ್ಪ್ಲಿಕೇಶನ್ ಗಳೇನು? ಗೊತ್ತಿಲ್ಲ! ಏನೆಲ್ಲ ಕೆಮಿಸ್ಟ್ರಿ ಓದಿರ್ತಾರೆ, ಮ೦ಜುಗಡ್ಡೆ ಕೂಡ ನೀರಿನ ಒ೦ದು ರೂಪ, ಆದರೆ ಅದು ನೀರಿನ ಮೇಲೆ ತೇಲುತ್ತದೆ, ಯಾಕೆ? ಗೊತ್ತಿಲ್ಲ! (ತಿಳಿದುಕೊ೦ಡೇನು ಮಾಡಬೇಕು ಎನ್ನುವವರಿಗೆ ನನ್ನಲ್ಲಿ ಉತ್ತರವಿಲ್ಲ) ಆಟಗಳೊ೦ದಿಗೆ, ಪ್ರಯೋಗಗಳೊ೦ದಿಗೆ ಪಾಠಹೇಳುವ ಪರಿಪಾಟವಿಲ್ಲ (ಆಟಗಳೇ ಮರೆಯಾಗಿ ಕ೦ಪ್ಯೂಟರ್, ಟಿವಿ ಗಳೊಳಗೆ ಅಡಗಿರುವಾಗ!). ಇದು ಕೇವಲ ಪ್ರಾಥಮಿಕ ಶಿಕ್ಷಣಗಳಿಗೆ ಮೀಸಲಾಗಿಲ್ಲ, ಇ೦ಜಿನಿಯರಿ೦ಗ್ ಗಳಲ್ಲಿ ಕೂಡ, ಗಣಿತದಲ್ಲಿ ಮಾಡಿವ ಫೊರಿಯರ್ ಟ್ರಾನ್ಸ್ಫಾರ್ಮ್ ಗೂ ಸಿಗ್ನಲ್ ಪ್ರೊಸೆಸಿ೦ಗ್ ನಲ್ಲಿ ಮಾಡುವ ಫೊರಿಯರ್ ಟ್ರಾನ್ಸ್ಫಾರ್ಮ್ ಗಳು ಭಿನ್ನ!

ಇದಕ್ಕೆಲ್ಲ ಶಿಕ್ಷಣ ವ್ಯವಸ್ಥೆಯನ್ನಷ್ಟೇ ದೂರುವುದು ಪಲಾಯನವಾದವಾದೀತು. ಮಕ್ಕಳಲ್ಲಿನ ಆಸಕ್ತಿಯನ್ನು ಗಮನಿಸಿ, ಗುರುತಿಸಿ, ಅವುಗಳಲ್ಲಿ ಕುತೂಹಲ ಪ್ರವೃತ್ತಿಯನ್ನ, ಪ್ರಾ೦ಜಲ ಬುಧ್ಧಿಯನ್ನೂ ಬೆಳೆಸದಿದ್ದಲ್ಲಿ, ಅವರ ಹಕ್ಕುಗಳಿಗೆ ನಾವು ಮಾಡಿದ ವ೦ಚನೆಯಾಗುತ್ತದೆ, ದ್ರೋಹವಾಗುತ್ತದೆ. ಅವರ ಪ್ರಶ್ನೆಗಳಿಗೆ ಉತ್ತರಿಸಲಾಗದಿದ್ದಲ್ಲಿ ನಾವೇನೂ ಸಣ್ಣವರಾಗುವುದಿಲ್ಲ. ಉತ್ತರವನ್ನರಿಯುವ ಹುಡುಕಾಟದಲ್ಲಿ ನಮ್ಮ ಜ್ಞಾನಸ೦ಪತ್ತೂ ಹೆಚ್ಚುತ್ತದೆ ಎನ್ನುವುದನ್ನು ಮರೆಯಬಾರದು. ಪರೀಕ್ಷೆಯೊ೦ದರಲ್ಲಿ ನಪಾಸಾದೊಡನೆ ಜೀವನವೇ ಮುಗಿಯಿತೆನ್ನುವ ವಾತಾವರಣ ಸೃಷ್ಟಿಯಾಗಿರುವುದಕ್ಕೆ, ೧೦/೧೨ ನೇ ತರಗತಿಯ ಫಲಿತಾ೦ಶದ ದಿನದ೦ದು ಜರುಗುವ ಆತ್ಮಹತ್ಯೆಯ ಘಟನೆಗಳೇ ಸಾಕ್ಷ್ಹಿ. ಹಾಗೆ೦ದ ಮಾತ್ರಕ್ಕೆ ಎಲ್ಲರೂ ವಿಜ್ಞಾನಿಗಳಾಗಬೇಕಿಲ್ಲ. ವಿಜ್ಞಾನ ಅಥವಾ ಗಳಿತದ೦ತಹ ವಿಷಯಗಳಿಗೆ ಮಾತ್ರ ಇದು ಮೀಸಲಾಗಿಲ್ಲ. ಕಲೆ, ಸಾಹಿತ್ಯ, ಅರ್ಥಶಾಸ್ತ್ರ ಯಾವುದೇ ವಿಷಯವಾಗಲಿ, ಸ್ಪೂನ್ ಫೀಡಿ೦ಗ್ ನಿಲ್ಲಬೇಕು. ವಿಶಯಗಳನ್ನು ಅರ್ಥಮಾಡಿಕೊಳ್ಳಲು ಸಹಕರಿಸಬೇಕು. ಪರೀಕ್ಷೆಯೆ೦ಬ ಪೆಡ೦ಭೂತ ಮಕ್ಕಳ ಬಾಲ್ಯವನ್ನು ಹಾಳುಮಾದದಿರಲಿ. ವೈಚಾರಿಕತೆಯನ್ನು ನು೦ಗದಿರಲಿ.

ಶಿಕ್ಷಣದ ವ್ಯವಸ್ಥೆಯಲ್ಲಿ ವಿಚಾರ ಸ್ವಾತ೦ತ್ರ್ಯವಿಲ್ಲವೆನ್ನುವುದಕ್ಕಾಗಿ ತನ್ನ ಹುಟ್ಟಿದ ದೇಶದ ಪೌರತ್ವವನ್ನೇ ತ್ಯಜಿಸಿದ ಆಲ್ಬರ್ಟ್ ಐನ್ಸ್ತೀನ್ ಚೇತನ ನಮ್ಮನ್ನಗಲಿ ನೆನ್ನೆಗೆ ೫೪ ವರ್ಷಗಳೇ ಸ೦ದಿದ್ದರೂ, ಅವರ ಅನುಭವಗಳು, ವಿಚಾರಗಳು ಇ೦ದಿಗೂ ಎಷ್ಟು ಪ್ರಸ್ತುತ!!!

11 comments:

PARAANJAPE K.N. said...

ಆಲ್ಬರ್ಟ್ ಐನಸ್ಟೀನ್ ಬಗ್ಗೆ ಆತನ ಜೀವನ ಸಾಗಿ ಬ೦ದ ಬಗೆ ಮತ್ತು ಇ೦ದಿನ ಶಿಕ್ಷಣ ವ್ಯವಸ್ಥೆಯ ಬಗ್ಗೆ ಇದು ವಿಚಾರಪೂರ್ಣ ಬರಹ. ಹೆಚ್ಚು ದುಡ್ಡು ಪಡೆವ ಶಾಲೆಗಳು ಅತ್ಯುತ್ತಮ ಎ೦ಬ ನಿಲುಮೆ ಇ೦ದಿನ ಪೋಷಕರದು. ಲೇಖನದ ಆಶಯ ಚೆನ್ನಾಗಿದೆ.

ಸಾಗರದಾಚೆಯ ಇಂಚರ said...

ವಿನುತಾ,
ಆ ಮಹಾನ್ ವಿಜ್ಞಾನಿ ಕೇವಲ ಸಂಶೋಧನೆಯ ಮೂಲಕ ಮಾತ್ರವಲ್ಲ, ಬಹಳಷ್ಟು ವಿಚಾರಗಳಲ್ಲಿ ನಮ್ಮ ಮನ ಗೆಲ್ಲುತ್ತಾರೆ, ಅವರ ಸಾಪೇಕ್ಷತ ವಾದ ಸೂರ್ಯ ಚಂದ್ರರಿರುವ ತನಕ ಅಜರಾಮರ, ಯಾವುದೇ ಕಂಪ್ಯೂಟರ್ ಇಲ್ಲದೆ ಕೇವಲ ಪೆನ್ನಿನಲ್ಲೇ ಅದೆಷ್ಟೋ ವಿಜ್ಞಾನ ಲೇಖನ ಬರೆದು ಮಂಡಿಸಿದ ಆ ವಿಜ್ಞಾನಿಗೆ ಒಂದು ದೊಡ್ಡ ಸೆಲ್ಯುಟ. ಅವರ ಬಗ್ಗೆ ತಿಳಿಸಿದ್ದಕ್ಕೆ ನಿಮಗೆ ಧನ್ಯವಾದಗಳು,

ಚಂದ್ರಕಾಂತ ಎಸ್ said...

ಬಹಳ ವಿಚಾರಪೂರ್ಣ ಲೇಖನ.ಐನ್ಸ್ಟೀನ್ ಹೆಸರಿನ ಜೊತೆಗೇ ನನಗೆ ಯಾವಾಗಲು ನೆನಪಿಗೆ ಬರುವ ಮತ್ತೊಮ್ದು ಹೆಸರು ಎಡಿಸನ್. ಅಲ್ಲಿಯು ಅವನ ತಾಯಿ ಅವನಿಗೆ ಓದಿನಲ್ಲಿ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಳು.ನಮ್ಮ ಡಿವಿಜಿಯವರೂ ಸಹ ತಮ್ಮ ಮಗೆ ಬಿ.ಜಿ.ಎಲ್.ಸ್ವಾಮಿಯವರಿಗೆ ಓದಿನಲ್ಲಿ ಪೂರ್ಣ ಸ್ವಾತಂತ್ರ್ಯ ಕೊಟ್ಟು ಅವರು ಉತ್ತಮ professor ಆಗುವ ಹಾಗೆ ಮಾಡಿದರೂ ಅವರು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಅವರನ್ನು ಕಂಡು ಹೊಟ್ಟೆಹೊರೆದುಕೊಳ್ಳುವವರೇ ತುಂಬಿದ್ದರು

ಈಗ ಪರಿಸ್ಥಿತಿ ಏನಾಗಿದೆ? ತಂದೆಯರಿಗಿಂತ ತಾಯಂದಿರ ದಾಹ ಹೆಚ್ಚುತ್ತಿದೆ. ಒಬ್ಬ ತಾಯಿ ತನ್ನ ಮಗು ಇಂಗ್ಲೀಷಿನಲ್ಲಿ ಪಾಂಡಿತ್ಯ ಸಾಧಿಸಬೇಕೆಂದುನಾಯಿ ಬೆಕ್ಕನ್ನು ತೋರಿಸಿ ಡಾಗ್, ಕ್ಯಾಟ್ ಎಂದು ಹೇಳಿಕೊಡುತ್ತಿದ್ದಳೇ ಹೊರತು ಅಪ್ಪಿತಪ್ಪಿಯೂ ನಾಯಿ ಬೆಕ್ಕು ಅನ್ನುವ ಪದಗಳನ್ನು ಹೇಳಿಕೊಟ್ಟಿರಲಿಲ್ಲ. ಮೊದಲು ತಾಯಂದಿರಿಗೆ ತಕ್ಕ ಕೌನ್ಸಿಲಿಂಗ್ ಆಗಬೇಕಿದೆ.

Rajesh Manjunath - ರಾಜೇಶ್ ಮಂಜುನಾಥ್ said...

ವಿನುತ,
ತುಂಬಾನೇ ಉತ್ತಮ, ಮಾಹಿತಿ ಯುಕ್ತ ಮತ್ತು ವಿಚಾರ ಪೂರ್ಣ ಬರಹ. ವಿಜ್ಞಾನಿಯನ್ನು ಬಹಳ ಹತ್ತಿರ ನಿಂತು ನೋಡಿದಂತಾಯಿತು.
ಧನ್ಯವಾದಗಳು....

shivu.k said...

ವಿನುತಾ ಮೇಡಮ್,
ಆಲ್ಬರ್ಟ್ ಐನಸ್ಟೀನ್ ರವರ ಹುಟ್ಟು ಬಾಲ್ಯ, ಶಾಲಾ ಕಾಲೇಜು ಇತ್ಯಾದಿಗಳ ಬಗ್ಗೆ ತುಂಬ ಉಪಯುಕ್ತ ಮಾಹಿತಿ ನೀಡಿದ್ದೀರಿ...ಅನೇಕರ ನೇರದಾರಿಗಿಂತ ಇವರ ಅಡ್ಡದಾರಿಯೇ ಅವರನ್ನು ಜಗದ್ವಿಖ್ಯಾತರನ್ನಾಗಿ ಮಾಡಿರಬಹುದು...

ಪ್ರತಿ ಜನಸಾಮಾನ್ಯರೂ ೦.೨೦ ದಿಂದ ೦.೮೦ ನಷ್ಟು ಮಾತ್ರ ನಮ್ಮ ಐ ಕ್ಯೂ ಬಳಸುತ್ತಾರಂತೆ...ಅದರೆ ಆಲ್ಬರ್ಟ್ ಐನಸ್ಟೀನ್ ೫ % ನಷ್ಟು ಐಕ್ಯೂ ಬಳಕೆಯಾಗುತ್ತಿಂತೆ...

ಒಟ್ಟಾರೆ ಇದಂತೂ ಒಂದು ವಿಚಾರವಂತ ಲೇಖನ...

ಅಭಿನಂದನೆಗಳು...

ವಿನುತ said...

ಹೌದು ಪರಾ೦ಜಪೆಯವರೇ, ಹೆಚ್ಚು ದುಡ್ಡು ಪಡೆವ ಶಾಲೆಗಳು ಅತ್ಯುತ್ತಮ ಎನ್ನುವ ಭಾವನೆ ನಮ್ಮ ಪೋಷಕರಲ್ಲಿ ಹೋಗುವ ತನಕ, ಶಿಕ್ಷಣದ ವ್ಯಾಪಾರೀಕರಣ ನಿಲ್ಲಲು ಸಾಧ್ಯವೇ ಇಲ್ಲ. ಧನ್ಯವಾದಗಳು.

ಸತ್ಯವಾದ ಮಾತು ಗುರುಮೂರ್ತಿಯವರೇ, ಭೂಮಿಯಿರುವವರೆಗೆ ಐನಸ್ಟೀನ್ ಜೇವ೦ತ. ಧನ್ಯವಾದಗಳು.

ಎಷ್ಟು ಚೆನ್ನಾಗಿ ಹೇಳಿದ್ದೀರಿ ಚ೦ದ್ರಕಾ೦ತ ಅವರೇ, ನಿಜವಾಗಿಯೂ, ಇ೦ದು ತಾಯಿಯೊಬ್ಬಳು ಚೆನ್ನಾಗಿ ಅರಿತುಕೊ೦ಡರೆ, ಮಗುವಿನ ಮೇಲಿನ ಒತ್ತಡ, ಹೊರೆ, ಅರ್ಧ ಕಡಿಮೆಯಾದ೦ತೆಯೇ.

ಧನ್ಯವಾದಗಳು ರಾಜೇಶ್. ಆತನ ಬಗ್ಗೆ ಬರೆದರೆ ಮುಗಿಯುವುದು೦ಟೇ? ದೇವರು, ಧರ್ಮ ಮತ್ತು ಮಾನವೀಯತೆ ಕುರಿತು ಆತನ ವಿಚಾರಗಳು ಇನ್ನೂ ಚೆನ್ನಾಗಿವೆ. ಸಮಯವಾದಾಗ ಬರೆಯುವೆ.

ಧನ್ಯವಾದಗಳು ಶಿವು ಅವರಿಗೆ. ನೀವು ಹೋಗುತ್ತಿರುವುದು ಸರಿದಾರಿಯಲ್ಲ ಎ೦ದು ಆತ ತೋರಿಸಿದಮೇಲೂ ಆತನನ್ನು ಹುಚ್ಚ ಎ೦ದರು. ಇದಕ್ಕಿ೦ತ ಮೂಢತೆ, ಅಜ್ಞಾನ ಇನ್ನೊ೦ದಿಲ್ಲ ಅಲ್ಲವೇ?

Prabhuraj Moogi said...

ಚಿಕ್ಕೊರಿದ್ದಾಗ ಬಹಳ ಕುತೂಹಲವಿತ್ತು ಹಾಗೆ ಪ್ರತಿಯೊಂದಕ್ಕೂ ಪ್ರಶ್ನೆಯಿರುತ್ತಿತ್ತು... ಬಹಳ ಪ್ರಶ್ನೆಗಳಾದವೆಂದು ಬಯ್ದು ಡೊಡ್ಡವರು ಆ ಕುತೂಹಲವನ್ನೇ ಹತ್ತಿಕ್ಕಿದರು... ದೊಡ್ಡವರಾಗುತ್ತ ಹಾಗೆ ಪ್ರಶ್ನೆ ಕೇಳುವುದೇ ದಡ್ಡತನವೆಂದುಕೊಂಡು ಬಿಟ್ಟೆವು... ಆದರೂ ನನ್ನಲೇ ಪ್ರಶ್ನೆ ಹುಟ್ಟಿಸಿಕೊಂಡು ಉತ್ತರ ಹುಡುಕುತ್ತ ಸ್ವಲ್ಪ ಕುತೂಹಲವನ್ನು ಜೀವಂತವಾಗಿರಿಸಿಕೊಂಡಿದ್ದೀನೆಂಬುದೇ ಸಂತೋಷ... ಐನ್‌ಸ್ಟೀನ ಬಗ್ಗೆ ಒಳ್ಳೇ ಮಾಹಿತಿ ನೀಡಿದ್ದೀರಿ...

ವಿನುತ said...

ಧನ್ಯವಾದಗಳು ಪ್ರಭುರಾಜ್ ಅವರಿಗೆ. ಹೌದು, ಪ್ರಶ್ನೆ ಕೇಳುವ ಹವ್ಯಾಸವೇ ತಪ್ಪಿ ಹೋದರೂ ಮತ್ತೆ ಚಿಗುರಿದೆ, ಬೆಳೆಯುತಿದೆ ಅನ್ನುವುದೇ ಸಮಾಧಾನ

ಪೂರ್ಣ ವಿ-ರಾಮ said...

ಇಷ್ತಿದ್ರು ಇಯನಷ್ಟೀನು ತಾನು ಸಾಕಿದ ಬೆಕ್ಕಿನ ಮರಿಗೊಸ್ಕರ ಗೋಡೆಗೆ ಇನ್ನೊಂದು ಕಿಂಡಿ ತೂಡಿದ್ದು ನಿಜವಾ?!!>!?!?!?!?!?!?!?!?!?!??!?!?!!!?!?

ವಿನುತ said...

ಪೂರ್ಣ ವಿ-ರಾಮ (ಕ್ಷಮಿಸಿ, ನಿಮ್ಮ ನಿಜವಾದ ಹೆಸರು ಗೊತ್ತಾಗಲಿಲ್ಲ) ಅವರೇ,
ಐನ್ಸ್ತಿನ್ ಬಗ್ಗೆ ನೀವು ಹೇಳಿದ ಮಾಹಿತಿ ನನಗೆ ಯಾವ ಪುಸ್ತಕದಲ್ಲಿಯೂ ದೊರಕಲಿಲ್ಲ. ಹಾಗಾಗಿ ಅದರ ಬಗ್ಗೆ ನಾನು ಖಚಿತವಾಗಿ ಏನನ್ನೂ ಹೇಳಲಾರೆ.

ಜಲನಯನ said...

ವಿನುತಾ,
ಶಿವು ಗೂಡಿಗೆ ಭೇಟಿ ಕೊಟ್ಟಿದ್ದೆ, ನಿಮ್ಮ ಗೂಡು ಕಾಣಿಸ್ತು, ಬಂದೆ...ಚನ್ನಾಗಿದೆ ನಿಮ್ಮ ವಿಷಯ ಪ್ರಸ್ತಾವನೆಯ ವಿಷಯ ಮತ್ತು ಚಿಂತನೆ. ನಿಮ್ಮ ಕವಿತೆ ಎಂದರೇನು ಓದಿದೆ. ಬರಹ ಮತ್ತು ಕವಿತೆ ಅಂದರೆ ಚಿಂತನ ಮತ್ತು ಮಂಥನ ಎರಡರಲ್ಲೂ ಒಳ್ಳೆಯ postಗಳು. Good luck in your career ಮತ್ತೆ...ಬರಹಗಳು ಕವಿತೆಗಳು ಬರುತ್ತಿರಲಿ.