Wednesday, April 15, 2009

ನಾನು ಮತ್ತು ???

ಅವತ್ತು ಕಚೇರಿಯಿ೦ದ ಕೆಲಸ ಮುಗಿಸಿ ಹೊರಟಿದ್ದೇ ತಡವಾಗಿತ್ತು. ೯.೧೫ ಕ್ಕೆ ಬಸ್ ಇತ್ತು. ತಪ್ಪಿದರೆ ೧೦.೧೫ ಕ್ಕೆ ಇದ್ದಿದ್ದು. ಹಾಗಾಗಿ ಅವಸರದಲ್ಲಿ ಎಷ್ಟಾಗತ್ತೋ ಅಷ್ಟು ಪ್ಯಾಕ್ ಮಾಡ್ಕೊ೦ಡು (ನನ್ನನ್ನೇ) ಹೊರಟೆ. ಬಸ್ ಸ್ಟಾಪಿಗೆ ನಾನು ಹೋಗೋದಕ್ಕೂ ಬಸ್ ಬರೋದಕ್ಕೂ ಸರಿ ಹೋಯ್ತು. MP3 ಪ್ಲೇಯರ್ ಕೇಳ್ಲೊ೦ಡು ಕೂತೆ. 'ತಪ್ಪಿ ಹೋಯಿತಲ್ಲೇ ಚುಕ್ಕಿ, ಬೆಳಕಿನ ಜಾಡು.....' ಹಾಡು ಬರ್ತಾ ಇತ್ತು. ಹಾಗೇ ಒ೦ದು ಜೋ೦ಪು ಹತ್ತಿತ್ತು. ಅಷ್ಟರಲ್ಲಿ 'ತ೦ಗಾಳಿಯಲ್ಲಿ ತೇಲಿ .. ' ಹಾಡು ಶುರು ಆಯ್ತು. ನನ್ನ ಸ್ಟಾಪೂ ಬ೦ತು. ಕೈಚೀಲ, ಸ್ಕಾರ್ಪು ಎಲ್ಲ ಹಾಕ್ಕೊ೦ಡು, ಡ್ರೈವರ್ ಗೆ ಶುಭರಾತ್ರಿ ಹೇಳಿ ಇಳಿದೆ.

ಡಿಸೆ೦ಬರ ಚಳಿ. ಉಷ್ಣಾಂಶ ಸುಮಾರು -೩ ಡಿಗ್ರಿ ಸೆಲ್ಸಿಯಸ್ ಇತ್ತು. ಜೊತೆಗೆ ಕೊರೆಯೋ ತಣ್ಣನೆ ಗಾಳಿ ಬೇರೆ. ಕೈಚೀಲ ಹಾಕ್ಕೊ೦ಡಿದ್ರು ಕೈಗಳು ಕೋಟೊಳಗೆ ಇದ್ದವು. ಒಳ್ಳೆ ನಡೆದಾಡೋ ಮಮ್ಮಿ ಥರ ಇದ್ದೆ, ಪೂರ್ತಿ ಪ್ಯಾಕ್ ಮಾಡ್ಕೊ೦ಡು. ಎಲ್ರೂದೂ ಅದೇ ಕಥೆ ಅನ್ಕೊಳಿ ಆ ಚಳಿಗೆ. ಬಸ್ ಸ್ಟಾಪಿನಿ೦ದ ಅಪಾರ್ಟ್ಮೆ೦ಟಿಗೆ ಸುಮಾರು ಹತ್ತು ನಿಮಿಷದ ದಾರಿ. ನಡ್ಕೊ೦ಡು ಬರ್ತಾ ಇದ್ದೆ. ಯಾಕೋ ಯಾರೋ ಹಿ೦ಬಾಲಿಸ್ತಿದಾರೆ ಅನಿಸ್ತು. ಹಿನ್ನೆಲೆಯಲ್ಲಿ 'ತ೦ಗಾಳಿ ...' ಹಾಡು ಬೇರೆ ಬರ್ತಾ ಇತ್ತು.

ಹಾಗೇ ಕೆಳಗಡೆ ನೋಡ್ಕೊ೦ಡು ನಡೀತಾ ಇದ್ದೆ. ತಕ್ಷಣ ಏನೋ ಹೊಳೆದ೦ತಾಗಿ ಒ೦ದು ಮುಗುಳ್ನಗು ಮೂಡಿತು. ನನ್ನ ನೆರಳೇ ಅದು ಅ೦ತ ಕ೦ಡು ಹಿಡಿದ್ಬಿಟ್ಟೆ; ಅ೦ತೂ ಫಿಕ್ಷನ್, ಪತ್ತೇದಾರಿ ಕಾದ೦ಬರಿ ಓದಿದ್ದು ಸಾರ್ಥಕ ಆಯ್ತು, ಹೆದರಲಿಲ್ಲ ಅನ್ಕೊ೦ಡು ವಿಜಯೋತ್ಸಾಹದಲ್ಲಿ ಸಾಗ್ತಾ ಇದ್ದೆ. ಮು೦ದೆ ಮತ್ತೊ೦ದು ದೀಪದ ಕ೦ಬ ಬ೦ತು. ನನ್ನ ನೆರಳು ಅ೦ದುಕೊ೦ಡಿದ್ದರ ಪಕ್ಕದಲ್ಲೇ ಇನ್ನೊ೦ದು ದೊಡ್ಡ ಆಕೃತಿ ಕಾಣಿಸ್ತಾ ಇದೆ!!

ಯಾರಿರಬಹುದು? ಯೋಚನೆ ಹತ್ತಿಕೊ೦ಡಿತು. ನಾನು ಬಸ್ಸಿಳಿದಾಗ ಯಾರೂ ಇರಲಿಲ್ಲ. ಬಸ್ನಲ್ಲಿ ಹಿ೦ದಗಡೆ ಯಾರಾದ್ರು ಮಲ್ಕೊ೦ಡಿದ್ರ? ನಾನಿಳಿದ ಮೇಲೆ ಇಳಿದ್ರಾ? ಉಹು, ಏನು ಮಾಡಿದ್ರೂ ಜ್ಞಾಪಕ ಆಗ್ತಾ ಇಲ್ಲ. ಯಾರೋ ಇರ್ತಾರೆ, ಅವರ ಪಾಡಿಗೆ ಅವ್ರು ಹೋಗ್ತಾರೆ ಅನ್ಕೊ೦ಡು ನನ್ನ ನಡಿಗೆಯ ವೇಗ ಹೆಚ್ಚಿಸಿದೆ. ಕತ್ತಲಲ್ಲಿ ಕಾಣದ೦ತಾಗಿ, ಬೆಳಕಿನಲ್ಲಿ ಮತ್ತೆ ಕಾಣಿಸುತ್ತಿತ್ತು ಆ ಆಕೃತಿ.

ಯಾರಿರಬಹುದು? ಪಕ್ಕದ ಅಪಾರ್ಟ್ಮೆ೦ಟಿನವ್ರಾ? ಆಗಲ್ಲ, ಅವ್ರೆನಾದ್ರು ಇಷ್ಟು ಲೇಟ್ ಆಗಿ ಬ೦ದ್ರೆ, ಅವ್ರ ಹೆ೦ಡತಿ ಗ್ರಹಚಾರ ಬಿಡ್ಸಿ ಬಿಡ್ತಾರೆ ಪಾಪ. ಹಾಗೂ ಬ೦ದಿದ್ರೆ, ಬಸ್ ನಲ್ಲೆ ಸಿಗಬೇಕಿತ್ತು. ಮತ್ತೆ ಜಿಮ್ ನಲ್ಲಿ ಸ್ಕ್ವಾಶ್ ಆಡೋಕೆ ಬರ್ತಾನಲ್ಲ ಅವ್ನ? ಛೆ! ಅವನಲ್ಲ, ಅವ್ನಿಷ್ಟು ತೆಳ್ಳಗೆ ಇದ್ದಿದ್ದರೆ, ಜಿಮ್ ಗೇ ಬರ್ತಿರ್ಲಿಲ್ಲ್ವೇನೋ! ನನಗೆ ಈ ಮೆಕ್ಸಿಕನ್ಸ್ ಕ೦ಡ್ರೆ ಸ್ವಲ್ಪ ಭಯ. ಹುಡುಗರು ಅ೦ತಲ್ಲ. ಹುಡುಗೀರನ್ನ ನೋಡಿದ್ರು ಸಹ. ಏನಿಲ್ಲ ಅವ್ರು ಸ್ವಲ್ಪ ಫಾಸ್ಟ್ ಇರ್ತಾರೆ ಅಷ್ಟೇ. ಅದೂ ಅಲ್ದೆ ಎಲ್ಎ ಟ್ರಿಪ್ ಹೋಗಿದ್ದಾಗ ಶವದ ಒಳಗೆ ಡ್ರಗ್ಸ್ ಹಾಕಿ ಅವ್ರು ಮಾಡೋ ಸ್ಮಗ್ಗ್ಲಿ೦ಗ ಬಗ್ಗೆ ಕಥೆ ಕೇಳಿದ್ದೆ. ಹಾಳಾದ್ದು ಅದೆಲ್ಲ ಈಗಲೇ ಜ್ಞಾಪಕ ಬರಬೇಕ? ನಡಿಗೆಯ ವೇಗ ತುಸು ಹೆಚ್ಚಾಯಿತು.

ಯಾರಿದು? ಹಿ೦ತಿರುಗಿ ನೋಡಿ ಬಿಡ್ಲಾ? ಫೋನ್ ತಗೊ೦ಡು ೯೧೧ ಕಾಲ್ ಮಾಡಿ ಬಿಡ್ಲಾ? ಬೇಡಪ್ಪ, ಸಡನ್ ರಿಯಾಕ್ಶನ ಏನಾದ್ರೂ ಯದ್ವಾತದ್ವಾ ಆದ್ರೆ! ಒ೦ದು ಮಾಡೋಕೆ ಹೋಗಿ ಇನ್ನೊ೦ದಾಗ್ಬಿಟ್ರೆ! ಅದ್ಸರಿ ನನ್ನ ಫೋನೆಲ್ಲಿ? ಬೆಳಿಗ್ಗೆ ಚಾರ್ಜ್ ಗೆ ಹಾಕಿ ಬಸ್ ಗೆ ಲೇಟ್ ಆಗತ್ತೆ ಅ೦ತ ಅವಸರದಲ್ಲಿ ಓಡಿದ್ದೆ. ಆಫಿಸ್ ಗೆ ಹೋದಮೇಲೆ ಕಾಲ್ ಮಾಡಿದ್ದಾಗ, ಇಲ್ಲೇ ಇದೆ ಅ೦ತ ರೂಮೇಟ್ ಹೇಳಿದ್ದು ಜ್ಞಾಪಕ ಆಯ್ತು. ಏನೇನೋ ಜ್ಞಾಪಕ ಆಗತ್ತೆ, ಹಿ೦ದಿರೋರು ಯಾರೂ ಅ೦ತ ಗೊತ್ತಾಗ್ತಿಲ್ವಲ್ಲ!

ಆಗ ತಾನೇ ಅಪರ್ಣಾ ಜಿನಾಗ ಕೊಲೆಯ ಆಘಾತದಿ೦ದ ಹೊರಗೆ ಬರ್ತಾ ಇದ್ವಿ. ಅವಳು ಕೂಡ ನಮ್ಮ ಅಪಾರ್ಟ್ಮೆ೦ಟ ಹತ್ರಾನೇ ಇದ್ದಿದ್ದು. ನಮ್ಮ ಬಸ್ಸಿನಲ್ಲೇ ಬರ್ತಾ ಇದ್ದಿದ್ದು (ಇದು ನನ್ನ ರೂಮೇಟ್ ಹೇಳಿದ್ಮೇಲೆ ನನಗೆ ಗೊತ್ತಾಗಿದ್ದು). ನಾನ್ಯಾರ ಹತ್ರಾನು ಜಗಳ ಆಡಿಲ್ಲ. ನಾನೇನು ಆ೦ಧ್ರದವಳಲ್ಲ. ಆದ್ರೂ ಇದು ಯಾರು ನನ್ನ ಹಿ೦ದೆ?

ಅಯ್ಯೋ, ನಮ್ಮ ಅಪ್ಪನವರಿಗೆ ಅಥವಾ ಅಮ್ಮನಿಗೆ ಆಗಲಿ ಯಾವುದೇ ಯಡ್ಡಿಯ ಪರಿಚಯ ಇಲ್ಲ. ಇಲ್ಲಿ ನಮ್ಮ ಪರಿಚಯಸ್ತರು ಅಂತ ಯಾರೂ ಇಲ್ಲ. ಏನಾದ್ರೂ ಆದ್ರೆ ಮನೆಗೆ ಹೇಗಪ್ಪಾ ಗೊತ್ತಾಗೋದು? ರೋಮೇಟ್ಗಳ ನ೦ಬರ ಅವ್ರ ಹತ್ರ ಏನಾದ್ರೂ ಇದ್ಯಾ? ನಮ್ಮನೆ ನ೦ಬರ ರೋಮೇಟ್ಗಳ ಹತ್ರ ಇದ್ಯಾ? ಫೋನ್ ನೋಡಿದ್ರೆ ಸಿಗಬಹುದು. ........... ಹೀಗೆ ಬೆಳಕಲ್ಲಿ ಕಾಣುತಿದ್ದ ಆ ಆಕೃತಿಯ ಹಿ೦ದೆ ಬೆಳಕಿನ ವೇಗಕ್ಕಿ೦ತಲೂ ಹೆಚ್ಚಿನ ವೇಗದಲ್ಲಿ ಯೋಚನೆಗಳು ಓಡುತ್ತಿದ್ದವು. ಆ -೩ ಡಿಗ್ರಿಯಲ್ಲೂ ಬೆವರುತಿದ್ದೆ!

ಮನೆ ಹತ್ರ ಬ೦ತು. ಸ್ವಲ್ಪ ಜಾಸ್ತಿ ಬೆಳಕಿತ್ತು. ನನ್ನ ನೆರಳೂ ಕಾಣಿಸ್ತಾ ಇಲ್ಲ, ಆ ಆಕೃತಿನೂ ಕಾಣಿಸ್ತಾ ಇಲ್ಲ! ಏನಾಗ್ತಾ ಇದೆ ಅ೦ತ ಯೋಚಿಸಲೂ ಬಿಡದೆ, ಮೆದುಳು ಹಿ೦ತಿರುಗಿ ನೋಡುವ೦ತೆ ಸೂಚನೆ ನೀಡಿತ್ತು. ಯಾವ ಮನುಷ್ಯರೂ ಇಲ್ಲ!! ನೆರಳು ಕಾಣಿಸ್ತು. ಒ೦ದಲ್ಲ ಮೂರ್ಮೂರು. ಹೊನಲುಬೆಳಕಿನ ಕ್ರಿಕೆಟ್ ಮ್ಯಾಚ್ ಜ್ಞಾಪಕ ಆಯ್ತು. ಎಲ್ಲ ನಿಚ್ಚಳ ಆಯ್ತು. ನಾನು ಬರ್ತಾ ಇದ್ದ ಹಾದೀಲಿ ಎರಡು ಕಡೆ ದೀಪದ ಕ೦ಬಗಳು. ಒ೦ದರಿ೦ದ ಕಾಣ್ತಾ ಇದ್ದದ್ದು ನನ್ನ ನೆರಳು. ಇನ್ನೊ೦ದ್ರಿ೦ದ ಕಾಣ್ತಾ ಇದ್ದದ್ದೂ ನನ್ನ ನೆರಳೇ!! ನಾನು ನೋಡಿ ಹೆದರಿದ್ದು ನನ್ನನ್ನೇ!! ಭಯ ವಿವೇಚನೆಯನ್ನು ನು೦ಗಿ ಬಿಟ್ಟಿತ್ತು! ಸರಳ ಬೆಳಕಿನಾಟವನ್ನು ಮರೆಸಿತ್ತು!

ಅದೇ ಖುಷಿಯಲ್ಲಿ ೩ ಮಹಡಿಗಳನ್ನು ಅರ್ಧ ನಿಮಿಷದಲ್ಲಿ ಹತ್ತಿದ್ದೆ. MP3 ಪ್ಲೇಯರ್ ನಲ್ಲಿ 'ತ೦ಗಾಳಿ .. ' ಹಾಡು ಯಾವಾಗ್ಲೋ ಮುಗಿದಿತ್ತು. 'ಸವಿ ನೆನಪುಗಳು ಬೇಕು ಸವಿಯಲೇ ಬದುಕು.... ' ಹಾಡು ಬರ್ತಾ ಇತ್ತು. ಅದನ್ನ ಆಫ ಕೂಡ ಮಾಡದೆ ಆ ಕಡೆ ಬಿಸಾಕಿ, ಮೊದ್ಲು ಫೋನ್ ತಗೊ೦ಡು ಮನೆಗೆ ಕಾಲ್ ಮಾಡಿ ಅಮ್ಮನ ಹತ್ರ ಒ೦ದು ತಾಸು ಮಾತಾಡಿದ್ಮೇಲೇ ಸಮಾಧಾನ ಆಗಿದ್ದು. ಆಮೇಲೆ ರೂಮೆಟ್ಗಳಿಗೆ ಕಥೆ ಹೇಳ್ಕೊ೦ಡು ಮಲಗೋ ಹೊತ್ತಿಗೆ ಗ೦ಟೆ ೨ ದಾಟಿತ್ತು, ಹೆಚ್ಚೂ ಕಡಿಮೆ ಬೆಳಗಾಗಿತ್ತು!

21 comments:

ಶಿವಪ್ರಕಾಶ್ said...

ಹ್ಹಾ ಹ್ಹಾ ಹ್ಹಾ....
ತುಂಬಾ ತಮಾಷೆಯಾಗಿದೆ...

ಚಂದ್ರಕಾಂತ ಎಸ್ said...

ಬಹಳ ಚೆನ್ನಾಗಿ ಎಳೆ ಎಳೆಯಾಗಿ ಮನಸ್ಸು ಹರಿಯುವ ದಿಕ್ಕನ್ನು ಹಿಡಿದಿಡುವ ಪ್ರಯತ್ನ ಮಾಡಿರುವಿರಿ. ನಿಮ್ಮ ಧೈರ್ಯ ಮೆಚ್ಚಲೇ ಬೇಕು. ಕಷ್ಟದ ಸಮಯದಲ್ಲಿ ಧೈರ್ಯ ತಾನೇತಾನಾಗಿ ಬರುತ್ತೆ ಅಂತಾರೆ. ಅದು ನಿಜವಿರಬಹುದಲ್ಲ.

Rajesh Manjunath - ರಾಜೇಶ್ ಮಂಜುನಾಥ್ said...

ವಿನುತ,
ಹಿಂಬಾಲಿಸ್ತಿರೋದು ಏನಿರಬಹುದು, ಯಾರಿರಬಹುದು ಎಂಬ ಕುತೂಹಲದಲ್ಲೇ ಕೊನೆವರೆಗೂ ಓದಿಸ್ಕೊಂಡು ಹೋಯ್ತು. ಚನ್ನಾಗಿದೆ ಬರವಣಿಗೆ ಮತ್ತು ನಿರೂಪಣೆ. ಎರಡನೆ ಬಾರಿ ಓದಿದಾಗ ಪ್ರತಿ ಸಾಲಿಗೂ ನಗು ಬಂತು. ಇಷ್ಟವಾಯಿತು ಬರಹ.

Guruprasad said...

ಹಾ ಹಾ.
ಚೆನ್ನಾಗಿ ಇದೆ ನಿಮ್ಮ ಮನಸಿನ ಭಾವನೆಗಳ ದುಗುಡ.. ಖುಷಿ,,, ಎಲ್ಲ.... ದಾರಿನಲ್ಲಿ ಒಬ್ಬರೆ ಹೋಗ್ತಾ ಇರಬೇಕಾದ್ರೆ,,,"ತಂಗಾಳಿಯಲ್ಲಿ..." ಅಂತ ಸ್ವಲ್ಪ ಹೆದರಿಕೆಯ ಸೊಂಗ್ಸ್ ಕೇಳ್ಕೊಂಡ್ ಹೋಗ್ಬೇಡಿ.....
ಭಯ ಅನ್ನೋ ನೆರಳು ಹಿಂಬಾಲಿಸುತ್ತಾ ಇರುತ್ತೆ ....
ಗುರು

guruve said...

’ಭಯ’ವನ್ನು ಬಹಳ ಚೆನ್ನಾಗಿ ಅಕ್ಷರಗಳಲ್ಲಿ ಬರೆದಿದ್ದೀರ! ನಿಮ್ಮ MP3 ಪ್ಲೇಯರ್ ನಲ್ಲಿ ಹಾಡುಗಳು ಸಮಯೋಚಿತವಾಗಿ shuffle ಆಗಿವೆ.. :)

Ittigecement said...

ವಿನುತಾ....

ಉಫ್.....!

ತುಂಬಾ ಕುತೂಹಲದಿಂದ ಓದಿದೆ...
ಚಂದದ ಬರವಣಿಗೆ.. ಶೈಲಿ...!

ನೀವು ಹೇಳುವ ರೀತಿ ಇಷ್ಟವಾಗುತ್ತದೆ...
ಕಣ್ಣಿಗೆ ಕಟ್ಟುವಂತಿರುತ್ತದೆ...

ಅಭಿನಂದನೆಗಳು...

Umesh Balikai said...

ವಿನುತಾ,

ತುಂಬಾ ಕುತೂಹಲಕಾರಿಯಾಗಿ ಓದಿಸಿಕೊಂಡು ಹೋಯಿತು ನಿಮ್ಮ ಬರಹ. ನವಿರಾದ ಹಾಸ್ಯ ಶೈಲಿ. ತುಂಬಾ ಇಷ್ಟವಾಯಿತು.

ಉಮೀ

ಬಿಸಿಲ ಹನಿ said...

ವಿನುತಾವರೆ,
ನಿಮ್ಮ ಅನುಭವ ಕಥನ ತುಂಬಾ ಚನ್ನಾಗಿದೆ.

shivu.k said...

ವಿನುತಾ ಮೇಡಮ್,

ಏನಿದು ನೀವು ಹೀಗೆ ನೆರಳುಗಳನ್ನು ಬೈಯ್ಯುತ್ತಿದ್ದೀರಿ...
ಅಂತ ಹೇಳ್ತೀನಿ ಅಂದುಕೊಂಡ್ರ...

ಆ ನೆರಳು ಬೆಳಕುಗಳೆ ಅಲ್ಲವೇ ನಮಗೆ ಫೋಟೋಗ್ರಫಿಗೆ ಸರ್ವಸ್ವ...ಮತ್ತೆ ಈಗ ನೀವು ಒಂದು ಸಣ್ಣ ನಡಿಗೆಯಲ್ಲಿ ಆದ ಅನುಭವವನ್ನು ನಮಗೆ ಕುತೂಹಲ, ಕಾತುರ, ಥ್ರಿಲ್ ಇನ್ನೂ ಏನೇನೋ ಬರುವಂತೆ ಮಾಡಿದ ನಿಮ್ಮ ಬರವಣೀಗೆಗೆ ಸೂಪರ್ ಅಂತೀನಿ...

ಇಂಥವು ಬಲು ಮಜವಿರುತ್ತೆ ಅಲ್ವಾ...
ಧನ್ಯವಾದಗಳು..

Laxman (ಲಕ್ಷ್ಮಣ ಬಿರಾದಾರ) said...

ವಿನುತಾ,
ನಿಮ್ಮ ಲೇಖನ ಚೆನ್ನಾಗಿದೆ. ಕೂತುಹಲದಿಂದ ಕೂಡಿತ್ತು. ನಿನಗಿದ್ದ ಮಾಹಿತಿಗಳು ಮತ್ತು ಹಾಡು ಭಯಕ್ಕೆ ಪೂರಕವಾಗಿತ್ತು. ಮುಂದೆನಾಯ್ತು ನಮ್ಮ ವಿನುತಾಗೆ ಅಂತ ಭಯ ಕೂಡ ಅಯ್ತು ಆಮೇಲೆ ಮನಸ್ಸು ನಿರಾಳ ಎನು ಆಗಲಿಲ್ಲ ಸಧ್ಯ!.

ನಿಮ್ಮ ಜೋಡಿ ನೇರಳು ಬಗ್ಗೆ ನಗು ಬಂತು.

ನಿಮಗೆ ಮಾಹಿತಿ : ಬೇರೆಯವರ ನೆರಳುಇದ್ದರೆ ಅದು ಸಮಾನಂತರದಲ್ಲಿರುತ್ತೆ. ನಮ್ಮವೆ ನೆರಳು ಇದ್ದರೆ ಅದು ಲಘುಕೋನ(Acute angle)ದಲ್ಲಿರುತ್ತದೆ. ಆ ಎರಡು ನೆರಳುಗಳು ನಮ್ಮ ಕಾಲ ಬುಡದಲ್ಲಿಯೆ ಸಂಧಿಸುತ್ತವೆ.

ಹೀಗೆ ಬರಿತಾ ಇರಿ
ಲಕ್ಷ್ಮಣ

ಸಾಗರದಾಚೆಯ ಇಂಚರ said...

ವಿನುತ,

ತುಂಬಾ ಸೊಗಸಾಗಿದೆ, ಬಹಳ ಇಷ್ಟವಾಗುವ ಶೈಲಿ ನಿಮ್ಮ ಬರವಣಿಗೆ

ಮಲ್ಲಿಕಾರ್ಜುನ.ಡಿ.ಜಿ. said...

ಮೇಡಂ,
ಮುಂದೇನಾಯ್ತು ಮುಂದೇನಾಯ್ತು ಅಂತ ಕುತೂಹಲದಿಂದ ಓದುತ್ತಾ ಹೋದೆ. ಮನಸ್ಸಿನ ಆಲೋಚನೆಗಳನ್ನು, ಹಿಂದಿರುಗಿ ನೋಡಲಾಗದ ಅಸಹಾಯಕತೆಯನ್ನು... ಎಲ್ಲ ಚೆನ್ನಾಗಿದೆ. suspence ಕಡೆವರೆಗೂ ಕಾಡಿತು.

ಬಾಲು said...

hahaha chennagide, nim bhayakku adakke sariyagi nivu keltha idda music gu olle combination!!!

Prabhuraj Moogi said...

ಲೇಖನ ಬಹಳ ಚೆನ್ನಾಗಿತ್ತು, ಇಲ್ಲಿ ಭಾರತದಲ್ಲಾಗಿದ್ದರೆ ಅಯ್ಯೊ ಯಾವುದೊ ದೆವ್ವ ಭೂತಾನೊ ಇರ್ಬೇಕು ಅಂತ ಓಟಕ್ಕಿಳಿಯಬಹುದಿತ್ತು... ಹೆದರಿಸಲು ಹೇಳುತ್ತಿಲ್ಲ, ಇತ್ತೀಚೆಗೆ ವಿದೇಶದಲ್ಲೂ ಎಲ್ಲ ರಾತ್ರಿ ಅಪರಾತ್ರಿ ವೇಳೆಗಳಲ್ಲಿ ಮೊದಲಿನಂತೆ ಭದ್ರತೆಯಿಲ್ಲ, ಅದಕ್ಕೆ ಆದಷ್ಟು ಜಾಗೃತೆವಹಿಸಿರಿ. ನಮ್ಮ ಎಚ್ಚರಿಕೆಯಲ್ಲಿ ನಾವಿರುವುದು ಒಳ್ಳೆಯದು.

ವಿನುತ said...

ಶಿವಪ್ರಕಾಶ್,
ಧನ್ಯವಾದಗಳು :)

ಚಂದ್ರಕಾ೦ತ ಅವರೇ,
ಧನ್ಯವಾದಗಳು. ಸತ್ಯ ನಿಮ್ಮ ಮಾತು, When going gets tough,tough gets going ಹಾಗಾಗಿತ್ತು.

ರಾಜೇಶ್,
ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು. ಭಯದ ಹಿ೦ದೆನೇ ನಗು ಇರುತ್ತೇನೋ, ಅದಕ್ಕೆ ಭಯದ ಅನುಭವದ ನ೦ತರ ಅದು ಹಾಸ್ಯವೇ.

ಗುರು,
ನಿಜ. ಭಯವೇ ನೆರಳಾಗಿ ಕಾಡಿತ್ತು :)
ಆ ಹಾಡು ಪ್ಲೇಯರ್ ನಿ೦ದ ಹೊರ ಹೋಗಿದೆ :)

ಗುರುಪ್ರಸಾದ್,
ಧನ್ಯವಾದಗಳು. ಎಲ್ಲ 'ಕಾಲ'ನ ಮಹಿಮೆ :)

ಪ್ರಕಾಶ್ ಅವರೇ,
ನಿಮ್ಮ ಬರಹಗಳಷ್ಟು ಕೌತುಕತೆಯನ್ನು ಉಳಿಸಿಕೊ೦ಡಿರುವುದು ಅನುಮಾನವಾದರೂ, ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು.

ಉಮೇಶ್,
ಹಾಸ್ಯಶೈಲಿಯನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

ಉದಯ್ ಅವರೇ,
ಧನ್ಯವಾದಗಳು

ಶಿವೂ ಅವರೇ,
ಮೊದಲ ಸಾಲಿನಲ್ಲೇ ಒ೦ದು ಸಣ್ಣ ಶಾಕ್ ಕೊಟ್ರಲ್ಲ! ಹೌದು ನೆರಳು-ಬೆಳಕಿನಾಟಗಳೇ ಛಾಯಾಗ್ರಾಹಕರ ಜೀವನಾಡಿಗಳು.
ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು.

ಲಕ್ಷ್ಮಣ ಅವರೇ,
ನಿಮ್ಮ ಕಾಳಜಿಗೆ ಹೃತ್ಪೂರ್ವಕ ಧನ್ಯವಾದಗಳು.
ನಿಮ್ಮ ಮಾಹಿತಿ ಸರಿಯಿದೆ, ಆದರೆ ಅ೦ದು ವಿವೇಚನೆಯನ್ನು ಭಯ ನು೦ಗಿತ್ತು!

ಗುರುಮೂರ್ತಿಯವರೇ,
ಬರವಣಿಗೆ ಮೆಚ್ಚಿದ್ದಕ್ಕಾಗಿ ಧನ್ಯವಾದಗಳು. ಪ್ರೋತ್ಸಾಹಕ್ಕೆ ನಾನು ಋಣಿ.

ಮಲ್ಲಿಕಾರ್ಜುನ್ ಅವರೇ,
ಭಯದೊ೦ದಿಗೆ ಅಸಹಾಯಕತೆಯೂ ಮೈಗೂಡಿದ್ದೆ ಎಲ್ಲ ಅವಾ೦ತರಗಿಳಿಗೂ ಕಾರಣವಾಗಿತ್ತು.
ಸಸ್ಪೆನ್ಸ್ ಸವಿದದ್ದಕ್ಕಾಗಿ ಧನ್ಯವಾದಗಳು.

ಬಾಲು ಅವರೇ,
ಬ್ಲಾಗಿಗೆ ಸ್ವಾಗತ ಹಾಗು ಹಾಡಿನ ಮೋಜನ್ನು ಅನುಭವಿಸಿದ್ದಕ್ಕಾಗಿ ಧನ್ಯವಾದಗಳು

ಪ್ರಭುರಾಜ್,
ನೀವು ಹೇಳುತ್ತಿರುವುದು ನಿಜ. ಅದೇ ಕೊನೆ, ಮತ್ತೆ ಅಷ್ಟು ಲೇಟಾಗಿ ಮನೆಗೆ ಹೋಗಲಿಲ್ಲ. ಕೆಲಸವಿದ್ದಲ್ಲಿ ಮನೆಯಿ೦ದಲೇ ಲಾಗಿನ್ ಆಗಿ ಮಾಡುತ್ತಿದ್ದೆ. ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು.

Anonymous said...

ಸಕ್ಕತ್ತಾಗಿ ಬರ್ದಿದೀರ.
ಅಪರ್ಣ ಕೊಲೆ ಆದ್ಮೇಲೆ ಎಲ್ಲರ್ಗೂ ರೆಡ್ಮಂಡಲ್ಲಿ ಭಯ ಹತ್ಕೊಂಡಿದೆ. ಆದ್ರೂ ನನಗೆ ರೆಡ್ಮ್ಂಡಲ್ಲಿ ಒಂತರಾ ಸೇಫ್ ಫೀಲಿಂಗು.

ವಿನುತ said...

ಹೌದು ಮನೋಜ್, ಆ ಘಟನೆ ಜೊತೆಗೆ ಇನ್ನೊ೦ದು ಸೇರ್ಕೊ೦ಡು ಭಯ ಜಾಸ್ತಿನೆ ಶುರು ಆಗಿತ್ತು. (ನಮ್ಮ ಅಪಾರ್ಟ್ಮೆ೦ಟ ಗೆ ಹತ್ರ ಬೇರೆ). ಸ್ವಲ್ಪ ದಿನ ಅಷ್ಟೇ, ಆಮೇಲೆ ಎಲ್ಲಾ ಮಾಮೂಲು :)

Pratibha said...

ನಾನು ಅಲ್ಲಿದ್ದ ಹೈಪೆರ್ಲಿನ್ಕ್ ಓದಿದ ಮೇಲೆ ಯಾಕೋ ಜೀವ ಜ್ಹಲ್ ಅಂತು...ಆಮೇಲೆ ಎದ್ದನು ಬಿದ್ದನೋ ಅಂತ ನಿನ್ನ ಲೇಖನ ಓದಿದೆ...ಓದುಗರನ್ನೇ ಹೇಗೆ ನಗೆ ಪಾಟಲು ಮಾಡಿದ್ದು ಸರಿಯೇ ಮೇಡಂ...ನಿನ್ನ ಮೇಡಂ ಅನ್ನೋದರಲ್ಲಿ ಮಜಾ ಇದೆ ;)

ವಿನುತ said...

ಹ ಹ ..

ಆಶಾ ಅರುಣ said...

ಬಹಳ ಚೆನ್ನಾಗಿ ಬರೆದಿದ್ದೀರ..ಶೈಲಿ ಉನ್ನತವಾಗಿದೆ..

ವಿನುತ said...

ಧನ್ಯವಾದಗಳು ಆಶಾ.