Friday, February 27, 2009

ಅನಿಷ್ಟಕ್ಕೆಲ್ಲ ಶನೀಶ್ವರನೇ ಹೊಣೆಯೆನ್ನುವ ಪ್ರತಾಪ....

(ಪ್ರತಾಪ ಸಿಂಹರ ’ಕುರುಡು ಕಾಂಚಾಣ...’ ಲೇಖನದ ಕುರಿತು)

ತೋಳ ಹಳ್ಳಕ್ಕೆ ಬಿದ್ರೆ ಆಳಿಗೊಂದು ಕಲ್ಲು ಅನ್ನುವ ಹಾಗೆ, ಈಗ Recession ನೆವ ಆಗಿಟ್ಟುಕೊಂಡು ಎಲ್ಲರೂ ಐಟಿ ಕ್ಷೇತ್ರದತ್ತ ಬೆರಳು ತೋರಿಸ್ತಾ ಇದ್ದಾರೆ. ಆರ್ಥಿಕ ಹಿಂಜರಿತ ಅನ್ನೋ ಕಾರಣಕ್ಕೆ ಐಟಿ ಕ್ಷೇತ್ರ ಜ್ಞಾಪಕ ಬಂದಿದೆ. ನಮ್ಮ ದೇಶದ ಮಾರುಕಟ್ಟೆಯನ್ನು ವಿದೇಶೀಯರಿಗೆ ಮುಕ್ತವಾಗಿ ತೆರೆದಿಟ್ಟು, ಅವರೆಲ್ಲ ಎಲ್ಲೆಲ್ಲಿಂದಲೋ ಬಂದು ನಮ್ಮ ಹಣದಿಂದ ಅವರ ಜೇಬನ್ನ ತುಂಬಿಸಿಕೊಳ್ಳುತ್ತಿರುವಾಗ, ನಾವು ಸ್ವಲ್ಪ ಅವರ ಹಣವನ್ನು ನಮ್ಮೆಡೆಗೆ ಸೆಳೆಯುವುದರಲ್ಲಿ ತಪ್ಪು ಕಾಣಿಸ್ತಾ ಇದೆ! ಭಾರತವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ ಹೆಮ್ಮೆಯ ಕ್ಷೇತ್ರ ಇಂದು ದುರಹಂಕಾರದ ಗೂಡಿನಂತೆ ಕಾಣುತ್ತಿದೆ. ಸಮಸ್ಯೆಯೊಂದು ರೂಪುಗೊಳ್ಳಲು ಎಲ್ಲರೂ ಜೊತೆಗಿದ್ದರು. ಅದರ ಪರಿಣಾಮವನ್ನೆದುರಿಸುವಾಗ ಹೊಣೆಗೇಡಿತನ. ಸರ್ವಜ್ಞ ಸರಿಯಾಗೇ ಹೇಳಿದಾನೆ..

ಮಾಡಿದುದ ಒಪ್ಪದನ / ಮೂಡನಾಗಿಪ್ಪವನ /
ಕೂಡಿ ತಾ ಮಾಡಿ ಇದಿರಾಡಿಕೊಳ್ಳುವನ /
ನೋಡಿದರೆ ತೊಲಗು ಸರ್ವಜ್ಞ //

ಇಂದು ಐಟಿ ಕ್ಷೇತ್ರದ ವೃತ್ತಿ ಪರತೆ ಮತ್ತದರ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಪ್ರಶ್ನೆಗಳೆದ್ದಿವೆ, ಬೇರೆ ಯಾವ ಕ್ಷೇತ್ರಗಳಿಗೂ ಇವು ಅನ್ವಯಿಸುವುದಿಲ್ಲದಂತೆ??! ಇಂದು ಮಾಧ್ಯಮದವರೆಂದರೆ ಯಾವ ಚಿತ್ರ ಕಣ್ಣಿಗೆ ಬರುತ್ತದೆ? ಅವರ ಸಾಮಾಜಿಕ ಜವಾಬ್ದಾರಿ ಏನು? ಕಂಡದ್ದು ಕಾಣದ್ದು ಎಲ್ಲದಕ್ಕೂ ಮಸಾಲೆ ಸೇರಿಸಿ, ಜನರಿಗೆ ಬೇಕೋ ಬೇಡವೋ, ದೇಶದ, ಸಮಾಜದ ಹಿತರಕ್ಷಣೆಯ ದೃಷ್ಟಿಯಿಂದ ಒಳ್ಳೆಯದೋ, ಕೆಟ್ಟದ್ದೋ, ಕೇವಲ ತಮ್ಮ TRP ಗಳಿಗಾಗಿ, circulation ಗಳಿಗಾಗಿ ವರದಿ ಮಾಡುವ ವ್ಯಕ್ತಿಗಳೆಂದೇ? ಇಂದು ವೈದ್ಯ ವೃತ್ತಿ ಎತ್ತ ಸಾಗುತ್ತಿದೆ? ಹಣ ಕೊಡದಿದ್ದರೆ ಶವವೂ ಇಲ್ಲ, ಅಂತ್ಯಸಂಸ್ಕಾರವೂ ಇಲ್ಲ. ಹಣಕ್ಕಾಗಿ, ಸತ್ತವರನ್ನೂ ಬದುಕಿದ್ದಾರೆಂದು ಹೇಳಿ, ಕಾಲಿನುಗುರಿನಿಂದ ತಲೆಕೂದಲವರೆಗೆ ಎಲ್ಲ ರೀತಿಯ Tests ಗಳನ್ನೂ ಮಾಡಿ, ಕೊನೆಗೆ ದೇವರು ನಮ್ಮೊಂದಿಗಿಲ್ಲವೆಂದು ಹೇಳಿ, ದೊಡ್ಡ ಬಿಲ್ಲ್ ಒಂದನ್ನು ಕೈಗಿಡುತ್ತಾರೆ. ಇದರಲ್ಲೇನಿದೆ ವೃತ್ತಿಪರತೆ? ೩ ನ್ನು ೬ ಮಾಡಿ, ೬ ನ್ನು ೩ ಮಾಡಿ, ಕಳ್ಳಕಾಕರೆಲ್ಲ ಜೈಲಿನಿಂದಲೇ ಸ್ಪರ್ಧಿಸಿ ಗೆಲ್ಲುವಂತೆ ಮಾಡುವ ನ್ಯಾಯವೃತ್ತಿಯಲ್ಲೇನಿದೆ ವೃತ್ತಿಪರತೆ? ಯಾರಿಗಿದೆ ವೃತ್ತಿ ನಿಷ್ಠೆ? ಗಾಳಿ ಬಂದಾಗ ತೂರಿಕೋ. ಇದು ಐಟಿ ಕ್ಷೇತ್ರಕ್ಕೆ ಮಾತ್ರ ಮೀಸಲಾಗಿಲ್ಲ. ’ಮದ’ ದುಡ್ಡಿನದು ಸ್ವಾಮಿ, ವೃತ್ತಿಯದಲ್ಲ.

ಸಾಮಾಜಿಕ ಜವಾಬ್ದಾರಿಯೆನ್ನುವುದು ಒಂದು ವೃತ್ತಿಗೆ ಮೀಸಲೇ? ಇಂದು ಸಾಮಾಜಿಕ ವೃತ್ತಿಯಲ್ಲಿರುವವರಿಗೇ (ಆರಕ್ಷಕರು, ಮಾಧ್ಯಮಗಳು ಇತ್ಯಾದಿ) ಅವುಗಳ ಬಗ್ಗೆ ಅರಿವಿಲ್ಲದಿರುವಾಗ ಸಾಮಾನ್ಯ ’Salary Oriented’ ಗುಂಪಿನಿಂದ ಅದರ ನಿರೀಕ್ಷಣೆ ಎಷ್ಟು ಸರಿ. ಹಾಗೆಂದ ಮಾತ್ರಕ್ಕೆ ಅವರಿಗೆ ಇಲ್ಲವೆಂದಲ್ಲ. ತಪ್ಪುಗಳನ್ನೇನು ಯಾರು ಬೇಕಾದರೂ ಎತ್ತಾಡಬಹುದು. ಆದರೆ, ಒಂದು ಸಂಸ್ಥೆಯನ್ನು ಹುಟ್ಟು ಹಾಕಿ ಅದು ಜಾಗತಿಕ ಮಟ್ಟದಲ್ಲಿ ತನ್ನನ್ನು ಗುರುತಿಸಿಕೊಳ್ಳುವಂತೆ ಮಾಡಬೇಕಾದಲ್ಲಿ ಇರಬೇಕಾದ ಪರಿಶ್ರಮ, ಸಾಧನೆ, ಚಾಕಚಕ್ಯತೆ ಬಗ್ಗೆ ಅರಿಯದ ಅಜ್ಞಾನಿಗಳು ಮಾತ್ರ ಹೀಗೆ ಮೂಗೆಳೆಯಲು ಸಾಧ್ಯ. ಇನ್ನೊಮ್ಮೆ ಈ ಸಂಸ್ಥೆಗಳಿಂದ ಎಷ್ಟು ಶಾಲೆಗಳು ಎಷ್ಟು ಹಳ್ಳಿಗಳು ದತ್ತು ತೆಗೆದು ಕೊಳ್ಳಲ್ಪಟ್ಟಿವೆ, ಎಷ್ಟು ವಿದ್ಯಾರ್ಥಿಗಳು ಫಲ ಪಡೆದುಕೊಳ್ಳುತ್ತಿದ್ದಾರೆ, ಎಷ್ಟು ಜನ ಉದ್ಯೋಗಿಗಳು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ ಇವೆಲ್ಲದರ ವಿವರಗಳನ್ನು ತಿಳಿದುಕೊಳ್ಳಿ. ಇಂದು ಒಂದು ಕಂಪನಿ ಲಾಭ-ನಷ್ಟಗಳು ಎಲ್ಲರಿಗೂ ಗೊತ್ತಾಗುತ್ತದೆ, ಆದರೆ ಅದೇ ಸಂಸ್ಥೆಯ ಸಾಮಾಜಿಕ ಕಾರ್ಯಗಳು ಗೊತ್ತಾಗುವುದಿಲ್ಲ. ಕಾರಣ ಅವುಗಳನ್ನು ಪ್ರಚಾರದ ದೃಷ್ಟಿಯಿಂದ ಮಾಡಿರುವುದಿಲ್ಲ, ಜವಾಬ್ದಾರಿ ದೃಷ್ಟಿಯಿಂದ ಮಾಡಲಾಗಿರುತ್ತದೆ. ವಿಪರ್ಯಾಸವೆಂದರೆ, ಇಂದು ಸೇವೆಯೆ ವೃತ್ತಿಯಾಗಿರುವ ವೈದ್ಯವೃತ್ತಿಯಲ್ಲೇ ಗ್ರಾಮ ಸೇವೆಯನ್ನು ಕಡ್ಡಾಯಗೊಳಿಸಬೇಕಾಗಿದೆ.

ಸ್ವಾತಂತ್ರ್ಯ ಹೋರಾಟದ ಸಮಯವನ್ನೂ, ಇಂದಿನ ಪರಿಸ್ಥಿತಿಯನ್ನೂ ಮತ್ತು ಐಟಿ ಉದ್ಯೋಗಿಗಳನ್ನು ಹೋಲಿಸುತ್ತಿದ್ದೀರಿ. ಆದರೆ ಯಾವ ಅರ್ಥದಲ್ಲಿ ಎಂಬುದೇ ಅರ್ಥವಗಲಿಲ್ಲವಷ್ಟೆ. ಬೇರೆ ಯಾವುದಾದರೂ ಕ್ಷೇತ್ರದ ಉದಾಹರಣೆಯನ್ನು ಈ ನಿಟ್ಟಿನಲ್ಲಿ ತೋರಿಸಿದರೆ, ಅರಿತುಕೊಳ್ಳಬಹುದು. ಬೇರಾವ ಉದ್ಯಮ ಕ್ಷೇತ್ರದಿಂದ ’Social Empowerment’ ಆಗಿದೆ? ಎಷ್ಟು ಆಗಿದೆ?

ಇಂದು ಎಲ್ಲ ವ್ಯವಹಾರಗಳೂ ಕೂತಲ್ಲೇ ಆಗಬೇಕು, ಅದೂ ತಕ್ಷಣ. ಯಾರಿಗೂ ಎಲ್ಲಿಯೂ ಕ್ಯೂ ನಲ್ಲಿ ನಿಂತು ಕೆಲಸ ಮಾಡಿಕೊಳ್ಳುವಷ್ಟು ವ್ಯವಧಾನವಿಲ್ಲ. ಎಲ್ಲಕ್ಕೂ ಧಾವಂತ. ಇಂತದೊಂದು ಜೀವನದಲ್ಲಿ ಐಟಿ ಎನ್ನುವುದು ಹಾಸು ಹೊಕ್ಕಾಗಿದೆ. ಎಲ್ಲೋ ಕುಳಿತುಕೊಂಡು ಕಾಫಿ ಹೀರುತ್ತಾ, ಒಬಾಮ ನ ಭಾಷಣ ಕೇಳಿ, ಮಾರ್ಟಿನ್ ಲೂಥರ್ ಕಿಂಗ್ ಮಾತನಾಡಿದಂತೆ ಆಯಿತು ಎಂದು ಲೇಖನ ಬರಿಯುವಾಗ ಐಟಿ ಇತ್ತು. ಭಾರತದ ಮೂಲೆಯಲ್ಲಿರುವ ರೋಗಿಯೊಬ್ಬನಿಗೆ ಆಸ್ಟ್ರೇಲಿಯಾದ ವೈದ್ಯನೊಬ್ಬನ ನೆರವು ಸಿಗೋವಾಗ್ಲು ಐಟಿ ಇದೆ. ಸುಮ್ನೆ ಹೋಗೋ Long Drive ನಲ್ಲು ಐಟಿ ಇದೆ. Late ಅಗತ್ತೆ, Traffic ನಲ್ಲಿ ಸಿಕ್ಕಿ ಹಾಕೊಂಡಿದಿನಿ, ಅಂತ ಅಮ್ಮನಿಗೆ ಸಮಾಧಾನ ಹೇಳೋ ಮೊಬೈಲ್ ಫೋನ್ ನಲ್ಲು ಐಟಿ ಇದೆ. ಸುಮ್ನೆ ಯಾರಿಂದಲೋ ತಪ್ಪಿಸ್ಕೊಳ್ಳೊಕೆ ಊರಲ್ಲಿಲ್ಲ ಅಂತ ಸುಳ್ಳು ಹೇಳೊ ಮೊಬೈಲ್ ಫೋನ್ ನಲ್ಲು ಐಟಿ ಇದೆ. ಮೊದಲು ಐಟಿ ಕ್ಷೇತ್ರದ ಆಳ ವಿಸ್ತಾರಗಳನ್ನ ತಿಳಿದುಕೊಳ್ಳಿ. ನಂತರ ಜನ ಸಾಮಾನ್ಯರಿಗೆ ತಿಳಿಸಿ. ಒಂದು ಸಾಮಾಜಿಕ ಸ್ಥಾನದಲ್ಲಿರೊ ನಿಮ್ಮಂತವರಿಗೇ ಅದು ತಿಳಿದಿಲ್ಲವಾದಲ್ಲಿ, ಜನ ಸಾಮಾನ್ಯರಿಗೆ ತಿಳಿಯದೆ ಇರುವುದರಲ್ಲಿ ಆಶ್ಚರ್ಯವೇನಿಲ್ಲ.

ಇಂದು ಹಾಲುಮಾರುವವನ, Corporation ಕಸ ಗುಡಿಸುವವನ, ಮನೆಕೆಲಸ ಮಾಡುವವಳ ಮಕ್ಕಳೂ ಕೂಡ ನಿಷ್ಟೆಯಿಂದ ಓದಿ, ಆ ನಿಮ್ಮ 'Welfare Oriented' ಸರ್ಕಾರದ ಖಜಾಂಜಿಗಳ Personal ಬೊಕ್ಕಸಕ್ಕೆ ಹಣ ಸುರಿಯದೆ, ವಿದ್ಯೆ, ಯೋಗ್ಯತೆಯ ಆಧಾರದ ಮೇಲೆ ದೊರೆಯುವ ಐಟಿ ಕೆಲಸಗಳಿಂದ ಸ್ವಂತ ಕಾಲುಗಳ ಮೇಲೆ ನಿಂತಿದ್ದಾರೆ. ಇವರಿಗಿಂತಲೂ ಹಣದ ಬೆಲೆಯನ್ನು ಅರಿತವರು ಬೇಕಿಲ್ಲ. ಇಂದು ಐಟಿ ಕ್ಷೇತ್ರ ಮಾತ್ರವಲ್ಲ, ಎಲ್ಲವೂ ನಡೆಯುತ್ತಿರುವುದಲ್ಲ, ಓಡುತ್ತಿರುವುದು ಆ ಕುರುಡು ಕಾಂಚಾಣದೊಂದಿಗೇ. ಅದರ ’ಮೌಲ್ಯ’ವೇ ಕಳೆದು ಹೋಗಿದೆ.

ಲೇಖನದ ತುಂಬಾ ಆಪಾದನೆಗಳೇ ಕಾಣುತ್ತವೆಯೆ ಹೊರತು ಆಧಾರಗಳೇ ಸಿಗುವುದಿಲ್ಲ. ಯಾವ ಒಂದು ಹಂತದಲ್ಲೂ ಇನ್ನೊಂದು ದೃಷ್ಟಿಯಿಂದ ನೋಡಲಾಗಿಲ್ಲ. ಎಲ್ಲೆಡೆಯೂ ಎಲ್ಲವೂ ಸರಿಯಿರುವುದಿಲ್ಲ. ಸತ್ಯಮ್ ಎಂದು ಹೆಸರಿಟ್ಟುಕೊಂಡು ಮಾಡಿದ ದ್ರೋಹ ಕಣ್ಣಮುಂದಿದೆ. ಆದರೆ ಹುಳುಕುಗಳನ್ನು ಹೇಳುವುದರ ಜೊತೆಗೆ ಹೂವುಗಳನ್ನು ತೋರಿಸಬೇಕು. ಸಮಸ್ಯೆಯಿದೆ ಎಂದು ಹೇಳುವಾಗ ಪರಿಹಾರ ಕಂಡು ಕೊಳ್ಳುವ ಆಸಕ್ತಿ, ಚಿಂತನೆಯಿರಬೇಕು. ಇಂದು ವಿಜ್ಞಾನದಿಂದ ನಮಗೆ ಸಾಧಕ ಭಾದಕಗಳೆರಡೂ ಇವೆ. ಬಾಂಬ್ ಕೂಡ ತಯಾರಿಸಬಹುದು, ಬೆಣ್ಣೆಯನ್ನೂ ಸಹ. ಹಾಗಾದರೆ ವಿಜ್ಞಾನವೇ ತಪ್ಪೆನ್ನುವುದು ಎಷ್ಟು ಸರಿ? ಹಾಲು, ನೀರಾ ಒಂದೇ ಎನ್ನುವುದೆಷ್ಟು ಸರಿ?

ಲೇಖನದಲ್ಲಿ ಹೇಳಿರುವುದು ಬಹುಪಾಲು ಮಂದಿಗೆ. ನೀವೇಕೆ Personal ಆಗಿ ತಗೋಳ್ತೀರಿ ಎಂದು ನುಣುಚಿಕೊಳ್ಳಬಹುದು. ಬೆತ್ತಲೆ ಜಗತ್ತು ಎಂಬ ಶೀರ್ಷಿಕೆಯಡಿ ನೀವು ಬರೆಯುವುದು ನಗ್ನ ಸತ್ಯವೆಂದು ನಂಬುವವರಿದ್ದಾರೆ. ಅನ್ನವಾಗಿದೆಯೇ ಎಂದು ಒಂದು ಅಗಳು ನೋಡಿದರೆ ಸಾಕು ಎನ್ನುವ ಅತಿ ’ವಿವೇಚನೆ’ಯಿಂದ, ಯಾವ ಅಭಿಪ್ರಾಯ ಇಲ್ಲದವರೂ ನಿಮ್ಮ ಅಭಿಪ್ರಾಯವನ್ನೇ ರೂಪಿಸಿಕೊಳ್ಳುವ ಸಾಧ್ಯತೆ ಇದೆ. Cooling Glass ಹಾಕಿಕೊಂಡು ನೋಡಿ ಹಗಲನ್ನೇ ಕತ್ತಲೆಂದು ಬರೆಯುವುದು ನಗ್ನ ಸತ್ಯವಾಗುವುದಿಲ್ಲ. ಸರಿ ತಪ್ಪುಗಳ ಪೂರ್ಣ ವಿಮರ್ಶೆಯಿರಬೇಕಲ್ಲವೇ? ವೃತ್ತಿಯೊಂದರ ಬಗ್ಗೆ ಬರೆಯುವಾಗ, ’ಬಹುಪಾಲು’ ಅನ್ನುವುದನ್ನು ಸಮರ್ಥಿಸುವಂತೆ, ಎಲ್ಲ ಮಜಲುಗಳನ್ನು ವಿಮರ್ಶಿಸಿ.

ನಮಗೆ ಕಂಡದ್ದು ಮಾತ್ರ ಸತ್ಯವಲ್ಲ ಅಲ್ಲವೇ? ಇದು ನಮ್ಮ ಕ್ಷೇತ್ರ ಎಂಬ ಹೆಮ್ಮೆ ಎಲ್ಲರಿಗೂ ಇರುತ್ತದೆ. ಆದರೆ ಅದು ಕುರುಡು ಹಮ್ಮಾಗಬಾರದಷ್ಟೆ. ಟೀಕೆಯನ್ನು ಸಹಿಸಿಕೊಳ್ಳುವ ಅಥವಾ ತಿರಸ್ಕರಿಸುವ ಪ್ರಶ್ನೆಯಲ್ಲವಿದು. ಬರೆದಿರುವುದು ಎಷ್ಟು ಸರಿ ಎಷ್ಟು ತಪ್ಪು ಎನ್ನುವ ವಿಮರ್ಶೆಯಷ್ಟೆ. ಯಾವುದೇ ವೃತ್ತಿಯಾಗಿರಬಹುದು, ಉದಾಹರಣೆಗೆ ಸಂಗೀತ ಲೋಕದ ಬಗ್ಗೆ ಅದರ ಹೊರಗಿರುವವರ ಅರಿವೂ, ಅದರ ಒಳಗಿರುವವರ ಅರಿವೂ ಬೇರೆ ಬೇರೆಯಾಗಿರುತ್ತದೆ. ಹಾಗಾಗಿ, ಅದರ ಬಗ್ಗೆ ತಪ್ಪು ಅಭಿಪ್ರಾಯಗಳು ವ್ಯಕ್ತವಾದಾಗ ಅದನ್ನು ತಿದ್ದುವುದು ಅವರ ಹೊಣೆಯಾಗಿರುತ್ತದೆ. ನಾವೂ ಸಹ ಕೊರತೆಯನ್ನು ತುಂಬುತ್ತಿದ್ದೇವೆಯಷ್ಟೆ. ಒಂದು ವಿಷಯದ ಬಗ್ಗೆ ಇನ್ನಷ್ಟು ಸತ್ಯಗಳನ್ನು ತಿಳಿದುಕೊಳ್ಳುವ ವಿಶಾಲ ಮನಸ್ಸು ನಿಮ್ಮದಾಗಲಿ.

Wednesday, February 11, 2009

ಪ್ರೀತಿಯೆಂದರೇನು?


ತಾಯಿಯ ಮಮತೆ
ತಂದೆಯ ವಾತ್ಸಲ್ಯ
ಗುರುವಿನ ಕಕ್ಕುಲತೆ
ಹಿರಿಯರ ಹಾರೈಕೆ
ಕಿರಿಯರ ವಾಂಛಲ್ಯ
ಸಖನ ಪ್ರೇಮ
ಎಲ್ಲವೂ ಪ್ರೀತಿಯ ರೀತಿಗಳಾದರೆ
ಪ್ರೀತಿಯೆಂದರೇನು?

ಹೆತ್ತವರಿಗೆ ಗೌರವ
ಗುರುಗಳಿಗೆ ಭಕ್ತಿ
ಹಿರಿಯರಿಗೆ ಮರ್ಯಾದೆ
ಕಿರಿಯರಿಗೆ ಅಕ್ಕರೆ
ಗೆಳೆಯರಿಗೆ ಸ್ನೇಹ
ಪ್ರಿಯಕರನಿಗೊಲವು
ಎಲ್ಲವೂ ಪ್ರೀತಿಯ ಅಭಿವ್ಯಕ್ತಿಗಳಾದರೆ
ಪ್ರೀತಿಯೆಂದರೇನು?

ಕರುಳಿನ ಕರೆ
ಎದೆಯ ತುಡಿತ
ಮನಸಿನ ಆನಂದ
ಹೃದಯದ ಮಿಡಿತ
ಕಣ್ಣಿನ ಮಿಂಚು
ತುಟಿಯ ಮುಗುಳ್ನಗು
ಎಲ್ಲವೂ ಪ್ರೀತಿಯ ಮುಖಗಳಾದರೆ
ಪ್ರೀತಿಯೆಂದರೇನು?

-ವಿನುತ

Sunday, February 08, 2009

ಯತ್ರ ನಾರ್ಯಸ್ತು ಪೂಜ್ಯಂತೆ....


ಇತ್ತೀಚಿನ ಎಲ್ಲ ಘಟನಾವಳಿಗಳು - ಸ್ಲಮ್ ಡಾಗ್ ನ ಭಾರತ, ಮಂಗಳೂರಿನ ಪಬ್ ಧಾಳಿ ಪ್ರಕರಣ, 'ಪಬ್ ಭರೋ' ಹೇಳಿಕೆ... ಅಬ್ಬಬ್ಬಾ! ಎಲ್ಲಿದ್ದೇವೆ ನಾವು? ಎತ್ತ ಸಾಗುತ್ತಿದ್ದೇವೆ? ಈ ಎಲ್ಲ ಘಟನೆಗಳು ಏನನ್ನು ಸಾಧಿಸಿದವೋ ಗೊತ್ತಿಲ್ಲ, ಆದರೆ ಮಾಧ್ಯಮಗಳ ನೈತಿಕತೆ, ಸ್ತ್ರೀ ಹಕ್ಕು ಮತ್ತು ಸ್ವಾತಂತ್ರ್ಯ ಮತ್ತು ಸಂಸ್ಕೃತಿಯ ಸಂರಕ್ಷಣೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿರುವುದಂತೂ ನಿಜ.

ಈ ಎಲ್ಲ ಘಟನೆಗಳ ನಡುವೆ ಇನ್ನೂ ಕೆಲವು ಘಟನೆಗಳಿದ್ದವು, ಇವೆ, ಮುಂದೆಯೂ ಇರುತ್ತವೆ. ಅಮಾಯಕ ಬಾಲಕಿಯರ ಅತ್ಯಾಚಾರ, ಬೆತ್ತಲೆ ಮೆರವಣಿಗೆ, ಅಪ್ರಾಪ್ತ ವಯಸ್ಸಿನ ವಿವಾಹಗಳು, ವರದಕ್ಷಿಣೆ ಸಾವುಗಳು, ಹೆಣ್ಣು ಭ್ರೂಣ ಹತ್ಯೆ, ಕುಡುಕ ಗಂಡನ ಶೋಷಣೆ, ಆಸಿಡ್ ದಾಳಿಗಳು, ಅವಿದ್ಯಾವಂತರ ದೈಹಿಕ ಶೋಷಣೆಯಾದರೆ, ವಿದ್ಯಾವಂತರ ಮಾನಸಿಕ ಕಿರುಕುಳಗಳು.... ಈ ಪಟ್ಟಿಗೆ ಕೊನೆಯುಂಟೇ? ಇವು ನಮ್ಮ ನಿತ್ಯ ಕರ್ಮಗಳು. ದೈನಂದಿನ ಜೀವನದ ಆಗುಹೋಗುಗಳು. ಹಾಗಾಗಿ ಇವು ಎಂದಿಗೂ ಮಾಧ್ಯಮೀಕರಣವಾಗುವ, ಇವುಗಳ ವಿರುದ್ಧ ಹೋರಾಡುವಷ್ಟು ದೊಡ್ಡ ಘಟನೆಗಳಲ್ಲ. ಇವು ಎಂದಿಗೂ 'Head Lines' ಅಥವಾ 'Breaking News' ಅಥವಾ 'Hot News' ಗಳಾಗಲಾರವು. ಚಿಂತಕರ ಚಾವಡಿಯ ಚರ್ಚೆಗಳಾಗಲಾರವು. ಸಂಸ್ಕೃತಿಯ ಸಂರಕ್ಷಕರ ಜವಾಬ್ದಾರಿಗಳಾಗಲಾರವು. ನ್ಯಾಯ ರಕ್ಷಕರ ನೈತಿಕ ಹೊಣೆಗಳಾಗಲಾರವು. ಮಹಿಳಾ ಸಬಲೀಕರಣದ ಕಾರ್ಯೋದ್ದೇಶಗಳಾಗಲಾರವು.

ಸಂಸ್ಕೃತಿಯ ಸಂರಕ್ಷಕರೆಂಬ ಪಡೆಯೊಂದು ಹಾಡು ಹಗಲಿನಲ್ಲೇ ಯುವತಿಯರ ಮೇಲೆ ಹಲ್ಲೆ ನಡೆಸಿತಲ್ಲಾ, ಇದು ಸಂಸ್ಕೃತಿಯೇ?

ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾ:ಯತ್ರೈತಾಸ್ತು ನ ಪೂಜ್ಯಂತೆ ಸರ್ವಾಸ್ತತ್ರಾಫಲಾ: ಕ್ರಿಯಾ: //
(ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಸಂತುಷ್ಟರಾಗಿರುತ್ತಾರೆ. ಸ್ತ್ರೀಯರನ್ನೆಲ್ಲಿ ಅವಮಾನಗೊಳಿಸಲಾಗುತ್ತದೋ ಅಲ್ಲಿ ಮಾಡಿದ ಕಾರ್ಯಗಳೆಲ್ಲವೂ ವ್ಯರ್ಥ)

ಶೋಚಂತಿ ಜಾಮಯೋ ಯತ್ರ ವಿನಶ್ಯತ್ಯಾಶು ತತ್ಕುಲಮ್ನ ಶೋಚಂತಿ ತು ಯತ್ರೈತಾ ವೃಧ್ಧತೇ ತದ್ಧಿ ಸರ್ವದಾ //
(ಮನೆಯೊಂದರಲ್ಲಿ ಮಗಳು, ಸೊಸೆ, ಅಕ್ಕತಂಗಿಯರು ಮತ್ತಿತರ ಸ್ತ್ರೀಯರು ನರಳಿದಲ್ಲಿ, ಖಂಡಿತವಾಗಿಯು ಆ ಮನೆ ನಾಶವಾಗುತ್ತದೆ. ಸಂತೋಷವಾಗಿದ್ದಲ್ಲಿ, ಸುಖ, ಸಂಪತ್ತು ವರ್ಧಿಸುತ್ತದೆ)

ಜಾಮಯೋ ಯಾತಿ ಮೋಹಾನಿ ಸಂಪತ್ಯ ಪ್ರತಿಪೂಜಿತಾ:ತಾತಿ ಕೃತ್ಯಾಹತಾನೀವ ವಿನಶ್ಯಂತಿ ಸಮನ್ವತ: //
(ಯಾವ ಮನೆಯಲ್ಲಿ ಹೆಂಡತಿ, ಮಗಳು, ಅಕ್ಕತಂಗಿಯರು, ಸೊಸೆಯಂದಿರು ಗೌರವಿಸಲ್ಪಡುವುದಿಲ್ಲವೋ, ಅವಮರ್ಯಾದೆಗೊಳಗಾಗುತ್ತಾರೋ ಆ ಮನೆ ಖಂಡಿತವಾಗಿಯು ನಾಶವಾಗುತ್ತದೆ)

'ಅತಿಥಿ ದೇವೋ ಭವ' ಎಂದು ನಂಬಿದ್ದರೂ, ಎಲ್ಲರಿಗಿಂತ ಮೊದಲು ಅತಿಥಿಗಳನ್ನು ಸತ್ಕರಿಸುತ್ತಿದ್ದರೂ,
ಸುವಾಸಿನೀ: ಕುಮಾರಂಶ್ಚ ರೋಗಿಣೋ ಗರ್ಭಿಣೀ: ಸ್ತ್ರೀಯ:ಅತಿಥಿಭ್ಯೋಗ್ರ ಎವೈತಾನ್ ಭೊಜಯೇದವಿಚಾರಯನ್ //
(ಸುವಾಸಿನಿಯರೂ, ಕುಮಾರಿಯರೂ, ಗರ್ಭಿಣಿ ಸ್ತ್ರೀಯರು, ಇವರೇ ಮೊದಲಾದ ಸ್ತ್ರೀಯರು ಅತಿಥಿಗಳಿಗೂ ಮೊದಲು ಸತ್ಕರಿಸಲ್ಪಡಬೇಕು)

ಇನ್ನು ತಾಯಿಯ ಪಾತ್ರದ ಬಗ್ಗೆ ಹೇಳುವುದೇನಿದೆ?
ಉಪಾಧ್ಯಾಯಾಂದಶಾಚಾರ್ಯ ಆಚಾರ್ಯಾಣಮ್ ಶತ೦ ಪಿತಾಸಹಸ್ತ್ರ೦ ತು ಪಿತೃನ್ಮಾತಾ ಗೌರವೀನಾತಿರಿಚ್ಯತೀ//
(ಗುರುವುಗಿಂತ ಆಚಾರ್ಯರೂ, ಆಚಾರ್ಯರಿಗಿಂತ ತಂದೆಯು, ಎಲ್ಲರಿಗಿಂತ ಹೆಚ್ಚಾಗಿ ತಾಯಿಯು ಪೂಜನೀಯವಾಗಿರುತ್ತಾರೆ)

ಶಿವಾಜಿಯ ಕಥೆಯೊಂದಿದೆ: ಒಮ್ಮೆ ಶಿವಾಜಿ ಕಲ್ಯಾಣಪ್ರಾಂತ್ಯವನ್ನು ಗೆದ್ದು ಅಪಾರ ಸಂಪತ್ತನ್ನು ಸಂಪಾದಿಸಿರುತ್ತಾರೆ. ಆಭಾಜಿಪಂಥ್, ಯುದ್ಧವನ್ನು ಗೆದ್ದ ಸೇನಾಪತಿ, ಸುಂದರ ಸ್ತ್ರೀಯೊಬ್ಬಳು ದೊರಕಿದ್ದಾಳೆ, ಅವಳನ್ನೂ ಮಹರಾಜರಿಗೆ ಸಮರ್ಪಿಸುತ್ತಿದ್ದೇನೆ ಎನ್ನುತ್ತಾನೆ. ಆಕೆ ಯುಧ್ಧದಲ್ಲಿ ಸೋತಿದ್ದ ಮುಘಲ್ ಸುಬೇದಾರನ ಕುಟುಂಬದ ಹೆಣ್ಣುಮಗಳು. ಅದಕ್ಕೆ ಶಿವಾಜಿ, 'ಆಕೆ ತುಂಬಾ ಸುಂದರವಾಗಿದ್ದಾಳೆಂದು ಹೇಳುತ್ತಿದ್ದೀಯೆ. ಆಕೆ ನನ್ನ ತಾಯಿಯ ಸಮಾನ. ನಾನಾಕೆಯನ್ನು ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ. ಎಲ್ಲಕ್ಕಿಂತ ಹೆಚ್ಚಾಗಿ ಸ್ತ್ರೀರಕ್ಷಣೆ ರಾಜಧರ್ಮ' ಎಂದು ಹೇಳಿ, ಸಕಲ ಗೌರವ ಮರ್ಯಾದೆಗಳೊಂದಿಗೆ ಹಿಂತಿರುಗಿಸುತ್ತಾನೆ. ಆಗ ಸುಬೇದಾರನಿಗೆ ಹೆಣ್ಣಿಗೆ ಈ ಮಣ್ಣಿನಲ್ಲಿ ಕೊಡುವ ಮರ್ಯಾದೆಯ ಅರಿವಾಗುತ್ತದೆ.

ನಿನ್ನ ಹೆಂಡತಿಯನ್ನು ಹೊರತು ಪಡಿಸಿ ಮಿಕ್ಕೆಲ್ಲ ಸ್ತ್ರೀಯರು ನಿನಗೆ ಪರಸ್ತ್ರೀಯರು. ಅವರನ್ನು ನಿನ್ನ ತಾಯಿಯರಂತೆಯು, ಅಕ್ಕ ತಂಗಿಯರಂತೆಯೂ ಕಾಣು ಎಂದಿದ್ದಾರೆ ಹಿರಿಯರು.

ಬಹುಶ: ನಮ್ಮ ಸಂಸ್ಕೃತಿಯ ಬಗ್ಗೆ ನಾವೇ ಹೇಳುವುದು ರುಚಿಸದಿದ್ದಲ್ಲಿ, ಪಾಶ್ಚಿಮಾತ್ಯ Kerry Brown ತನ್ನ 'The Essential Teachings of Hinduism' ಎಂಬ ಪುಸ್ತಕದಲ್ಲಿ ಹೇಳುತ್ತಾನೆ - "In Hinduism a woman is looked after not because she is inferior or incapable but, on the contrary, because she is treasured. She is the pride and power of the society. Just as the crown jewels should not be left unguarded, neither should a woman be left unprotected. No extra burden of earning a living should be placed on women who already bear huge responsibilities in society; childbirth; child care, domestic well being and spiritual growth. She is the transmitter of culture to her children."

ಇದು ನಮ್ಮ ಸಂಸ್ಕೃತಿ. ಇನ್ನಾದರೂ ಸಂಸ್ಕೃತಿಯ ಹೆಸರಿನಲ್ಲಿ ಅದನ್ನು ಅನೀತಿಗೊಳಿಸುವ ಕಾರ್ಯಗಳು ನಿಲ್ಲಲಿ. ಗುಂಪೊಂದರ ಉದ್ದೇಶ ಮಾತ್ರ ಸರಿಯಿದ್ದರೆ ಸಾಲದು. ಅದನ್ನು ಕಾರ್ಯಗತಗೊಳಿಸುವ ಮಾರ್ಗವೂ ಸರಿಯಿರಬೇಕು.

ಮಂಗಳೂರಿನ ಪಬ್ ವೊಂದರಲ್ಲಿ ಯುವತಿಯೊಬ್ಬಳನ್ನು ಹೊಡೆದಾಕ್ಷಣ, ದೇಶಾದ್ಯಂತ ಮಲಗಿದ್ದ ಸಿಂಹಿಣಿಯರೆಲ್ಲರೂ ಎದ್ದು ಘರ್ಜಿಸುತ್ತಿದ್ದಾರೆ. ಮಹಿಳಾ ಸ್ವಾತಂತ್ರ್ಯ, ಹಕ್ಕುಗಳ ಬಗ್ಗೆ, ನೈತಿಕತೆಯ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಅವರದೇ ಮನೆಗಳಲ್ಲಿ ಕೆಲಸದ ಹೆಣ್ಣು ಮಕ್ಕಳನ್ನು ಅವರೂ, ಅವರ ಮಕ್ಕಳೂ ನಡೆಸಿಕೊಳ್ಳುವ ರೀತಿ/ಅನೀತಿಗಳನ್ನು ಪ್ರಶ್ನಿಸುವವರು ಯಾರು? ಗಂಡಸರು ಕುಡಿಯುತ್ತಾರೆ, ಕುಣಿಯುತ್ತಾರೆ, ಪಬ್ ಗಳಿಗೆ ಹೋಗುತ್ತಾರೆ.ಧೂಮಪಾನ, ಅತ್ಯಾಚಾರಗಳನ್ನು ಮಾಡುತ್ತಿದ್ದಾರೆ. ನಾವು ಅವರಿಗೇನು ಕಮ್ಮಿ? ನಾವೂ ಮಾಡುತ್ತೇವೆ ಎಂದು ಬೊಬ್ಬಿಡುತ್ತಿದ್ದಾರೆ. ಇದು ಸಮಾನತೆ, ಹಕ್ಕು ಮತ್ತು ಸಂಸ್ಕ್ರತಿ!!! ಮೊನ್ನೆ ತಾನೇ ಜೈಪುರದಲ್ಲಿ ೧೮ ತಿಂಗಳ ಹೆಣ್ಣು ಮಗುವೊಂದರ ಮೇಲೆ ಅತ್ಯಾಚಾರ ನಡೆಯಿತು. ಕೇಳಲೂ ಅಸಹ್ಯ ಹುಟ್ಟಿಸುವಂತಹ ಸುದ್ದಿ. ಎಲ್ಲಿ ಹೋಗಿದ್ದರು ಮಹಿಳಾವಾದದ ಕಾರ್ಯಕರ್ತರು? ಬಹುಶ: ಪಬ್ ನಲ್ಲಿ ಕುಳಿತು ತಮ್ಮ ಸಮಾನತೆ, ಸ್ವಾತಂತ್ರ್ಯದ ಪ್ರದರ್ಶನ ಮಾಡುತ್ತಿದ್ದರೆಂದು ತೋರುತ್ತದೆ. ಮಾನ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ 'ಪಬ್ ಭರೋ' ಎಂದು ಕರೆಯಿತ್ತಿದ್ದಾರೆ. ಒಂದು ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಆಡುವ ನುಡಿಗಳೇ ಇವು? ಈ ರೀತಿಯ ಹೇಳಿಕೆಗಳಿಂದ ಇವರು ತಮ್ಮದಿರಲಿ (ಅವರಿಗಿಲ್ಲ ಎಂಬುದು ತಿಳಿದಿರುವ ವಿಚಾರ) ಸಭ್ಯ ನಾಗರೀಕರ ನಡಾವಳಿಗಳ ವಧೆ ಮಾಡುತ್ತಿದ್ದಾರೆ. 'ಏಳಿ, ಎದ್ದೇಳಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ' ಎಂದು ಯುವಜನತೆಯನ್ನು ಸರಿದಾರಿಯತ್ತ ಕೊಂಡೊಯ್ದ ವಿವೇಕಾನಂದರಂತಹ ಉದ್ಘೋಷಗಳ ಜರೂರತ್ತಿನ ಸಮಯದಲ್ಲಿ, 'ಬನ್ನಿ, ಕುಡಿದು, ಕುಪ್ಪಳಿಸಿ, ಪಬ್ ಗಳನ್ನು ತುಂಬಿಸಿ' ಎಂಬ ಹೇಳಿಕೆಗಳು..'ಮಾಡು ಇಲ್ಲವೇ ಮಡಿ' ಎಂಬ ಧೋರಣೆಗಳಿಂದ ಗಳಿಸಿದ ಸ್ವಾತಂತ್ರ್ಯದ ಬಳಕೆ ಈ ರೀತಿಯಲ್ಲಿ... ಸಾಮಾಜಿಕ ದುರಂತವೆಂದರೆ ಇದೇ ಅಲ್ಲವೇ? ಪು.ತಿ.ನ ರವರ ಮಾತೊಂದು ಪ್ರಸ್ತುತವಾಗುತ್ತದೆ..
ನುಡಿಯೊಳು ಹೊಳೆವುದು ನಾಡಿನ ನಡವಳಿ
ನುಡಿಯೊಳು ಕ೦ಪಿಡುವುದು ಬದುಕು
ನುಡಿಯಿರದವನಿಗೆ ಇಲ್ಲವು ನಾಡೂ
ನುಡಿಯಲಿ ಸಲ್ಲನದಾವುದಕೂ //

ಈ ಎಲ್ಲ ಘಟನೆಗಳನ್ನು ಅವಲೋಕಿಸಿದಾಗ ಮೊಡಿದ ಕೆಲವು ಪ್ರಶ್ನೆಗಳು. ಯುವತಿಯರೇ ನಿಮ್ಮನ್ನು ಹೊಡೆಯುವಾಗ ನೀವು ನಂಬಿಕೊಂಡು ಬಂದಿದ್ದ ನಿಮ್ಮ 'ಬಾಯ್' ಫ್ರೆಂಡ್ಸ್ ಎಲ್ಲಿ ಹೋಗಿದ್ದರು? ತಪ್ಪಿಸುವ ಪ್ರಯತ್ನವನ್ನೂ ಮಾಡಲಾಗುತ್ತಿರಲಿಲ್ಲವೇ? ನಿಮಗೆ ಆಧುನಿಕತೆಯ ಹೆಸರಿನಲ್ಲಿ ಜೀನ್ಸ್ ಧರಿಸಿ, ಸ್ವಾತಂತ್ರ್ಯದ ಹೆಸರಿನಲ್ಲಿ ಪಬ್ ಗೆ ಹೋಗಲು ತಿಳಿದಿರುವಾಗ, ಯಾರೋ ಮೂರನೆಯ ವ್ಯಕ್ತಿ ಹೊಡೆಯುತಿರುವಾಗ ಎಲ್ಲಿ ಹೋಗಿತ್ತು ನಿಮ್ಮ ಆವೇಶ? ತಿರುಗಿ ಬಾರಿಸಬಾರದಾಗಿತ್ತೆ? ಎಲ್ಲಿ ಹೋಗಿತ್ತು ಸಮಾನತೆ? ಹಾಗೆ ಮಾಡಿದ್ದಲ್ಲಿ, ಅದೂ ಕೂಡ ಮಾಧ್ಯಮೀಕರಣವಾಗಿ, ನಿಮ್ಮ ಮಹಿಳಾ ಸ್ವಾತಂತ್ರ್ಯದ ಚಳುವಳಿಗೆ ಹೊಸ ಆಯಾಮವೊಂದು ಸಿಗುತ್ತಿರಲಿಲ್ಲವೇ? ನಿಮ್ಮ ರಕ್ಷಣೆ ನಿಮ್ಮ ಹೊಣೆ, ಬೇರೆಯವರನ್ನೇಕೆ ಆಧರಿಸಿರುವಿರಿ?

ಇನ್ನಾದರೂ, ಮುಳ್ಳು ಸೀರೆಯ ಮೇಲೆ ಬಿದ್ದರೂ, ಸೀರೆ ಮುಳ್ಳಿನ ಮೇಲೆ ಬಿದ್ದರೂ ಹರಿಯುವುದು ಸೀರೆಯೇ ಎಂಬುದರ ಅರಿವು ನಮಗಾಗಲಿ. ಯಾರದೋ ಹೇಳಿಕೆ ಮಾತಿಗೆ ಮರುಳಾಗಿ ನಮ್ಮತನದ ಬಲಿ ನಿಲ್ಲಲಿ. ಸರಿ/ತಪ್ಪುಗಳ ಅರಿತು ನಡೆಯೋಣ. ಸ್ವಾಭಿಮಾನಿಗಳಾಗೋಣ. ಸ್ವಂತದೊಂದು Identity, ಅಸ್ತಿತ್ವವನ್ನು ಬೆಳೆಸಿಕೊಳ್ಳೋಣ. ಸಮಾನತೆಯ ಹೆಸರಿನಲ್ಲಿ, ಆಧುನಿಕತೆಯ ಸೋಗಿನಲ್ಲಿ ಕಣ್ಣಿಗೆ ಕಟ್ಟಿರುವ ಪೊರೆ ತೆಗೆಯೋಣ. ಸಮಾನತೆಯ ಕೂಗು ಬಾರ್, ಪಬ್ ಗಳಿಗೆ ಹೋಗಿ ಕುಡಿದು ಕುಣಿಯುವುದರ ಬದಲಾಗಿ, ಶಾಂತಿ, ನೆಮ್ಮದಿಯುಳ್ಳ ಸುಂದರ ಸಮಾಜದ ಬೆಳವಣಿಗೆಯತ್ತ ಸಾಗಲಿ. ನಮಗೆ ದೊರೆತಿರುವ ವಿದ್ಯೆಯ ಸದುಪಯೋಗವಾಗಲಿ. ಸ್ತ್ರೀ ಎನ್ನುವುದು ಕೇವಲ ಭೋಗದ ವಸ್ತುವಲ್ಲ. ಸೂತ್ರದ ಬೊಂಬೆಯಲ್ಲ. ಸ್ತ್ರೀ ಎನ್ನುವುದೊಂದು ಶಕ್ತಿ. ಇದು ಕೇವಲ ಪುರಾಣ, ಇತಿಹಾಸಗಳು, ಕಥೆ ಕವನಗಳಲ್ಲಿರದೆ ನಮ್ಮ ಕೃತಿಗಳಲ್ಲಿರಲಿ. ಯಾರಾದರು ಕೇವಲ ಹೆಣ್ಣು ಎನ್ನುವ ಕಾರಣಕ್ಕೆ ಬೆಲೆ ಕೊಡುವುದರ ಬದಲಾಗಿ ನಮ್ಮ ವ್ಯಕ್ತಿತ್ವಕ್ಕೆ ಬೆಲೆ ಕೊಡುವಂತಾಗಲಿ. ಕರ್ತವ್ಯಗಳನ್ನು ನಿರ್ವಹಿಸಿ ಹಕ್ಕುಗಳಿಗಾಗಿ ಹೋರಾಡೋಣ.

ಆಹಾ ಪುರುಷಸಿಂಹಗಳೇ (ದೈಹಿಕ ಸಾಮರ್ಥ್ಯದಲ್ಲಿ ನಿಮಗಿಂತ ಸ್ವಲ್ಪ ಕೆಳಸ್ತರದಲ್ಲಿದ್ದಾಳೆ ಎನ್ನುವ ಒಂದೇ ಕಾರಣಕ್ಕೆ) ಅಬಲೆಯರ ಮೇಲಿನ ದೌರ್ಜನ್ಯಕ್ಕೆ ಮೀಸಲಾಗಿರುವ ನಿಮ್ಮ ಸಶಕ್ತಿ ಮತ್ತು ಕುಯುಕ್ತಿಯನ್ನು ಇನ್ನೂ ಉತ್ತಮ ಕಾರ್ಯಗಳಿಗೆ ಬಳಸಿ. ಬೀchiಯವರು ತಮ್ಮ 'ಹುಚ್ಚು-ಹುರುಳು' ಕೃತಿಯಲ್ಲಿ 'ಹೆಂಡತಿಯನ್ನು ಯಾವಾಗ ಹೊಡೆಯಬೇಕು?' ಎಂಬ ಪ್ರಶ್ನೆಯೊಂದನ್ನು ರೂಪಿಸಿ ಬಹಳ ಚೆನ್ನಾಗಿ ವಿಡಂಬನೆ ಮಾಡಿದ್ದಾರೆ. (ಕೆಲ ತುಣುಕು - ಬಜಾರದಲಿ ಬೆಲ್ಲ ದೊರೆಯದಿದ್ದರೆ, ಆಫೀಸಿನಲ್ಲಿ ಆಟ ಸಾಗದಿದ್ದರೆ, ಮಲಗಿದಾಗ ತಿಗಣೆ ಕಡಿದರೆ, ಮಗನು ಶಾಲೆಯಲ್ಲಿ ನಪಾಸಾದರೆ, ಮಳೆಯಾಗಿ ರಸ್ತೆ ಕೆಸರಾದರೆ, ಸಾಲಕೊಟ್ಟವರು ಕಾಟ ಕೊಟ್ಟರೆ, ತನ್ನ ಲೇಖನವನ್ನು ಸಂಪಾದಕರು ಸ್ವೀಕರಿಸಿ ಹಣ ಕಳಿಸದಿದ್ದರೆ, ಗಂಡನೆಂಬ ಸಾಧು ಪ್ರಾಣಿಯು ತನ್ನ ಹೆಂಡತಿಯನ್ನಲ್ಲದೇ ಬೇರಾರನ್ನು ಹೊಡೆಯಲು ಸಾಧ್ಯ? ಯಾರೂ ನಿಷ್ಕಾರಣವಾಗಿ ಹೊಡೆಯುವುದಿಲ್ಲ. ತಾನು ಅವಳ ಗಂಡನೆಂಬುದೇ ಮೊದಲ ಕಾರಣ!) ಶೋಷಣೆಯೆಂಬುದು ದೈಹಿಕ ಹಿಂಸೆಗೆ ಸೀಮಿತವಲ್ಲ. ಮಾನಸಿಕ ಪ್ರಹಾರವೂ ಶೋಷಣೆಯ ಒಂದು ರೂಪವೇ. ಕೆಲವೊಮ್ಮೆ ಅಭಿವ್ಯಕ್ತವಾಗುವುದಿಲ್ಲ, ಆಲೋಚನೆಗಳಲ್ಲಿರುತ್ತದೆ. ತೆರೆ ಮರೆಯ ಕೃತಿಗಳಲ್ಲಿರುತ್ತದೆ. ನೀವು ಮಹಿಳೆಯರನ್ನು ಸಂರಕ್ಷಿಸುವ ಅಗತ್ಯವಿಲ್ಲ, ರಕ್ಷಣೆಗಾಗಿ ಪರದಾಡುವಂತೆ ಮಾಡದಿದ್ದರೇ ಅದೇ ದೊಡ್ಡ ಸಂರಕ್ಷಣೆ. ಒಳಿತನ್ನು ಮಾಡಲಾಗದಿದ್ದರೆ, ಕೆಡುಕನ್ನಂತೂ ಮಾಡಬೇಡಿ.

ಗಂಡು ಹೆಣ್ಣುಗಳು ಪ್ರತಿಸ್ಪರ್ಧಿಗಳಲ್ಲ. ಸಮಾನತೆಯೆನ್ನುವುದು ಮಾಡುವ ಕೆಲಸಗಳಲ್ಲಿಲ್ಲ. ನಮ್ಮ ವಿವೇಚನೆಯಲ್ಲಿದೆ, ಆಲೋಚನೆಗಳಲ್ಲಿದೆ. ಪುರುಷ - ಪುರುಷರಲ್ಲೇ, ಸ್ತ್ರೀ-ಸ್ತ್ರೀಯರಲ್ಲೇ ಸಮಾನತೆಯಿಲ್ಲ, ಕೆಲವರು ಚೆನ್ನಾಗಿ ಮಾತನಾಡಬಹುದು, ಕೆಲವರು ಬರೆಯಬಹುದು, ಇನ್ನು ಕೆಲವರು ನಟಿಸಬಹುದು... ಹೀಗೆ ಹತ್ತು ಹಲವು ಉದಾಹರಣೆಗಳು. ಆದರೂ ಯಾರೂ ಹೆಚ್ಚಲ್ಲ, ಯಾರೂ ಕಡಿಮೆಯಲ್ಲ. ಪ್ರತಿಯೊಂದು ಜೀವಿಗೂ ಅದರದೇ ಆದ ವಿಶೇಷತೆಗಳಿವೆ. ನಾನೇ ಹೆಚ್ಚು ಎಂಬ ಹುಂಬತನದ ಅಗತ್ಯವಿಲ್ಲ.

ಪ್ರಕೃತಿ - ಪುರುಷ ಎಂಬ ಸೂತ್ರದ ಸಂಸ್ಕೃತಿ ನಮ್ಮದು. ಒಬ್ಬರಿಗೊಬ್ಬರು ಪೂರಕವೇ ಹೊರತು ಎದುರಾಳಿಗಳಲ್ಲ, ಸಮಾನರಲ್ಲ. ಇಬ್ಬರಿಗೂ ಅವರದೇ ಆದ ಉದ್ದೇಶಗಳಿವೆ, ಜವಾಬ್ದಾರಿಗಳಿವೆ, ಗುಣಗಳಿವೆ, ಸಾಮರ್ಥ್ಯಗಳಿವೆ. ಸಮಾಜದ ಪ್ರಗತಿಯಲ್ಲಿ ಇಬ್ಬರು ಸಹವರ್ತಿಗಳು. ಪರಸ್ಪರ ಗೌರವವಿರಲಿ. ಸಹಬಾಳ್ವೆಯಿರಲಿ. ಅರ್ಥಮಾಡಿಕೊಳ್ಳುವ, ಅರಿತುಕೊಳ್ಳುವ ವಿಶಾಲ ದೃಷ್ಟಿಕೋನ ನಮ್ಮದಾಗಲಿ. ಈ ಎಲ್ಲ ಚಿಂತನೆಗಳು ಕೇವಲ ಎರಡುದಿನದ ಕೆಸರೆರಚಾಟದ ಭಾಗಗಳಾಗದಿರಲಿ. ನಮ್ಮ ನಿತ್ಯ ಜೀವನದಲ್ಲಿ ಅಳವಡಿಕೆಯಾಗಲಿ. ತೋರಿಕೆಯಾಗದೆ, ಮನಪೂರ್ವಕವಾಗಿ ಆಚರಿಸ್ಪಡಲಿ.

Monday, February 02, 2009

ಬಾಳಬುತ್ತಿ


ನೆನ್ನೆ ಕಳೆದಿದೆ ನಾಳೆ ಬರಲಿದೆ
ಇಂದು ನಿನ್ನದಾಗಿದೆ ಎಂಬ ಮಾತುಗಳು
ಆಗಿವೆಯೇ ಅರ್ಥಹೀನ ತತ್ವಗಳು
ಹಿಡಿತಕೂ ಸಿಗದೆ ಓಡುತಿರಲು ದಿನಗಳು

ಏನನು ಹಿಡಿಯಲು ಹಾರುತಿಹೆವು
ಯಾರ ಕಾಣಲು ಓಡುತಿಹೆವು
ಕೂಡಿ ಕಳೆದು ಗುಣಿಸಿ ಭಾಗಿಸಿ
ಯಾವ ಲೆಖ್ಖದುತ್ತರ ಹುಡುಕುತಿಹೆವು

ಸುಂದರ ನಾಳೆಗಳ ಕನಸಿನಲಿ
ಇಂದೆಂಬ ನೆನ್ನೆಯ ಕನಸು ಕಮರಿತೇ
ನಾಳೆಯಡುಗೆಯ ಚಿಂತೆಯಲಿ
ಇಂದಿನೂಟದ ರುಚಿ ಹಳಸಿತೇ

ಇಂದಿಗೆ ನೆನ್ನೆಯ ನೆನಪು
ಇಂದು ನಾಳೆಯ ನೆನಪು
ಯಾವ ನೆನ್ನೆಯವರೆಗೀ ನೆನಪು
ಎಲ್ಲಿಯ ನಾಳೆಯವರೆಗೀ ನೆನಪು

ಭವ್ಯ ಭವಿಷ್ಯತ್ತಿಗಾಗಿ ಕೂಡಿಡುತಿಹೆವು
ಇಂದನ್ನು ನೆನಪುಗಳ ಬುತ್ತಿಗಳಲಿ
ದೊರಕುವುದೆಂತು ಸಮಯ ಸವಿಯಲದನು
ಓಡುತಿರಲು ಕಾಣದ ಕೊನೆ ತಲುಪಲು

- ವಿನುತ