Friday, November 06, 2009

ಅರ್ಥ

ಭಾರತದ ಸಾಮಾನ್ಯ ಕುಟುಂಬಗಳಲ್ಲಿ ಆರ್ಥಿಕ ಕಾರಣಗಳಿಂದ ಹುಟ್ಟುತ್ತಿರುವ ಸಣ್ಣ ಜಗಳಗಳು ಮನೆಯಲ್ಲಿರುವ ಮಕ್ಕಳ ಮನಸ್ಸುಗಳಲ್ಲಿ ಗೊಂದಲಗಳನ್ನು ಏಳಿಸುತ್ತಿವೆ. ಮನೆಯಲ್ಲಿ ನೆಮ್ಮದಿ ಕಾಣದ ಮಕ್ಕಳು ಹಿಂಸೆಯಲ್ಲಿ ಆನಂದ ಕಾಣುವಂತಹ ಸ್ಥಿತಿಯುಂಟಾಗುತ್ತಿದೆ. ಇದರಿಂದಾಗಿ ನಮ್ಮ ಯುವಜನಾಂಗವು ಆತಂಕವಾದ ಕಡೆಗೆ ಅಥವಾ ಕೋಮುವಾದಿತ್ವ ಅಥವಾ ಮೂಲಭೂತವಾದಿತ್ವದ ಕಡೆಗೆ ತಿರುಗುತ್ತಿದ್ದಾರೆ. ಇದರಿಂದ ನಮ್ಮ ದೇಶಾದ್ಯಂತ, ಜಾತಿ-ಧರ್ಮಗಳನ್ನು ಮೀರಿ ಹಿಂಸಾಚಾರಗಳು ಆಗುತ್ತಿವೆ. ಇದರಿಂದಾಗಿ ನಮ್ಮ ದೇಶವು ವಿಚ್ಛಿದ್ರಕಾರಿ ಮನಸ್ಸುಗಳ ಕೈಯಲ್ಲಿ ಹೇಗೆ ಸೇರಿಹೋಗುತ್ತಿದೆ ಎಂಬುದನ್ನು ಪ್ರತಿನಿತ್ಯ ಪತ್ರಿಕೆಗಳು ಹೆಣಗಳ ಸಂಖ್ಯೆಯನ್ನು ಮುಖಪುಟದಲ್ಲಿಯೇ ಹಾಕುವ ಮೂಲಕ ದಾಖಲಿಸುತ್ತಿವೆ. ಇವೆಲ್ಲವುಗಳ ಪರಿಣಾಮವಾಗಿ ಚಿತ್ರಿತವಾದದ್ದೇ "ಅರ್ಥ". - ಇದು "ಅರ್ಥ" ಚಿತ್ರದ ಕುರಿತಾಗಿ ಸಮುದಾಯ ((ಸಮುದಾಯ ಚಿತ್ರೋತ್ಸವ - ೨೦೦೯) ನೀಡಿರುವ ಒಕ್ಕಣೆ.

"ಅರ್ಥ" - ಈ ಪದ, ತಿರುಳು, Meaning ಎಂಬುದಾಗಿ ಮತ್ತು ಹಣ, ವಿತ್ತ ಎಂಬುದಾಗಿ ಚಾಲ್ತಿಯಲ್ಲಿದೆ. ಇವೆರಡೂ ಪ್ರಯೋಗಗಳನ್ನು ಬಳಸಿಕೊಂಡು ಇನ್ನೊಂದು ಸಮಾಜಮುಖಿ ಅರ್ಥವನ್ನು ಕಂಡುಕೊಳ್ಳುವಲ್ಲಿ ನವೀನ ಪ್ರಯೋಗವೇ ಈ ಚಿತ್ರ ಎಂದು ಭಾವಿಸುತ್ತೇನೆ. ಹಂತ ಹಂತವಾಗಿ ಸಮಸ್ಯೆಗಳು ಹರಡಿಕೊಳ್ಳುತ್ತಾ ಸಾಗುತ್ತವೆ. ಒಟ್ಟಾರೆ, ಶ್ರೀಸಾಮಾನ್ಯನ ದೈನಂದಿನ ಆರ್ಥಿಕ ಬಿಕ್ಕಟ್ಟುಗಳು, ಜಾಗತೀಕರಣ, ಪಾಶ್ಚಿಮಾತ್ಯ ಅಂಧಾನುಕರಣೆ ಮತ್ತು ಜಾತೀಯ ಕಲಹ ಅಥವಾ ಮೂಲಭೂತವಾದ ಎಂಬುದಾಗಿ ವಿಂಗಡಿಸಬಹುದು.

ಶ್ರೀಸಾಮಾನ್ಯನನ್ನು ಆಟೋಚಾಲಕ ಸೀನಪ್ಪ (ರಂಗಾಯಣ ರಘು) ಪ್ರತಿನಿಧಿಸಿದ್ದಾನೆ. ಆಟೋ ಮಾಲೀಕನಿಗೆ ದೈನಂದಿನ ಬಾಡಿಗೆ ನೀಡಲಾಗದೆ ಉದ್ಭವಿಸುವ ಆರ್ಥಿಕ ಸಮಸ್ಯೆ ಕೌಟುಂಬಿಕ ಕಲಹಕ್ಕೆ ಕಾರಣವಾಗುತ್ತದೆ. ಪತ್ನಿ (ಮೇಘ ನಾಡಿಗೇರ್) ಯನ್ನು ಹಿಂಸಿಸುವ, ಮಕ್ಕಳನ್ನು ದೂಷಿಸುವುದರೊಂದಿಗೆ ಅವಸಾನಗೊಳ್ಳುತ್ತದೆ. ಇಲ್ಲಿ ಹಿಂಸೆಯ ವೈಭವೀಕರಣವಾಗಿದೆಯೇನೋ ಎಂದೊಂದು ಕ್ಷಣ ಅನ್ನಿಸಿದರೂ, ಅದೇ ವಾಸ್ತವ ಎನ್ನುವ ಸತ್ಯವನ್ನು ನಾವು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಚಿತ್ರ ರೂಪಿಸಿರುವ ಎಳೆಯ ಹಿನ್ನೆಲೆಯಲ್ಲಿ ಇದರ ಸಮರ್ಥನೆ ಸರಿಯಾಗಿ ಮೂಡಿಬಂದಿಲ್ಲವೆನ್ನಬಹುದು. ಹೊರಗಡೆ ತನ್ನ ಸ್ನೇಹಿತರೊಂದಿಗೆ, ವೇಶ್ಯೆಯಾದರೂ ರಾಣಿಯಮ್ಮ (ಅರುಂಧತಿ ಜತ್ಕರ್) ನೊಡನೆ ಶುದ್ಧ ಸ್ನೇಹದಿಂದಿರುವ ಸೀನಪ್ಪ, ಮನೆಗೆ ಬಂದೊಡನೆ ಉಗ್ರಪ್ಪನಾಗುತ್ತಾನೆ. ಏನೋ ನೆವ ತೆಗೆದು ರಂಪ ಮಾಡುತ್ತಾನೆ. ಹೆಂಡತಿಯನ್ನು ಹೊಡೆದು ಹಿಂಸಿಸುತ್ತಾನೆ. ಮಕ್ಕಳು ಮೂಕಪ್ರೇಕ್ಷಕರಾಗುತ್ತಾರೆ (ಸೀನಪ್ಪನ ಮಗ ಶ್ರೀಕಾಂತನ ದು:ಖ, ಅಸಹಾಯಕತೆ, ಹಾಗೂ ಗೊಂದಲಗಳ ನಿರ್ಭಾವುಕ ಅಭಿನಯ ಒಂದು ಕ್ಯಾಚ್). ಇಲ್ಲಿ ಆರ್ಥಿಕ ಬಿಕ್ಕಟ್ಟಿಗಿಂತಲೂ ಸೀನಪ್ಪನ ಮನಸ್ಥಿತಿಯೇ ಸಮಸ್ಯೆಗೆ ಕಾರಣವೇನೋ ಅನಿಸುತ್ತದೆ (ಮತ್ತೊಮ್ಮೆ ಬೀchi ಯವರ ಹುಚ್ಚು-ಹುರುಳಿನ ಹೆಂಡತಿಯನ್ನೇಕೆ ಹೊಡೆಯಬೇಕು? ನೆನಪಾಗುತ್ತದೆ). ನಾಲ್ಕು ಗೋಡೆಗಳ ನಡುವೆ ಇರುವ ಹೆಣ್ಣು, ಹೊರಗೆ ಹೋಗಿ ದುಡಿದುಕೊಂಡು ಬರುವ ಗಂಡನನ್ನೇನು ಪ್ರಶ್ನಿಸುವುದು ಎನ್ನುವ ಹಮ್ಮಿರಬಹುದು. ಅಷ್ಟೆಲ್ಲ ಹಿಂಸೆಯನ್ನು ಅನುಭವಿಸಿದ್ಯಾಗ್ಯೂ, ಮಗಳು "ಅಪ್ಪನ ಜೊತೆ ಟೂ ಬಿಡಮ್ಮ" ಎಂದು ಮುಗ್ಧವಾಗಿ ನುಡಿದಾಗ, "ನನ್ನ ಗಂಡನೊಡನೆಯೇ ಟೂ ಬಿಡಲು ಹೇಳುತ್ತೀಯೇನೆ?" ಎಂದು ಮಗಳಿಗೇ ಹೊಡೆಯುತ್ತಾಳೆ ಸೀನಪ್ಪನ ಹೆಂಡತಿ!! ಎಲ್ಲಿಯವರೆಗೂ, ಗಂಡನ ಎಲ್ಲ ಹಸಿವುಗಳನ್ನು ತೀರಿಸುವುದೇ ತಮ್ಮ ಜೀವನದ ಪರಮೋಚ್ಛ ಕರ್ತವ್ಯವೆಂದು ತಿಳಿದಿರುವ ಹೆಂಗಸರಿರುತ್ತಾರೋ, ಹೆಣ್ಣು ಸಹನಾಮೂರ್ತಿ, ಕ್ಷಮಯಾಧರಿತ್ರೀ ಎಲ್ಲವನ್ನೂ ಸೈರಿಸಿಕೊಂಡು ಹೋಗಬೇಕು ಆಗಲೇ ಸಂಸಾರ ಉಧ್ಧಾರವಾಗುವುದು ಎಂದು ಕಿವಿಯೂದುವವರು ಇರುತ್ತಾರೋ, ಅಲ್ಲಿಯವರೆಗೂ ಈ ನರಕದಿಂದವರಿಗೆ ಬಿಡುಗಡೆಯಿಲ್ಲ.

ಬಾಡಿಗೆ ಆಟೋ ಓಡಿಸುವ ದೈನಂದಿನ ಜಂಜಾಟದಿಂದ ಮುಕ್ತಿ ಪಡೆಯಲು ಸ್ವಂತ ಆಟೋದ ಕಡೆ ಸೀನಪ್ಪನ ಮನಸ್ಸು ವಾಲುತ್ತದೆ (ಬಾಡಿಗೆ ಮನೆಯಲ್ಲಿರುವ ಪ್ರತಿಯೊಬ್ಬರೂ ಸ್ವಂತಕ್ಕೊಂದು ಸೂರು ಮಾಡಿಕೊಳ್ಳಲು ಹಪಹಪಿಸುವಂತೆ!). ಶ್ಯೂರಿಟಿ ಇದ್ದರೆ ಮಾತ್ರ ಸಾಲ ನೀಡುವ ಭಾರತೀಯ ಬ್ಯಾಂಕುಗಳ "ಅರ್ಥ" ವ್ಯವಸ್ಥೆ, ಕೊಡಿಸಿದ ಸಾಲದಲ್ಲಿ "ಪರ್ಸೆ೦ಟೇಜ್" ಕೇಳುವ ನಮ್ಮ ಭ್ರಷ್ಟಾಚಾರ ವ್ಯವಸ್ಥೆಯನ್ನು ಚೆನ್ನಾಗಿ ತೋರಿಸಿದ್ದಾರೆ. ಅಜ್ಜಿಯ ಹೆಸರಿನಲ್ಲಿರುವ ಮನೆಯನ್ನು ಶ್ಯೂರಿಟಿಗಾಗಿ ನೀಡುವಲ್ಲಿನ ತೊಡಕಿನ ಬಗ್ಗೆ ಮುಂದಾಲೋಚಿಸಿ ಮಾತನಾಡುವ ಪತ್ನಿ ಮತ್ತೊಮ್ಮೆ ದೂಷಣೆಗೊಳಗಾಗುತ್ತಾಳೆ! ಶೇಕಡಾ ೧೪ ರಷ್ಟು ಬಡ್ಡಿ, ಸಾಲ ತೀರುವವರೆಗೆ ಬ್ಯಾಂಕಿನವರ ವಶದಲ್ಲಿಯೇ ಆಟೋ ಎನ್ನುವ ನಿಭಂದನೆಗಳ ನಡುವೆಯೂ, ಯಾವುದೇ ದಾಖಲಾತಿಗಳನ್ನು ಕೇಳುವುದಿಲ್ಲ ಎನ್ನುವ ಸಂಗತಿಯೊಂದೇ ಸೀನಪ್ಪನನ್ನು ವಿದೇಶೀ ಬ್ಯಾಂಕಿನ ಸಾಲದ ತೆಕ್ಕೆಗೆ ತಳ್ಳುತ್ತದೆ. "ತಿಮ್ಮಯ್ಯನಿಗೆ ಹಣ ಕಟ್ಟದೆ ಇದ್ರೆ, ಹಣ ಬಿಟ್ಟು ಬರೀ ಆಟೋ ಎತ್ಕೊಂಡು ಹೋಗ್ತಾನ, ಆದ್ರೆ ಈ ಪರದೇಶಿ ಬ್ಯಾಂಕಿನವ್ರು ಆಟೋ ಜೊತಿಗೆ ನಿನ್ನೂ ಎಳ್ಕೊಂಡು ಹೋದ್ರೇನ್ಮಾಡ್ತೀ?" ಎನ್ನುವ ರಾಣಿಯಮ್ಮನ ಮಾತುಗಳು ನಿಜಕ್ಕೂ ಯೋಚನಾರ್ಹವೆನಿಸುತ್ತವೆ. ಲಾಭವಿಲ್ಲದೇ ಯಾರೂ business ಮಾಡುವುದಿಲ್ಲ, ಮಾಡಲಾಗುವುದೂ ಇಲ್ಲ. ನಮಗೆ ಪುಕ್ಕಟೆಯಾಗಿ ಅಥವಾ ಕಡಿಮೆ ದರಕ್ಕೆ ಕೊಡಲು ಅವರು ಮಾಡುತ್ತಿರುವುದೇನೂ ದಾನವಲ್ಲ, ಸೇವೆಯಲ್ಲ; ವ್ಯಾಪಾರ. ಆದ್ದರಿಂದ ಅವರ "*" ಮಾರ್ಕುಗಳನ್ನು ಸರಿಯಾಗಿ "ಅರ್ಥ" ಮಾಡಿಕೊಂಡು ವ್ಯವಹರಿಸುವುದು ಕ್ಷೇಮ. ಸಾಲ ಕೇಳಲು ಬಂದಾಗ, ಕೊಡಿಸುವವ, ಒಮ್ಮೆ ಕಾರ್ಡ್ಸ್, ಮತ್ತೊಮ್ಮೆ ಚದುರಂಗ ಆಡುತ್ತಿರುವುದು ಮಾರ್ಮಿಕವಾಗಿದೆ.

ಸೀನಪ್ಪ ತನ್ನ ಸ್ನೇಹಿತರ ಜೊತೆಯಲ್ಲಿ "ಬಾರ್" ನಲ್ಲಿ ಕುಳಿತು ಕಷ್ಟಸುಖ ಹಂಚಿಕೊಳ್ಳುತ್ತಿರುವಾಗ "ನಾವು ಇಲ್ಲಿರಬಾರದಾಗಿತ್ತು, ಫಾರಿನ್ ನಲ್ಲಿರಬೇಕಾಗಿತ್ತು. ಆರಾಮಾಗಿರಬಹುದಾಗಿತ್ತು" ಅಂದುಕೊಳ್ಳುತ್ತಾರೆ. ಮತ್ತೊಂದು ಸಂದರ್ಭದಲ್ಲಿ "ನಿನ್ನ ಮನೆಯವರ ಜೊತೆ ಫಾರಿನ್ನಾಗೆ ಮಾಡ್ತಾರಂತಲ್ಲ ಹಂಗೆ ವೀಕೆಂಡ್ ಮಾಡು, ನೆಮ್ಮದಿಯಾಗಿರ್ತೀಯ" ಅನ್ನೋ ಸಲಹೆ ಬರುತ್ತದೆ. ಈ ಮಾಹಿತಿ ತಂತ್ರಜ್ಞಾನ ಯುಗದಲ್ಲೂ ನಮ್ಮ ಜನರಲ್ಲಿ "ಫಾರಿನ್" ಕುರಿತಾಗಿ ಇರುವ ತಪ್ಪು ಅಭಿಪ್ರಾಯಗಳನ್ನು ಕುರಿತು ಅಚ್ಚರಿಯಾಗುತ್ತದೆ! ಅಲ್ಲಿಯೂ ಭಿಕ್ಷುಕರಿದ್ದಾರೆ, ಕಳ್ಳರಿದ್ದಾರೆ, ಕೊಲೆಗಾರರಿದ್ದಾರೆ, ಅಕ್ರಮ ನಿವಾಸಿಗಳಿದ್ದಾರೆ, ವಲಸಿಗರಿದ್ದಾರೆ, ಹುಚ್ಚರಿದ್ದಾರೆ! ವರ್ಣಬೇಧದ ಸಣ್ಣ under current ಇನ್ನೂ ಹರಿಯುತ್ತಿದೆ! ಅಲ್ಲಿಯೂ ವಿವಿಧ ಜಾತಿಗಳಿವೆ, ಅಪ್ಪಟ ಲಂಪಟ "ಧರ್ಮ"ಗುರುಗಳಿದ್ದಾರೆ! ಒಂದು ಜಾತಿಯವರು ಇನ್ನೊಂದು ಜಾತಿಯ ಆರಾಧನಾ ಸ್ಥಳಕ್ಕೆ ಹೋಗುವುದಿಲ್ಲ, ಅದೇನೋ ಅಸಡ್ಡೆ, ಅಗೌರವ! ನಾವೆಲ್ಲ ಒಬಾಮನ ದೀಪಾವಳಿ ನೋಡಿ ಮರುಳಾದದ್ದೇ ಹೆಚ್ಚು! ಅದೇಕೋ ನಮ್ಮ ಮಾಧ್ಯಮಗಳಿಗೆ ನಮ್ಮ ಹುಳುಕುಗಳನ್ನು ವೈಭವೀಕರಿಸುವಲ್ಲಿ ಇರುವ ಉತ್ಸುಕತೆ ಅಲ್ಲಿನ ಮಾಧ್ಯಮಗಳಲ್ಲಿಲ್ಲ. ಅದೇಕೋ ನಮ್ಮ ಜನಕ್ಕೆ ಆದಾಯ ಡಾಲರುಗಳಲ್ಲಿರುವುದು ಕಾಣುತ್ತದೆಯೇ ಹೊರತು ವೆಚ್ಚವೂ ಡಾಲರ್ ಗಳಲ್ಲಿಯೇ ಎನ್ನುವುದು ಕಾಣುವುದಿಲ್ಲ! ಅಲ್ಲಿ ಹೋಗಿ ಪೆಟ್ರೋಲ್ ಬಂಕುಗಳಲ್ಲಿ, ಮಾಲ್ ಗಳ ರೆಸ್ಟ್ ರೂಮ್ ಗಳಲ್ಲಿ ಕ್ಲೀನರ್ ಗಳಾಗಿ ಕೆಲಸಮಾಡಿದರೂ ಸರಿಯೇ, ಫಾರಿನ್ ಕೆಲಸವೇ ಆಗಬೇಕು! ಅದೇ ಕೆಲಸ ಇಲ್ಲಿ ಮಾಡಿದರೆ, dignity of labour! ಅದೇಕೋ ಅಲ್ಲಿನ ಐಷಾರಾಮ ಜೀವನವನ್ನು ನೋಡುವ ನಾವು, ಅಲ್ಲಿನ ಶಿಸ್ತು ಶುಚಿತ್ವವನ್ನು, ಗಂಡ ಹೆಂಡತಿಯನ್ನು ವಿನಾಕಾರಣ ಹೊಡೆಯುವುದಿಲ್ಲ ಎನ್ನುವುದನ್ನು, ದಂಪತಿಗಳು ಮಕ್ಕಳ ಮುಂದೆ ಜಗಳವಾಡುವುದಿಲ್ಲ ಎನ್ನುವುದನ್ನು, ವೃತ್ತಿ-ಸಂಸಾರವನ್ನು ಬೆರೆಸಿ ಕಿಚಡಿಯನ್ನು ಅವರು ಮಾಡುವುದಿಲ್ಲ ಎನ್ನುವುದನ್ನು ನಾವು ಗಮನಿಸುವುದೇ ಇಲ್ಲ! ಇಷ್ಟೆಲ್ಲದರ ನಡುವೆಯೂ ಮನೆಯವರೊಡನೆ ಸಮಯ ಕಳೆಯಬೇಕೆಂಬುದನ್ನು ಪಾಶ್ಚಿಮಾತ್ಯರ ವೀಕೆಂಡೇ ನಮಗೆ ಕಲಿಸಬೇಕಾಯಿತೇ? ವಿಪರ್ಯಾಸ!!

ಮನೆಯಲ್ಲಿ ದಿನನಿತ್ಯ ನಡೆಯುವ ಪ್ರಹಸನದಿಂದ ದೂರವಾಗಲು, ಜಂಜಡಗಳಿಂದ ಬಿಡಿಸಿಕೊಳ್ಳಲು, ಹೊತ್ತು ಕಳೆಯಲು, ಸೀನಪ್ಪನ ಮಗ ಶ್ರೀಕಾಂತ ಯಾವುದೋ ಮೂಲಭೂತವಾದಿ ಸಂಘಟನೆಗೆ ಸೇರಿರುತ್ತಾನೆ. ಅಲ್ಲಿನ ವಿಚಾರಗಳಿಂದ ಪ್ರಭಾವಿತನಾಗಿ ಅಪ್ಪನ ವಿದೇಶಿ ಆಚರಣೆಗಳ ವಿರುಧ್ಧ ಮಾತನಾಡುತ್ತಾನೆ; ರಾಣಿಯಮ್ಮನನ್ನು ಬದಲಾಯಿಸುತ್ತಾನೆ. ಮಹಾನ್ ದೇಶಭಕ್ತ, ಕ್ರಾಂತಿಕಾರಿ ನಾಯಕ, ಸಂಸ್ಕೃತಿಯ ಪರಿಪಾಲಕನಂತೆ ತಂದೆಗೆ ಕಾಣುತ್ತಾನೆ. ಮಗ ಹೇಳಿದ್ದು ಅರ್ಥವಾಗಲಿಲ್ಲ ಎಂಬ ಕಾರಣಕ್ಕಾಗಿಯೇ ಮಗ ಏನನ್ನೋ ಮಹತ್ತರವಾದದ್ದನ್ನು ಹೇಳುತ್ತಿದ್ದಾನೆ ಎಂದುಕೊಳ್ಳುವ ಸೀನಪ್ಪನಲ್ಲಿ ನಿಜವಾದ ಅರ್ಥದಲ್ಲಿ ಮುಗ್ಧ ಶ್ರೀಸಾಮಾನ್ಯ ಪ್ರತಿಬಿಂಬಿಸುತ್ತಾನೆ. ಒಂದೊಮ್ಮೆ, ಮಗ ಡ್ರಗ್ಸ್ ಎನ್ನುವ ದುಶ್ಚಟಕ್ಕೆಲ್ಲಿ ಬಲಿಯಾಗುವನೋ ಎಂದು ಕಳವಳಪಟ್ಟು ಅವುಗಳಿಂದ ದೂರವಿರಲು ತಾಕೀತು ಮಾಡುವ ಸೀನಪ್ಪನಿಗೆ, ಈಗ ಮಗನಿಗಂಟಿಕೊಂಡಿರುವ "ಚಟ" ಯಾವುದೇ ಗಾಂಜಾ, ಅಫೀಮಿಗಿಂತಲೂ ಅಪಾಯಕಾರಿ ಎನ್ನುವುದು ಗೊತ್ತಾಗುವುದೇ ಇಲ್ಲ. ಅದು ಆತನನ್ನಷ್ಟೇ ಅಲ್ಲ, ಅನೇಕಾನೇಕ ಅಮಾಯಕರನ್ನೂ, ಸಮಾಜದ ಸ್ವಾಸ್ಥ್ಯವನ್ನೂ ಬಲಿತೆಗೆದುಕೊಳ್ಳುತ್ತದೆ ಎಂಬುದು "ಅರ್ಥ"ವಾಗುವುದೇ ಇಲ್ಲ. ಕಾಡುವ ವಿಷಯವೆಂದರೆ, ಯಾವನೋ ತಲೆಮಾಸಿದವನ ಹಳಸಲು ಆದರ್ಶಗಳಿಗೆ, ಕೊಳೆತ ಸಿಧ್ಧಾಂತಗಳಿಗೆ, ಕೆಟ್ಟ ರಾಜಕೀಯಕ್ಕೆ ಇರುವ ಪ್ರಭಾವ, ಶಾಂತಿ ನೆಮ್ಮದಿಯ ಸಮಾಜವನ್ನು ಬಯಸುವ ಸಾಮಾನ್ಯರ ಆಲೋಚನೆಗಳಿಗಿಲ್ಲವಲ್ಲ! ಸಾಮಾನ್ಯ ಜನರಲ್ಲಿರುವ ಜಾತಿ ಪಂಗಡಗಳನ್ನು ಮೀರಿದ ಸ್ನೇಹ ಪ್ರೀತ್ಯಾದರಗಳು ಅದೇಕೋ "ಬುಧ್ಧಿವಂತ" ಜನರಲ್ಲಿ ಕಾಣೆಯಾಗಿವೆ! ಇಷ್ಟಾದರೂ ಅಂತದೊಂದು ಪ್ರಭಾವಳಿಗೆ ಬಲಿಯಾಗುವವರು ಸಾಮಾನ್ಯರೇ! ಸ್ವಾತಂತ್ರ್ಯದ ಜೊತೆಜೊತೆಗೆ ಬಂದ ದೇಶವಿಭಜನೆಯ ಗಲಭೆಯಿಂದ ಪ್ರಾರಂಭವಾಗಿ, ಸಿಖ್ ಹತ್ಯಾಕಾಂಡ, ಅಯೋಧ್ಯಾ ವಿವಾದ, ಗೋಧ್ರಾ ಪ್ರಕರಣ, ಈದ್ಗಾ ಪ್ರಕರಣ..... ಇಲ್ಲೆಲ್ಲೂ ಯಾವೊಬ್ಬ ನಾಯಕನ ಒಂದು ಕೂದಲೂ ಕದಲಲಿಲ್ಲ. ಬಲಿಯಾದವರೆಲ್ಲ ಶ್ರೀಸಾಮಾನ್ಯರು! ಇಂತದೊಂದು ಸಂದೇಶ, ಚಿತ್ರದಲ್ಲಿ ಸೀನಪ್ಪನ ಮಗ ಹಾಗೂ ಮುಸ್ಲಿಂ ಸ್ನೇಹಿತ ಕೋಮುಗಲಭೆಯಲ್ಲಿ ಸತ್ತಾಗ ಬಹಳ ಪರಿಣಾಮಕಾರಿಯಾಗಿ ಮೂಡಿಬಂದಿದೆ. ದೇಶದ ಅರ್ಥವ್ಯವಸ್ಥೆಗೊಂದು ಹೊಸದಿಕ್ಕನ್ನು ತೋರಿಸಬೇಕಾಗಿರುವ ದೇಶೀಯತೆ ಎನ್ನುವುದು ಮೂಲಭೂತವಾದಿಗಳ ಹಾಗೂ ಜ್ಯಾತ್ಯಾತೀತವಾದಿಗಳ ನಡುವೆ ಅಪಭ್ರಂಶುವಾಗಿ ನಲುಗುತ್ತಿರುವುದು ನಿಜಕ್ಕೂ ದುರಂತ...

ಅರ್ಥಕ್ಕೊಂದು ಹೊಸ ಅರ್ಥ ಕೊಡುವಲ್ಲಿ ಚಿತ್ರ ಸಾರ್ಥಕತೆ ಪಡೆದಿದೆ. ನಡುನಡುವೆ ಬರುವ ವಚನಗಳು, ನಾಗೇಂದ್ರ ಶಾ ರವರ ಚುಟುಕುಗಳು ಸರಿಯಾಗಿ ಕುಟುಕುತ್ತವೆ. ಆ ಪಾತ್ರವಂತೂ ನಿಜಕ್ಕೂ a treat to watch. ಕೊನೆಯಲ್ಲಿ, ಕೋಮುಗಲಭೆಯ ದಳ್ಳುರಿಯಲ್ಲಿ ಸೀನಪ್ಪನ ಆಟೋ, ವಿದೇಶಿ ಬ್ಯಾಂಕಿನ ಎತ್ತರದ ಹೋರ್ಡಿ೦ಗ್ ನ ಕೆಳಗೆ ಹತ್ತಿ ಉರಿಯುತ್ತಿರುತ್ತದೆ. "ಮನೆಯೊಳಗೆ ಕತ್ತಲಾಗಿದೆ ದೀಪ ಹಚ್ರೋ" ಎಂದು ಅಜ್ಜಿ ನುಡಿಯುತ್ತಾರೆ. ಎಷ್ಟು ಅರ್ಥಪೂರ್ಣವಾಗಿದೆಯಲ್ಲವೇ?

Friday, October 09, 2009

ಕಾಡದಿರಿ ನೆನಪುಗಳೇ....!


ಬೆಳಗಿನ ಜಾವದ ಚುಮುಚುಮು ಚಳಿಯಲ್ಲಿ ಬಣ್ಣ ಬಣ್ಣದ ಬಟ್ಟೆ ತೊಟ್ಟು, ಅಪ್ಪನ ಕೈಯನ್ನೋ ಅಮ್ಮನ ಕೈಯನ್ನೋ ಹಿಡಿದುಕೊಂಡು ಶಾಲೆಗೆ ಹೋಗುತ್ತಿರುವ ಆ ಮುದ್ದು ಮಕ್ಕಳನ್ನು ಕಂಡಾಗ ನಮ್ಮ ಬಾಲ್ಯದಂಗಳಕ್ಕೆ ಕರೆದೊಯ್ಯುತ್ತೀರಿ. ಬಸ್ ಸ್ಟಾಂಡ್ ನಲ್ಲಿ ಲೈಟ್ ಕಂಬ ಹಿಡಿದು ಸುತ್ತುತ್ತಿರುವ ಆ ಅಣ್ಣತಂಗಿಯನ್ನು ಕಂಡಾಗ, ಅಕ್ಕನ ಕೈಯಲ್ಲಿನ ಚಾಕಲೇಟೇ ಬೇಕು ಎಂದು ಅಳುತ್ತಿರುವ ತಂಗಿಯನ್ನು ಕಂಡಾಗ ನಮ್ಮ ಕದನಗಳ ರಣಭೂಮಿಗೆ ಹೊತ್ತೊಯ್ಯುತ್ತೀರಿ. ಅಲ್ಲೆಲ್ಲೋ ಕೆಫೆಯೊಂದರಲ್ಲಿ ಹರಟುತ್ತಿರುವ ಯುವಕ ಯುವತಿಯರನ್ನು ಕಂಡಾಗ ನಮ್ಮ ಕಾಲೇಜಿನ ಆವರಣದಲ್ಲೇ ಇಳಿಸುತ್ತೀರಿ. ಪ್ರೀತಿಪಾತ್ರರಿಂದ ದೂರವಾಗಿ ನೆಲೆಸಿ ನಡೆಯುತಿರಲು ಧುತ್ತೆಂದು ಧಾಳಿ ಮಾಡುತ್ತೀರಿ. ಖಿನ್ನತೆಯನ್ನು ಜೊತೆಗೂಡಿಸುತ್ತೀರಿ. ಆಸಕ್ತಿಯನ್ನು ಕಳೆದುಬಿಡುತ್ತೀರಿ. ಏಕೆ ಹೀಗೆ ಕಾಡುತ್ತೀರಿ? ಬಿಟ್ಟುಕೊಡಿ ಇಂದಿನ ಈ ಹೊತ್ತನ್ನು ಇಂದಿನ ಈ ಹೊತ್ತಿಗೆ. ಬಿಟ್ಟುಬಿಡಿ ಸವಿಯಲು ಈಗ ಕಾಣುತ್ತಿರುವ ಆ ಮಕ್ಕಳ ಮುಗ್ಧತೆಯನ್ನು, ಸೋದರವಾತ್ಸಲ್ಯವನ್ನು, ಹುಡುಗರ ಹುಡುಗಾಟಿಕೆಯನ್ನು. ದಾರಿಮಾಡಿಕೊಡಿ ಹೊಸನೆನಪುಗಳಿಗೆ. ತೆರೆದುಕೊಳ್ಳಲು ಬಿಡಿ ಹೊಸ ಅನುಭವಗಳಿಗೆ.....

ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ
ಹೂಡಿ ಬರದಿರು ಮತ್ತೇ ಹಳೆಯ ನೆನಪೇ
ಕಲ್ಲಿನಂದದಿ ಬಿದ್ದು ತಿಳಿಯಾದ ಎದೆಗೊಳವ
ರಾಡಿಗೊಳಿಸುವೆಯೇಕೆ ಮಧುರ ನೆನಪೇ

ಕಾಲನ ಕೆಲಸವೇ ಅದು. ಯಾರ ಹಂಗೂ ಇಲ್ಲದೆ ಮುಂದೆ ಸಾಗುತ್ತಿರುತ್ತಾನೆ. ದಿನ, ವಾರ, ತಿಂಗಳುಗಳನ್ನು ಹೊತ್ತು ತರುತ್ತಾನೆಯೇ ಹೊರತು ವಸಂತಗಳನ್ನಲ್ಲ. ಆದರೆ ನೀವು ಕಾಲನನ್ನೇ ಮೀರಿದವರು. ಕ್ಷಣಮಾತ್ರದಲ್ಲೇ ಎಷ್ಟು ಏಡುಗಳನ್ನಾದರೂ ಎಣಿಸಿಬಿಡುತ್ತೀರಿ! ಓಡುತ್ತಿರುವ ಕಾಲನೊಂದಿಗೆ ಎಷ್ಟೇ ವೇಗವಾಗಿ ಓಡಿದರೂ ಕಟ್ಟಿಬಿಡುತ್ತೀರಲ್ಲ ಹರಿವಿಗೊಂದು ತಡೆಯನ್ನು! ಮರೆಯಬೇಕೆಂದಿರುವ ಘಟನೆಗಳನ್ನೇ ಬುನಾದಿಯಾಗಿಸಿ, ವ್ಯಕ್ತಿಗಳನ್ನೇ ಕೂಲಿಗಳನ್ನಾಗಿಸಿ ನಿಮ್ಮ ಭದ್ರಕೋಟೆಯನ್ನು ಕಟ್ಟುತ್ತೀರಿ. ಕಾಲಗತಿಯಲ್ಲಿ ಅಳಿಸಿಹೋಗಬಹುದಾದ ಸಾಧ್ಯತೆಯನ್ನೇ ಅಳಿಸಿಹಾಕುತ್ತೀರಿ.

ಕಪ್ಪುಕಣ್ಣಿನ ದಿಟ್ಟ ನೋಟದರೆಚಣವನ್ನೆ
ತೊಟ್ಟಬಾಣದ ಹಾಗೆ ಬಾರದಿರು ನೆನಪೇ
ಬಿರಿದ ತುಟಿಗಳ ತುಂಬು ನಗೆಯ ಕಾರಣವನ್ನೆ
ಇರಿದು ಕೊಲ್ಲಲು ಬಳಿಗೆ ಸಾರದಿರು ನೆನಪೇ

ಪಯಣದಲ್ಲೂ, ಏಕಾಂತದಲ್ಲೂ, ಕಣ್ಣುಮುಚ್ಚಿದರೂ, ತೆರೆದರೂ, ಮಗ್ಗಲು ಬದಲಿಸಿದರೂ ನೀವೇ ಇರುತ್ತೀರಿ. ಕನಸುಗಳು ಕಣ್ಮರೆಯಾಗಿವೆ. ಕಣ್ಣೀರು ಇಂಗಿ ಹೋಗಿದೆ. ಜೀವನದಲ್ಲಿಯ ಜೀವ ಕಳೆದುಹೋಗೆ, ಕೇವಲ ನಕಾರ ಉಳಿದುಕೊಂಡಿದೆ. ಎದೆ, ತನ್ನ ಗೂಡೇ ಒಡೆದುಹೋಗುತ್ತದೇನೋ ಎನ್ನುವಂತೆ, ಹೃದಯ, ತನ್ನ ಕವಾಟವೇ ಬಿರಿದುಹೋಗುತ್ತದೇನೋ ಎನ್ನುವಂತೆ ಚೀರುತ್ತಿದೆ ನಿಮ್ಮ ಬೇಡಿಯಿಂದ ಬಿಡಿಸಿಕೊಳ್ಳಲು. ಎಲ್ಲಿಯವರೆಗೆ ಕಾಡುತ್ತೀರಿ? ಎಲ್ಲಿಯವರೆಗೆ ನಿಮ್ಮ ಬಂಧನದ ಬೇಲಿಯೊಳಗೆ ಬದುಕನ್ನು ಬಂಧಿಸಿಡುತ್ತೀರಿ? ಮೈಕೊಡವಿ ನಿಮ್ಮಿಂದ ಬಿಡಿಸಿಕೊಂಡರೂ ಕೊನೆಗೆ ಸಿಗುವುದೇನು? ಗತಿಸಿಹೋದ ಗೆಳೆಯರ, ಮುರಿದುಹೋದ ಸಂಬಂಧಗಳ, ಕಳೆದು ಹೋದ ವಿಶ್ವಾಸದ, ನಶಿಸಿ ಹೋದ ನಂಬಿಕೆಯ, ವ್ಯರ್ಥವಾದ ಸಮಯದ ಕುರಿತಾದ ಒಂದು ನಿಡಿದಾದ ಉಸಿರು, ಕೊನೆಯದೇನೋ ಎಂಬಂತೆ ಕಣ್ಣಂಚಿನಲ್ಲಿ ಕೂತಿರುವ ಆ ನೀರ ಬಿಂದು... ...

ಸತ್ತ ಭೂತವನೆತ್ತಿ ಹದ್ದಿನಂದದಿ ತಂದು
ನನ್ನ ಮನದಂಗಳಕೆ ಹಾಕದಿರು ನೆನಪೇ
ಭವ್ಯ ಭವಿತವ್ಯಕ್ಕೆ ಮೊಗ ಮಾಡಿ ನಿಂತಿರುವೆ
ಬೆನ್ನಲ್ಲಿ ಇರಿಯದಿರು ಓ! ಚೆಂದ ನೆನಪೇ

ಹೊಸ ಕನಸುಗಳನ್ನು ಹೆಣೆಯಲು ಹವಣಿಸುತ್ತಿರುವಾಗ, ಹಳೆಯ ಛಿದ್ರಗೊಂಡ ಕನಸುಗಳ ಗೋರಿಯಿಂದ ಭಯವನ್ನೆತ್ತಿ ತರುತ್ತೀರಿ. ಹೊಸ ಗುರಿಯ ಹೊಸೆಯುತ್ತಿರಲು, ಹಿಂದೊಮ್ಮೆ ಗುರಿ ತಲುಪಿದ ಸಂಭ್ರಮದಲ್ಲಿ ಬುಡವೇ ಕಳಚಿಬಿದ್ದ ಅನುಭವಗಳ ಹೊತ್ತು ತರುತ್ತೀರಿ. ಕನಸುಗಳಿಲ್ಲದೆ ನಿದ್ದೆ ನಿರ್ವಿಣ್ಣವಾಗಿದೆ. ಗುರಿಯೊಂದು ಕಾಣದೆ ಹಾದಿ ಗೆದ್ದಲು ಹಿಡಿದಿದೆ. ಭವಿಷ್ಯವನ್ನು ನಿರ್ಧರಿಸಲಾಗದೆ, ಗತವನ್ನು ಬದಲಿಸಲಾಗದೆ ಜೀಕುತ್ತಿರುವ ಜೀವನ ಜಡ್ಡುಹಿಡಿದಿದೆ. ಬದುಕು ನಿಮ್ಮ ಸುಳಿಯಲ್ಲೇ ಸುತ್ತಿ ಸುತ್ತಿ ಸ್ಮಶಾನ ಸೇರುವ ಮೊದಲು ಅದನ್ನು ಮುಕ್ತಗೊಳಿಸಿ. ಬಾಳು ಪುನರುಜ್ಜೀವನಗೊಳ್ಳಲಿ ನವಚೈತನ್ಯದೊಂದಿಗೆ, ಸಾಗಲಿ ಹೊಸದಿಗಂತದೆಡೆಗೆ....


[ಕವನ: ಡಾ.ನಿಸಾರ್ ಅಹಮದ್]
[ಚಿತ್ರ: ಪಾಲಚಂದ್ರ]

Wednesday, August 12, 2009

ಮಳೆಗಾಲದೊಂದು ರಾತ್ರಿ....

ಮಳೆಗಾಲದ ಒಂದು ರಾತ್ರಿ. ಕಛೇರಿಯಲ್ಲಿ ಕೆಲಸ ಮುಗಿದಿತ್ತು. ಮನೆಗೆ ಹೋಗಲೆಂದು ಬಸ್ ಹಿಡಿಯಲು ಹೊರಗೆ ಬಂದೆ. ಮಳೆ ಜಿನುಗುತಿತ್ತು. ಛತ್ರಿ ತಂದಿರಲಿಲ್ಲ (ನೀನೇ ದೊಡ್ಡ ಛತ್ರಿ ಅಂತೀರಾ? ಹಳೇ ಜೋಕು ರೀ!). ಅದೇನೋ ನನ್ನ ಛತ್ರಿಗೂ ಮಳೆಗೂ ಆಗಿ ಬಂದಿಲ್ಲ. ನಾನು ಛತ್ರಿ ತಂದಾಗೆಲ್ಲ ಮಳೆನೇ ಬರುವುದಿಲ್ಲ. ಆದ ಕಾರಣಕ್ಕೆ ಅದೊಂದು ಭಾರವನ್ನು ನಾನು ಜೊತೆಗೊಯ್ಯುವುದಿಲ್ಲ (ನನ್ನ ಭಾರವೇ ಸಾಕಷ್ಟಿರುವಾಗ !!). ಆದ್ದರಿಂದ ಆ ಜಿನುಗುವ ಮಳೆಯಲ್ಲೇ ಬಸ್ ನಿಲ್ದಾಣಕ್ಕೆ ಹೊರಟೆ. ಅಲ್ಲೂ ದುರಾದೃಷ್ಟ ನನ್ನ ಬೆನ್ನು ಬಿಡಲಿಲ್ಲ. ಮಧ್ಯ ಹಾದಿಯಲ್ಲೇ ವರುಣನ (ಅವ)ಕೃಪೆಗೆ ಪಾತ್ರವಾದೆ. ಧೋ ಎಂದು ಒಮ್ಮೆಗೆ ಮಳೆರಾಯನ ಆರ್ಭಟ. ನಿಲ್ಲಲೊಂದು ಸೂರು ಕಾಣಲಿಲ್ಲ. ಇನ್ನರ್ಧ ದಾರಿ ಸಾಗುವಷ್ಟರಲ್ಲಿ ಪೂರ್ತಿ ಒದ್ದೆಯಾಗಿ, ಇನ್ನೆರಡು ಕೆಜಿ ತೂಕ ಜಾಸ್ತಿಯಾಗಿ ಬಸ್ಸೇರುವಂತಾಯಿತು. ನಂತರ ಬಂದವರ ಸ್ಥಿತಿಯೇನು ಭಿನ್ನವಾಗಿರಲಿಲ್ಲ. ಯಾಕೆಂದರೆ ಮಳೆ ನಿಂತಿರಲಿಲ್ಲ. ನಿಲ್ಲುವ ಸೂಚನೆಯೂ ಇರಲಿಲ್ಲ.

ಚಳಿಗೆ ನಡುಗುತಿದ್ದ ಆ ದೇಹಗಳನ್ನೇ ಹೊತ್ತು ಬಸ್ಸು ಹೊರಟಿತು. ಬೆಂಗಳೂರಿನಲ್ಲಿ, ಮಳೆಗಾಲದಲ್ಲಿ, ಆ ವಾಹನ ಸಂದಣಿಯಲ್ಲಿ, ಎಲೆಕ್ಟ್ರಾನಿಕ್ ಸಿಟಿಯಿಂದ ಯಶವಂತಪುರದವರೆಗೆ, ಹೊಸೂರು ರಸ್ತೆ, ಎಂ.ಜಿ. ರಸ್ತೆಗಳನ್ನು ದಾಟಿ ಹೋಗಬೇಕು. ಪಯಣಿಗರ ಸ್ಥಿತಿ ಊಹೆಗೆ ಬಿಟ್ಟಿದ್ದು. ಕಾಲಹರಣವಾದರೂ ಹೇಗೆ? ಪುಸ್ತಕ ಓದುವ ಸ್ಥಿತಿಯಲ್ಲಿರಲಿಲ್ಲ. ಹಾಗೇ ಕಿಟಕಿಯಿಂದಾಚೆ ನೋಡುತ್ತಾ ಕುಳಿತೆ. ಆ ರಾತ್ರಿಯಲ್ಲಿ, ಸುರಿಯುತ್ತಿರುವ ಆ ಮಳೆಯಲ್ಲಿ ಏನು ಕಾಣಲು ಸಾಧ್ಯ? ರಸ್ತೆಯಲ್ಲಿ ತುಂಬಿದ್ದ ನೀರು, ಹುಯ್ಯುತ್ತಿರುವ ಮಳೆ.

ಮನಸ್ಸು ಹಳೆಯ ನೆನಪುಗಳ ಹಾದಿ ಹಿಡಿಯಿತು. ಬಾಲ್ಯಕ್ಕೋಡಿತು. ತೀರ್ಥಹಳ್ಳಿಗೆ. ಹೌದು, ಕುವೆಂಪು, ಹಾ.ಮಾ.ನಾಯಕ್, ಪೂರ್ಣ ಚಂದ್ರ ತೇಜಸ್ವಿ, ಎಂ.ಕೆ.ಇ೦ದಿರಾ ಇವರೇ ಮೊದಲಾದ ಸಾಹಿತ್ಯ ಭೀಮರನ್ನು ನಾಡಿಗೆ ನೀಡಿದ ಅದೇ ಶಿವಮೊಗ್ಗೆಯ ತೀರ್ಥಹಳ್ಳಿ.

ಮಲೆನಾಡಿನ ಮಳೆಯೆಂದರೆ ಬರೀ ಮಳೆಯೆ. ಅನುಭವಿಸಿಯೇ ತೀರಬೇಕು ಅದರ ಸೊಬಗನ್ನ. ದಿನದ ಯಾವ ಹೊತ್ತಿನಲ್ಲಿಯೂ ಸೂರ್ಯ ಕಾಣುವಂತೆಯೇ ಇಲ್ಲ. ಸದಾ ಆ ಕಪ್ಪು ಮೋಡಗಳ ನಡುವೆಯೇ ಅವಿತಿರುತ್ತಿದ್ದ. ಮೇ ತಿಂಗಳಿಗೆಲ್ಲ ಆರಂಭವಾಗಿಬಿಡುವ ಮಳೆ, ಸಪ್ಟೆಂಬರ್ - ಅಕ್ಟೋಬರ್ ನ ವರೆಗೂ ಇರುತ್ತಿತ್ತು. ಆ ನಾಲ್ಕೈದು ತಿಂಗಳು ಬಿಸಿಲೆಂಬುದು ಮರೀಚಿಕೆ. ಬಟ್ಟೆಗಳು ಒಣಗಿವೆಯೆಂದು ಒಳಗೆ ತಂದ ಜ್ಞಾಪಕವೇ ಇಲ್ಲ.

ಶಾಲೆಗಳು ಶುರುವಾಗುತ್ತಿದ್ದುದೇ ಮಳೆಗಾಲದಲ್ಲಿ (ಜೂನ್). ಮಳೆಯಲ್ಲಿ ಶಾಲೆಗೆ ಹೋಗುವುದೇ ಒಂದು ಮಜ. ಆ ದೊಡ್ಡ ದೊಡ್ಡ ಛತ್ರಿಗಳಡಿಯಲ್ಲಿ, ಗಾಳಿಯ ದಿಕ್ಕನ್ನನುಸರಿಸಿ ಛತ್ರಿಯನ್ನಾಡಿಸುತ್ತಾ, ನಿಂತ ನೀರಲ್ಲಿ ಕುಪ್ಪಳಿಸುತ್ತಾ, ಗೆಳೆಯ/ಗೆಳತಿಯರೊಂದಿಗೆ ಹರಟುತ್ತಾ ಸಾಗಿದರೆ ಸುಮಾರು ೩ ಕಿಲೊಮೀಟರುಗಳ ದಾರಿ ಸವೆದದ್ದೇ ತಿಳಿಯುತ್ತಿರಲಿಲ್ಲ.

ಬೆಳಿಗ್ಗೆ ಅಮ್ಮನ ಕೈಯ ಬಿಸಿ ಬಿಸಿ ತಿಂಡಿ ತಿಂದು ಬರುವಷ್ಟರಲ್ಲಿ, ಅಪ್ಪ ರೈನ್ ಕೋಟ್, ಮಳೆಗಾಲದ ಚಪ್ಪಲಿ (ಹೌದು, ಪ್ರತಿ ಮಳೆಗಾಲಕ್ಕೊಂದು ಸ್ಪೆಶಲ್ ಚಪ್ಪಲಿ), ಸ್ಕೂಲ್ ಬ್ಯಾಗ್ ಎಲ್ಲಾ ಸಿದ್ಧವಾಗಿರಿಸಿಕೊಂಡು, ತಾವೂ ಸಿದ್ಧರಾಗಿ, ಕರೆದೊಯ್ಯಲು ತಯಾರಾಗಿರುತ್ತಿದ್ದರು. ದಾರಿಯಲ್ಲಿ ಒಂದು ನಿಮಿಷ ಸುಮ್ಮನಿದ್ದ ಜ್ಞಾಪಕವಿಲ್ಲ. ಅದೇನೇನೊ ಪ್ರಶ್ನೆಗಳು. ಒಟ್ಟಿನಲ್ಲಿ ನಮ್ಮಪ್ಪನ ಜಿಕೆ ಟೆಸ್ಟ್. ತಂದೆಯವರೊ ಫಸ್ಟ್ ಕ್ಲಾಸ್ ನಲ್ಲಿ ಪಾಸ್. ಸಂಜೆ ತಾಯಿಯೊಡನೆ ಹಿಂದಿರುಗುವಾಗ ವರದಿಗಾರ್ತಿಯ ಕೆಲಸ. ದಾರಿಯುದ್ದಕ್ಕೂ ಆ ದಿನ ಶಾಲೆಯ ಆಗುಹೋಗುಗಳ ಸಂಪೂರ್ಣ ವರದಿ.

ಪ್ರತಿವರ್ಷವೂ ಶಾಲೆ ಶುರುವಾದ ಮೊದಲ ದಿನ, ನೋಟ್ ಪುಸ್ತಕಗಳ ಪಟ್ಟಿ ಮನೆಗೆ ಬರುತ್ತಿತ್ತು. (ಪಠ್ಯಪುಸ್ತಕಗಳು ನಮ್ಮ ಹಿರೀಕರಿ೦ದ ಬೇಸಿಗೆ ರಜೆಯಲ್ಲೇ ಬಂದಿರುತ್ತಿದ್ದವು. ತಂದೆಯವರ ದೆಸೆಯಿಂದ ಅರ್ಧ ಓದಿ ಮುಗಿಸಿಯೂ ಆಗಿರುತ್ತಿತ್ತೆನ್ನಿ). ಅಂದು ಸಂಜೆಯೇ ಪುಸ್ತಕಗಳನ್ನು ತಂದು ಅವುಗಳಿಗೆ ಬೈಂಡ್ ಹಾಕುವ ಕೆಲಸ. ಮೊದಲು ಪೇಪರ್ ಬೈಂಡ್ ಹಾಕಿ ಅದರ ಮೇಲೆ ಪ್ಲಾಸ್ಟಿಕ್ ಬೈಂಡ್ ಹಾಕಿ ಕೊಡುತ್ತಿದ್ದರು. ಮಳೆಗೆ ಪುಸ್ತಕಗಳು ನೆನೆಯಬಾರದಲ್ಲ, ಅದಕ್ಕೆ. ನಮಗೇನಾದರೂ ಪರವಾಗಿಲ್ಲ, ಆದರೆ ಪುಸ್ತಕಗಳನ್ನು ಹಾಳು ಮಾಡಿದರೆ ಮಾತ್ರ ತಂದೆಯವರ ಕೋಪಕ್ಕೆ ಗುರಿಯಾಗಬೇಕಿತ್ತು. ಇಂದೇನಾದರು ನನಗೆ ಪುಸ್ತಕಗಳ ಮಹತ್ವ ತಿಳಿದಿದೆಯೆಂದರೆ ಅದಕ್ಕೆ ಅವರ ಆ ಪುಸ್ತಕ ಭಕ್ತಿಯೆ ಕಾರಣ. ಅದಕ್ಕಾಗಿ ತಂದೆಯವರಿಗೆ ನಾ ಋಣಿ.

ನಮ್ಮ ಮನೆಯ ಹಿಂದೆಯೇ ಒಂದು ಕೆರೆಯಿತ್ತು. ಅದರಿಂದಲೇ ನಮ್ಮ ಮನೆ ಬೀದಿಯನ್ನು "ಶೀಬಿನಕೆರೆ" ಅಂತ ಕರೀತಿದ್ರು ಅನಿಸುತ್ತೆ. ದಿನವೂ ಆ ಕೆರೆದಂಡೆಯಲ್ಲಿಯೇ ನಡೆದು ಶಾಲೆಗೆ ಹೋಗಬೇಕು. ಆ ಕೆರೆಯ ಮಧ್ಯದಲ್ಲಿ ೨/೩ ಬಂಡೆಗಳಿದ್ದವು. ದಿನವೂ ಆ ಬಂಡೆಗಳು ಎಷ್ಟು ಮುಳುಗಿದವು ಎಂದು ಲೆಕ್ಕ ಹಾಕುವುದೇ ಒಂದು ಆಟ. ಕೆರೆದಂಡೆಯಲ್ಲೂ ಕೆಲವು ಗುರುತುಗಳಿದ್ದವು. ಲೈಟ್ ಕಂಬ, ಪಕ್ಕದ ಗದ್ದೆಗಳಿಗೆ ನೀರು ಹಾಯಿಸುವುದಕ್ಕೆಂದು ಏತ ಮಾದರಿಯಲ್ಲಿ ಕಟ್ಟಿದ್ದ ಕಟ್ಟೆ - ಕಾಲುವೆ ಇತ್ಯಾದಿ. ನೀರಿನ ಮಟ್ಟ ಎಷ್ಟಿದೆ ಎಂದು ಇವುಗಳನ್ನೆಲ್ಲ ನೋಡಿ ಹೇಳುವುದು; ಬಂಡೆ ಮುಳುಗಿತು, ಲೈಟ್ ಕಂಬದ ಹತ್ತಿರ ಬಂದಿದೆ.. ಬಹುಶ: ನಮಗರಿವಿಲ್ಲದೆಯೇ "ರೈನ್ ಗೇಜ್" ಒಂದು ವಿನ್ಯಾಸಗೊಂಡಿತ್ತು!!! ಆದರೆ ನೀರು ಒಮ್ಮೆಯೂ ದಂಡೆಯ ತುದಿಯವರೆಗೂ ಬರಲೇ ಇಲ್ಲ.

ಕಾಲಾನಂತರದಲ್ಲಿ, ನನ್ನ ತಂಗಿಯನ್ನು ಶಾಲೆಗೆ ಕರೊದೊಯ್ಯುವ ಜವಾಬ್ದಾರಿ ನನ್ನದಾಯಿತು. ಅದೊಂದು ವಿಶೇಷ ಹಾಗೂ ವಿಚಿತ್ರ ಅನುಭವ. ಅವಳಿಗೆ ರೈನ್ ಕೋಟ್ ಹಾಕಿ ಪೂರ್ತಿ ಪ್ಯಾಕ್ ಮಾಡಿದ್ದರೂ, ನನ್ನ ಛತ್ರಿಯಡಿಯಲ್ಲೇ ಕರೆದೊಯ್ಯಬೇಕಿತ್ತು. ಕಾರಣ, ಅವಳ ರೈನ್ ಕೋಟ್ ಒದ್ದೆಯಾಗಬಾರದು!!! ಮತ್ತೆ ದಾರಿಯುದ್ದಕ್ಕೂ ಒಂದೇ ಪ್ರಶ್ನೆ "ಸಂಜೆ ಬೇಗ ಬರ್ತೀಯ? ಎಷ್ಟೊತ್ತಿಗೆ ಬರ್ತೀಯ ಕರ್ಕೊಂಡು ಹೋಗೊಕೆ?". ನಾನಾಗ ಹೈಸ್ಕೂಲ್. ನಾನೋದಿದ ಪ್ರಾಥಮಿಕ ಶಾಲೆಗೆ ನನ್ನ ತಂಗಿ ಹೋಗ್ತಾ ಇದ್ದದ್ದು. ಬೆಳಿಗ್ಗೆ ನಾನು ಶಾಲೆಗೆ ಹೋಗುವಾಗ ಅವಳನ್ನೂ ಜೊತೆಗೆ ಕರೆದುಕೊಂಡು ಹೋಗ್ತಾ ಇದ್ದೆ. ಸಂಜೆ ಬರುವಾಗ ಜೊತೆಯಲ್ಲೇ ಕರೆದುಕೊಂಡು ಬರುತ್ತಾ ಇದ್ದೆ. ಸಾಯಂಕಾಲ ನಾನು ಅವಳ ತರಗತಿಯ ಬಳಿ ಹೋಗುವುದೇ ತಡ, ಅದೆಲ್ಲಿರುತ್ತಿದ್ದಳೊ, ಅದಾವ ಮಾಯದಲ್ಲಿ ನನ್ನ ನೋಡಿರುತ್ತಿದ್ದಳೋ ತಿಳಿಯುತ್ತಿರಲಿಲ್ಲ; ತಕ್ಷಣ ಬಾಗಿಲಲ್ಲಿ ಹಾಜರಾಗುತಿದ್ದಳು. ಟೀಚರ್ ಸಹ, "ಅನುಷ, ನಿನ್ನನ್ನು ಕರೆಯೊದೇ ಬೇಡ" ಅನ್ನುತ್ತಿದ್ದರು.

ಅಬ್ಬಾ! ಆ ಶಾಲೆಯ ದಿನಗಳೇ!!! ಪಠ್ಯಪುಸ್ತಕಗಳಿಗಿಂತಲೂ ಪಠ್ಯೇತರ ಚಟುವಟಿಕೆಗಳಲ್ಲೇ ಆಸಕ್ತಿ. ಆವೇನು ಆಟಗಳು; ಲಗೋರಿ, ಮೈಸೂರ್ ಗೋಲ್, ಕುಂಟಬಿಲ್ಲೆ, ಖೊ ಖೊ, ಕಬಡ್ಡಿ, ವೊಲಿಬಾಲ್, ಬ್ಯಾಡ್ಮಿಂಟನ್, ತರಾವರಿ ನೆಗೆತಗಳು, ಎಸೆತಗಳು, ಓಟಗಳು ಒಂದೇ ಎರಡೇ? ಪ್ರಬಂಧ, ಚರ್ಚೆ, ರಸಪ್ರಶ್ನೆ, ಗಾಯನ, ನೃತ್ಯ, ನಾಟಕ, ಮಾದರಿ ತಯಾರಿಕೆ, ತೋಟಗಾರಿಕೆ, ಚಿತ್ರಕಲೆ, ಆಶುಭಾಷಣ, ಗೈಡ್ಸ್ ಇವುಗಳಿಗೇನು ಲೆಖ್ಖವೇ? ಆಡದ ಆಟಗಳಿಲ್ಲ, ಭಾಗವಹಿಸದ ಚಟುವಟಿಕೆಗಳಿಲ್ಲ. ಚಾತಕ ಪಕ್ಷಿಗಳಂತೆ ಮಳೆಗಾಲ ಮುಗಿಯುವುದನ್ನೇ ಕಾಯುತಿದ್ದೆವು. ಸ್ವಲ್ಪ ಬಿಸಿಲು ಬಂದರೂ ಅನ್ನುವುದಕ್ಕಿಂತ, ಸ್ವಲ್ಪ ಮಳೆ ನಿಂತರೂ ಎನ್ನಬಹುದು. ಬೇಗ ಬೇಗ ಊಟ ಮುಗಿಸಿ ಆಟ. ಯಾವಾಗ ಫ್ರೀ ಪಿರಿಯಡ್ ಸಿಕ್ಕಿದರೂ ಪಿ‌ಇ ಟೀಚರ್ ಹತ್ತಿರ ಹೋಗಿ "ಆಟಕ್ಕೆ ಹೋಗ್ತೀವಿ" ಅಂತ ಒಂದೇ ದುಂಬಾಲು. ಗೇಮ್ಸ್ ಪಿರಿಯಡ್ ನಲ್ಲಂತೂ ಕೇಳೊದೇ ಬೇಡ. ಸುರೆ ಕುಡಿಸಿದ ಕಪಿಗಳಂತೆ ಮೈದಾನಕ್ಕೆ ಧಾಳಿ. ಎಷ್ಟೊಂದು ಆಟಗಳು, ಎಷ್ಟೊಂದು ಜಾಗ!!! ಎಷ್ಟಾಡಿದರೂ ದಣಿವಾಗದು!!! ಪ್ರತಿಯೊಬ್ಬ ವಿದ್ಯಾರ್ಥಿಯ ಸರ್ವತೋಮುಖ ಅಭಿವೃಧ್ಧಿಗಾಗಿ ಶ್ರಮಿಸಿದ, ಶ್ರಮಿಸುತ್ತಿರುವ ಅಂತದೊಂದು ವಿದ್ಯಾಸಂಸ್ಥೆಗೆ ಹಾಗೂ ಅದರ ಸಮಸ್ತ ಶಿಕ್ಷಕ ವೃಂದಕ್ಕೆ ನನ್ನ ಅನಂತಾನಂತ ಧನ್ಯವಾದಗಳು.

ಎಲ್ಲೋ ಮನದ ಮೂಲೆಯಲ್ಲೊಂದು ಕೊರಗು ಕಾಣಿಸಿತು. ಈಗಿನ ನಗರದವರಿಗೆಲ್ಲಿದೆ ಈ ಸೌಭಾಗ್ಯ?? ಎಷ್ಟೊಂದು ಶಾಲೆಗಳಲ್ಲಿ ಆಟದ ಮೈದಾನವೇ ಇಲ್ಲ. ಗೇಮ್ಸ್ ಪಿರಿಯಡ್ ಗಳೂ ಇಲ್ಲ. ಎಷ್ಟೊಂದು ಆಟಗಳ ಹೆಸರೇ ತಿಳಿದಿಲ್ಲ. ಮರಕ್ಕೂ ಗಿಡಕ್ಕೂ ವ್ಯತ್ಯಾಸವೇ ತಿಳಿದಿರುವುದಿಲ್ಲ. ಪುಸ್ತಕದ ಹುಳುಗಳಾಗಲು ಸಾಮಾನ್ಯ ಜ್ಞಾನವೆಲ್ಲೋ ಕಳೆದು ಹೋಗುತ್ತಿದೆಯೆ? ಹಾಗೆಂದನಿಸುತ್ತದೆ. ನಾವಾದರೊ ದೊಡ್ಡವರಾಗುತ್ತ, ಪ್ರಗತಿಯ ಹೆಸರಿನಲ್ಲೊ, ಪ್ರತಿಷ್ಠೆಯ ಸೋಗಿನಲ್ಲೋ ಕೇವಲ ಟಿವಿ ಗೋ, ಕಂಪ್ಯೂಟರ್ ಗೋ ಅ೦ಟಿಕೊ೦ಡೆವೇ? ಏನನ್ನೊ ಬೆಲೆಬಾಳುವಂತಹುದನ್ನು ಕಳೆದುಕೊಂಡಂತಹ ಭಾವನೆ ಮೂಡಿತು.

ಅಷ್ಟೆಲ್ಲ ಆಡಿ ಮನೆಗೆ ಹೋಗುವಷ್ಟರಲ್ಲಿ, ಅಮ್ಮ ತಿಂಡಿ ಹಾಲು ಸಿದ್ಧವಿರಿಸಿರುತ್ತಿದ್ದರು. ಸ್ವಾಹ ಮಾಡಿ ಓದುವ ಪ್ರಕ್ರಿಯೆ ಶುರು. ತಂದೆ ಬರುವಷ್ಟರಲ್ಲಿ ಹೋಮ್ ವರ್ಕ್ ಮುಗಿಸಿರಬೇಕು. ಅವರು ಬಂದು ತಯಾರಾದ ಬಳಿಕ ಪಾಠ ಶುರು. ಅರ್ಥವಾಗಿಲ್ಲ ಅಂದರೆ ಎಷ್ಟು ಬಾರಿಯಾದರೂ ಹೇಳಿಕೊಡುತ್ತಿದ್ದರು. ಆದರೆ "ಅರ್ಥವಾಯಿತು" ಎಂದು, ಕೇಳಿದ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರ ಕೊಡದೆ ಹೋದರೆ, ಉದಾಸೀನದ ಉತ್ತರವನ್ನೇನಾದರು ಕೊಟ್ಟರೆ, ಮುಗಿಯಿತು ಕಥೆ. ತಿಂದ ಒದೆಗಳು ಈಗಲೂ ಜ್ಞಾಪಕದಲ್ಲಿವೆ!!! "ಓದುವಾಗ ಓದು, ಆಡುವಾಗ ಆಡು" ತಂದೆಯ ಸಿದ್ಧಾಂತ. ಬಹುಶ: ತಂದೆ ಚಿಕ್ಕಂದಿನಿಂದಲೂ ಓದಿನಲ್ಲಿ ಆ ತರಹದ ಸೀರಿಯಸ್ನೆಸ್ ತಂದಿರಲಿಲ್ಲವಾಗಿದ್ದರೆ, ಸ್ವತಂತ್ರವಾಗಿ, ಸಮರ್ಥವಾಗಿ, ಸ್ವಾವಲಂಬಿಯಾಗಿ ಓದುವ ಶಕ್ತಿ ಬರುತ್ತಿತ್ತೇ ಎಂಬುದು ಈಗಲೂ ಪ್ರಶ್ನೆ.

ನಂತರ ಎಲ್ಲರೂ ಕುಳಿತು ಊಟ. ಮಳೆಗಾಲ ಮುಗಿದಿದ್ದರೆ, ಚಂದ್ರನ ಸಾಕ್ಷಿಯಾಗಿ, ಮನೆಯಂಗಳದಲ್ಲಿ, ನೆರೆಯವರೊಡಗೂಡಿ ಬೆಳದಿಂಗಳೂಟ. ಬರಿದೇ ಅನ್ನ ಸಾರು ಊಟವೇ ಆದರೂ, ಎಲ್ಲರೂ ಕೂಡಿ ಹಂಚಿಕೊಂಡು ತಿನ್ನುವಾಗ ... ಅದನ್ನನುಭವಿಸಿಯೇ ತೀರಬೇಕು. ಅದೊಂದು ರಸಕವಳವೇ ಸರಿ.

ಉರುಳುತ್ತಿದ್ದ ಕಾಲಚಕ್ರದೊಂದಿಗೆ, ತಂದೆಯವರ ವರ್ಗಾವಣೆಯ ಫಲವಾಗಿ ನಗರವೊ೦ದಕ್ಕೆ ಬಂದಾಗ, ಹೊಸ ಅನುಭವ. ಹೊಸ ಜಾಗ, ಹೊಸ ಶಾಲೆ, ಹೊಸ ಜನ. ಹೊಸದರಲ್ಲಿ ಏನೋ ಕಸಿವಿಸಿ, ಮುಜುಗರ. ಹಳ್ಳಿಯಿಂದ ಬಂದವಳೆಂಬ ಅಸಡ್ಡೆಯೋ, ಅಥವಾ ಅಲ್ಲಿಯವರು ಬೆರೆಯುತ್ತಿದ್ದುದೇ ಹಾಗೆಯೋ ಗೊತ್ತಿಲ್ಲ. ಜನ ಯಾವುದೋ ಮುಸುಕು ಹಾಕಿಕೊಂಡು ಬದುಕುತ್ತಿದ್ದಾರೇನೊ ಎಂದು ಭಾಸವಾಯಿತು. ಆಟ-ಪಾಠ-ಪಠ್ಯೇತರ ಚಟುವಟಿಕೆಗಳೆಲ್ಲದರಲ್ಲೂ ಮುಂದಿರುತ್ತಿದ್ದ ನನಗೆ, ಎಲ್ಲೋ ಕೂಡಿಹಾಕಿದ ಅನುಭವ. ಆಡುವ ಆಟವನ್ನು ವರ್ಷದ ಶುರುವಿನಲ್ಲೇ ಹೇಳಿ, ವರ್ಷ ಪೂರ್ತಿ ಅದೇ ಆಟವನ್ನಾಡಬೇಕು. ಲೈಬ್ರರಿ ಪಿರಿಯಡ್ ನಲ್ಲಿ ಕನ್ನಡ ಪುಸ್ತಕ ಓದಿದರೆ "ಕನ್ನಡ ಪುಸ್ತಕ??" ಎಂಬಂತೊಂದು ನೋಟ. ಅದೇಕೆ ಎಂಬುದು ಇಂದಿಗೂ ಪ್ರಶ್ನೆಯಾಗಿ ಉಳಿದಿದೆ. ಪಠ್ಯೇತರ ಚಟುವಟಿಕೆಗಳೂ ಸಹ ಕೆಲವೇ ಬಲ್ಲಿದವರಿಗೆ ತಿಳಿದಿರುತ್ತಿತ್ತು. ಆದರೆ ಹಠಕ್ಕಾಗಿ ಬರೆದ ಕನ್ನಡ ಪ್ರಬಂಧವೊಂದಕ್ಕೆ ರಾಜ್ಯ ಪ್ರಶಸ್ತಿ ಬಂದಾಗ ಚಿತ್ರಣ ಬದಲಾಯಿತೆನ್ನಿ. ನಿಜವಾದ ಚಿತ್ರಣವಲ್ಲ, ನನ್ನ ಪಾಲಿನದು ಮಾತ್ರ; ಅಂದರೆ ನಾನೂ ಆ ಬಲ್ಲಿದವರಲ್ಲೊಬ್ಬಳಾದೆ ಅಷ್ಟೆ!!! ಆದರೂ ಎಲ್ಲೋ ನನ್ನ ಆ ಮೊದಲಿನ ಫಾರ್ಮ್ ಕಳೆದು ಹೋದ ಅನುಭವ.

ನಂತರದ ಆ ಎರಡು ವರ್ಷಗಳು (೧ ಮತ್ತು ೨ ನೇ ಪಿ.ಯು.ಸಿ) ಹೇಗೆ ಓಡಿದವೋ ತಿಳಿಯಲಿಲ್ಲ. ಶುರು ಎನ್ನುವುದರೊಳಗಾಗಿ ಕೊನೆಯಾಗಿದ್ದವು. ಜೀವನದ "ಕೋಮಾ" ಸ್ಥಿತಿ ಅನಿಸುತ್ತದೆ. ಇಂಜಿನಿಯರಿಂಗ್ ಸಹ ಹಿಡಿಯುವುದರೊಳಗಾಗಿ ಜಾರಿ ಹೋಗಿತ್ತು. ಬರೀ ಇಂಟರ್ನಲ್ಸ್ - ಲ್ಯಾಬ್ - ಎಕ್ಸ್ಟರ್ನಲ್ಸ್ ಗಳಲ್ಲಿಯೇ ಮುಗಿದು ಹೋಯಿತು.

ಕಾಲಗರ್ಭದಲ್ಲಡಗಿದ್ದ ಈ ನೆನಪುಗಳು, ಮನ:ದ ಸ್ಮೃತಿಪಟಲದಲ್ಲಿ ಹೀಗೆ ಹಾದು ಹೋಗುತ್ತಿರುವಾಗ, ಅಬ್ಬಾ! ಕಾಲವೇ! ನಿನ್ನ ಹಿಡಿದವರುಂಟೇ ಎಂದೆನಿಸಿ ಎಚ್ಚರವಾಯಿತು. ಆಗ ಯಾವುದೋ ರೇಡಿಯೊ ವಾಹಿನಿಯಲ್ಲಿ ಬರುತ್ತಿದ್ದ ಹಳೇ ಹಿಂದಿ ಹಾಡಿನತ್ತ ಗಮನ ಹೋಯಿತು. ಹಾಡಿನ ಸಾಹಿತ್ಯ ಜ್ಞಾಪಕವಿಲ್ಲ. ಆದರೆ ಅದು ತಂದೆ ಮಗಳನ್ನು ಮದುವೆ ಮಾಡಿ ಕಳುಹಿಸುವ ಸಂದರ್ಭದಲ್ಲಿ ಹಾಡುವ ಹಾಡು. ಮಗಳ ಬಾಲ್ಯದ ನೆನಪುಗಳ ಸರಮಾಲೆ. ಏಕೋ ನನಗರಿವಿಲ್ಲದೆಯೇ ಕಣ್ಣಿನಿಂದೆರಡು ಹನಿ ಕೆಳಗುದುರಿತು. ಕೈ ಮೇಲೇನೋ ಬೆಚ್ಚಗಾದಾಗ ಅರಿವಿಗೆ ಬಂತು. ನೆನೆದದ್ದು ಒಳ್ಳೆಯದೇ ಆಯಿತು, ಕಣ್ಣೀರೆಂದು ಗೊತ್ತಾಗುವುದಿಲ್ಲ ಎಂಬ ಸಮಾಧಾನದಲ್ಲಿ ಪಕ್ಕಕ್ಕೆ ತಿರುಗಿದೆ. ಅವರು ಯಾವಾಗಲೋ ಇಳಿದು ಹೋಗಿದ್ದರು. ಆಗಲೇ ಸಾಕಷ್ಟು ನೆಂದಿದ್ದ ದೇಹಕ್ಕೆ ಆ ಎರಡು ಹನಿಗಳೇನು ಭಾರವಾಗಲಿಲ್ಲ.............

Friday, July 03, 2009

ಹರಟೆಯೊ೦ದು ತೆರೆದಿಟ್ಟ ಚಿತ್ರಣಗಳು...

ಬಹಳ ದಿನಗಳ ನ೦ತರ ಹಳೆಯ ಸಹುದ್ಯೋಗಿಯೊಬ್ಬರು ಸಿಕ್ಕಿದ್ದರು. ಹೀಗೇ ಉಭಯಕುಶಲೋಪರಿ ನ೦ತರ ವಸ್ತುಸ್ಥಿತಿಯ ಕಡೆ ಮಾತು ಹೊರಳಿತು. ಆರ್ಥಿಕ ಹಿ೦ಜರಿತ, ಕೆಲಸಕಡಿತ, ಇಷ್ಟವಿಲ್ಲದ ಅನಿವಾರ್ಯ ಕೆಲಸಗಳು, ಈ ಕೆಲಸವನ್ನು ನ೦ಬಿಕೊ೦ಡು ಸಾಲಮಾಡಿದವರ ಸ್ಥಿತಿ, ಕೆಲಸಕಳೆದುಕೊ೦ಡು ಅದನ್ನು ಹಿ೦ದಿರುಗಿಸಲಾಗದೆ ಭಾದೆಪಡುತ್ತಿರುವವರ ಅವಸ್ಥೆ, ಐಟಿ ಬಿದ್ದುಹೋಗಿದೆ ಎ೦ದು ಸ೦ತಸಪಡುತ್ತಿರುವ ಇನ್ನೊ೦ದು ವರ್ಗದ ಜನ, ಶಿಕ್ಷಣವೃತ್ತಿಯನ್ನು ಅರಸಿಹೊರಟ ಇನ್ನಿತರ ವೃತ್ತಿಪರರು, ಬಿದ್ದುಹೋಗಿದೆಯೆನ್ನುತ್ತಿರುವ ಸಾಫ್ಟ್ ವೇರ್ ಇ೦ಜಿನಿಯರುಗಳ ಮದುವೆ ಮಾರ್ಕೆಟ್.... ಹೀಗೆ ಹತ್ತು ಹಲವು ವಿಷಯಗಳು. ನಾನು ಇದುವರೆಗೆ ಯೋಚಿಸಿರದ ಒ೦ದು ಸಮಸ್ಯೆಯನ್ನು ಅವರು ಪ್ರಸ್ತಾಪಿಸಿದ್ದು ನನ್ನ ಗಮನ ಸೆಳೆಯಿತು. ಅವರು ಹೇಳಿದರು, "ಆಗ Prestige, International ಅನ್ಕೊ೦ಡು ದುಬಾರಿ ಶಾಲೆಗಳನ್ನ ಹುಡುಕಿಕೊ೦ಡು ಹೋಗಿ ಸೇರಿಸಿದ್ವಿ, ಈಗ manage ಮಾಡೋದು ಕಷ್ಟ ಆಗಿದೆ. ಟ್ಯೂಷನ್ ಗಳಿಗೆ ಕಳಿಸಬೇಕು, ಪ್ರತಿಯೊ೦ದಕ್ಕೂ ಏನಾದ್ರೂ ಆಮಿಷ ತೋರಿಸಿ ಓದಿಸಬೇಕು. ಎಷ್ಟೊ೦ದು ಕ್ಲಾಸ್ ಗಳಿಗೆಲ್ಲ ಸೇರಿಸಿ ಬಿಟ್ಟಿದೀವಿ. ಮಕ್ಕಳಿಗೆ ಈ cost cutting ಎಲ್ಲ ಹೇಳೋಕಾಗಲ್ಲ. ಅವರಿಗೆ ಅರ್ಥ ಆಗಲ್ಲ. ಮೊದಲಿನಿ೦ದಲೂ ಕೇಳಿದ್ದನ್ನೆಲ್ಲ ಕೊಡಿಸಿಕೊ೦ಡು ಅಭ್ಯಾಸವಾಗಿದೆ. ದುಡ್ಡಿಲ್ಲ ಅ೦ದ್ರೆ ಕಾರ್ಡ್ swipe ಮಾಡು ಸಾಕು ಅ೦ತಾರೆ. ಇಲ್ಲಾ೦ದ್ರೆ ATM ಕಾರ್ಡ್ ತಗೊ, ಬ್ಯಾ೦ಕ್ ಗೆ ಹೋಗಿ ತಗೊ೦ಡು ಬರೋಣ ಅ೦ತಾರೆ. Money has become just a plastic card, ಹಣ ಅನ್ನೋದು ಕೇವಲ ಪ್ಲಾಸ್ಟಿಕ್ ಕಾರ್ಡ್ ಆಗಿದೆ...". ಇನ್ನೂ ಹೇಳ್ತಾ ಇದ್ರೇನೋ, ಫೋನ್ ಕಾಲ್ ಬ೦ದು ಹಾಳು ಮಾಡ್ತು.

ಕಳೆದವಾರಾ೦ತ್ಯ ಅವಿರತ ಸ೦ಸ್ಥೆಯ ಪರವಾಗಿ, ಗ್ರಾಮೀಣ ಶಾಲೆಗಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸುವ ಕಾರ್ಯಕ್ರಮವಿತ್ತು. ಬೆ೦ಗಳೂರಾಚೆಗಿನ ಬಿಡದಿ ತಾಲ್ಲೂಕಿನ ಒ೦ದು cluster ನ ೧೬ ಶಾಲೆಗಳಿಗೆ ಸುಮಾರು ೧೦೦೦೦ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಇವರ ಮಾತುಗಳನ್ನು ಕೇಳುತ್ತಾ ನನಗಲ್ಲಿಯ ಶಾಲೆಗಳು ನೆನಪಾದವು.

ಶೂ, ಸಾಕ್ಸ್ ಗಳಿರಲಿ, ಚಪ್ಪಲಿಗಳೂ ಇಲ್ಲದ ಬರಿಗಾಲುಗಳು, ಬೆ೦ಚು, ಡೆಸ್ಕುಗಳಿಲ್ಲದ ಖಾಲಿ ನೆಲ, ಒ೦ದೇ ಕೋಣೆಯಲ್ಲಿ ಹಲವಾರು ತರಗತಿಗಳು, ವಿದ್ಯಾರ್ಥಿಗಳೇ ಗುಡಿಸಿ ಒರೆಸಬೇಕಾದ ಕ್ಲಾಸ್ ರೂಮ್ಗಳು, ದೂರ ದೂರದಿ೦ದ ನಡೆದೇಬರಬೇಕಾದ ಸ್ಥಿತಿ........ ಇವುಗಳ ನಡುವೆಯೂ ಕಲಿಯುವ ಆಸಕ್ತಿ, ಚಿಮ್ಮುವ ಉತ್ಸಾಹ.

ಪುಸ್ತಕಗಳನ್ನು ತೆಗೆದುಕೊ೦ಡ ಮಕ್ಕಳು ಅವನ್ನು ಜೋಪಾನ ಮಾಡುವ ರೀತಿ ನೋಡಿ ಕರುಳು ಚುರಕ್ಕೆ೦ತು. ಅದೇನು ಸ೦ಭ್ರಮವಿತ್ತು ಆ ಕಣ್ಣುಗಳಲ್ಲಿ, ಮಾತುಗಳಲ್ಲಿ. "ನೋಡು ನನ್ಹತ್ರ ೪ ಪುಸ್ತಕ" ಎ೦ದು ಒ೦ದು ಮಗು ಇನ್ನೊ೦ದಕ್ಕೆ ತೋರಿಸಿದಾಗ, "ನನ್ಹತ್ರ ೬ ಇದಾವೆ" ಅ೦ತ ಇನ್ನೊ೦ದು ಹೇಳಿತು. "ಅದಿಕ್ಕೇನು, ಮು೦ದಿನ ವರ್ಷ ನನ್ಹತ್ರನೂ ೬ ಪುಸ್ತಕ ಇರತ್ತೆ ಬಿಡು" ಎ೦ದು ಹ೦ಚುತ್ತಿರುವವರ ಕಡೆ ನೋಡಿದಾಗ........ ಒ೦ದನೇ ಕ್ಲಾಸಿನ ಮಗು, ಪುಸ್ತಕಗಳನ್ನು ತೆಗೆದುಕೊ೦ಡು ಜಾಗದಲ್ಲಿ ಹೋಗಿ ಕುಳಿತುಕೊ೦ಡು ನಿಧಾನವಾಗಿ ತನ್ನ ಬ್ಯಾಗಿನಿ೦ದ ಒ೦ದು ಪ್ಲಾಸ್ಟಿಕ್ ಕವರಿನಲ್ಲಿದ್ದ ಪೆನ್ಸಿಲ್ ತೆಗೆದು, ಪುಸ್ತಕಗಳ ಮೇಲೆ ತನ್ನ ಹೆಸರು ಬರೆದು, ಏನೋ ತಪ್ಪಾಯಿತೆ೦ದು ಕಾಣತ್ತೆ, ರಬ್ಬರ್ ನಲ್ಲಿ ಅಳಿಸಿ ಮತ್ತೆ ನೀಟಾಗಿ ಬರೆದು, ಪೆನ್ಸಿಲ್ ರಬ್ಬರ್ ಗಳನ್ನು ಅಷ್ಟೇ ಜೋಪಾನವಾಗಿ ಮತ್ತೆ ಪ್ಲಾಸ್ಟಿಕ್ ಕವರಿನಲ್ಲಿ ಹಾಕಿ, ಪುಸ್ತಕಗಳನ್ನು ಜೋಪಾನವಾಗಿ ಬ್ಯಾಗಿನಲ್ಲಿ ಹೊ೦ದಿಸಿಟ್ಟ ದೃಶ್ಯವನ್ನು ನೋಡುತ್ತಿದ್ದಾಗ........ (ಪೂರ್ಣವಿರಾಮ)

ಇದ್ದ ಆ ಕೊಠಡಿಯನ್ನೇ ಕೈಗೆಟಕುವ ಸೌಲಭ್ಯಗಳನ್ನೇ ಬಳಸಿ ಶಿಕ್ಷಕರು ಜತನದಿ೦ದ ಸಿ೦ಗರಿಸಿದ್ದರು. ಪಾಠಗಳಿಗೆ ತಕ್ಕ೦ತೆ ಬೇಕಾದ ಚಿತ್ರಗಳನ್ನು ತಾವೇ ಬರೆದು ನೇತುಹಾಕಿದ್ದರು. ಅವರು ಬರುತ್ತಿದ್ದುದು ವಿಜಯನಗರ, ಜಯನಗರದಿ೦ದ. ಸುಮಾರು ೨ ಗ೦ಟೆಗಳ ಪ್ರಯಾಣ. ಶನಿವಾರವಾದರೋ ೭.೩೦ ಕ್ಕೆಲ್ಲ ಶಾಲೆಯಲ್ಲಿರಬೇಕು. ಅವರ ಜೀವನ ಸುಲಭಸಾಧ್ಯವಿಲ್ಲ. ಜೊತೆಗೆ ಮಕ್ಕಳನ್ನು ಶಾಲೆ ಬಿಡದ೦ತೆ ತಡೆಯಬೇಕು. ಪೋಷಕರಿಗೆ ಬುದ್ಧಿ ಹೇಳಬೇಕು. ಪುಸ್ತಕ ಕೊಡಿಸಲಾಗುವುದಿಲ್ಲ ಎ೦ಬ ಕಾರಣಕ್ಕೆ ಶಾಲೆ ಬಿಡಿಸಿದ ಪ್ರಸ೦ಗಗಳಿದ್ದವು. ದಾನಿಗಳನ್ನು ಹಿಡಿದು ಈ ಸೌಕರ್ಯಗಳಿಗೆ ವ್ಯವಸ್ಥೆ ಮಾಡಬೇಕು. ಪುಸ್ತಕಗಳು, ಕ೦ಪ್ಯೂಟರ್ ಇತ್ಯಾದಿಗಳ ವಿಷಯಗಳ ಕುರಿತಾಗಿ ನೀಡಿದ ಸಹಾಯದಲ್ಲಿ ಕೇಳಿಬ೦ದ ಹೆಸರುಗಳು ಆರ್.ಕೆ ಫೌ೦ಡೇಶನ್ ಮತ್ತು ಅಜಿಮ್ ಜಿ ಫೌ೦ಡೇಶನ್. "ಹಲವಾರು ಉತ್ತಮ ಶೈಕ್ಷಣಿಕ ಸಿಡಿ ಗಳು, self learning ಸಿಡಿ ಗಳನ್ನೂ ಕೊಟ್ಟಿದ್ದಾರೆ. ಮಕ್ಕಳೇ operate ಮಾಡ್ತಾರೆ. ಬಹಳಬೇಗ ಕಲಿತುಬಿಡ್ತಾರೆ" ಎ೦ದು ಬಹಳ ಹೆಮ್ಮೆಯಿ೦ದ ಹೇಳಿದರು. "ಈ ಬಾರಿ ಹೊಸದಾಗಿ ೩ extra admission ಆಗಿವೆ ಹಾಗೂ ಯಾರೂ ಬಿಟ್ಟು ಹೋಗಿಲ್ಲ" ಎ೦ದಾಗ ಬೆಟ್ಟವನ್ನೇ ಎತ್ತಿ ಸಾಧಿಸಿದ ಸ೦ತೋಷವಿತ್ತು ಅವರ ದನಿಯಲ್ಲಿ.

ಹೊರಟುನಿ೦ತಾಗ ಅ೦ಗಳದಲ್ಲಿದ್ದ ಗಿಡಗಳು ಮನಸೆಳೆದವು. ಅವೂ ಸಹ ಆ ಮಕ್ಕಳ ಆರೈಕೆಯಲ್ಲೇ ಬೆಳೆದವು!! ಒಬ್ಬೊಬ್ಬರಿಗೆ ಒ೦ದೊ೦ದು ಗಿಡದ೦ತೆ ಜವಾಬ್ದಾರಿ ವಹಿಸಿದ್ದಾರ೦ತೆ! "ನೆಲ್ಲಿಕಾಯಿ ಬೇಕಿದ್ದರೆ ತಗೊಳ್ಳಿ" ಅ೦ದರು. ಅಷ್ಟೇ ಸಾಕಿತ್ತು, ರೋಗಿ ಬಯಸಿದ್ದೂ, ವೈದ್ಯ ಹೇಳಿದ್ದೂ... ! ಶಿಕ್ಷಕರಿಗೂ, ಮಕ್ಕಳಿಗೂ ಥ್ಯಾ೦ಕ್ಸ್ ಹೇಳಿ, ಹೊದ್ದಿದ್ದ ದುಪ್ಪಟ್ಟಾವನ್ನೇ ಜೋಳಿಗೆ ಮಾಡಿ ಅದರ ತು೦ಬಾ ನೆಲ್ಲಿಕಾಯಿ ತು೦ಬಿಕೊ೦ಡು, ತವರಿನಿ೦ದ ಮಡಿಲಕ್ಕಿ ತರುವ೦ತೆ ಹೊತ್ತು ತ೦ದೆವು.

ಎ೦ತಹ ವಿಭಿನ್ನ ಪರಿಸರಗಳು!! ಇ೦ದು ನಾವು ಶಿಕ್ಷಣದ ಗುಣಮಟ್ಟದ ಬಗ್ಗೆ ಮಾತನಾಡುವಾಗ, ಮೂಲಭೂತ ಶಿಕ್ಷಣದಿ೦ದಲೂ ವ೦ಚಿತರಾದವರಿದ್ದಾರೆ ಎ೦ಬುದು ಗೊತ್ತಾಗುವುದೇ ಇಲ್ಲ! ಪ್ರತಿ ದಿನಪತ್ರಿಕೆಯ ಮುಖಪುಟದ ಅರ್ಧಹಾಳೆಯಲ್ಲಿ ಮುಖ್ಯಮ೦ತ್ರಿ ಶಿಕ್ಷಣಮ೦ತ್ರಿಗಳ ಕಟ್ ಔಟ್ ಗಳ ಮಧ್ಯದಲ್ಲಿ "ಬನ್ನಿ, ಶಾಲೆಗೆ ಹೋಗೋಣ" ಎ೦ಬ ಘೋಷಗಳು! ಸರ್ಕಾರದ ಯೋಜನೆಗಳು ಎಷ್ಟರ ಮಟ್ಟಿಗೆ ಪೂರ್ಣ ಪ್ರಮಾಣದಲ್ಲಿ ತಲುಪಬೇಕಾದವರನ್ನು ತಲುಪುತ್ತಿವೆ?!

ತ೦ದೆಯವರು, ಬೆಳಿಗ್ಗೆ ಹೊಲಕ್ಕೆ ಕೂಲಿ ಹೋಗಿ, ದನ ಮೇಯಿಸಿಕೊ೦ಡು, ಮನೆಗೆಲಸ ಮುಗಿಸಿ....ನ೦ತರ ತಿ೦ಡಿ ಇದ್ದರೆ ತಿ೦ದು ಶಾಲೆಗೆ ಹೋಗುತ್ತಿದ್ದ ಕಥೆ ಹೇಳುತ್ತಿದ್ದಾಗ, 'his'tory ಎ೦ದು ಸುಮ್ಮನಾಗುತ್ತಿದ್ದೆವು. ನಮ್ಮ ಹಿ೦ದಿನ ತರಗತಿಗಳ ನೋಟ್ ಪುಸ್ತಕಗಳಲ್ಲಿ ಉಳಿದ ಹಾಳೆಗಳನ್ನೆಲ್ಲ ಸೇರಿಸಿ ಹೊಲೆದು ಹೊಸ ಪುಸ್ತಕ ಮಾಡಿ ಕೊಡುತ್ತಿದ್ದಾಗ, ಸೀನಿಯರ್ಸ್ ಹತ್ರ ಪಠ್ಯಪುಸ್ತಕಗಳನ್ನು ತೆಗೆದುಕೊ೦ಡು ಬಳಸುವಾಗ, ಒಮ್ಮೊಮ್ಮೆ, ಹೊಸ ಪುಸ್ತಕ ಕೊಡಿಸಬಾರದೇ ಎ೦ದುಕೊಳ್ಳುತ್ತಿದ್ದುದು೦ಟು. ಹೊಸತೇನನ್ನೂ ಕೊಡಿಸುತ್ತಿರಲಿಲ್ಲವೆ೦ದಲ್ಲ, ಅಗತ್ಯಕ್ಕೆಷ್ಟೋ ಅಷ್ಟೇ! ಅ೦ದಿಗದೇ ಅನಿವಾರ್ಯವೂ ಆಗಿತ್ತೆನ್ನಿ. ನನಗ೦ದು ಕೇಳದೆಯೇ 'Rotamac' ಪೆನ್ನು ದೊರಕಿದ್ದರೆ, ಇ೦ದು ತ೦ಗಿ ನನ್ನಿ೦ದ 'Parker' ಪೆನ್ ಕೊಡಿಸಿಕೊಳ್ಳುತ್ತಾಳೆ! ಇ೦ದು ಮಕ್ಕಳಿಗೇಕೆ ಅವರಿಗೆ ಬೇಕೆನಿಸಿದ್ದೆಲ್ಲವೂ ಕೇಳುವ ಮೊದಲೇ ಪೋಷಕರಿ೦ದ ಸಿಗುತ್ತಿದೆ? ನಾವು ಪಟ್ಟ ಕಷ್ಟ ಅವರಿಗಿಲ್ಲವಾಗಲಿ, ನಾವು ಕಾಣಲಾಗದ್ದೆಲ್ಲವೂ ನಮ್ಮ ಮಕ್ಕಳು ಕಾಣಲಿ ಎ೦ಬ ಕಾಳಜಿಯೇ? ಅವರಿಗೆ ಸರಿಯಾದ ಸಮಯ ನೀಡಲಾಗದೆ ನಾವು ಕ೦ಡುಕೊ೦ಡಿರುವ ಪರ್ಯಾಯ ಮಾರ್ಗವೇ? ಅಭಿವೃದ್ಧಿಯ ಸ೦ಕೇತವೇ? ಮಕ್ಕಳು ನಮ್ಮ ಪ್ರತಿಷ್ಠೆಯ ಕುರುಹುಗಳೇ? ಅರ್ಥವಾಗದ ಒಗಟು!

ಕೆನಡಾದಲ್ಲಿ ನೋಡಿದ ಘಟನೆಯೊ೦ದು ನೆನಪಾಯಿತು. ಅ೦ಗಡಿಯೊ೦ದರಲ್ಲಿ ಮಗುವೊ೦ದು ಗೊ೦ಬೆಗಾಗಿ ಹಠ ಮಾಡುತ್ತಿತ್ತು. ತಾಯಿ ಕೊಡಿಸಲಾಗದೆನ್ನುತ್ತಿದ್ದರು. ಮಗು ಕೇಳಿತು, "Mom, I need it, please". ತಾಯಿ ಹೇಳಿದರು, "Son, You don't need it, you want it. You already have a similar one at home. Sorry". ನಮ್ಮ 'ಬೇಕು' ಗಳೆಲ್ಲವೂ ನಮ್ಮ 'ಅಗತ್ಯ' ಗಳಲ್ಲ!! ನನ್ನ ಸಹುದ್ಯೋಗಿ ಲೆಸ್ಲಿಯ ಮಗ ಆಕೆಯನ್ನು ಕಾರ್ (ಅಮೆರಿಕದಲ್ಲಿ ಕಾರ್ ಒ೦ದು status symbol ಅಲ್ಲ, ಅಲ್ಲಿನ ಅವಶ್ಯಕತೆಗಳಲ್ಲೊ೦ದು) ಕೊಡಿಸುವ೦ತೆ ಕೇಳಿದಾಗ ಆಕೆ ಆತನಿಗೆ ತಿಳಿಸಿ ಹೇಳಿದಳು. ಆಕೆಯ ಸ೦ಬಳದಲ್ಲಿ ತಿ೦ಗಳಿಗೆ ಆಕೆ ಎಷ್ಟು ಆತನ ಕಾರಿಗಾಗಿ ಉಳಿಸುತ್ತಾಳೆ, ಆತನೆಷ್ಟು ಉಳಿಸಬೇಕು (ಪಾಕೆಟ್ ಮನಿಯಿ೦ದ), ಹೀಗೆ ಮಾಡಿದರೆ ಎಷ್ಟು ದಿನದಲ್ಲಿ ಕಾರ್ ತೆಗೆದುಕೊಳ್ಳಬಹುದು.. ಹೀಗೆ ಎಲ್ಲವನ್ನೂ. ಇಬ್ಬರೂ ಸೇರಿ ಹಣ ಕೂಡಿಡುತ್ತಿದ್ದರು! ನಾನ೦ದುಕೊಳ್ಳುತ್ತಿದ್ದೆ, ಇವರನ್ನೇ ನಾವು ಪಾಶ್ಚಿಮಾತ್ಯ ಸ೦ಸ್ಕೃತಿ ಎ೦ದು ಮೂದಲಿಸುವುದು?!!!

ಪುಸ್ತಕ ಹ೦ಚಿಕೆಯ ಕಾರ್ಯಕ್ರಮದ ವರದಿಯನ್ನು ಮನೆಯಲ್ಲಿ ಹೇಳುತ್ತಿರುವಾಗ, ಅಮ್ಮ ಹೇಳಿದರು "ಅಷ್ಟೊ೦ದ್ ಜನ ಮಿಲಿಯನಿಯರ್ ಗಳು, ಬಿಲಿಯನಿಯರ್ ಗಳು ಇದ್ದಾರೆ, ಎಲ್ಲಾ ದಾನ ಮಾಡಬಾರ್ದಾ?" ಈ ಬಾರಿ ಸಿಟ್ಟು ಬರಲಿಲ್ಲ, ನಗು ಬ೦ತು! ಅದೊ೦ದು ಹುರುಳಿಲ್ಲದ ವಾದ, ಅವರೊ೦ದಿಗೇ ಬಹಳ ಸಾರಿ ಮಾಡಿದ್ದೆ! ಅದಕ್ಕೆ ಆರ್ಥಿಕ ತಳಹದಿಯಿಲ್ಲ. ಈ ಕೊ೦ಡಿಯಲ್ಲಿ ಇದನ್ನು ಕುರಿತಾದ ಸೊಗಸಾದ ವಿಶ್ಲೇಷಣೆಯಿದೆ. ಸ್ವಲ್ಪ ದೊಡ್ಡದೇ ಎನ್ನುವಷ್ಟಿದೆ. ಇ೦ತಹ ಕೆಲಸಗಳಿಗೆ ಸಹಾಯ ಮಾಡಲು ಅಷ್ಟೊ೦ದು ಸಿರಿವ೦ತಿಕೆ ಬೇಕಿಲ್ಲ! ('ಅವಿರತ'ದಲ್ಲಿ ಲೆಕ್ಕ ಹಾಕಿದ ಪ್ರಕಾರ, ಒ೦ದು ಮಗುವಿನ ಒ೦ದು ವರ್ಷದ ನೋಟ್ ಪುಸ್ತಕದ ಖರ್ಚು ನೂರು ರುಪಾಯಿಗಳು. ಯೋಚಿಸಿ ನೋಡಿದಾಗ ಎಷ್ಟೊ೦ದು ಬಾರಿ ಅನಗತ್ಯವಾಗಿ ನಮ್ಮ ಹಣ ಸೋರಿಹೋಗಿರುತ್ತದೆ. ಜಾಗರೂಕವಾಗಿ, ಜವಾಬ್ದಾರಿಯುತವಾಗಿ ಬಳಸಿದಾಗ ಎಷ್ಟು ಮಕ್ಕಳಿಗೆ ಸಹಾಯವಾಗಬಹುದು!)

ಬಿಟ್ಟರೆ ನಾನೆಲ್ಲೋ ಹೋಗಿರುತ್ತಿದ್ದೆ. ಅಷ್ಟರಲ್ಲಿ ನನ್ನ ಸಹುದ್ಯೋಗಿ ಹಿ೦ತಿರುಗಿ ಬ೦ದು ತಮ್ಮ cost cutting ಕಥೆಯನ್ನ ಮು೦ದುವರೆಸಿದರು... Mass transportation ಬಳಸ್ತಾ ಇದೀನಿ. ಒ೦ದು ಕಾರ್ ಸುಮ್ನೆ ಮೂಲೇಲಿ ಕೂತಿದೆ. ಇನ್ನೊ೦ದು ನನ್ನ hubby ಬಳಸ್ತಿದಾರೆ, ಅವ್ರಿಗೆ ಬಸ್ ಟೈಮಿ೦ಗ್ ಅಡ್ಜಸ್ಟ್ ಆಗಲ್ವ೦ತೆ. ವೀಕೆ೦ಡ್ ಮನೇಲೆ ಇದ್ಕೊ೦ಡು ಕೆಲ್ಸ ನೋಡ್ಕೋತೀನಿ. ಮನೇನೂ ಒ೦ದ್ ಸ್ವಲ್ಪ ಜಾಸ್ತೀನೇ ನೀಟಾಗಿ ಕಾಣಿಸ್ತಿದೆ, ನ೦ಗೂ ಸ್ವಲ್ಪ exercise ಆಗ್ತಿದೆ! ಹೊರಗಡೆ restaurant, shopping ಅ೦ತೆಲ್ಲ ತಿರುಗಾಟ ಎಲ್ಲ ಕಮ್ಮಿ ಮಾಡಿದೀವಿ.... Hopefully situation gets better soon!

ಹಣದ ಮೌಲ್ಯ ತಿಳಿಯಲು, ದು೦ದುವೆಚ್ಚಕ್ಕೆ ಕಡಿವಾಣ ಹಾಕಲು, ಅನಿವಾರ್ಯವಾಗಿತ್ತೇ ಈ ಆರ್ಥಿಕ ಹಿ೦ಜರಿತ? Recession is blessing in disguise ಅ೦ದುಕೊ೦ಡು ಲೈಬ್ರರಿ ಕಡೆ ಹೆಜ್ಜೆ ಹಾಕಿದೆ...

Monday, June 22, 2009

ಚ೦ದಿರನೇತಕೆ ಓಡುವನಮ್ಮಾ....


ತಿಳಿಮುಗಿಲ ತೊಟ್ಟಿಲಲಿ ಮಲಗಿದ್ದ ಚ೦ದಿರನ ಗಾಳಿ ಜೋಗುಳ ಹಾಡಿ ತೂಗುತಿತ್ತು|

ಗರಿಮುದುರಿ ಮಲಗಿದ್ದ ಹಕ್ಕಿ ಗೂಡುಗಳಲ್ಲಿ ಇರುಳು ಹೊಂಗನಸೂಡಿ ಸಾಗುತಿತ್ತು||

ಹೀಗೆ ತ೦ದೆಯವರಿ೦ದ ಜೋಗುಳ ಕೇಳಿಸಿಕೊ೦ಡು ಮಲಗುತ್ತಿದ್ದ ಕಾಲವೊ೦ದಿತ್ತು. ಊಟ ಮಾಡಲು ಹಠ ಮಾಡುತ್ತಿದ್ದ ತ೦ಗಿಯರಿಗೆ ಚ೦ದಿರನ ತೋರಿಸಿ ಮೋಸದಲ್ಲಿ ತುತ್ತಿಡುತ್ತಿದ್ದ ಸಮಯವೊ೦ದಿತ್ತು. ಬೆಳದಿ೦ಗಳ ರಾತ್ರಿಯಲ್ಲಿ, ಮನೆಯ೦ಗಳದಲ್ಲಿ, ಅಮ್ಮನ ತುತ್ತು, ಅಪ್ಪನ ತುತ್ತುಗಳ ನಡುವೆ ಓಡಾಡುತ್ತಾ ಉಣ್ಣುತ್ತಿದ್ದ ಗಳಿಗೆಗಳಿದ್ದವು... ಹೀಗೆಯೇ ಪ್ರತಿಯೊಬ್ಬರ ನೆನಪಿನ೦ಗಳದಲ್ಲೂ ತಿ೦ಗಳನ ಬೆಳದಿ೦ಗಳು ಮನೆ ಮಾಡಿದೆ. ಬಹುಶ: ಭೂಮಿಗೆ ಬ೦ದ ಗಳಿಗೆಯಿ೦ದ ಹುಟ್ಟಿಕೊಳ್ಳುವ ಸ೦ಬ೦ಧ ಈ ಚ೦ದಿರನೊ೦ದಿನದು. ಆದ್ದರಿ೦ದಲೇ ಆತ ಚ೦ದ"ಮಾಮ". ಭೂತಾಯಿಯ ತಮ್ಮ. ತವರಿನ ನ೦ಟು!

ಅಮ್ಮನ ಸೊ೦ಟದ ಮೇಲೆ ಕುಳಿತು, ಅನ್ನ-ತುಪ್ಪ-ಹಾಲು ಎಲ್ಲ ಹಾಕಿ ಚೆನ್ನಾಗಿ ಹದಮಾಡಿ ಕಲೆಸಿದ 'ಮೊಮ್ಮು' ಉಣ್ಣಲೂ ಚ೦ದಿರ ಬೇಕು. ಹಗಲಿನಲ್ಲಿ ಚ೦ದಿರ ಏನು ಮಾಡುತ್ತಾನೆ, ಯಾವ ಶಾಲೆಗೆ ಹೋಗುತ್ತಾನೆ, ಅವನ ಟೀಚರ್ ಯಾರು, ಅವನು ಏನು ಓದುತ್ತಾನೆ.....ಮಕ್ಕಳ ಮುಗ್ಧ ಪ್ರಶ್ನೆಗಳಿಗೆ ಅಷ್ಟೇ ಮುಗ್ಧವಾಗಿ ಉತ್ತರವೀಯುತ್ತಾ ತಟ್ಟೆ ಖಾಲಿಮಾಡಿದಾಗ, ಆ ಚ೦ದಿರನಿಗೆ ಅದೆಷ್ಟು ಕೃತಜ್ಞತೆಗಳು ಸಲ್ಲುತ್ತವೋ?!! ಮಲಗಲು ಮುಷ್ಕರ ಹೂಡಿ ಅಳುತ್ತಿರುವ ಕೂಸಿಗೆ, ತಾಯಿಯ ಮಡಿಲೊ೦ದಿಗೆ ಮಾಮನ ಇರುವಿಕೆಯಿಲ್ಲದಿದ್ದರೆ, ಆ ನಿದ್ರಾದೇವಿಯೂ ನಿಸ್ಸಹಾಯಕಳಾಗುತ್ತಾಳೆ. ಅದೇನು ವಿಶೇಷ ಸೌ೦ದರ್ಯವೋ, ಸೆಳವೋ ಆತನದು, ಬಾಲ್ಯದಲ್ಲಿ ಮಕ್ಕಳ ತು೦ಟಾಟಗಳಿಗೆ ಸಾಕ್ಷಿಯಾದರೆ, ಯೌವನದಲ್ಲಿ ಪ್ರೇಮಿಗಳ ಪಿಸುಮಾತಿಗೆ ದನಿಯಾಗುತ್ತಾನೆ, ಕೊನೆಗಾಲದಲ್ಲಿ ದೂರದಲ್ಲಿ ನೆಲೆಸಿರುವ ಮಕ್ಕಳ ನೆನೆದು ಮುಗಿಲು ದಿಟ್ಟಿಸುತ್ತಿರುವ ವೃದ್ಧರಿಗೆ ಜೊತೆಯಾಗುತ್ತಾನೆ.

ಮನೆಬಿಟ್ಟು ಪರಸ್ಥಳಗಳಿಗೆ, ಪರದೇಶಗಳಿಗೆ ಹೋದಾಗ, ಈ ತಿ೦ಗಳನೇ ನಮ್ಮ ಬೆಸೆಯುವ ಕೊ೦ಡಿ. ನಮ್ಮೂರಿನವ ಎ೦ಬ ಆತ್ಮೀಯತೆ. ಅಲ್ಲಿಯ ಸುದ್ದಿಗಳ ಹೊತ್ತುತರುವ ವರದಿಗಾರ. ಅ೦ದೊಮ್ಮೆ ಮನೆಯ ನೆನಪಾಗಿ, ಏಕಾಕಿತನ ಕಾಡಿರಲು, ಹೊರಬ೦ದು ಜೋಕಾಲಿಯಲ್ಲಿ ಕುಳಿತು ಮುಗಿಲೆಡೆಗೆ ನೋಡಲು, ಬಾನ೦ಗಳದಲ್ಲಿ ತಿ೦ಗಳನಿಲ್ಲ! ಯಾರ ಪರಿವೆಯೂ ಇಲ್ಲದೆ, ನನ್ನನ್ನೂ ಒ೦ದು ಮಾತು ಕೇಳದೆ ಕಣ್ಣೀರು ಧಾರೆಯಾಗಿ ಹರಿದಿತ್ತು. ಅದೇನು ಭಾವುಕತೆಯೋ, ಸಿನಿಕತೆಯೋ, ಅಸಹಾಯಕತೆಯೋ, ಚಿತ್ತವೈಕಲ್ಯವೋ, ಇ೦ದು ಹಾಸ್ಯವಾಗಿ ತೋರುತ್ತದೆ. ಆ ಮಟ್ಟಿನ ಭಾವಲೋಕ ಚ೦ದಿರನೊ೦ದಿಗೆ ಯಾವಾಗ ನಿರ್ಮಿತವಾಯಿತೆ೦ಬುದು ಇ೦ದಿಗೂ ಉತ್ತರ ದೊರಕದ ಪ್ರಶ್ನೆ!

ಎ೦ತಹ ರಚ್ಚೆಹಿಡಿದ ಮಕ್ಕಳನ್ನಾದರೂ ಸಮಾಧಾನಪಡಿಸುವ ಶಕ್ತಿ ತಿ೦ಗಳನಿಗಿದೆ ಎ೦ಬುದೇ ನನ್ನ ತಿಳಿವು, ಸ್ವಲ್ಪ ಅನುಭವವೂ. ಕಳೆದವಾರ ಚೆನ್ನೈನಿ೦ದ ಹಿ೦ತಿರುಗುವಾಗಲೂ ಹಾಗೆಯೇ ಆಯಿತು.

ಓದುತ್ತಿದ್ದ ತರಾಸು ಕಾದ೦ಬರಿಯ ಪ್ರಭಾವವೋ ತಿಳಿಯೆ, ಬೆ೦ಗಳೂರು- ಚೆನ್ನೈ ಹಾದಿ, ತುಮಕೂರು-ದುರ್ಗದ ಹಾದಿಯನ್ನೇ ಹೋಲುತಿತ್ತು. ರೋಮ ರೋಮವನ್ನೂ ಮುಟ್ಟಿ, ಇಳಿಯುತಿದ್ದ ಪ್ರತಿ ಹನಿ ಬೆವರಿನಲ್ಲಿಯೂ ತನ್ನ ಇರುವನ್ನು ಸಾರುತಿದ್ದ ನೇಸರ, ಸ೦ಜೆಯಾಗುತ್ತಾ, ಕಾಲನೊ೦ದಿಗೆ ಸೆಣಸುತ್ತಾ, ಬಾನಲ್ಲೇ ರಕ್ತದೋಕುಳಿಯಾಡಿ, ತಾಯಿ ಉಚ್ಚ೦ಗೆಯ ಕು೦ಕುಮದ ಪ್ರಮಾಣಮಾಡಿ, ಮತ್ತೆ ಬ೦ದೇ ಬರುತ್ತೇನೆ೦ದು ಸವಾಲೊಡ್ಡಿ ಬೆಟ್ಟಗಳ ಹಿ೦ದೆ ಜಾರಿಕೊ೦ಡ. ಅವನ ನಿರ್ಗಮನಕ್ಕಾಗಿಯೇ ಕಾಯುತ್ತಿದ್ದ ಚ೦ದಿರ ತನ್ನೊಳಗಿನ ಮೊಲದೊ೦ದಿಗೆ ಹಾಜರಾಗಿದ್ದ. 'ಸರ್ಪಮತ್ಸರ' ಮುಗಿದು, ತಿ೦ಗಳನೊ೦ದಿಗಿನ ಸ೦ವಾದಕ್ಕೆ ವೇದಿಕೆ ಸಜ್ಜುಗೊ೦ಡಿತ್ತು. ಹೆಣ್ಣು-ಗ೦ಡೆ೦ಬ ಭೇದವಿಲ್ಲದೆ ಎಲ್ಲರ ಹೆಸರುಗಳಲ್ಲೂ ಧಾರಾಳವಾಗಿ ನುಸುಳಿರುವ, ಜಾತಿ-ಮತಗಳ ಅ೦ತರವಿಲ್ಲದೆ ಎಲ್ಲರ ಹಬ್ಬ,ಆಚರಣೆಗಳಲ್ಲೂ ಹಾಸುಹೊಕ್ಕಾಗಿರುವ ಆ ಚ೦ದಿರ ಎ೦ದಿಗೂ ತನ್ನ ಇನ್ನೊ೦ದು ಮುಖವನ್ನು ತೋರಿಸದೇ ಒ೦ದು ಒಗಟಾಗುತ್ತಾನಲ್ಲ ಎ೦ದು ಯೋಚಿಸುತ್ತಿರುವಾಗ,

ನೀಲನಿರ್ಮಲದಾಗಸದಲ್ಲಿ ನಿಶ್ಚಿ೦ತನಾಗಿಹ ಚ೦ದಿರ|

ಬಾನು ತೊಳಗಿದೆ, ಭುವಿಯು ಬೆಳಗಿದೆ, ಶುದ್ಧ ಪಳುಕಿನ ಮ೦ದಿರ|| ಎ೦ದು ಕಣವಿಯವರು ಹಾಡುತ್ತಿದ್ದರು.

ಎಲ್ಲಿಗೆ ನಾ ಹೋದರಲ್ಲಿಗೆ ಬರುವನು ಅಮ್ಮಾ ಚಂದಿರ ನನ್ನವನು|

ನಿನ್ನವ ನಾನಾಗಿರುವುದರಿಂದ ಅಮ್ಮಾ ಚಂದಿರ ನಿನ್ನವನು || ಎ೦ದು ಕುವೆ೦ಪು ಮಾರ್ನುಡಿಯುತ್ತಿದ್ದರು.

ಓ ನನ್ನ ಚ೦ದಿರ, ಸೌ೦ದರ್ಯದ ಮ೦ದಿರ, ನಾನಿಲ್ಲಿ ನೆಲದಲ್ಲಿ, ನೀನಲ್ಲಿ ನಭದಲ್ಲಿ, ಎಲ್ಲಿಹನೋ ನನ್ನವನು, ಹುಡುಕಿಕೊಡೆಯಾ ಎ೦ದು ಬೇ೦ದ್ರೆ ಚ೦ದಿರನಿಗೆ ಜೋಡಿ ಹುಡುಕುವ ಕೆಲಸ ಕೊಟ್ಟಿದ್ದರು. ಹೊ೦ಬಳ, ಉದಯರವಿ, ಕವಿಶೈಲ, ಸಾಧನಕೇರಿ.. ಎಲ್ಲೆಲ್ಲೂ ಅದೇ ತಿ೦ಗಳ, ಆದರೆ ಕಾಣುವ ರೀತಿ ಬೇರೆ!! ಬೇ೦ದ್ರೆ ಕವನದ ಮೊದಲೆರಡು ಸಾಲುಗಳ ಯಥಾವತ್ ಪದಗಳನ್ನು ನೆನಪಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗಲೇ, ಕೇಳಿದ್ದು ಆ ದನಿ!!

ರುಬಿಯಾ ಜೋರಾಗಿ ಅಳುತ್ತಿದ್ದಳು. ಬಹುಶ: 'ಕುಪ್ಪಮ್' ಗಿ೦ತಲೂ, ಹಿ೦ದಿನ ಸ್ಟೇಷನ್ ನಲ್ಲಿ ಹತ್ತಿಕೊ೦ಡಿದ್ದ ಕುಟು೦ಬವದು. ಸೀಟ್ ಹುಡುಕುತ್ತಾ, ರಿಸರ್ವೇಷನ್ ಬೋಗಿಯವರೆಗೂ ಬ೦ದಿದ್ದರು. ಅಬ್ಬಾ! ಅದೆ೦ತಹ ಹಠ ಆಕೆಯದು. ಜೊತೆಗೆ ನಿದ್ದೆಯೂ ತೊಡರುಗಾಲು ಹಾಕುತಿತ್ತು. ಯಾರ ಮಾತನ್ನೂ ಕೇಳಲೊಲ್ಲಳು. ಅವರ ತ೦ದೆ ಹೇಳುತ್ತಿದ್ದರು, 'ಇಲ್ಲಿಯೇ ಕುಳಿತುಕೋ, ಹೋಗುವಾಗ ಕರೆದುಕೊ೦ಡು ಹೋಗುತ್ತೇನೆ'. ನನ್ನ ಸೀಟಿನ ಕೊನೆಯಲ್ಲಿದ್ದ ಮಹಿಳೆಯೂ ಆಕೆಯನ್ನು ಪರಿಪರಿಯಾಗಿ ಪುಸಲಾಯಿಸುತ್ತಿದ್ದರು, ಅವರ ಬಳಿ ಕುಳಿತುಕೊಳ್ಳುವ೦ತೆ. ನಾನೂ ಕರೆದೆ. 'ಕಿಟಕಿಯ ಪಕ್ಕ' ಎ೦ದು ಆಮಿಷವೊಡ್ಡಿದೆ. ಊಹೂ, ಏನಕ್ಕೂ ಜಗ್ಗಲಿಲ್ಲ! ಅವಳನ್ನು ಎತ್ತಿಕೊ೦ಡು ನಿಲ್ಲುವ ಸ್ಥಿತಿಯಿರಲಿಲ್ಲ. ಅವಳ ತ೦ದೆಗೆ ಕೋಪ ಮಿತಿಮೀರಿತು. ಇನ್ನೇನು ದ೦ಡ ತ೦ತ್ರ ಪ್ರಯೋಗಿಸಬೇಕು, ಅಷ್ಟರಲ್ಲಿ, ಮೋಡಗಳ ಮರೆಯಲ್ಲಿ, ರೈಲಿನ ಆಚೆ-ಈಚೆ ಕಣ್ಣಾಮುಚ್ಚೆ ಆಡುತಿದ್ದ ಚ೦ದಿರ ಕ೦ಡ. 'ಬಾ, ಚ೦ದಮಾಮ ತೋರಿಸ್ತೀನಿ' ಅ೦ತ ಕರೆದೆ. ಸೌಮ್ಯವಾಗಿ ಬ೦ದು ತೊಡೆಯೇರಿದಳು!!! ಅವಳ ತ೦ದೆ ತಾಯಿ ಸಮಾಧಾನದ ನಿಟ್ಟುಸಿರಿಟ್ಟರು.

ಅದುವರೆಗೂ ಚ೦ದಿರನೊ೦ದಿಗೆ ಸಾಗುತಿದ್ದ ಮೌನಸ೦ಭಾಷಣೆಗೆ, ಈಗ ರುಬಿಯಾ ಜೊತೆಯಾದಳು. ಅವಳ ಶಾಲೆ, ಸ್ನೇಹಿತರ ಬಗ್ಗೆ ಹೇಳಿದಳು. ಅವರಮ್ಮ ಕೊಟ್ಟ ಮಫ್ಲರ್ ನ ನೀಟಾಗಿ ಕಟ್ಟಿಕೊ೦ಡಳು. ಮೊದಲಿಗೆ, ಆಗೊಮ್ಮೆ ಈಗೊಮ್ಮೆ ತ೦ದೆಯ ಕಡೆ ಕಣ್ಣುಹಾಯಿಸಿ, ಅವರ ಇರುವಿಕೆಯನ್ನು ಧೃಡಪಡಿಸಿಕೊಳ್ಳುತ್ತಿದ್ದಳು. ಮತ್ತೆ ಚ೦ದಿರ ಕಣ್ಣಾಮುಚ್ಚಾಲೆ ಆಡಲು ಶುರುಮಾಡಿದಾಗ, ಕೆಲವು rhymes ಹೇಳಿದಳು. ಚ೦ದಿರನ ಕುರಿತ೦ತೆ,

ಚ೦ದಾಮಾಮ ಗೋಲ್ ಗೋಲ್,

ಮಮ್ಮಿ ಕಿ ರೋಟಿ ಗೋಲ್ ಗೋಲ್,

ಪಪ್ಪ ಕಾ ಪೈಸಾ ಗೋಲ್ ಗೋಲ್,

ಹಮ್ ಭೀ ಗೋಲ್, ತುಮ್ ಭೀ ಗೋಲ್,

ಸಾರಿ ದುನಿಯಾ ಗೋಲ್ ಗೋಲ್

ನನಗದು ನಮ್ಮನ್ನು ಕುರಿತೇ ಮಾಡಿದ ಪದ್ಯದ೦ತಿತ್ತು. ಅವಳೂ ಗು೦ಡು ಗು೦ಡಾಗಿದ್ದಳು, ನಾನೂ ಹಾಗೇ ಇದ್ದೇನೆ?! ಮೊದಲೇ ನಿದ್ರೆ ಕಾಡುತಿದ್ದ ಅವಳಿಗೆ, ಚ೦ದಿರನೂ ಕಾಣಿಸಿ, ಮಲಗಲು ಮೆತ್ತನೆ ಹಾಸಿಗೆ ಸಿಕ್ಕಿದ೦ತಾಗಿ (!!) ಹಾಗೇ ಭುಜಕ್ಕೊರಗಿ ನಿದ್ದೆ ಹೋದಳು. ಆ ಮುದ್ದು ಮುಖವನ್ನು ನೋಡುತ್ತಾ, ಎಷ್ಟೇ ಬೇಡವೆ೦ದರೂ, ಹೊಟ್ಟೆಕಿಚ್ಚಿನ ಸಣ್ಣಕಿಡಿ ಸಿಡಿದು ಆರಿತು. ನಾನೂ, ತ೦ದೆಯ ಹಾಡನ್ನು ಮನದಲ್ಲೇ ಗುನುಗುನಿಸುತ್ತಾ, ಅವರನ್ನು ಕರೆದುಕೊ೦ಡು ಬ೦ದಿದ್ದರೆ, ಅವರ ಭುಜದ ಮೇಲೆ ನಾನೂ ಹೀಗೇ ನಿದ್ದೆಹೋಗಬಹುದಿತ್ತೆ೦ಬ ಕನಸು ಕಾಣುತ್ತಾ, ಕಲ್ಪನಾ ಲೋಕಕ್ಕೆ ಹೋದೆ, ಚ೦ದ್ರನಿಗೊ೦ದು ಥ್ಯಾ೦ಕ್ಸ್ ಹೇಳುತ್ತಾ. ಸಣ್ಣ ಜೊ೦ಪು ತೆಗೆದೆದ್ದೆ.

ಬೆ೦ಗಳೂರು ದ೦ಡು ನಿಲ್ದಾಣ ಬ೦ದಿದ್ದರೂ, ಎದ್ದಿರದಿದ್ದ ಆಕೆಯನ್ನು, ಅವರ ತ೦ದೆ 'ನೀವೇ ಕರೆದುಕೊ೦ಡುಹೋಗಿ' ಎ೦ದರು ನಗುತ್ತಾ. ಅವಳು ಇರುವುದಾದರೆ ನನಗೇನೂ ಅಭ್ಯ೦ತರವಿಲ್ಲವೆ೦ದೆ. ಬೆಂಗಳೂರಲ್ಲಿ ಎಲ್ಲಿ ಬಿಟ್ಟರೂ, ಒಂದೇ ಗಂಟೆಯಲ್ಲಿ ಅವಳು ಮನೆಗೆ ವಾಪಸ್ ಬರುತ್ತಾಳೆ ಎಂದು ಅವಳ ಧೈರ್ಯದ ಬಗ್ಗೆ ಹೆಮ್ಮೆಯಿಂದ ಹೇಳುತ್ತಿದ್ದರು (ನಾನು ನನಗಿಂತಾ ಉತ್ತಮ ಅಂದುಕೊಳ್ಳುತ್ತಿದ್ದೆ) ಅಷ್ಟರಲ್ಲಿ, ನಿದ್ದೆಯಲ್ಲಿಯೇ ಕಣ್ಣುತೆರೆಯುವ೦ತೆ ಮಾಡಿ ತ೦ದೆಯ ಹೆಗಲೇರಿದಳು ರುಬಿಯಾ. ತುಂಬಾ ಪ್ರೀತಿಯಿಂದ ನನಗೊ೦ದು 'ಶುಕ್ರಿಯಾ' ಹೇಳಿ, ಅವರಿಳಿದು ಹೋದರು. ನಾನು ಮತ್ತೆ ತಿಂಗಳನತ್ತ ಮುಖ ಮಾಡಿದೆ, ಮನೆ ತಲುಪುವುದನ್ನೇ ಕಾಯುತ್ತ...

[ಚಿತ್ರಕೃಪೆ:ಪಾಲಚಂದ್ರ]

Thursday, May 28, 2009

ಆ ಬೇಸಿಗೆಯ ದಿನಗಳು....


'ಇನ್ನೊಂದು ಗುಕ್ಕು ತಿನ್ಕೊಂಡು ಹೋಗೇ..' ಅಮ್ಮ ಕೂಗ್ತಾ ಇದ್ರು. 'ಇಲ್ಲಮ್ಮ, ಆಗ್ಲೇ ಲೇಟಾಗಿದೆ' ನಾನಂದೆ. 'ಸರಿ ನೀರಾದ್ರೂ ಕುಡಿ' ಅಮ್ಮ ಬಾಗಿಲಿನ ಹತ್ರ ತಂದಿದ್ದ ನೀರನ್ನ ಅಲ್ಲೇ ಅರ್ಜೆಂಟಲ್ಲಿ ಕುಡೀತಾ ಮೈಮೇಲೆ ಒಂದು ಸ್ವಲ್ಪ ಚೆಲ್ಕೊಂಡು, 'ಇನ್ನಾ ನೀರು ಕುಡಿಯೋಕೆ ಬರೋಲ್ಲ' ಅಂತ ಬೈಸ್ಕೊಂಡು, 'ಸರಿ ಬರ್ತೀನಮ್ಮ' ಅಂತ ಹೇಳಿ ಹೊರಟೆ. ಹೆಚ್ಚು ಕಡಿಮೆ ದಿನಾ ಇದೇ ಗೋಳು. ಬೆಳಿಗ್ಗೆ 6.50 ಕ್ಕೆ ಬಸ್. 4.30 ಗೇ ಎದ್ರೂ ಸಮಯ ಸಾಕಾಗಲ್ಲ.

ನಾನು ಹಚ್ಚು ಕಮ್ಮಿ ಓಡ್ಕೊಂಡೇ ಬರ್ತಾ ಇದ್ದೆ, ದಾರಿಯಲ್ಲಿ ಮಕ್ಕಳು ಜೂಟಾಟ ಆಡ್ತಾ ಇದ್ರು. ಇದೇನು ಇಷ್ಟು ಬೆಳಿಗ್ಗೆ ಎದ್ದು ಬಿಟ್ಟಿದಾವೆ ಅಂದುಕೊಳ್ತಾ ಇದ್ದೆ, ಅಷ್ಟರಲ್ಲಿ ಒಬ್ಳು ಬಂದು ನನ್ನ ಸುತ್ತೋಕೆ, ಅವಳ್ನ ಹಿಡಿಯೋಕೆ ಇನ್ನೊಬ್ಬ. ಮಧ್ಯದಲ್ಲಿ ನಾನು ಎಡ್ಬಿಡಂಗಿ. ಮೇಲಿಂದ ಅವ್ರಮ್ಮ ಕೂಗ್ಕೊಳ್ತಾ ಇದ್ರು, 'ಅವ್ರು ಆಫೀಸಿಗೆ ಹೋಗ್ತಾ ಇದಾರೆ ದಾರಿ ಬಿಡ್ರೋ'. ಅದು ಆ ಮಕ್ಕಳಿಗೆ ಕೇಳಿಸ್ತೋ ಇಲ್ವೋ ಗೊತ್ತಿಲ್ಲ, 'ಹಿಡಿಯೋ ನೋಡೋಣ ಧಡಿಯ' ಅಂತ ಇವ್ಳು, 'ಎಲ್ಲೋಗ್ತೀಯ ಸಿಗ್ತೀಯ' ಅಂತ ಇವ್ನು ಅಟ್ಟಿಸ್ಕೊಂಡು ಹೋದ. ಒಂದು ನಿಮಿಷ ಅಲ್ಲೇ ಕಳೆದು ಹೋಗಿದ್ರೂ, ಬಸ್ ನೆನಪಾಗಿ ಮತ್ತೆ ಒಡೋಕೆ ಶುರು ಮಾಡ್ದೆ. ಬಸ್ ಸಿಗ್ತು.

ಬಸ್ಸಿನಲ್ಲಿ ಕುಳಿತ ಮೇಲೆ, ದಾರಿಯ ಆ ಘಟನೆ, ನನ್ನನ್ನ ಆ ಬೇಸಿಗೆಯ ರಜಾದಿನಗಳ ನೆನಪಿನಂಗಳಕ್ಕೆ ಕರೆದೊಯ್ತು. ಆಹಾ! ಏನು ದಿನಗಳವು..

ಇನ್ನೂ ಪರೀಕ್ಷೆಗಳು ಪ್ರಾರಂಭವಾಗುವ ಮೊದಲೇ, ತಾತನ ಕಾಗದ ಬಂದಿರುತ್ತಿತ್ತು ಮಗಳಿಗೆ (ನಮ್ಮಮ್ಮನಿಗೆ). ಪರೀಕ್ಷೆ ಮುಗಿದ ಕೂಡಲೇ ಬರುವಂತೆ ಆಹ್ವಾನ. ಪ್ರೀತಿಪೂರ್ವಕ ಆಗ್ರಹ. ನನ್ನ ಪರೀಕ್ಷೆ ಮುಗಿದ ಮಧ್ಯಾಹ್ನವೇ ಪ್ರಯಾಣ. ಇದುವರೆಗೂ ಪರೀಕ್ಷೆಯ ಫಲಿತಾಂಶವನ್ನು ನಾನೇ ಖುದ್ದು ನೋಡಿದ ಅನುಭವವಿಲ್ಲ. ಪ್ರತಿವರ್ಷ ತಂದೆಯವರೇ ಏಪ್ರಿಲ್ 10 ರಂದು ಫಲಿತಾಂಶ ನೋಡಿ ಬಂದು ಕಾಗದ ಬರೆಯುತ್ತಿದ್ದರು. (ಹೌದು, ಅದೇ ನೀಲಿ ಬಣ್ಣದ 'ಇಂಗ್ಲೆಂಡ್' ಲೆಟರ್ ಆಗಿದ್ದ 'Inland' letter. ಪತ್ರದ ಸೊಗಡನ್ನು ವಿವರಿಸಲು ಇನ್ನೊಂದು ಬ್ಲಾಗ್ ಬೇಕು!) ಕಳುಹಿಸಲು ತಂದೆಯವರಿಗೆ ಸಂಕಟ. ಅವರಿಗೆಲ್ಲಿಂದ ಬರಬೇಕು 2 ತಿಂಗಳು ರಜ. ಅಡುಗೆ ಮಾಡಲು ಬರುತ್ತಿತ್ತಾದ್ದರಿಂದ, ಸ್ವಯಮ್ಪಾಕದ ಬಗ್ಗೆ ಚಿಂತೆಯಿರಲಿಲ್ಲವಾದರೂ, ಮಕ್ಕಳನ್ನು ಬಿಟ್ಟಿರಬೇಕಲ್ಲಾ ಅಂತ. ಹೊರಡುವ ಮುಂಚೆ Do's & Dont's ಗಳ ದೊಡ್ಡ ಭಾಷಣ. ಅಮ್ಮನಿಗೆ (ಹೌದು ಅಮ್ಮನಿಗೇ!) ಮಕ್ಕಳನ್ನು ನೋಡಿಕೊಳ್ಳುವ ಬಗೆ, 'ಎಲ್ಲೆಲ್ಲೋ ನೀರು ಕುಡಿಯಲು ಬಿಡಬೇಡ, ಅಲ್ಲಿ ಇಲ್ಲಿ ಹಾಳು ಮೂಳು ತಿನ್ನೋಕೆ ಬಿಡಬೇಡ'.. ಇತ್ಯಾದಿ. ಅಮ್ಮ ಕೇಳೊತನಕ ಕೇಳಿಸಿಕೊಂಡು, 'ನನಗೂ ಗೊತ್ತು' ಅಂತ ಸ್ವಲ್ಪ ದನಿಯೇರಿಸಿ ಹೇಳ್ತಾ ಇದ್ರು!

ಹಳ್ಳಿಯಲ್ಲಿ ಬಸ್ ಸ್ಟ್ಯಾಂಡ್ ಹತ್ರಾನೇ ಮನೆ. ತಾತ ರೂಮಿನ ಹೊರಗೆ ಕಟ್ಟೆ ಮೇಲೆ ಕುತ್ಕೊಂಡು ಕಾಯ್ತಾ ಇರ್ತಿದ್ರು. ಬಸ್ಸಿನಿಂದ ಇಳಿದ ತಕ್ಷಣ ಅಲ್ಲಿಗೇ ಓಟ. ತಾತನ ಕಣ್ಣಿನ ಹೊಳಪು, ಮೊಮ್ಮಗಳಿಗಾಗೋ, ಮಗಳಿಗಾಗೋ ಇನ್ನೂ ಪ್ರಶ್ನೆ! ಬಾಗಿಲ್ಲಲ್ಲಿ ಕೈಕಾಲು ತೊಳೆದುಕೊಂದು ಒಳಗೆ ಹೋದ ಮೇಲೆ ಉಭಯಕುಶಲೋಪರಿ. ನಾನು ಸೀದಾ ಅಲ್ಲಿಂದ ದನದ ಕೊಟ್ಟಿಗೆಗೆ ಹೋಗ್ತಾ ಇದ್ದೆ. ನಮ್ಮ ಕೆಂಪಿ, ಕೆಂಚಿ, ಗಂಗಿ... ಮತ್ತವರ ಮಕ್ಕಳನ್ನು ಮಾತನಾಡಿಸಿಕೊಂಡು ಬರುವಷ್ಟರಲ್ಲಿ ಅವ್ವ (ನಾವು ಅಜ್ಜಿಯನ್ನು ಹೀಗೇ ಕರೆಯೋದು) ಹಾಲು, ಮಂಡಕ್ಕಿ ರೆಡಿ ಮಾಡಿರೋರು. ಅಪ್ಪ ನಮ್ಮನ್ನು ಬಿಟ್ಟು ಅವತ್ತು ರಾತ್ರಿನೇ ವಾಪಸ್ ಹೊರಡೋರು. ಅಲ್ಲಿ ತನಕ Silent & Good Girl!

ಮೊದಲು ಸ್ವಲ್ಪ ಸಣ್ಣವರಿದ್ದಾಗ (ಇನ್ನೂ ಸ್ನೇಹಿತರು ಅಂತ ಗುಂಪು ಮಾಡಿಕೊಳ್ಳೋ ಮೊದಲು) ಬೆಳಿಗ್ಗೆ ಅವ್ವನ ಜೊತೆಗೇ ಎದ್ದು ಬಿಡ್ತಾ ಇದ್ದೆ. ಅಮೇಲೆ ಅವರ ಹಿಂದೆ ಸುತ್ತೋದು. ದನಗಳ ಬಾನಿಗೆ ಹುಲ್ಲು ಹಾಕೋದು, ಮುಸುರೆ ಹೀಗೆ ಎಲ್ಲಕೂ ಒಂದು ಕೈ ಹಾಕೋದು. ಇನ್ನ ಹಾಲು ಕರೆಯೋಕೆ ಹೋಗಿರ್ತಾರಷ್ಟೆ, ಹಾಲು ಬೇಕು ಅಂತ ಅವರ ಹಿಂದೆ ಹೋಗೋದು. ಆಗ ತಾನೆ ಕರ್ದಿದ್ದ ಬೆಚ್ಚಗಿನ ಹಾಲನ್ನ ಒಂದು ದೊಡ್ಡ ಭವಾನಿ ಲೋಟಕ್ಕೆ ಹಾಕಿ ಕೊಡೋರು.. ಒಂದು ಸಲ ಲೋಟ ಎತ್ತಿದ್ರೆ, ಪೂರ್ತಿ ಖಾಲಿ ಆಗೋ ತನಕ ಕೆಳಗೆ ಇಳಿಸುತ್ತಿರಲಿಲ್ಲ. ಅದೇನು ಹಾಗೆ 'ಗೊಟಕ್, ಗೊಟಕ್' ಅಂತ ಕುಡಿತೀಯೇ ಅಂತ ಅಮ್ಮ ಬೈತ ಇದ್ರೂ, ಅದೆಲ್ಲ ಕೇಳಿಸ್ಕೊತಾ ಇರ್ಲಿಲ್ಲ. ಎಲ್ಲ ಕುಡಿದು ಮುಗಿಸಿದ ಮೇಲೆ, ಮೂಡಿರ್ತಿದ್ದ ಆ ಮೀಸೇನ ಕೈಯಲ್ಲೇ ಒರೆಸಿಕೊಂಡು, ತಾತನಿಗೆ ಕಂಪ್ಲೇಂಟ್ ರವಾನೆ. ಅಮ್ಮನ ಕೋಪ ಅವರಿಗೆ ಹಿಂದಿರಿಗಿಸುವ ಯಶಸ್ವೀ ಪ್ರಯತ್ನ! ಆಮೇಲೆ ಮನೆಯೆಲ್ಲ ಒಂದು ರೌಂಡ್ ಹೊಡೆಯೋದು. ಸ್ವಲ್ಪ ಹೊತ್ತು ಅಟ್ಟದಲ್ಲಿ ಅನ್ವೇಷಣೆ. ದನ ಮೇಯಿಸ್ಲಿಕ್ಕೆ ಕರ್ಕೊಂಡು ಹೋಗಕ್ಕೆ ಬರ್ತಿದ್ದ ಮಂಜಣ್ಣನ ಹತ್ತಿರ ಸ್ವಲ್ಪ ಹರಟೆ. ತಾತ ಹೊರಡುವ ಮುನ್ನ ಅವರ ಹತ್ರ ಸ್ವಲ್ಪ ಕಥೆ. ಅಲ್ಲಿಂದ ಮಜ್ಜಿಗೆ ಕೋಣೆಗೆ ಸವಾರಿ. ನಾನೂ ಮಜ್ಜಿಗೆ ಕಡೀತೀನಿ ಅಂತ ಗಲಾಟೆ. ಕಡೆಗೋಲು ನನಗಿಂತಾ ಎರಡು ಪಟ್ಟು ಎತ್ತರವಾಗಿತ್ತು. ಒಂದು ಕಡೆ ಹಗ್ಗ ಎಳೆದರೆ, ಇನ್ನೊಂದರ ಜೊತೆಗೆ ನಾನೂ ಹೋಗಿ ಮಜ್ಜಿಗೆ ಕೊಳಗದಲ್ಲೇ ಬೀಳುವ ಎಲ್ಲ ಸಾಧ್ಯತೆ ಇತ್ತು. ಅವ್ವ 'ಮಾಡುವಾಗ ಎಲ್ಲಿ ಹೋಗಿರ್ತೀರೋ' ಅಂತ ಗೊಣಗ್ತಾ, ಅವರೇ ಕೈ ಹಿಡಿಸಿಕೊಂಡು ಒಂದೆರಡು ಸಲ ಕಡೆಸಿ ಕೈಬಿಡ್ತಾ ಇದ್ರು. ದನಗಳೆಲ್ಲ ಹೋದಮೇಲೆ ಕೊಟ್ಟಿಗೆ ಕ್ಲೀನಿಂಗ್. ಅವ್ವನ ಜೊತೆ ಕುಳ್ಳು ತಟ್ತೀನಿ ಅಂತ ಕುತ್ಕೋತಾ ಇದ್ದೆ. ಸಗಣಿ ಮುದ್ದೇನ ಗೋಡೆಗೆ ಬಡಿಯೋದ್ರಲ್ಲಿ ಏನೋ ಖುಷಿ. ನನ್ನ ಪುಟಾಣಿ ಕೈಯಲ್ಲಿ ಒಂದು ಕುಳ್ಳು ತಟ್ಟೊ ಹೊತ್ತಿಗೆ ಅವ್ವ ಪೂರ್ತಿ ಮಾಡಿ ಮುಗಿಸಿರ್ತಿದ್ರು! ಮತ್ತೆ ಅವ್ವ ಹೊಲಕ್ಕೆ ಬುತ್ತಿ ತಗೊಂಡು ಹೋಗುವಾಗ ಅವರ ಜೊತೆ. ಅಮ್ಮ ಸ್ಯಾಂಡಲ್ ಎಲ್ಲ ಹಾಕಿ, ಬಟ್ಟೆ ಕೊಳೆ ಮಾಡ್ಕೊಂಡ್ರೆ ನೋಡು ಅಂತೆಲ್ಲ ತಾಕೀತು ಮಾಡ್ತಾ ಇದ್ರು. ಅವ್ವ ಚಪ್ಪಲಿ ಇಲ್ಲದೇ ಬರೀ ಕಾಲಲ್ಲಿ ನಡ್ಕೊಂಡು ಬರ್ತಾ ಇದ್ರು! ಯಾವ ನೆರವಿಲ್ಲದೇ ಅವ್ವ ತಲೆಮೇಲೆ ಬುತ್ತಿನ ಬ್ಯಾಲೆನ್ಸ್ ಮಾಡ್ಕೊಂಡು ನಡಿತಾ ಇದ್ದದ್ದು ಒಂದು ಅಚ್ಚರಿಯಾಗಿತ್ತು. ಜೊತೆಗೆ ಅವರ ಸೆರಗು ನನ್ನ ತಲೆಮೇಲೆ ಇರ್ತಿತ್ತು. ನಾನೂ ಹೊತ್ಕೋತೀನಿ ಅಂತ ಹಠ ಮಾಡಿದಾಗ, ಒಂದು ಸಣ್ಣ ಚೌಕವನ್ನ ಸಿಂಬೆ ಮಾಡಿ ಪುಟ್ಟ ಹರಿವಾಣವನ್ನ (ನನ್ನ ಬುತ್ತಿ) ನನ್ನ ತಲೆ ಮೇಲೆ ಇಟ್ಟು ಕರ್ಕೊಂಡು ಹೋಗ್ತಾ ಇದ್ರು. ಸಂಜೆ ಮುಂದೆ ದನಗಳು ಮನೆಗೆ ಬರೋ ಹೊತ್ತಿಗೆ ಬಾಗಿಲಿಗೆ ನೀರು ಹಾಕಿ ಕಾಯೋದು. ಮತ್ತೆ ಅವ್ವನ ಹಿಂದೆ ಸುತ್ತೋದು, ದನ ಬಂದ್ವಲ್ಲಾ, ಹಾಲೆಲ್ಲಿ ಅಂತ! ಸಾಯಂಕಾಲ ತಾತನ ಜೊತೆ ಒಂದು ರೌಂಡ್ ವಾಕಿಂಗ್. ತಾತನ್ನ ಅದೂ ಇದೂ ಪ್ರಶ್ನೆ ಕೇಳ್ತಾ ಇದ್ದೆ, ಈಮರ ಇಲ್ಲ್ಯಾಕಿದೆ? ಚಾನೆಲ್ ನಲ್ಲಿ ನೀರು ಯಾಕೆ ಇಲ್ಲ? ಎರಡು ಎತ್ತು ಸಾಕಾಗತ್ತಾ? ಹೀಗೆ.. ತಾತ ನನ್ನ ಶಾಲೆ ಬಗ್ಗೆ, ಊರಿನ ಬಗ್ಗೆ ಕೇಳೋರು. ಕಥೆ ಹೇಳೋರು.

ಸ್ವಲ್ಪ ದೊಡ್ಡವರಾದ ಮೇಲೆ ಸ್ವಲ್ಪ ಬದಲಾವಣೆ. ಆಟ, ಆಟ,ಆಟ!! ಬೆಳಿಗ್ಗೆ ತಿಂಡಿ ತಿಂದು ಮನೆಯಿಂದ ಹೊರಟ್ರೆ, ಹಿಂತಿರುಗುತ್ತಿದ್ದುದು ಸಾಯಂಕಾಲವೇ. ಅಬ್ಬಾ! ಅದೆಷ್ಟು ಆಟಗಳು! ಲಗೋರಿ, ಗೋಲಿ, ಚಿನ್ನಿದಾಂಡು, ಮರಕೋತಿ, ಕಣ್ಣಮುಚ್ಚೇ, ಜೂಟಾಟ, ಕಳ್ಳಪೋಲಿಸ್, ರತ್ತೊ ರತ್ತೋ ರಾಯನ ಮಗಳೆ.. ಬಿಡುವಿಲ್ಲದಾಟಗಳು. ಹೊಟ್ಟೆ ಹಸೀತಾ ಇದೆ ಅನ್ಸಿದ್ರೆ, ಯಾರದಾದ್ರೂ ಹೊಲಕ್ಕೆ ನುಗ್ಗೋದು. ಮಾವಿನ ಮರ, ಪೇರಲೆ ಮರ, ಪಪ್ಪಯಿ ಹಣ್ಣು, ಬೇಲಿಲಿ ಸಿಕ್ತಾ ಇದ್ದ ತೊಂಡೆ ಹಣ್ಣು, ಕಾರೆಹಣ್ಣು, ಬೋರೆ ಹಣ್ಣು.., ಹುಣಸೆಕಾಯಿ... ಆಮೇಲೆ ಒಂದು ಎಳನೀರು. ಹುಡುಗರು ಮರಹತ್ತಿ ತಮಗೆ ಬೇಕಾದ ಹಣ್ಣು ಕಿತ್ಕೊಳ್ತಾ ಇದ್ರು. ಒಂದ್ಸಲ ಅಣ್ಣ ನಾನು ಕೇಳಿದ ಹಣ್ಣು ಕಿತ್ತು ಕೊಡ್ಲಿಲ್ಲ. ಆಗ ಹಟಕ್ಕೆ ಕಲ್ತಿದ್ದು ಮರ ಹತ್ತೋದನ್ನ. ನಾನು ಮರ ಹತ್ತಿದಾಗ ಬೇಕಂತ ಮರ ಅಲ್ಲಾಡಿಸ್ತಾ ಇದ್ದ. 'ತಡಿ, ತಾತಂಗೆ ಹೇಳ್ತೀನಿ' ಅಂತಿದ್ದೆ. 'ಹೋಗೇ, ತಾತನ ಮೊಮ್ಮಗಳೇ, ನಾನು ಅವ್ವನಿಗೆ ಹೇಳ್ತೀನಿ, ಹುಡಿಗೀರನೆಲ್ಲ ಗುಂಪು ಕಟ್ಕೊಂದು ಮರ ಹತ್ತಾಳೆ ಅಂತ' ಅಂತಿದ್ದ. ಆದ್ರೆ, ನಾನು ಅಲ್ಲೇ ಯಾರ್ದಾದ್ರು ಮನೆಗೆ ನುಗ್ಗಿ, ಉಪ್ಪುಖಾರ ಹಾಕ್ಕೊಂಡು ಹದ ಮಡ್ಕೊಂಡು ಹಣ್ಣು ತಿನ್ತಾ ಇರ್ಬೇಕಾದ್ರೆ ಹಲ್ಕಿರ್ಕೊಂಡು ಬರ್ತಾ ಇದ್ದ. ಮನೆಗೆ ಹೋಗೋಶ್ಟರಲ್ಲಿ ಎಲ್ಲ ಮರೆತು ಹೋಗಿರ್ತಿತ್ತು. ಹೊಲ ಬೇಜಾರಾದಾಗ ಚಾನೆಲ್ ಗೆ ಹೋಗ್ತಾ ಇದ್ವಿ. ನೀರಲ್ಲಾಡೋಕೆ. ಈ ಹುಡುಗ್ರು ಎಲ್ಬೇಕಾದ್ರು ಈಜೋಕೆ ಹೋಗೋರು. ಆದ್ರೆ ಹುಡಿಗೀರಿಗೆ ಆ ಸ್ವಾತಂತ್ರ್ಯ ಇರ್ಲಿಲ್ಲ. ಆಗೆಲ್ಲ ದೇವ್ರನ್ನ ಚೆನ್ನಾಗಿ ಬೈಕೊಂಡಿದ್ದೀನಿ. ನಾನು ಸೈಕಲ್ ಹೊಡೆಯೋದು ಕಲೀಬೇಕಾಗಿತ್ತು. ಸುಮ್ನೆ ಹೇಳಿದ್ರೆ ಇವ್ರು ಕಲಿಸ್ತಾ ಇರ್ಲಿಲ್ಲ. ದೊಡ್ಡಪ್ಪನಿಂದ ಶಿಫಾರಸು ತಂದಿದ್ದೆ. ಅಕ್ಕನಿಗೆ ಕಲಿಸುವಾಗ ಹತ್ತಿಸಿ ಕೈಬಿಟ್ಟು, ಅವಳು ಇವರು ಹಿಡ್ಕೊಂಡಿದಾರೆ ಅನ್ಕೊಂಡೇ ಓಡಿಸ್ತಾ, ಒಂದ್ಸಲ ಹಿಂದೆ ನೋಡಿ, ಮುಂದಿದ್ದ ಮನೆಯ ಗೋಡೆಗೆ ಗುದ್ದಿ ಗದ್ದ ಗಾಯ ಮಡ್ಕೊಂಡಿದ್ಲು. ನಾನು ಸ್ವಲ್ಪ ಮುಂಜಾಗ್ರತೆ ವಹಿಸಿ Open Field ಗೆ ಕರ್ಕೊಂಡು ಹೋಗಿದ್ದೆ. ಸೈಕಲ್ ಹತ್ಕೊಂಡೆ. 'ತುಳಿಯೇ, ತುಳಿದ್ರೆ ತಾನೇ ಮುಂದಕ್ಕೆ ಹೋಗೋದು, ಎಷ್ಟು ಅಂತ ತಳ್ಳಲಿ' ಅಂತ ಬೈತಾ ಇದ್ದ. ನಾನು ಹತ್ಕೊಂಡು ಬರೀ ರೆವೆರ್ಸೆ ತುಳಿತಾ ಇದ್ದೆ, easy ಅಲ್ವ! ಕೊನೆಗೂ ಮುಂದಕ್ಕೆ ತುಳಿದೆ. ನಂಗೂ ಒಂದ್ಸಲ ಹಾಗೇ ಮಾಡಿದ್ರು. ಹಿಡ್ಕೊಂಡಿದಾರೆ ಅಂತ ತುಳಿತಾ ಇದ್ದೋಳು, ತಿರುಗಿಸಿಕೊಂಡು ಬರ್ತಾ ಇದ್ದೆ, ಅಣ್ಣ ಮುಂದೆ ನಿಂತಿದ್ದ. ಅಷ್ಟೇ! ಸೈಕಲ್ ಒಂದ್ಕಡೆ, ನಾನೊಂದ್ಕಡೆ!

ಯಾವಾಗ್ಲೂ ತಾತನ ಕಣ್ತಪ್ಪಿಸಿ ಆಟಕ್ಕೆ ಹೋಗ್ತಾ ಇದ್ದದ್ದು. ಇಲ್ಲಾಂದ್ರೆ ಬಿಸ್ಲಲ್ಲಿ ಹೋಗಿದ್ದಕ್ಕೆ ಬೈತಾ ಇದ್ರು. ಎಲ್ಲೇ ಹೋಗಿದ್ರೂ ಸಾಯಂಕಾಲ ದೀಪಮುಡ್ಸೋ ಹೊತ್ತಿಗೆ ಸರಿಯಾಗಿ ಮನೆಲಿ ಇರ್ತಾ ಇದ್ವಿ. ಆಮೇಲೆ ತಾತನವರೊಂದಿಗೆ ಪಗಡೆ, ಚಾವಂಗ, ಕವಡೆ, ಆನೆ ಮನೆ, ಹಾವು ಏಣಿ, ಅಳ್ಗುಳಿಮಣೆ, ಕಡ್ಡಿ ಆಟ, ಕಲ್ಲಾಟ, ಸೆಟ್ ಹೀಗೇ ಈನಾದ್ರೊಂದು. ಆಮೇಲೆ ಊಟ. ಆದ್ಮೇಲೆ ಎಲ್ಲರೂ ಒಟ್ಟಿಗೇ ಕುತ್ಕೊಂಡು ಏನಾದ್ರು ಹರಟೆ. ಸ್ವಲ್ಪ ಪ್ರತಿಭಾ ಪ್ರದರ್ಶನ. ಅಕ್ಕ ಚೆನ್ನಾಗಿ ಹಾಡು ಹೇಳೋಳು. ಭರತನಾಟ್ಯ ಕೂಡ. ನಂದು average. ನಮ್ಮಿಬ್ರಿಗೂ ಚೆನ್ನಾಗಿದೆ ಅಂತ ಶಭಾಷ್ಗಿರಿ ಕೊಟ್ರೆ, ಅಣ್ಣನಿಗೇನೋ ಸಂಕಟ. ನಾನೂ ಹಾಡ್ತೀನಿ, ಕುಣಿತೀನಿ ಅಂತ ನಮ್ಗೆಲ್ಲ torture ಕೊಡ್ತಾ ಇದ್ದ. ತಾತ 'ಬಾರಿಸ್ತೀನಿ' ಅಂದ್ರೆ, ನಮ್ಮಮ್ಮ 'ಬಾರೋ ರಾಜ' ಅಂತ ಮುದ್ದಾಡೋರು.

ಅಪ್ಪ ಸ್ವಲ್ಪ ದಿನ ರಜೆ ಹಾಕಿ ಬಂದಾಗ, ಸ್ವಲ್ಪ ದಿನದ ಮಟ್ಟಿಗೆ ಇನ್ನೊಂದು ತಾತನ ಮನೆಗೆ ಪಯಣ. ರಾಣೆಬೆನ್ನೂರಿನ ತನಕ ಆರಾಮವಾಗಿ ಹೋಗಿದ್ದು ತಿಳಿದಿದೆ. ಆದರೆ ಅಲ್ಲಿಂದ ಹಳ್ಳಿಗೆ ಹೋಗಿದ್ದೇ ಮೆಟಡೋರ್ ಇತ್ಯಾದಿ ವಾಹನಗಳಲ್ಲೇ. ಅದರಲ್ಲಿ ಕೆಲವೊಮ್ಮೆ ಲಂಬಾಣಿ ತಾಂಡ್ಯಾದ ಹೆಂಗಸರು ಪರಮಾತ್ಮನ್ನ ಇಳಿಸಿಕೊಂಡು, ಮೀನು ಇತ್ಯಾದಿಗಳನ್ನು ತಗೊಂಡು ಬರ್ತಾ ಇದ್ರು. ಅವರ ಭಾಷೆ, ವೇಷಗಳೆಲ್ಲವೂ ಒಂಥರಾ ಮೋಜು. ಮಲ್ನಾಡ್ ಕಡೆ ನಮ್ದೊಂಥರಾ ಗ್ರಾಂಥಿಕ ಭಾಷೆ. ದಾವಣಗೆರೆ ಭಾಷೆ ಬೇರೆ. (ಏ ಪಾಪಿ ಬಾ ಇಲ್ಲಿ ಅಂತ ಕರೆದವರನ್ನ ಬೈಯುವ ಮುನ್ನ ಸ್ವಲ್ಪ ಯೋಚಿಸಿ!) ಬ್ಯಾಡಗಿಗೆ ಹೋದ್ರೆ ಇನ್ನೊಂಥರಾ. ಆದರೆ ನನಗೆ ಇಂದಿಗೂ ಆಶ್ಚರ್ಯ ಆಗುವ ವಿಷಯವೆಂದರೆ,. ಅಲ್ಲಲ್ಲಿಗೆ ಹೋದಾಗ ಆ ಭಾಷೆ ಹಾಗೇ ಬಂದು ಬಿಡುತ್ತದೆ. (ಭಾಷೆನೂ ರಕ್ತದಲ್ಲಿರತ್ತಾ!) ಈ ಹಳ್ಳಿಯಲ್ಲಿ ಇನ್ನೊಂತರಾ ಮಜಾ. ಕಪ್ಪು ಮಣ್ಣು, ಜೋಳದ ಹೊಲ. ಮೆಣಸಿನ ಮಂಡಿ (ಜಾಸ್ತಿ ಹೋಗೋಕೆ ಬಿಡ್ತಾ ಇರ್ಲಿಲ್ಲ, ಘಾಟು ಅಂತ). ಗುಡ್ಡಕ್ಕೆ ಹೋಗೋದು. ಹೊಂಡಕ್ಕೆ ಹೋಗೋದು. ತಂದೆಯವರ ಜೊತೆ ಅವರ ಶಾಲೆಗೆ ಹೋಗೋದು. ಅವರ ಮಾಸ್ತರರನ್ನು ಮಾತನಾಡಿಸುವುದು. ಸಂತೆ, ವೀರಭದ್ರನ ಗುಡಿ ಹೀಗೆ ಸುತ್ತಾಡೋದು. ಆ ಪುಟಾಣಿ ಅಡುಗೆ ಮನೆಯಲ್ಲಿ ದೊಡ್ಡಮ್ಮ ಪಟ ಪಟ ಅಂತ ರೊಟ್ಟಿ ಬಡಿಯೋದನ್ನ ನೋಡೋದೇ ಸಂಭ್ರಮ. ಜೋಳದ ರೊಟ್ಟಿಗಳ stack. ಏನ್ ಛಂದ ಜೋಡ್ಸಿರ್ತಾರಂತ! ಅದಕ್ಕೆ ಕರಿಂಡಿ, ಬಣ್ಣಬಣ್ಣದ ಚಟ್ನಿಪುಡಿಗಳು.. ಉಳ್ಳಾಗಡ್ಡಿ, ಹಸಿಮೆಣಸಿನಕಾಯಿ.. ಆ ಕಟಿಕಟಿ ರೊಟ್ಟಿ ನನ್ಗೆ ಉಣ್ಣಾಕ್ಬರಾಂಗಿಲ್ಲಾಂತ ಬಿಸಿ ಬಿಸಿ ರೊಟ್ಟಿ ಮಾಡ್ಕೊಡ್ತಾ ಇದ್ರು. ಉಂಡ್ಕೊಂಡು ಉಡಾಳಾಗಿದ್ದೇ ಬಂತು ಇಲ್ಲಿ. ಪಾಪ ತಮ್ಮಂದ್ರು/ ಕಾಕಾ ಎಲ್ಲ ಹೊಂಡದಿಂದ, ಮತ್ತೆಲ್ಲಿಂದಲೋ ನೀರು ತರ್ತಾ ಇದ್ರು. ತುಂಗೆ ಮಡಿಲಲ್ಲಿ ಬೆಳೆದಿರೋ ನಂಗೆಲ್ಲಿಂದ ಗೊತ್ತಾಗ್ಬೇಕು ನೀರಿನ ಬವಣೆ!

ಇನ್ನೊಂದ್ ಸ್ವಲ್ಪ ದೊಡ್ಡೋರಾದ ಮೇಲೆ ಸ್ವಲ್ಪ ಜವಾಬ್ದಾರಿ. ಮನೆ ಕಸ ಮುಸುರೆ ಎಲ್ಲ ಮುಗಿಸಿದ ಮೇಲೇ ಹೊರಗೆ ಹೊಗ್ತಾ ಇದ್ದದ್ದು. ಅಷ್ಟು ದೊಡ್ಡ ಪಡಸಾಲೆ, ಅಟ್ಟ, ಅಡುಗೆ ಮನೆ, ದೇವರ ಮನೆ, ಎಲ್ಲ ಗುಡಿಸಿ ಸಾರ್ಸೋ ಅಷ್ಟು ಹೊತ್ತಿಗೆ ಒಳ್ಳೇ ವ್ಯಾಯಾಮ. ಸಾಯಂಕಾಲ ನೀರು ಬಿಡೋ ಅಷ್ಟು ಹೊತ್ತಿಗೆ ಮನೆಗೆ ಬಂದ್ಬಿಡ್ಬೇಕು. ಇಲ್ಲಾಂದ್ರೆ ಅಮ್ಮನ ಪೊರಕೆ/ಸೌಟು ಕಾಯ್ತಾ ಇರ್ತಿತ್ತು. ಬೇಕಂತಲೇ ತಾತನ ಕೋಣೆ ಮುಂದೆನೇ ಸೊಂಟದ ಮೇಲೆ ಆ ದೊಡ್ಡ ದೊಡ್ಡ ಕೊಡ ಹೊತ್ಕೊಂಡು ಬರ್ತಾ ಇದ್ದೆ. ಅವ್ವನ ಹತ್ರ ಬೈಸ್ಕೊತಾ ಇದ್ದೆ.

ಎಲ್ಲಾ ದೊಡ್ಡೋರಾಗ್ತಾ ಅಗ್ತಾ ಊರಿಗೆ ಹೋಗೋ Frequency ಕಮ್ಮಿ ಆಗೋಯ್ತು. ಅಕ್ಕ ಅಣ್ಣಂಗೆ ಪರೀಕ್ಷೆ ಅಂತ ದೊಡ್ಡಮ್ಮ ಬರ್ತಾ ಇರ್ಲಿಲ್ಲ. ಇವ್ರು ಬರಲ್ಲ ಅಂತ ಅವ್ರು, ಅವ್ರಿಗೆ ಪರೀಕ್ಷೆ ಅಂತ ಇವ್ರು, ಇವ್ರು ಬರಲ್ಲ ಅಂತ ಅವ್ರು.. ಹೀಗೇ ಆಗೋಯ್ತು...

ಇಂದಿನ ನಗರವಾಸಿ ಪೀಳಿಗೆಗೆ ಇದೆಲ್ಲ ಲಭ್ಯವಿದೆಯಾ? ಗೊತ್ತಿಲ್ಲ. ಅಥವಾ ಅವರ 'ಮಜಾ' ಪದದ ಅರ್ಥವೇ ಬೇರೆನಾ ಗೊತ್ತಿಲ್ಲ. ಏನೇ ಆದ್ರೂ, ನಿಸರ್ಗದ ಮಡಿಲಲ್ಲಿ. ಸ್ನೇಹಿತರೊಡನೆ ಆಡಿದ ಆ ದಿನಗಳು, ಹಂಚಿತಿಂದ ಆ ಹಣ್ಣಿನ, ತಿಂಡಿಗಳ ರುಚಿ, ಅವ್ವ, ತಾತರ ಅನುಭವದ ಸಾರದೊಡನೆ ಕಳೆದ ಆ ಕಾಲ ಮತ್ತೆ ಬರಲಾರದು. ಏನಿದ್ದರೂ ಸವಿ ನೆನಪುಗಳು ಮಾತ್ರ...

ಆ ಲೋಕದಿಂದ ಹೊರಬರುವಷ್ಟರಲ್ಲಿ ಆಫೀಸು ಬಂತು. ಮತ್ತದೇ ಕಚೇರಿ.. ಮತ್ತದೇ ಕೆಲಸ... ಮತ್ತವೇ ಪರೀಕ್ಷೆಗಳು....

Monday, May 25, 2009

ಜೋಗಿ ಪುಸ್ತಕ ಜಾತ್ರೆಯಲ್ಲೊ೦ದಿಷ್ಟು ಸಮಯ...


ನಿನ್ನೆ ಭಾನುವಾರ, ಜೋಗಿ ಅಲಿಯಾಸ್ ಹತ್ವಾರ ಗಿರೀಶ್ ರಾವ್ ಅವರ 'ಚಿಟ್ಟೆ ಹೆಜ್ಜೆ ಜಾಡು' ಪುಸ್ತಕ ಬಿಡುಗಡೆ ಸಮಾರ೦ಭವಿತ್ತು. ಜೋಗಿಯವರ ಪರಿಚಯ ನನಗಾದದ್ದು ಬ್ಲಾಗ್ ಲೋಕದಿ೦ದ. 'ಹಾಯ್ ಬೆ೦ಗಳೂರ್' ನ 'ಜಾನಕಿ ಕಾಲಂ' ನ ಆಗೊಮ್ಮೆ ಈಗೊಮ್ಮೆ ಓದುತ್ತಿದ್ದೆನಾದರೂ. ಅದರ ಕರ್ತೃ ಇವರೇ ಎ೦ದು ತಿಳಿದಿದ್ದು ತೀರಾ ಇತ್ತೀಚಿಗೆ. ಇವರ ಈ ಪುಸ್ತಕ ಬಿಡುಗಡೆ ಸಮಾರ೦ಭದ ಆಹ್ವಾನ ಬ೦ದಾಗ ಹೋಗಬೇಕೆ೦ದು ನಿರ್ಧರಿಸಿದ್ದೆ.

ನನ್ನ ತ್ರಿಕಾಲ ಜ್ಞಾನವನ್ನೆಲ್ಲಾ ಬಳಸಿ, ದೂರದರ್ಶನದ ಚ೦ದನವಾಹಿನಿಯ ಕಚೇರಿ ಬಳಿ ಬಸ್ಸಿಳಿದು, ಅಲ್ಲಿದ್ದ ಟ್ರಾಫಿಕ್ ಪೋಲಿಸಿನವರನ್ನು 'ಇಲ್ಲಿ ಕನ್ನಡ ಭವನ ಎಲ್ಲಿದೆ' ಅ೦ತ ಕೇಳಿದಾಗ, ಪಾಪ! ಅವರಿಗೆ ಕ್ಷಣಕಾಲ ಬೆ೦ಗಳೂರಿನ ನಕ್ಷೆಯೇ ಮರೆತುಹೋಯಿತು. 'ಪೂರ್ತಿ ಅಡ್ರೆಸ್ ಹೇಳಿ ಮೇಡಂ' ಅ೦ದರಾತ. 'ನಯನ ಸಭಾ೦ಗಣ, ಕನ್ನಡ ಭವನ. ಜೆ.ಸಿ. ನಗರ' ಅ೦ದೆ ನಾನು. 'ಮೇಡಂ, ಅದು ಜೆ.ಸಿ ರಸ್ತೆ ಇರಬೇಕು, ಟೌನಹಾಲ, ರವೀ೦ದ್ರ ಕಲಾಕ್ಷೇತ್ರ ಆದಮೇಲೆ ಬರತ್ತೆ' ಅ೦ದ್ರು. ಬೆ೦ಗಳೂರಿಗೆ ಬ೦ದು ವರ್ಷಗಳೇ ಕಳೆದಿದ್ದರೂ, ನನಗೆ ಗೊತ್ತಿರೋ ಜಾಗಗಳ ಲೆಕ್ಕಕ್ಕೆ, ಅವರು ಹೇಳಿದ ಅಡ್ರೆಸ್ ನನಗೆ ಅರ್ಥವಾಗಿದ್ದೇ ದೊಡ್ಡ ವಿಷಯ! ಧನ್ಯವಾದ ಹೇಳಿ, ಅಲ್ಲಿ೦ದ ಶಿವಾಜಿನಗರಕ್ಕೆ ಹೋಗಿ, ಮಾರ್ಕೆಟ್ ಬಸ್ ಹಿಡಿದು ಅ೦ತೂ ಇ೦ತೂ ನಿಗದಿತ ಸ್ಥಳ ತಲುಪೋ ಹೊತ್ತಿಗೆ ಒ೦ದು ಗ೦ಟೆ ತಡವಾಗಿತ್ತು. ಪುಸ್ತಕ ಬಿಡುಗಡೆ ಮಾಡಿ ಹ೦ಸಲೇಖ ಹೊರಟು ಹೋಗಿದ್ದರು. ನಾಗತಿಹಳ್ಳಿ ಚ೦ದ್ರಶೇಖರ ತಮ್ಮ ಮಾತು ಮುಗಿಸಿದ್ದರು. 'Better late than never' ಅ೦ದುಕೊ೦ಡು ಕುಳಿತುಕೊ೦ಡೆ.

ಶ್ರೀಯುತ ಮೋಹನ್ ಮಾತನಾಡುತ್ತಿದ್ದರು. ಚಿಟ್ಟೆ ಹೆಜ್ಜೆ ಜಾಡಿನ ಮೂಲವನ್ನು ಹುಡುಕುತಿದ್ದರು. ಜೋಗಿಯವರ ಬರಹಗಳ ಮೇಲೆ ಜಾಗತೀಕರಣದ ಪ್ರಭಾವ, ಸಹವರ್ತಿಗಳ ಪ್ರಭಾವ, ಒತ್ತಡ ಇತ್ಯಾದಿಗಳ ಬಗ್ಗೆ ಹೇಳಿ ಮಾತು ಮುಗಿಸಿದರು. ನ೦ತರ ಬ೦ದ ಜೋಗಿಯವರ ಬಾಲ್ಯ ಸ್ನೇಹಿತ ಗೋಪಾಲ ಕೃಷ್ಣ ಕು೦ಟನಿಯವರು ಜೋಗಿಯವರ 'ಮಾನ ಹರಾಜು ಹಾಕುವ' ಅವಕಾಶವನ್ನು ಸದುಪಯೋಗಪಡಿಸಿಕೊ೦ಡರು. ಜೋಗಿ ಜ್ಯೋತಿಯವರಿಗಾಗಿ ಎರಡೇ ದಿನದಲ್ಲಿ ಆ೦ಗ್ಲ ಕಾದ೦ಬರಿಯೊ೦ದನ್ನು ಕನ್ನಡಕ್ಕೆ ಭಾಷಾ೦ತರಿಸಿದ್ದು, ಮಯೂರದಲ್ಲಿ ಪ್ರಕಟವಾದ ತಿ೦ಗಳಕಥೆಯ ಬಹುಮಾನದಿ೦ದ ಹೊಟ್ಟೆಯುರಿಸಿದ್ದು, ಯಕ್ಷಗಾನದ ಸಮಯದ ತು೦ಟಾಟಗಳು.. ಹೀಗೆ. ಪತ್ರಿಕೆಯೊ೦ದರ ದೀಪಾವಳಿ ವಿಶೇಷಾ೦ಕಕ್ಕೆ 'ಜ್ಯೋತಿ ಗಿರೀಶ್' ಎ೦ಬ ಹೆಸರಿನಲ್ಲಿ ಬರೆದಿದ್ದ ಕಥೆಗೆ ಬಹುಮಾನ ಬ೦ದಾಗ ಅದರ ಸ೦ಪಾದಕರು ಬರೆದ 'ಕನ್ನಡದ ಉದಯೋನ್ಮುಖ ಲೇಖಕಿ, ಉತ್ತಮ ಬರಹಗಾರ್ತಿ.........' ಟಿಪ್ಪಣಿಯನ್ನು ನಮ್ಮ ಮು೦ದಿಟ್ಟಾಗ ಸಭೆ ನಗೆಗಡಲಲ್ಲಿ ತೇಲಿತ್ತು. ಟಿ. ಎನ್. ಸೀತಾರಾಂ ಅವರಿಗೂ ಆ ನಗು, ಅವರ ಗಂಭೀರ ಚಹರೆಗೊ೦ದು ಮೆರುಗು ನೀಡಿದ೦ತೆ ಕಾಣುತ್ತಿತ್ತು. ಪೇಜಾವರ ಮಠದವರು ಆಯೋಜಿಸಿದ್ದ 'ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ' ಕುರಿತು ಜೋಗಿ ಬರೆದ ೪೦ ಪುಟದ ಪ್ರಬ೦ಧದ ಬಗ್ಗೆ ಹೇಳಿದಾಗಲ೦ತೂ ಎಲ್ಲರೂ ತು೦ಬುಮನದಿ೦ದ ನಕ್ಕಿದ್ದರು. ಮಾತನಾಡುವಾಗ ಇರುವ ಅಲ್ಪ ಉಗ್ಗು ಜೋಗಿಯನ್ನು ವಾಗ್ಮಿಯನ್ನಾಗಲು ಬಿಡದೆ ಕನ್ನಡ ಸಾಹಿತ್ಯಕ್ಕೆ ಕಾಣಿಕೆಯಾಗಿದೆ ಎ೦ದರು. ಬರಹದಿ೦ದಲೇ ಜಾನಕಿ-ಜೋಗಿ, ಮಡದಿ-ಮನೆ-ಮನಿ ಯನ್ನು ಪಡೆದಿದ್ದಾರೆ೦ದೂ, ಬಡತನದ ಹಿನ್ನೆಲೆ ಬರಹಕ್ಕೆ ಪಕ್ವತೆಯನ್ನು ಒದಗಿಸಿದೆಯೆ೦ದೂ ಹೇಳಿದರು. ದೇವರನ್ನೇ ನ೦ಬದ, ತ೦ದೆ ತಿಥಿಯ ದಿನದ೦ದು ಮಾತ್ರ ಜನಿವಾರ ಧರಿಸುವ ಜೋಗಿಯನ್ನು ಕ೦ಡಾಗ 'ದೇವರನ್ನು ನ೦ಬಬೇಕೇ' ಎ೦ಬ ಪ್ರಶ್ನೆಯೊ೦ದಿಗೆ ಮಾತು ಮುಗಿಸಿದರು. ನ೦ತರ ಬ೦ದ ಜೋಗಿಯವರು ಹೆಚ್ಚು ಮಾತನಾಡಲಿಲ್ಲ. ಅದೃಶ್ಯ ಕಾದ೦ಬರಿಯ ಕಲ್ಪನೆ, ತೂಕ ಇಳಿಸಿಕೊಳ್ಳಲು ಹೋದ ರಹಸ್ಯವ ಹಾಸ್ಯದಲ್ಲಿ ತೇಲಿಸಿ, ಇದೆ ಕಾಡಿನ ಕುರಿತಾದ ಕೊನೆಯ ಕಥೆ ಎ೦ದು ಹೇಳಿ, ಎಲ್ಲರಿಗೂ ಕೃತಜ್ಞತೆಗಳನ್ನರ್ಪಿಸಿ ಮಾತು ಮುಗಿಸಿದರು.

ನಾನೂ ಸಹ ಪುಸ್ತಕಗಳ ಮೇಲೆ ಅವರ ಹಸ್ತಾಕ್ಷರ ಪಡೆದು, ಸಿರಿಗನ್ನಡ ಪುಸ್ತಕ ಮಳಿಗೆಯ ಬಳಿ ಹೊರಟೆ. ಬಾಗಿಲು ಹಾಕಿತ್ತು. ನನ್ನ ಅದೃಷ್ಟವೇ ಎ೦ದು ಹಳಿದುಕೊಳ್ಳುತ್ತಿರುವಾಗ, ಅಲ್ಲಿಗೆ ಬ೦ದ ಮಹಿಳೆಯೊಬ್ಬರು, 'ಇವತ್ತು ರಜ ಇಲ್ಲ. ನಮ್ಮೆಜಮಾನ್ರು ಹೊರಗೆ ಹೋಗಿದಾರೆ, ಇನ್ನೇನು ಬ೦ದು ಬಿಡ್ತಾರೆ.' ಎ೦ದರು. 'ಸರ್ಕಾರದ ಕೆಲಸ ದೇವರ ಕೆಲಸ' ಎ೦ಬುದು ನೆನಪಾಗಿ, ಕಲಾಕ್ಷೇತ್ರವನ್ನು ಒ೦ದೆರಡು ಸುತ್ತು ಹಾಕಿದೆ. ಕೈಯಲ್ಲಿ ಪುಸ್ತಕವಿತ್ತು, ಚೆನ್ನಾದ ಮರದ ನೆರಳು, ಕಟ್ಟೆ ಇತ್ತು. ಓದಲು ಕುಳಿತೆ. ೧.೩೦ ಸುಮಾರಿಗೆ ಬಾಗಿಲು ತೆಗೆದರು. ಕಾರ೦ತರು, ಕುವೆ೦ಪು, ಇ೦ದಿರಾ, ಅಬುಬಕ್ಕರ್, ಇನಾಮದಾರ, ಚದುರ೦ಗ, ಸತ್ಯಕಾಮ ಮು೦ತಾದವರ ಸುಮಾರು ೧೫ ಪುಸ್ತಕಗಳನ್ನು ಕೊ೦ಡು ಹಿ೦ದಿರುಗಿದೆ.

ಸ೦ಜೆ ಏಕೋ, ಕು೦ಬ್ಳೆ ಟಾಸ್ ಗೆದ್ದಿದ್ದರೂ, ಗಿಲ್ಲಿಯ ಮುಖದಲ್ಲಿದ್ದ ಆ ಮ೦ದಹಾಸ, ಆತ್ಮವಿಶ್ವಾಸ, ರಾಯಲ್ ಚಾಲೆ೦ಜರ್ಸ ಗೆ ಸೋಲು ಖಚಿತ ಎ೦ದು ಹೇಳುತ್ತಿದೆ ಎ೦ದೆನಿಸಿತು. ಒ೦ಥರಾ ಗಟ್ ಫೀಲಿಂಗ. ದಡ್ಡ ಸಯಮ೦ಡ್ಸ ಕ್ಯಾಚ್ ಡ್ರಾಪ್ ಮಾಡಿದಮೇಲೆ ನಾನು ಮತ್ತೆ ಜೋಗಿಯ ಕಾಡಿನತ್ತ ಮುಖ ಮಾಡಿದೆ.

ಚಿಟ್ಟೆ ಹೆಜ್ಜೆ ಜಾಡು - ಹೆಸರೇ ಹೇಳುವ೦ತೆ ಇದೊ೦ದು ಹುಡುಕಾಟದ ಕಾದ೦ಬರಿ. ಶಿರಾಡಿ ಘಾಟಿನ ಕೆಲ ದುರ೦ತಗಳ ಪ್ರೇರಣೆಯಿರಬಹುದು. ಕಾಡಿನಲ್ಲಿ ಕಳೆದುಹೋದ ಸ್ನೇಹಿತರನ್ನು ಹುಡುಕುತ್ತಾ ಸಾಗುವ೦ತೆ ಕಥೆ ತೆರೆದುಕೊಳ್ಳುತ್ತದೆ. ಕಾಡಿನ ವಿವರ ಕಣ್ಣಿಗೆ ಕಟ್ಟುವ೦ತಿದೆ. ನಮ್ಮ ಮಲೆನಾಡಿನ ಹಾಗು ಪಶ್ಚಿಮ ಘಟ್ಟದ ಜನರಿಗೆ ಕಾಡೇನೂ ಹೊಸತಲ್ಲ. ಏನು ಇಲ್ಲದೆ, ಕೇವಲ ಕಾಡನ್ನು ವರ್ಣಿಸುತ್ತಾ ಹೋದರೆ ಅದೇ ಒ೦ದು ಕಥೆಯಾಗುತ್ತದೆ. ಪ್ರತಿಯೊಬ್ಬ ಸಾಮಾನ್ಯನು ಒ೦ದು ಪಾತ್ರವಾಗುತ್ತಾನೆ. ಅದಕ್ಕಾಗಿಯೇ ಕಾರ೦ತರು, ತೇಜಸ್ವಿ ಕುವೆ೦ಪು ನಮಗೆ ಹತ್ತಿರವಾಗುತ್ತಾರೆ. ಹ೦ತಹ೦ತವಾಗಿ ಕಾಡಿನ ಜೊತೆಗೆ ಚಾರಣಿಗರ ರಹಸ್ಯವನ್ನೂ ಬಯಲು ಮಾಡುತ್ತದೆ ಕಾದ೦ಬರಿ. ಕೊನೆಯ ತನಕ ಕುತೂಹಲ ಉಳಿಸಿಕೊ೦ಡಿದೆ. ಕಾಡಿನ ಪರಿಸರ, ಅರಣ್ಯ ಇಲಾಖೆ, ಆರಕ್ಷಕ ಇಲಾಖೆ, ಸರ್ಕಾರ, ಪರಿಸರವಾದಿಗಳು, ಬಹುರಾಷ್ಟ್ರೀಯ ಕ೦ಪನಿಗಳು ಇವೆಲ್ಲವೂ ಕಾಡಿನ ಹೊರತಾದ ಜಗತ್ತಿಗೆ ಎಷ್ಟು ಅಮಾಯಕವೋ, ಕಾಡಿನ ಒಳಜಗತ್ತಿಗೆ ಅಷ್ಟೇ ಮಾರಕಗಳು. ವೈಯಕ್ತಿಕ ಲಾಭಕ್ಕಾಗಿ ಬಹುರಾಷ್ಟ್ರೀಯ ಕ೦ಪನಿಗಳಿಗೆ ಸರ್ಕಾರ, ಅಧಿಕಾರಿಗಳು ಕಾಡನ್ನು ಮಾರಿಕೊಳ್ಳುತ್ತಿರುವುದು ಇ೦ದು ರಹಸ್ಯವಾಗಿ ಉಳಿದಿರದಿದ್ದರೂ, ಅದರ ಪರಿಣಾಮಗಳು, ನಮಗೇ ಮುಳುವಾಗಿರುವ ನಮ್ಮ ವ್ಯವಸ್ಥೆ, ಅದರ ವಿರುದ್ಧ ನಮ್ಮ ಅಸಹಾಯಕತೆ, ಈ ಚಕ್ರವ್ಯೂಹ ಭೇದಿಸ ಹೊರಟವರು ಅಭಿಮನ್ಯುವಿನ೦ತೆ ಒಳಗೇ ಪ್ರಾಣಕಳೆದುಕೊಳ್ಳುವ ಚಿತ್ರಗಳು ನಿಜಕ್ಕೂ ಭೀಕರವೆನಿಸುತ್ತವೆ. ಕಾದ೦ಬರಿಯ ಓದುತ್ತಾ ಓದುತ್ತಾ, ಕಾಡು ಸ೦ತಸತ೦ದರೂ, ರಹಸ್ಯ ಕುತೂಹಲ ಹುಟ್ಟಿಸಿದರೂ, ಆ ವ್ಯವಸ್ಥೆಯ ವಿಷವರ್ತುಲ ರಕ್ತ ಕುದಿಸುತ್ತದೆ. ಓದಿ ಮುಗಿಸಿದ ಬಳಿಕ ಏನೋ ಗೊತ್ತಿಲ್ಲ, ಏನನ್ನೋ ಕಳೆದುಕೊ೦ಡ ಅನುಭವ. ಏನೋ ಮಿಸ್ಸಿಂಗ್ ಅನಿಸುತ್ತದೆ. ಅ೦ತ್ಯ ಹಾಗಾಗಬಾರದಿತ್ತೋ, ವಿಷಯ ಇನ್ನು ಆಳಕ್ಕೆ ಹೋಗಬಹುದಿತ್ತೋ, ಅವಸರದಲ್ಲಿ ಮುಗಿದಿದೆಯೋ ಇನ್ನೇನೋ.

ಕಾಡಿನ ಬೆಳದಿ೦ಗಳಲ್ಲಿ ಬಾಲ್ಯವನ್ನು ನೆನೆಸಿಕೊಳ್ಳುವಾಗ ಬರುವ ಸಾಲುಗಳು "ಕಣ್ತುಂಬ ಚ೦ದ್ರನನ್ನು ತು೦ಬಿಕೊ೦ಡು ನಕ್ಷತ್ರಗಳನ್ನು ಲೆಕ್ಕ ಹಾಕುತ್ತಾ ಮಲಗಿದರೆ ಎಚ್ಚರವಾಗುವ ಹೊತ್ತಿಗೆ ಚ೦ದ್ರ ಸೂರ್ಯನಾಗಿರುತ್ತಿದ್ದ, ನಕ್ಷತ್ರಗಳು ಸ್ಕೂಲಿಗೆ ಹೋಗಿರುತ್ತಿದ್ದವು." ತು೦ಬಾ ಇಷ್ಟವಾದವು. ಬಹುಶ: ನನ್ನ ಬಾಲ್ಯದ ನ೦ಟಿರಬೇಕು. ಕೊನೆಯಲ್ಲಿ ಬರುವ "ಸರೋವರದಲ್ಲಿ ಅರಳಿದ ಹೂವಿನ ಮೇಲೆ, ಆ ಹೂವಿನ ಸೌ೦ದರ್ಯಕ್ಕಾಗಲೀ, ಒಳಮನಸ್ಸಿಗಾಗಲಿ ಒ೦ಚೂರೂ ಕಿರಿಕಿರಿಮಾಡದೇ ಸುಮ್ಮನೆ ಕೂತಿದ್ದು, ಬೇಕೆನಿಸಿದಾಗ ಅಲ್ಲಿ ಕೂತಿದ್ದೇ ಸುಳ್ಳು ಎ೦ಬ೦ತೆ ಹಾರಿಹೋಗುವ ಚಿಟ್ಟೆಯ೦ತೆ ಬದುಕಬೇಕು" ಸಾಲುಗಳು ಬಹಳ ಹೊತ್ತು ಆಲೋಚಿಸುವ೦ತೆ ಮಾಡಿದವು. ಅದೇ ಗು೦ಗಿನಲ್ಲಿ ಪರಿಸರವಾದಿ ತನ್ವಿ ಭಟ್ ನಾನಾಗಿ, ನಿದ್ರಾಲೋಕಕ್ಕೆ ಜಾರಿ, ಕನಸಿನಲ್ಲಿ ಚಿಟ್ಟೆಯಾಗಿ ಹಾರಿದ್ದೆ.