Saturday, December 27, 2008

ಹಿಮಪಾತ



ಸುರಿದಿರಲು ಮಂಜಿನ ಹೂಮಳೆ
ಇಳೆಯಾಗಿದೆ ಬಿಳಿಹತ್ತಿಯ ಹಾಳೆ
ಕಾಣದಾಗಿದೆ ನಡೆದಾಡುವ ಹಾದಿ
ಆದ್ಯಂತವಾಗಿದೆ ಹಿಮದ ವಾರಿಧಿ

ನಾಕಂಡ ಮೊದಲ ಹಿಮಪಾತ
ಆದ ಸಂತೋಷ ಅಪರಿಮಿತ
ಹಿಡಿಯ ಹೊರಟೆ ಸೌಂದರ್ಯದ ಸೆರೆ
ಕಳಚಿ ಕ್ಯಾಮೆರ ಕಣ್ಣಿನ ಪೊರೆ

ಹಿಮರಾಜ ಸರಿಯಲು ನೇಪಥ್ಯಕ್ಕೆ
ಧುತ್ತೆಂದು ಧಾಳಿ ಹಿಮದಾಟಕೆ
ಅದೆಂತು ಚೆಲ್ಲಾಟ, ಹಿಮದೆರಚಾಟ
ಮರುಕಳಿಸಿತ್ತು ಬಾಲ್ಯದ ಹುಡುಗಾಟ

ಒತ್ತಿದರೆ ಅಂಟುವ, ಮುಟ್ಟಿದರೆ ಕರಗದ
ಮಂಜಿಗೊಂದು ಕಲ್ಪನೆಯ ರೂಪ,
ಹಿಮ-ಮಾನವ-ಮಾನಸಿಯರ ಪ್ರತಿರೂಪು
ತಂದಿತ್ತು ಮರಳ ಕಪ್ಪೆಗೂಡಿನ ನೆನಪು

ಕೈ-ಕಾಲುಗಳು ಕಳೆದುಕೊಳ್ಳಲು ಅರಿವಳಿಕೆ
ಮೂಡಿತಾಗ ತಿಳುವಳಿಕೆ
ಮಿತಿಮೀರಿದ ಗಮ್ಮತ್ತು, ಪ್ರಾಣಕ್ಕೇ ಕುತ್ತು
ಸುಂದರ ಪ್ರಕೃತಿಯಾದೀತು ವಿಕೃತಿ

ಘನೀಭವಿಸಿತ್ತು ಹಿಮ; ಮರದಲ್ಲಿ, ನೆಲದಲ್ಲಿ
ಮರವು ಸುಂದರ, ನೆಲವು ಭೀಕರ
ಹೆಜ್ಜೆಗೊಂದು ಕಂದರ, ದಾರಿ ಅಗೋಚರ
ತಪ್ಪಿದರೆ ಆಯಾಮ, ಊಹಿಸಲಾಗದು ಪರಿಣಾಮ

ಹಸಿ ಸೌದೆ ಸುಟ್ಟರೂ ಇಲ್ಲದಷ್ಟು ಹೊಗೆ,
ಉಸಿರಾಡಲು; ಉಸಿರುಗಟ್ಟಿಸುವ ಚಳಿಗೆ
ಉರಿಯುತ್ತಿದ್ದ ಕಂಗಳಲ್ಲಿ ಒತ್ತರಿಸಿತ್ತು ಅಳು
ನೆನಪಾಗಲು ಅಮ್ಮನ ಬೆಚ್ಚನೆ ಮಡಿಲು

ಬೆಚ್ಚನೆ ದಿರಿಸಿನೊಳಗೊಂದು ದಿರಿಸು,
ಎರಡೆರಡು ಕಾಲ್ಚೀಲ, ಕೈ ಗ್ಲವಸು,
ಇಷ್ಟಾದರೂ ನಡುಗುತ್ತಿದ್ದ ದೇಹ; ಮೂಡಿಸಿತ್ತು
ಯೋಧರು ಮನುಷ್ಯರೇ ಎಂಬ ಸಂದೇಹ

ಎದೆಗುಂದದೆ ಸೃಷ್ಟಿಯ ವೈಪರೀತ್ಯಗಳಿಗೆ
ಕಾವಲಾಗಿಹರು ದೇಶದ ಭದ್ರತೆಗೆ
ಆದರ್ಶವಾಯಿತವರ ಜೀವನ
ಸಲ್ಲಿಸಿದೆನೊಂದು ಕೃತಜ್ಞತಾಪೂರ್ವಕ ನಮನ

-ವಿನುತ

Monday, December 08, 2008

ಸಂಕ್ರಮಣ



ಪ್ರಖರ ಕಿರಣಗಳಿಂದ ಮೆರೆದ ಸೂರ್ಯ
ಮರೆಯಾಗಲು ಹಿಮರಾಜನ ಮಡಿಲಲ್ಲಿ
ಆರ್ಭಟಿಸಲು ವರುಣ ಕಾರ್ಮೋಡಗಳ ಮುಗಿಲಲ್ಲಿ
ಉರುಳುತಿದೆ ಕಾಲಚಕ್ರ ನೀ ನಿಂತರೂ ನಾನಿಲ್ಲೆನೆನುತ

ಪುನರಾಗಮಿಸಲು ಹೇಮಂತ ಶರದಾದಿ ಋತುಗಳು
ಬದಲಾಗಲು ರವಿ-ಚಂದ್ರ-ಭುವಿ ನಕ್ಷೆಗಳು
ಕೈ ಜೋಡಿಸುತಿಹಳು ಇಳೆ, ಕಾಲನ ಜೊತೆಗೆ
ಸಜ್ಜಾಗುತಿಹಳು ಪ್ರಕೃತಿ, ಬರುವ ನಾಳೆಗಳಿಗೆ

ಓಡುತಿದೆ ಋತುಚಕ್ರ, ಅನುಸರಿಸಿದೆ ಜೀವರಾಶಿ
ಸಿಂಗಾರಗೊಂಡಿದೆ ಸಸ್ಯವರ್ಗ, ನಡೆದಿರಲು ಬಣ್ಣಗಳ ಓಕುಳಿ
ಅದಲು ಬದಲಾಗಿದೆ ಸೂರ್ಯ ಚಂದ್ರರ ಅವಧಿ
ಇರುಳು ದಾಟಿರಲು ಹಗಲಿನ ಪರಿಧಿ

ಹಸಿರು ಎಲೆಗಳಲೆನಿತು ಈ ಕೆಂಪು ವರ್ಣ
ನಿರ್ಗಮಿಸುತಿರುವ ಗ್ರೀಷ್ಮನ ಬೀಳ್ಕೊಡುಗೆಯ ರೋದನವೋ
ಆಗಮಿಸುತಿರುವ ಶಿಶಿರನ ಕೆಂಧೂಳಿ ಸ್ವಾಗತವೋ
ಏನೊಂದು ಅರಿಯದಾಗಿದೆ, ಬರೀ ವಿಸ್ಮಯವಿಲ್ಲಿದೆ

ಅದೆನಿತು ಸಸ್ಯರಾಶಿ, ತವರು ತೊರೆಯದ ಕುಲ ಪುತ್ರನಂತೆ;
ಈ ಮಣ್ಣಿನ ನೀಳೆತ್ತರದ ಸೂಜಿಮೊನೆಯ ನಿತ್ಯಹರಿದ್ವರ್ಣ ಮರಗಳು
ಮೆಟ್ಟಿದ ನೆಲವ ಸ್ವಂತವಾಗಿಸಿಕೊಂಡಿರುವ ಭಾಗಿನಿಯಂತೆ
ಎಲ್ಲಿಂದಲೋ ಬಂದ, ಹಳದಿ ಕೆಂಬಣ್ಣಗಳ ಅಗಲೆಲೆಯ ವೃಕ್ಷಗಳು

ನವಜಾತ ಶಿಶುವಿನಂತಹ ಗುಲಾಬಿ ಬಣ್ಣದೆಲೆಗಳು
ಯೌವನದ ಬಿಸಿರಕ್ತದಂತಹ ಕೆಂಬಣ್ಣದೆಲೆಗಳು
ನವವಸಂತಕೆ ಕಾಲಿಡುತಿರುವಂತಹ ತಿಳಿಗಿಳಿವರ್ಣದೆಲೆಗಳು
ಜವಾಬ್ದಾರಿಗಳಿಂದ ಮಾಗಿದ ಗಾಢಹಸುರೆಲೆಗಳು

ಕರ್ತವ್ಯ ಮುಗಿಸಿ ಹಣ್ಣಾದ ಹಳದಿ ಎಲೆಗಳು
ವೃದ್ಧಾಪ್ಯದ ರುದ್ರಾಕ್ಷಿಯ ಕಂದು ಬಣ್ಣದೆಲೆಗಳು
ಮುಗಿಯಿತು ನಮ್ಮ ಆಯಸ್ಸು, ಇನ್ನು ನಮ್ಮನು ಹರಸು ಎಂದಿರಲು
ಕಾಲನ ಕರೆಗೆ ಓಗೊಟ್ಟು ಬೋಳಾದ ಟೊಂಗೆಗಳು

ಯಾವುದೀ ಮಾಯೆ, ಯಾರೀ ಯಕ್ಷಿಣಿ
ಎನಿತು ಅಲಂಕರಿಸಿಕೊಂಡಿಹಳು ಧಾರಿಣಿ
ನಿಸರ್ಗವೆಲ್ಲ ರಂಗಾದ ರಂಗೋಲಿ, ವರ್ಣಗಳ ಚಿತ್ತಾರ
ಏತಕೀ ಹುನ್ನಾರ, ಏನ ಹೇಳ ಬಯಸಿದೆ ಪರಿಸರ?

ಅಡಗಿದೆ ಸುಂದರ ಸೃಷ್ಟಿಯೊಳಗೊಂದು ವಿಶ್ವಕೋಶ
ನೀಡುತಿದೆ ಸರಳ ಜೀವನಕೊಂದು ಸಂದೇಶ
ಅನಿವಾರ್ಯವು ಹೊಂದಾಣಿಕೆ; ಪರಿಷ್ಕೃತ ದೃಷ್ಟಿಕೋನ
ಬಂದೊದಗಲು ಸಂಕ್ರಮಣ, ಪರಿವರ್ತನೆ ಜಗದ ನಿಯಮ!



- ವಿನುತ

ಅಂತರ











ಮುಂಜಾನೆಯ ಹಿಮದಲ್ಲಿ
ಉಸಿರಿನ ಹೊಗೆಯಲ್ಲಿ
ಮರಗಟ್ಟುವ ಚಳಿಯಲ್ಲಿ
ಮುಸುಕಿದ್ದ ಮಂಜಿನೊಡನೆ ಸೂರ್ಯನ ಹೋರಾಟ
ಭುವಿ ತಲುಪಲು ರವಿತೇಜನ ಪರದಾಟ

ಮಂಜಿನೊಡನೆ ಬೆಳಕಿನ ಸರಸ
ಹಸಿರು ಹುಲ್ಲಿಗೆಂತೊ ಸಂತಸ
ನೀರ ಹನಿಗಳಲ್ಲೇನೊ ಉಲ್ಲಾಸ
ಹುಲ್ಲಿನ ಅಂಚಿನಲ್ಲೊಂದು ಕತ್ತಿಯ ಛಳಪು
ನೀರ ಹನಿಗಳಲ್ಲಿ ವಜ್ರದ ಹೊಳಪು

ಸೀಳಿ ಬಂದಿರಲು ಸೂರ್ಯ ರಶ್ಮಿ
ಮುಗಿಲೆತ್ತರದ ದಟ್ಟ ಮರಗಳ,
ಹರಡಿದ ಮಂಜಿನ ಪದರಗಳ
ಹೊನ್ನಿನ ತೇರಿನ ಹಾದಿಯದು ಕವಿಗೆ
ಬರಿಯ ಟಿಂಡಾಲ್ ಪರಿಣಾಮವದು ವಿಜ್ಞಾನಿಗೆ

ಹಕ್ಕಿಗಳ ಚಿಲಿಪಿಲಿ ಕಲರವಗಳು
ಟೊಂಗೆಗಳಿಗೆ ಪೋಣಿಸಿದ ಗಾಜಿನ ಮಣಿಗಳು
ಅದರೊಳಗೆ ತೂರಿ ಬಂದ ಸಪ್ತವರ್ಣಗಳು
ನಿರ್ಮಿಸೀತೆ ಮಾನವನ ಕೃತ್ರಿಮ ಜ್ಞಾನ
ಪ್ರಕೃತಿಯ ನೈಜ ಸುಂದರತೆಯ ಸೊಬಗನ್ನ?

ಅಸ್ತಂಗತನಾಗಲು ಅರುಣ
ಸರ್ವಸ್ವವೂ ನಿರ್ವರ್ಣ
ಶೀತಲ ಗಾಳಿಯ ಸಂಚಲನ
ಭಯಾನಕ ಭೀಭತ್ಸ ರಸಗಳ ಆಂದೋಲನ
ಇರುಳ ಸೌಂದರ್ಯದಳೊಂದು ಕ್ರೌರ್ಯದ ಸಮ್ಮಿಲನ

ದೂರ ಸರಿದಿರಲು ಇಳೆ ರವಿಯಿಂದ
ಮೂಡಿದೆ ಇಂತೊಂದು ವೈಪರೀತ್ಯ
ಆಕ್ಷೇಪಿಸಿತ್ತು ಮನ ಆದಿತ್ಯನ ಸುಡುಬಿಸಿಲೆಂದು
ಇಂದು ಬಯಸಿ ಬೇಡಿದೆ ಆತನ ಸಾನ್ನಿಹಿತ್ಯ
ವಸ್ತುವೊಂದನ್ನು ಕಳೆದುಕೊಂಡಾಗಲೆ ತಿಳಿಯುವುದೆ ಅದರ ಬೆಲೆ?

-ವಿನುತ